Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Thursday, 7 July 2022

ಸಾವಿರ ಬಣ್ಣಗಳ ವಿಸ್ಮಯ

ಸಾವಿರ ಬಣ್ಣಗಳ ವಿಸ್ಮಯ 

ನಿನ್ನ ನಗು ಚಂದ ಎನ್ನುತ್ತಾನೆ 
ಬಿರಿದ ತುಟಿಗಳ ಗಮನಿಸುತ್ತ 
ನಿನ್ನ ಹಲ್ಲೂ ಕೂಡ ಎಂದು 
ಕೇಳಿಯೂ ಕೇಳಿಸದಂತೆ 

ನಕ್ಕಾಗಲೆಲ್ಲ ಆತ 
ತಪ್ಪದೆ ಹೇಳುವ ಮಾತಿದು 
ಸರಿಯಾಗಿ ಕೇಳದ ಅರ್ಧ ಗೊಣಗುಟ್ಟುವ 
ಇನ್ನರ್ಧ ಕ್ಷೀಣ ದನಿಯಲ್ಲಿ 
ಅಥವಾ ಮಾತು ತುಟಿ ಮೀರದಂತೆ 
ಒಳಗೊಳಗೆ ಬೊಬ್ಬಿರಿದು 
ಕೇಳಿಸಿದರೆ ಇಡಿ ಜಗತ್ತು 
ನೋಡಬೇಕಿತ್ತು ತಿರುತಿರುಗಿ ಎನ್ನುವ ಹಾಗೆ 

ಕೇಳಬೇಡಿ ನನ್ನನ್ನು 
ಮನದೊಳಗೆ ಆಡಿದ ಮಾತು 
ಕೇಳಿಸಿದ್ದಾದರೂ ಹೇಗೆ 
ಎಂಬ ಮೂರ್ಖ ಪ್ರಶ್ನೆ 

ಕಣ್ಣಾಲಿಗಳ ಅಗಲಿಸಿ 
ಕಂಡೂ ಕಾಣದಂತೆ ತುಟಿಯರಳಿಸಿ 
ಎದೆಯ ಮೇಲಿಟ್ಟು ಅಂಗೈ 
ಮನಸ ಸಮಾಧಾನಿಸುವಂತೆ 
ನವಿರಾಗಿ ತನ್ನನ್ನೆ ತಾನು ನೇವರಿಸಿಕೊಳ್ಳುತ್ತ 
ಮರುಕ್ಷಣವೆ ಕಣ್ಣೊಳಗೆ 
ಇಣುಕಿಣುಕಿ ಮರೆಯಾಗುವ ನಾಚಿಕೆ
ಕಂಡಾಗಲೆಲ್ಲ ಆತ ಹೇಳಿದ್ದೇನೆಂಬುದು 
ಹೇಳದೆಯೂ ಅರ್ಥವಾಗಿಬಿಡುತ್ತದೆ. 

ಆದರೂ ಸೋಗು ಹಾಕುತ್ತೇನೆ 
ಏನೂ ಅರಿವಾಗದಂತೆ 
ಓರೆಗಣ್ಣಲ್ಲಿ ನಸುನಾಚುವ ಮುಖವನ್ನೇ
ನೋಡುತ್ತೇನೆ ಕದ್ದೂ ಕದ್ದು 

ಕೆಲವೊಮ್ಮೆ ಎಲ್ಲ ಹಳವಂಡಗಳ ಮೀರಿ 
ತುಟಿಯೆರಡಾಗಿ ಧ್ವನಿ ಹೊರಬಂದು 
ನನ್ನವರೆಗೂ ತಲುಪಿದಾಗ 
ನಟಿಸುತ್ತೇನೆ ಕೋಪಿಸಿದಂತೆ  ಮೊದಮೊದಲು 
ಕಾಣಲಿಲ್ಲವೆ ತುಟಿಯ ಕೆಳಗಿನ ಮಚ್ಚೆ 
ಚಂದವಿಲ್ಲವೆ ಅದು? 
ರೇಗುತ್ತೇನೆ ಕಣ್ಣು ಅರಳಿಸಿ 
ಕಟ್ಟೆ ಮೀರಿ ಪ್ರವಾಹವಾಗುವ 
ನಗುವನ್ನು ತಡೆಯಲೆತ್ನಿಸುತ್ತ 

ಸುಮ್ಮನೆ ನೇವರಿಸಬೇಕೆಂದು 
ಅರಿವಾಗದೆ ಮೇಲೆದ್ದ ಕೈಯ್ಯನ್ನು 
ಬಲವಂತವಾಗಿ ಕಟ್ಟಿ ಹಾಕಿದ್ದು 
ಅರಿಯಲಾರದಷ್ಟು ದಡ್ಡಿಯೇನಲ್ಲ ಬಿಡು 
ಚಂದ ಎಂದರೇನು ಬಂತು
ಲೋಕದ ಗಮನವನ್ನೆಲ್ಲ
ತನ್ನತ್ತ ಸೆಳೆವ ಹಾಲು ಬಿಳುಪಲ್ಲದ  
ನಸುಗಂದು ಕೆನ್ನೆಯ ಮೇಲೆ 
ಸೆಳೆವ ಕಡುಗಪ್ಪು ಮಚ್ಚೆಯ
ಕಂಡಾಗಲೆಲ್ಲ ತುಟಿಯೂರಬೇಕೆನ್ನಿಸುವ 
ಬಯಕೆಯ ಹೇಳುವುದು ಹೇಗೆ 
ಹೇಳದೆ ಮನದಾಳದಲಿ ಹುಗಿದು 
ಗೋರಿಕಟ್ಟಿದ ಕ್ಷಣಗಳ 
ಮರೆಯುವುದಾದರೂ ಹೇಗೆ
ಎಂದೆಲ್ಲ ಮತ್ತೆ ನೀ ಕನವರಿಸುವುದು
ಅರ್ಥ ಮಾಡಿಕೊಳ್ಳಬಹುದು 
ನಿನ್ನ ಕಣ್ಣ ಕದಲಿಕೆಯಿಂದಲೆ  

ಈಗ ನಾನೇ ಸುಮ್ಮನಾಗುತ್ತೇನೆ 
ಅತಿ ಸರ್ವತ್ರ ವರ್ಜ್ಯತೆ ಎಂಬುದನ್ನು 
ಕಂಠಪಾಠ ಹಾಕಿಸಿ 
ಎಲ್ಲವನ್ನೂ ನಿಗ್ರಹಿಸಿಸುವುದನ್ನು 
ಹೇಳಿಕೊಡಲಾಗಿದೆ ಬ್ರೂಣದಿಂದಲೆ 

ಮಾತಿಗೀಗ ಯಾವ ಕೆಲಸವೂ ಇಲ್ಲ 
ಮೌನದೊಳಗೆ ಸಾವಿರ ಚಿಟ್ಟೆಗಳ ಚಿತ್ತಾರ 
ಅರಳಿ ಕಾಮನಬಿಲ್ಲಾಗುವ 
ವಿಸ್ಮಯಕೆ ಪದಗಳ ಹಂಗಿಲ್ಲ 
(ಇಲ್ಲಿನ ಫೋಟೋಗಳು ನಟಿ, ಗೆಳತಿ ಅಕ್ಷತಾ ಪಾಂಡವಪುರ ಅವರದ್ದು)

Wednesday, 6 July 2022

ಹಲವು ವಿಶಿಷ್ಟಗಳ ಸಮ್ಮಿಳಿತ ಫ್ರಾನ್ಸಿಸ್ ಬರ್ನಿ


ಹಲವು ವಿಶಿಷ್ಟಗಳ ಸಮ್ಮಿಳಿತ ಫ್ರಾನ್ಸಿಸ್ ಬರ್ನಿ

 ೧೩ ಜೂನ್ ೧೭೫೨ ರಂದು ನಾರ್ಫೋಕ್‌ನಗರದ ಕಿಂಗ್ಸ್‌ನ ಲಿನ್ ಎಂಬಲ್ಲಿ ಬ್ರಿಟೀಷ್ ಸಂಗೀತದ ಇತಿಹಾಸಕಾರನಾಗಿದ್ಸ ಚಾರ್ಲ್ಸ್ ಬರ್ನಿ (೧೭೨೬-೧೮೧೪) ಮತ್ತು ಅವನ ಮೊದಲ ಪತ್ನಿ  ಡುಬಾಯಿಸ್ ಎನ್ನುವ ಫ್ರೆಂಚ್ ನಿರಾಶ್ರಿತರ ಮಗಳಾಗಿದ್ದ ಎಸ್ತರ್ ಸ್ಲೀಪ್ (೧೭೨೫-೧೭೬೨) ಎನ್ನುವವರ ಆರು ಮಕ್ಕಳಲ್ಲಿ ಮೂರನೆಯ ಮಗಳಾಗಿ ಜನಿಸಿದ ಫ್ರಾನ್ಸಿಸ್ ಬರ್ನಿ ತನ್ನ ಬಾಲ್ಯದಿಂದಲೇ ಅಂದರೆ ವರ್ಣಮಾಲೆಯನ್ನು ಕಲಿಯುವಷ್ಟು ಚಿಕ್ಕ ವಯಸ್ಸಿನಲ್ಲೇ ಓಡ್ಸ್, ನಾಟಕಗಳು, ಹಾಡುಗಳು, ಪ್ರಹಸನಗಳು ಮತ್ತು ಕವಿತೆಗಳನ್ನು ರಚಿಸುವಲ್ಲಿ ಆಸಕ್ತಿ ಹೊಂದಿದ್ದರು. ಆದರೆ ಕೆಲವು ವಿದ್ವಾಂಸರು ಹೇಳುವಂತೆ ಆಕೆ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದರು. ಆದರೂ ಅದನ್ನು ಮೀರುವ ಪ್ರಯತ್ನವಾಗಿ ಫ್ರಾನ್ಸಿಸ್ ಬರ್ನಿ ಬರವಣಿಗೆಯನ್ನು ಪ್ರಾರಂಭಿಸಿದರು ಎನ್ನಲಾಗುತ್ತದೆ. ೧೭೬೭ರಲ್ಲಿ ಅವರ ತಂದೆ ಕಿಂಗ್ಸ್ ಲಿನ್ ವೈನ್‌ನ ಶ್ರೀಮಂತ ವ್ಯಾಪಾರಿಯ ವಿಧವೆ ಪತ್ನಿ ಎಲಿಜಬೆತ್ ಅಲೆನ್ ಅವರನ್ನು ಮದುವೆಯಾಗಲು ಮನೆ ಬಿಟ್ಟು ಓಡಿಹೋಗಿದ್ದರು. ಬಾಲ್ಯವು ವಿಕ್ಷಿಪ್ತತೆಯಿಂದ ಕೂಡಿದ್ದರೂ ಎರಡೂ ಕುಟುಂಬಗಳು ಒಂದಾದ ನಂತರ ಪರಿಸ್ಥಿತಿ ತಿಳಿಗೊಂಡಿತು. ಮನೆಯಲ್ಲಿ ಫ್ಯಾನ್ಸಿ ಎಂದು ಕರೆಯಿಸಿಕೊಳ್ಳುತ್ತಿದ್ದ ಫ್ರಾನ್ಸಿಸ್ ಬರ್ನಿ ಹುಡುಗಿಯರು ಬರೆಯುವುದು ಸರಿಯಲ್ಲ ಎಂದು ವಾದಿಸುತ್ತಿದ್ದ ಅವಳ ಚಿಕ್ಕಮ್ಮನ ಮಾತು ನಂಬಿ ತನ್ನ ೧೫ನೇ ವಯಸ್ಸಿನಲ್ಲಿ ತಾನು ಆವರೆಗೆ ಬರೆದದ್ದೆಲ್ಲವನ್ನೂ ಸುಟ್ಟು ಹಾಕುವ ಅನಿವಾರ್‍ಯತೆಗೆ ಸಿಲುಕಬೇಕಾಯಿತು. ಆದರೆ ಫ್ರಾನ್ಸಿಸ್ ಬರ್ನಿಗೆ ತನ್ನ ಬರೆಯುವ ಉತ್ಸಾಹ ಹಾಗೂ ಒಳ ತುಡಿತವನ್ನು ತಡೆಯಲಾಗಲಿಲ್ಲ. ಪುನಃ ೧೬ ನೇ ವಯಸ್ಸಿನಲ್ಲಿ ಬರೆಯಲು ಪ್ರಾರಂಭಿಸಿದ ಅವರು ಒಂದು ಡೈರಿಯ ರೂಪದಲ್ಲಿ ತನ್ನ ವೈಯಕ್ತಿಕ ವಿವರ ಹಾಗೂ ಮೂರನೆ ಜಾರ್ಜ್‌ನ ಆರಂಭಿಕ ಆಳ್ವಿಕೆಯಿಂದ ವಿಕ್ಟೋರಿಯನ್ ಯುಗದ ಉದಯದವರೆಗಿನ ಸಾರ್ವಜನಿಕ ಘಟನೆಗಳನ್ನು ಬರೆಯಲಾರಂಭಿಸಿದರು.


  ಫ್ರಾನ್ಸಿಸ್ ಬರ್ನಿ ತಮ್ಮ ಡೈರಿಯ ಮೊದಮೊದಲ ಭಾಗಗಳಲ್ಲಿ ತನ್ನ ತಂದೆಯ ಮೂಲಕ ಪರಿಚಯಗೊಂಡ ಡೇವಿಡ್ ಗ್ಯಾರಿಕ್, ಸರ್ ಜೋಶುವಾ ರೆನಾಲ್ಡ್ಸ್, ಜೇಮ್ಸ್ ಬೋಸ್ವೆಲ್, ಮತ್ತು ಸ್ಯಾಮ್ಯುಯೆಲ್ ಜಾನ್ಸನ್ ಮುಂತಾದ ಗಣ್ಯರ ಜೊತೆ ಕಳೆದಂತಹ ಅದ್ಭುತ ಸಮಯಗಳ ಕುರಿತು ಬರೆದಿದ್ದಾರೆ. ಫ್ರಾನ್ಸಿಸ್ ಇಪ್ಪತ್ತಾರು ವರ್ಷದವರಿದ್ದಾಗ ಅವರ ಮೊದಲ ಕಾದಂಬರಿ ಎವೆಲಿನಾ (೧೭೭೮) ಅವರ ಹೆಸರನ್ನು ಗೌಪ್ಯವಾಗಿರಿಸಿ ಪ್ರಕಟವಾಯಿತು. ಅವರ ಸಮುದಾಯದ ಹುಡುಗಿಯರು ಕಾದಂಬರಿಯನ್ನು ಓದುವುದು ಹಾಗೂ ಬರೆಯುವುದು ನಿಷಿದ್ಧವಾಗಿತ್ತು. ಹೀಗಾಗಿ ಈ ಕಾದಂಬರಿಯನ್ನು ಪ್ರಾನ್ಸಿಸ್ ಬರ್ನಿಯವರ ಕೈ ಬರಹದಲ್ಲಿ ಬರೆಯದೆ ರಹಸ್ಯವಾಗಿ ಬೇರೆಯವರ ಕೈಯ್ಯಲ್ಲಿ ಬರೆಸಲಾಗಿತ್ತು. ಏಕೆಂದರೆ ಅವರ ತಂದೆಯ ಬರವಣಿಗೆಯನ್ನು ಇವರೇ ಬರೆಯುತ್ತಿದ್ದುದರಿಂದ ಅವರ ಅಕ್ಷರಗಳು ಪ್ರಕಾಶಕರಿಗೆ ಪರಿಚಿತವಾಗಿತ್ತು. ಕೇವಲ ತನ್ನ ಸಹೋದರಿಯರಿಗೆ ಹಾಗೂ ಚಿಕ್ಕಮ್ಮನಿಗೆ ಮಾತ್ರ ನಿಜ ವಿಷಯ ತಿಳಿಸಿದ್ದ ಫ್ರಾನ್ಸಿಸ್ ಬರ್ನಿ ನಂತರ ತನ್ನ ತಂದೆಗೆ ಅಂಜುತ್ತ ತಿಳಿಸಿದ್ದಳು. ಎವೆಲಿನಾ ಕಾದಂಬರಿಯಿಂದ ಫ್ರಾನ್ಸಿಸ್ ಬರ್ನಿ ಇಂಗ್ಲಿಷ್‌ನಲ್ಲಿ ಹೊಸದೊಂದು ದಾರಿಯನ್ನೇ ಸೃಷ್ಟಿಸಿದಂತಾಗಿತ್ತು. ಇದರಲ್ಲಿ ಸಮಾಜದಲ್ಲಿನ ಮಹಿಳೆಯರನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸಂದರ್ಭಗಳಿಗೆ ತಕ್ಕಂತೆ ಚಿತ್ರಿಸಲಾಗಿದೆ. ಈ ಕಾದಂಬರಿಯ ವಿಶಿಷ್ಟ ನಿರೂಪಣೆ ಹಾಗೂ ವಿಡಂಬನಾತ್ಮಕ ಹಾಸ್ಯದಿಂದಾಗಿ ತಕ್ಷಣ ಜನಪ್ರೀಯತೆ ಗಳಿಸಿತು.  ಅವರ ಕಾಮಿಡಿ ಆಫ್ ಮ್ಯಾನರ್ಸ್ ಪ್ರಕಾರವು ಜೇನ್ ಆಸ್ಟೆನ್, ಮಾರಿಯಾ ಎಡ್ಜ್ವರ್ತ್ ಮತ್ತು ೧೯ ನೇ ಶತಮಾನದ ಇತರ ಬರಹಗಾರರಿಗೆ ಹೊಸದೊಂದು ಮಾರ್ಗವನ್ನು ತೋರಿಸಿತು. ಎವೆಲಿನಾ ಅವರ ಸಾಮಾಜಿಕ ವಿಡಂಬನೆ, ವಿಷಯ ವಸ್ತುವಿನಲ್ಲಿರುವ ನೈಜತೆ ಮತ್ತು ಬುದ್ಧಿವಂತಿಕೆಯು ಅದನ್ನು ಅದ್ಭುತ ಜನಪ್ರಿಯತೆ ಪಡೆಯಲು ಸಹಾಯಕವಾಯಿತು. ಮತ್ತು ಈ ಜನಪ್ರೀಯತೆಯಿಂದಾಗಿ ಎಲ್ಲೆಡೆ ಬರಹಗಾರ ಎಂದು  ಭಾವಿಸಲಾದ ಚಾರ್ಲ್ಸ್ ಬರ್ನಿ ಅವರ ಮಗಳಾದ ಫ್ರಾನ್ಸಿಸ್ ಬರ್ನಿಯವರ ಗುರುತನ್ನು ಊಹಿಸಲು ಲಂಡನ್ ಸಮಾಜಕ್ಕೆ ಕಾರಣವಾಯಿತು. 

 ಫ್ರಾನ್ಸಿಸ್‌ರನ್ನು ಸಾಹಿತ್ಯಿಕ ಮತ್ತು ಲಂಡನ್ನಿನ ಉನ್ನತ ಸಮಾಜವು ಲೇಖಕಿ ಎಂದು ಒಪ್ಪಿಕೊಂಡಿತಲ್ಲದೆ ಕಾದಂಬರಿಗಳನ್ನು ಬರೆಯುವ ಮೊದಲ ಮಹಿಳೆ ಎಂದು ಗೌರವಿಸಿತು.  ೧೭೮೨ ರಲ್ಲಿ ಪ್ರಕಟವಾದ ಆಕೆಯ ಎರಡನೇ ಕಾದಂಬರಿ 'ಸಿಸಿಲಿಯಾ' ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿತು.
ಫ್ರಾನ್ಸಿಸ್‌ರವರ ಮೊದಲ ಹಾಸ್ಯ ನಾಟಕ 'ದಿ ವಿಟ್ಲಿಂಗ್ಸ್' ನ್ನು ರಿಚರ್ಡ್ ಶೆರಿಡನ್ ರಂಗಕ್ಕೆ ಅಳವಡಿಸಿ ನಿರ್ಮಿಸಲು ಒಪ್ಪಿಕೊಂಡಿದ್ದರೂ ಸಹ, ಆಕೆಯ ತಂದೆ ಮತ್ತು ಕುಟುಂಬದ ಆಪ್ತಸ್ನೇಹಿತ ಸ್ಯಾಮ್ಯುಯೆಲ್ ಕ್ರಿಸ್ಪ್ ಅದನ್ನು ಒಪ್ಪಿಕೊಳ್ಳಲಿಲ್ಲ. ಕಾದಂಬರಿಯ ಬರವಣಿಗೆಯು ಮಹಿಳೆಯರಿಗೆ ಸ್ವಲ್ಪಮಟ್ಟಿಗಾದರೂ ಗೌರವಾನ್ವಿತವೆಂದು ಪರಿಗಣಿಸಲ್ಪಟ್ಟಿದ್ದರೂ ರಂಗಭೂಮಿಗಾಗಿ ಬರೆಯುವುದು ಡಾ ಚಾರ್ಲ್ಸ್ ಬರ್ನಿ ಅವರ ಮಗಳ ಗೌರವಕ್ಕೆ ಚ್ಯುತಿ ತರುವಂತಹುದ್ದು ಎಂಬುದು ಅವರ ಅನಿಸಿಕೆಯಾಗಿತ್ತು. ಹೀಗಾಗಿ ಫ್ರಾನ್ಸಿಸ್ ಬರ್ನಿ ತನ್ನ ಜೀವಿತಾವಧಿಯಲ್ಲಿ ತಮ್ಮ ಒಂದೇ ಒಂದು ದುರಂತ ನಾಟಕವಾದ ಎಡ್ವಿ ಮತ್ತು ಎಲ್ಗಿವಾ ಎಂಬ ನಾಟಕದ ಪ್ರದರ್ಶನವನ್ನು ಕಾಣಲು ಸಾಧ್ಯವಾಯಿತು. ಆದರೆ ಅವರ ಉಳಿದ ನಾಟಕಗಳು ಪ್ರದರ್ಶನಗೊಳ್ಳಲು ೨೦ನೇ ಶತಮಾನದ ಅಂತ್ಯದವರೆಗೆ ಕಾಯಬೇಕಾಗಿದ್ದು ಮಾತ್ರ ಬೇಸರದ ಸಂಗತಿ. ನಂತರ ಅವುಗಳ ಬಗ್ಗೆ ವಿಮರ್ಶೆಗಳು ಕೂಡ ಪ್ರಕಟವಾದವು.  ಅವರ ಎರಡು ನಾಟಕಗಳನ್ನು ಹೊರತುಪಡಿಸಿ ಉಳಿದೆಲ್ಲವೂ ೧೯೯೫ರಲ್ಲಿ ಮೊದಲ ಸಲ ಪ್ರಕಟವಾದವು.

೧೭೭೫ರಲ್ಲಿ ಥಾಮಸ್ ಬಾರ್ಲೋ ಎಂಬ ವ್ಯಕ್ತಿಯೊಂದಿಗಿನ ಮದುವೆಯ ಪ್ರಸ್ತಾಪವನ್ನು ತಳ್ಳಿ ಹಾಕಿದರೂ ಅದು ಅವರ ಜರ್ನಲ್ ಆಂಡ್ ಲೆಟರ್‍ಸ್‌ನಲ್ಲಿ ತಮಾಷೆಯ ಭಾಗವಾಗಿ ಕಾಣಿಸಿಕೊಂಡಿದೆ. ಸಾಮ್ಯುಯೆಲ್ ಕ್ರಿಸ್ಪ್, ಡಾ. ಜಾನ್ಸನ್ ಹಾಗೂ ಜಾರ್ಜ ಓವನ್ ಎಂಬ ಪಾದ್ರಿ ಮುಂತಾದವರೊಂದಿಗಿನ ಪ್ರಣಯವಿದ್ದರೂ ಅದು ವೈವಾಹಿಕ ಸಂಬಂಧವಾಗಿ ಮುಂದುವರೆಯಲಿಲ್ಲ.
   ೧೭೮೬ರಿಂದ ೧೭೯೧ರವರೆಗಿನ ಐದು ವರ್ಷಗಳ ಕಾಲ ಮೂರನೆ ಜಾರ್ಜ್‌ರ ರಾಣಿ ಶಾರ್ಲೆಟ್‌ರ ಕೀಪರ್ ಆಫ್ ದಿ ರೋಬ್ಸ್ ಕೆಲಸಕ್ಕೆ ಸೇರಿಕೊಂಡಿದ್ದ ಫ್ರಾನ್ಸಿಸ್ ಬರ್ನಿಯವರ ಕಾದಂಬರಿ ಬರವಣಿಗೆಯು ಬಹುತೇಕ ನಿಂತು ಹೋಗುವಂತಾಗಿತ್ತಲ್ಲದೆ ಅತಿಯಾದ ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೂ ತುತ್ತಾದರು. ಈ ಸಮಯದಲ್ಲಿ ಅವಳ ಡೈರಿಯಲ್ಲಿ ಮೂರನೆ ಜಾರ್ಜ್ ಎದುರಿಸುತ್ತಿರುವ ಬಿಕ್ಕಟ್ಟು ಸೇರಿದಂತೆ ರಾಜಮನೆತನದ ಅಂತರಂಗ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬರೆದಿರುವುದನ್ನು ಕಾಣಬಹುದು. ಸರಿಸುಮಾರು ಇದೇ ಸಮಯಕ್ಕೆ ಹಲವಾರು ದುರಂತ ನಾಟಕಗಳನ್ನು ಬರೆಯಲು ಪ್ರಾರಂಭಿಸಿದರು. ಆದರೆ ನ್ಯಾಯಾಲಯದ ಒತ್ತಡದ ಜೀವನದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ೧೭೯೧ ರಲ್ಲಿ ರಾಣಿ ಶಾರ್ಲೆಟ್ ವಿಶೇಷ ಅನುಮತಿ ನೀಡಿ ಫ್ರಾನ್ಸಿಸ್ ಬರ್ನಿಯವರನ್ನು ಆ ಸ್ಥಾನದಿಂದ ಬಿಡುಗಡೆ ಗೊಳಿಸಿದರು.

ನ್ಯಾಯಾಲಯದ ಜೀವನದಿಂದ ಬಿಡುಗಡೆಯಾದ ನಂತರ, ಫ್ರಾನ್ಸಿಸ್ ಬರ್ನಿಯವರ ಆರೋಗ್ಯ ಸುಧಾರಿಸಿತು. ೧೭೮೯ರಲ್ಲಿ ಫ್ರೆಂಚ್ ಕ್ರಾಂತಿ ಪ್ರಾರಂಭವಾಯಿತು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಸಹಾನುಭೂತಿ ಹೊಂದಿದ್ದ ಇಂಗ್ಲೆಂಡಿನ ಅನೇಕ ಸಾಹಿತಿಗಳಲ್ಲಿ ಇವರೂ ಒಬ್ಬರಾಗಿದ್ದರು. ನಾರ್ಬರಿ ಪಾರ್ಕ್‌ನಲ್ಲಿ ಕೆಲವು ಕುಟುಂಬ ಸ್ನೇಹಿತರನ್ನು ಮತ್ತು ಅವಳ ಸಹೋದರಿ ಸುಸಾನ್‌ಳನ್ನು ಭೇಟಿ ಮಾಡಲುಹೋದಾಗ ಅಕ್ಟೋಬರ್ ೧೭೯೨ ರಲ್ಲಿ ಫ್ರೆಂಚ್‌ನಿಂದ ಹೊರದೂಡಲ್ಪಟ್ಟ ಒಂದು ವಲಸಿಗರ ಗುಂಪು ಹತ್ತಿರದ ಜುನಿಪರ್ ಹಾಲ್‌ನಲ್ಲಿ ವಾಸವಾಗಿದ್ದರು. ಅಲ್ಲಿದ್ದ ಫ್ರಾನ್ಸ್‌ನ ದೇಶಭ್ರಷ್ಟ ಸೈನಿಕನಾಗಿದ್ದ ಅಲೆಕ್ಸಾಂಡ್ರೆ-ಜೀನ್-ಬ್ಯಾಪ್ಟಿಸ್ಟ್ ಪಿಯೋಚಾರ್ಡ್ ಡಿ'ಅರ್ಬ್ಲೇ (೧೭೫೪-೧೮೧೮)ಯವರನ್ನು ಮೊದಲ ಭೇಟಿಯಲ್ಲಿಯೇ ಅವರ ವ್ಯಕ್ತಿತ್ವ ನಡತೆಯಿಂದಾಗಿ ಮೆಚ್ಚಿಕೊಂಡರು. ಆದರೆ ಡಿ'ಅರ್ಬ್ಲೇ ಅವರ ಉದಾರವಾದ ರಾಜಕೀಯ ಅಭಿಪ್ರಾಯ ಹಾಗೂ ದೇಶಭ್ರಷ್ಟರಾಗಿದ್ದರ ಕುರಿತು ಚಿಕ್ಕದೊಂದು ಸಂಶಯ ಫ್ರಾನ್ಸಿಸ್ ಬರ್ನಿಯವರಲ್ಲಿತ್ತು.  ಆದರೆ ಜುಲೈ ೨೮, ೧೭೯೩ ರಂದು ಮಿಕ್ಲೆಹ್ಯಾಮ್‌ನಲ್ಲಿರುವ ಸೇಂಟ್ ಮೈಕೆಲ್ಸ್ ಚರ್ಚ್‌ನಲ್ಲಿ ಸ್ನೇಹಿತರು ಮತ್ತು ಕುಟುಂಬದ ಕೆಲವೇ ಸದಸ್ಯರ ಎದುರಲ್ಲಿ ವಿವಾಹವಾದರು.  ಎರಡು ದಿನಗಳ ನಂತರ ರೋಮನ್ ಕ್ಯಾಥೋಲಿಕ್‌ರಾಗಿದ್ದ ಡಿ'ಅರ್ಬ್ಲೇಗಾಗಿ ಲಂಡನ್‌ನಿನ ಲಿಂಕನ್ಸ್ ಇನ್ ಫೀಲ್ಡ್‌ನಲ್ಲಿರುವ ಸಾರ್ಡಿನಿಯನ್ ಚಾಪೆಲ್‌ನಲ್ಲಿ ಮತ್ತೊಮ್ಮೆ ವಿವಾಹವಾಗಬೇಕಾಯಿತು.ಇಬ್ಬರ ಹೊಂದಾಣಿಕೆಯ ಜೀವನ ಅತ್ಯಂತ ಸಂತೋಷದಾಯಕವಾಗಿತ್ತು. ಇಬ್ಬರೂ ತಮ್ಮ ಜೀವನದುದ್ದಕ್ಕೂ ಅಪಾರವಾದ ಪ್ರೀತಿಯಿಂದ ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡುತ್ತ ಬದುಕಿದರು. ಅವರಿಬ್ಬರಿಗೂ ಅಲೆಕ್ಸಾಂಡರ್ ಚಾರ್ಲ್ಸ್ ಲೂಯಿಸ್ ಪಿಚರ್ಡ್ ಡಿ ಅರ್ಬ್ಲೇ (ಡಿಸೆಂಬರ್ ೧೮, ೧೭೯೪) ಎಂಬ ಮಗನಿದ್ದನು.
               ಮದುವೆಯ ನಂತರ, ಫ್ರಾನ್ಸಿಸ್ ತನ್ನ ಬರವಣಿಗೆಯ ವೃತ್ತಿಜೀವನವನ್ನು ಪುನರಾರಂಭಿಸಿದರು. ಮಗನ ಹುಟ್ಟುವುದಕ್ಕೆ ಮುಂಚೆಯೇ ಕ್ಯಾಮಿಲ್ಲಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.  ಅವರ ಪತಿ ಅಲ್ಲಿಯೇ ಬರಹಗಳನ್ನು ಪ್ರತಿ ಮಾಡಿಬರೆದುಕೊಡುವ ಕಾರ್ಯನಿರ್ವಹಿಸುತ್ತಿದ್ದರು. ಪತ್ರಿಕೆಯ ಅಂತಿಮ ಪ್ರತಿಯನ್ನು ಸಿದ್ಧ ಮಾಡಿಕೊಡುವ ಜವಾಬ್ಧಾರಿಯುತ ಕೆಲಸ ಅವರ ಕೈಯ್ಯಲ್ಲಿತ್ತು. ೧೭೯೬ರಲ್ಲಿ ಕ್ಯಾಮಿಲ್ಲಾವನ್ನು ಸಬ್ಸ್ಕ್ರಿಪ್ಶನ್ ಮೂಲಕ ಪ್ರಕಟಿಸಲಾಯಿತು. ೩೬ಪುಟದ ಚಂದಾ ಪಟ್ಟಿಯು ೧೮ ನೇ ಶತಮಾನದ ಉತ್ತರಾರ್ಧದ ಇಂಗ್ಲಿಷ್ ಸಮಾಜದ ಯಾರು ಪತ್ರಿಕೆಗಳನ್ನು ಓದುತ್ತಾರೆಂಬ ಚಿತ್ರಣವನ್ನು ನೀಡುತ್ತಿತ್ತು.  ಚಂದಾದಾರರಲ್ಲಿ ಮಿಸ್ ಜೆ. ಆಸ್ಟೆನ್, ಸ್ಟೀವೆಂಟನ್ ಕೂಡ ಇದ್ದರು.  ಈ ಸಾಹಿತ್ಯಿಕ ಕೆಲಸದಿಂದ ಬಂದ ಲಾಭದಿಂದ ಡಿ'ಆರ್ಬ್ಲೇಸ್ ತಮ್ಮ ಸ್ವಂತ ಮನೆಯನ್ನು ನಿರ್ಮಿಸಿಕೊಂಡರು. ಅದನ್ನು ಅವರು "ಕ್ಯಾಮಿಲ್ಲಾ ಕಾಟೇಜ್" ಎಂದು ಕರೆದರು.

        ೧೮೦೧ರಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಕಳೆದುಹೋದ ಆಸ್ತಿಯನ್ನು ಮರುಪಡೆಯುವ ಆಸೆಯಿಂದ ಹಾಗೂ ನೆಪೋಲಿಯನ್ ಬೋನಾಪಾರ್ಟೆಯ ಸೈನ್ಯದಲ್ಲಿ ಕೆಲಸಕ್ಕೆ ಸೇರಲೆಂದು ಡಿ'ಅರ್ಬ್ಲೆ ತನ್ನ ಕುಟುಂಬವನ್ನು ಫ್ರಾನ್ಸ್‌ಗೆ ಸ್ಥಳಾಂತರಿಸಿದರು, ಆದರೆ ಆ ಸಮಯದಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್ ಹಾಗೂ ಫ್ರಾನ್ಸಸ ಯುದ್ಧದಿಂದಾಗಿ ಹತ್ತು ವರ್ಷಗಳ ಕಾಲ ದೇಶಭ್ರಷ್ಟರಾಗಿರಬೇಕಾಯಿತು. ಅವರ ಕುಟುಂಬವು ಫ್ರಾನ್ಸ್‌ನಲ್ಲಿದ್ದಾಗಲೇ ಅಮಿಯನ್ಸ್ ಶಾಂತಿಯು ಕೊನೆಗೊಂಡಿತು.  ೧೮೧೦ರಲ್ಲಿ ಫ್ರಾನ್ಸಿಸ್ ತನ್ನ ಸ್ತನದ ಕ್ಯಾನ್ಸರ್‌ನ ಶಸ್ತ್ರಚಿಕಿತ್ಸೆಯನ್ನು ಅರಿವಳಿಕೆ ಇಲ್ಲದೆಯೇ ಕ್ರಾನಿಕಲ್ ಮಾಡುವ ಮೂಲಕ ವೈದ್ಯಕೀಯ ಇತಿಹಾಸವನ್ನು ನಿರ್ಮಿಸಿದಳು. ಕುಟುಂಬವು ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ ೧೮೧೪ರಲ್ಲಿ  ತನ್ನ ಕೊನೆಯ ನಾಲ್ಕನೇ ಕಾದಂಬರಿ ದಿ ವಾಂಡರರ್ ಅನ್ನು ಬರೆದರು. ಅದರ ಮಾರನೆಯ ವರ್ಷ ನೆಪೋಲಿಯನ್ ವಿರುದ್ಧ ಫ್ರೆಂಚ್ ರಾಯಲಿಸ್ಟ್‌ಗಳೊಂದಿಗೆ ಹೋರಾಡುತ್ತಿದ್ದ ತನ್ನ ಗಂಡನ ಜೊತೆಯೇ ಉಳಿದುಕೊಂಡರು. ನೆಪೋಲಿಯನ್ ವಾಟರ್ಲೂ ಕದನದಲ್ಲಿ ಗೆದ್ದಿದ್ದಾನೆ ಎಂಬ ವದಂತಿಗಳು ಹರಡಿದಾಗಲೂ ಬ್ರಸೆಲ್‌ನಿಂದ ಪಲಾಯನ ಮಾಡಲು ನಿರಾಕರಿಸಿದರು. ವಾರಗಟ್ಟಲೆ ಯುದ್ಧಭೂಮಿಯಿಂದ ಹೊರಹೋಗಲು ಸಾಧ್ಯವಿಲ್ಲದ ಇಂಗ್ಲಿಷ್ ಗಾಯಾಳುಗಳಿಗೆ ನರ್ಸ್ ಆಗಿ ಸಹಾಯ ಮಾಡಲು ಉಳಿದುಕೊಂಡರು.

          ೧೮೧೪ರಲ್ಲಿ ಅವರ ತಂದೆ ಮರಣ ಹೊಂದಿದರು. ನಂತರ ೧೮೧೮ರಲ್ಲಿ ಪತಿಯ ಮರಣದ ನಂತರ, ಫ್ರಾನ್ಸಿಸ್ ಬರ್ನಿ ಡಿ'ಅರ್ಬ್ಲೇ ಯಾವುದೇ ಕಾದಂಬರಿಯನ್ನು ಬರೆಯಲಿಲ್ಲ. ೧೮೩೨ರಲ್ಲಿ ಪ್ರಕಟವಾದ ಮೆಮೊಯಿರ್ಸ್ ಆಫ್ ಡಾಕ್ಟರ್ ಬರ್ನಿ, ಮತ್ತು ೧೮೪೦ ರಲ್ಲಿ ಅವರ ಮರಣದ ನಂತರ ಡೈರಿ ಆಂಡ್ ಲೆಟರ್ಸ್ ಆಫ್ ಮೇಡಮ್ ಡಿ ಆರ್ಬ್ಲೇ ಪ್ರಕಟವಾಯಿತು. 


 ೬ ಜನವರಿ ೧೮೪೦ರಂದು, ಎಂಬತ್ತೇಳನೇ ವಯಸ್ಸಿನಲ್ಲಿ, ಫ್ರಾನ್ಸಿಸ್ ಬರ್ನಿ, ಮೇಡಮ್ ಡಿ ಆರ್ಬ್ಲೇ, ಲಂಡನ್‌ನಲ್ಲಿ ನಿಧನರಾದರು. ಅವರ ಪತಿ ಮತ್ತು ಮಗನೊಂದಿಗೆ ಸೇಂಟ್ ಸ್ವಿಥಿನ್ಸ್, ವಾಲ್ಕಾಟ್, ಬಾತ್‌ನಲ್ಲಿ ಸಮಾಧಿ ಮಾಡಲಾಗಿದೆ.


     ೧೭೭೮ರಲ್ಲಿ ಎವಿಲಿಯಾ ೧೭೮೨ರಲ್ಲಿ ಸಿಸಿಲಿಯಾ, ೧೭೯೬ರಲ್ಲಿ ಕ್ಯಾಮಿಲ್ಲಾ ಮತ್ತು ೧೮೧೪ರಲ್ಲಿ ದಿ ವಾಂಡರರ್ ಹೀಗೆ ನಾಲ್ಕು ಕಾದಂಬರಿಗಳನ್ನು ಪ್ರಕಟಿಸಿದ ಇವರ ಬರವಣಿಗೆಯ ಶೈಲಿ ವಿಶಿಷ್ಟವಾದದ್ದು. ಇಂಗ್ಲೆಂಡಿನ ರಾಯಲ್ ಪ್ಯಾಮಿಲಿಯನ್ನು ಹತ್ತಿರದಿಂದ ಕಂಡಿದ್ದರಿಂದ ಇವರ ಕಾದಂಬರಿಗಳಲ್ಲಿ ಶ್ರೀಮಂತ ಕುಟುಂಬದ ಒಳತೋಟಿಗಳು, ಅವರ ಆಡಂಬರಗಳು, ಢಾಂಬಿಕ ಜೀವನ, ಮೇಲ್ವರ್ಗದ ಸ್ತ್ರೀಯರ ವೈಯಕ್ತಿಕ ಸಂಕಟಗಳು ಹಾಗು ದಾರುಣ ಸ್ಥಿತಿಗಳು ಅನಾವರಣಗೊಂಡಿವೆ.  ೧೯ನೇ ಶತಮಾನದ ಅಂತ್ಯ ಹಾಗೂ ೨೦ನೇ ಶತಮಾನದ ಆರಂಭದಲ್ಲಿ ಅವರ ಡೈರಿ ಆಂಡ್ ಲೆಟರ್ಸ್ ಆಫ್ ಮೇಡಂ ಡಿ ಆರ್ಬ್ಲೇಯ ಹಲವಾರು ಆವೃತ್ತಿಗಳು ಪ್ರಕಟವಾದವು. ೧೭೯೧ ರಿಂದ ೧೮೪೦ ರವರೆಗಿರುವ ಡಾ. ಹೆಮ್ಲೋ ಅವರ ೧೨-ಸಂಪುಟಗಳ ಜರ್ನಲ್ಸ್ ಆಂಡ್ ಲೆಟರ್ಸ್ ಆಫ್ ಫ್ಯಾನಿ ಬರ್ನಿ (ಮೇಡಮ್ ಡಿ'ಅರ್ಬ್ಲೇ)ಯ ಇಪ್ಪತೈದು ಸಂಪುಟಗಳು ಪ್ರಕಟಗೊಂಡು ಸಮಕಾಲೀನ ಇತಿಹಾಸಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದೆ.  ಫ್ರಾನ್ಸಿಸ್ ಬರ್ನಿಯವರ ಉಳಿದ ಜರ್ನಲ್‌ಗಳು ಪ್ರಸ್ತುತ ಎರಡು ಸರಣಿಗಳಲ್ಲಿ ಪ್ರಕಟಿಸಲಾಗಿದೆ. ಮೊದಲ ಆವೃತ್ತಿ ಜರ್ನಲ್ಸ್ ಆಂಡ್ ಲೆಟರ್ಸ್ ಆಫ್ ಫ್ಯಾನಿ ಬರ್ನಿ(೧೭೬೮-೧೭೮೩) ಲಾರ್ಸ್ ಟ್ರಾಯ್ಡ್‌ನ ಸಂಪಾದಕತ್ವದಲ್ಲಿ ಮತ್ತು ಕೋರ್ಟ್ ಜರ್ನಲ್ಸ್ ಆಂಡ್ ಲೆಟರ್ಸ್ (೧೭೮೬-೧೭೯೧) ಪೀಟರ್ ಸಬೋರ್ನ್ ಸಂಪಾದಕತ್ವದಲ್ಲಿ ಪ್ರಕಟಗೊಂಡಿದೆ. ಇವರ ಜರ್ನಲ್‌ನಲ್ಲಿ ಭಾರತದಲ್ಲಿ ವಾರನ್ ಹೇಸ್ಟಿಂಗ್ಸ್‌ನ ದುರ್ನಡತೆಗಾಗಿ ನಡೆದ ವಿಚಾರಣೆ ಸೇರಿದಂತೆ ಅನೇಕ ಪ್ರಮುಖವಾದ ರಾಜಕೀಯ ಘಟನೆಗಳ ಅಧಿಕೃತ ಉಲ್ಲೇಖವಿದೆ. ಫ್ರಾನ್ಸಿಸ್ ಬರ್ನಿಯವರ ಕಾದಂಬರಿಗಳು ಮತ್ತು ನಾಟಕಗಳು ವಿಮರ್ಶಾತ್ಮಕ ಮೆಚ್ಚುಗೆಯುನ್ನು ಪಡೆದಿವೆ. ಇದು ೧೮ನೇ ಶತಮಾನದ ಮಹಿಳಾ ಬರಹಗಾರರಲ್ಲಿ ಹೊಸ ಆಸಕ್ತಿಯನ್ನು ಹುಟ್ಟುಹಾಕಿತು. ಯುದ್ಧ, ಬರವಣಿಗೆ ಹಾಗೂ ಇಂಗ್ಲೆಂಡ್‌ನ ರಾಜ ಮನೆತನದ ನಿಕಟ ಒಡನಾಟದೊಂದಿಗಿದ್ದರೂ ನೆಪೋಲಿಯನ್ ಜೊತೆ ಕೆಲಸ ಮಾಡಿದ ಪತಿ ಈ ಎಲ್ಲವನ್ನು ನಿಭಾಯಿಸುತ್ತ, ಮಹಿಳೆಯರ ಸ್ಥಿತಿಗತಿಗಳನ್ನು ಜಗತ್ತಿಗೆ ತೆರೆದಿಡುತ್ತ, ಅರವಳಿಕೆ ಇಲ್ಲದೆ ಶಸ್ತ್ರಚಿಕೆತ್ಸೆಯನ್ನೂ ಮಾಡಿಸಿಕೊಂಡ ವಿಶಿಷ್ಟ ಮಹಿಳೆಯಾಗಿ ನಮ್ಮೆದುರಿಗಿದ್ದಾರೆ.


lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220708_4_6

ಶ್ರೀದೇವಿ ಕೆರೆಮನೆ

Tuesday, 5 July 2022

ನಿಜ ಬದುಕಿನ ಜಂಜಾಟ

ನಿಜ ಬದುಕಿನ ಜಂಜಾಟ

ಅರ್ಥವಾಗುತ್ತಿದೆ ಈಗೀಗ  ಇಷ್ಟಿಷ್ಟೇ 
ಸುಖವೆಂದರೆ ಏನೆಂಬುದು 
ನಿಧಾನವಾಗಿ ಈರುಳ್ಳಿಯ ಸಿಪ್ಪೆ ಸುಲಿದು 
ಪದರ ಬಿಡಿಸಿದ ಹಾಗೆ 

ಏಳುಸುತ್ತಿನ ಕೋಟೆಯೊಳಗೆ ಬಂಧಿಯಾದ 
ಏಳು ಮಲ್ಲಿಗೆ ತೂಕದ 
ಬಳುಕಾಡುವ ರಾಜಕುಮಾರಿಯನ್ನು 
ಅದೆಲ್ಲಿಂದಲೋ ಕುದುರೆಯೇರಿ 
ಬಂದ ಸುಂದರಾಂಗ
ಕಾವಲಿಗಿದ್ದ ರಕ್ಕಸನನ್ನು ಕೊಂದು 
ಒಲಿಸಿ ವಿವಾಹವಾದ ನಂತರ 
ತಪ್ಪದೆ ಹೇಳುತ್ತೇವಲ್ಲ 
ಬದುಕಿದರು ಇಬ್ಬರೂ ಸುಖವಾಗಿ 
ನೂರು ವರ್ಷಗಳ ಕಾಲ 
ಎಂಬ ಸುಳ್ಳಿನ 
ಕಥೆ ಕಟ್ಟಿದಂತಲ್ಲ ಎನ್ನುವುದು 

ಶುರುವಾಗುತ್ತದೆ ಅನಂತ ಕೋಟಿ 
ಕಷ್ಟ ಕಾರ್ಪಣ್ಯಗಳೆಲ್ಲ 
ಮದುವೆಯಾಗಿ, ಮೊದಲ ಹಸಿಬಿಸಿಯ
ಕಾವುಗಟ್ಟಿ ಹುರಿಗೊಂಡದ ದೇಹದ 
ಮೈ ಬಿಸಿಯೆಲ್ಲ ಇಳಿದು 
ತುಸು ವಿರಮಿಸಿ 
ಆಚೀಚೆ ನೋಡ ತೊಡಗಿದ ಮೇಲೆ 

ಕನಸಿನ ಕನ್ಯೆಯಲ್ಲ ಈಕೆ 
ಮೊದಲು ಕನವರಿಸಿ ಕಾತರಿಸಿದಂತಿಲ್ಲ 
ಮೈ ಬಣ್ಣ ತುಸು ಕಪ್ಪು 
ಮೊಂಡು ಮೂಗು, ದೊಡ್ಡ ಹಣೆ 
ಇದ್ದುದರಲ್ಲಿ  ಪರವಾಗಿಲ್ಲ 
ನೀಳವಾದ ಕಡುಗಪ್ಪು ಕೂದಲು 
ತನ್ನಂತಹ ಅಚ್ಚ ಬಿಳುಪಿನ ಗಂಡಿಗೆ 
ತಕ್ಕವಳಲ್ಲ ಎಂಬ ಹಳಹಳಿಕೆ 

ಅವಳಿಗೂ ಅವಳದ್ದೇ ಕೊರಗು 
ಗಂಡಸು ಚಂದವಿದ್ದರಷ್ಟೇ ಸಾಕೆ? 
ಬೇಡವೆ ಸಂಸಾರ ಸಾಗಿಸಲು 
ಕೈ ತುಂಬ ಸಂಬಳ? 
ಚಂದ ನೋಡಿ ಬಣ್ಣಗೆಟ್ಟ ಆತಂಕ ಇವಳಿಗೆ 

ಒಬ್ಬರಿಗೊಬ್ಬರು ಹಾಗೆ ಹೀಗೆಂದು 
ಹೀಗಳೆದು ಬೈಯ್ದಾಡಿಕೊಳ್ಳುವ
ನಡುವಿನ ಚಿಕ್ಕ ಸಮಯದಲ್ಲೇ 
ತೀರಿಸಿಕೊಂಡ  ದೇಹದ ಕಾವಿಗೆ 
ಹುಟ್ಟಿದ ಮಗು 

ಅರ್ಥವಾಗಿದೆ ಈಗ ಸುಖವೇನೆಂಬುದು 
ಜಗಳವಾಡದೆ ತುಸು ಸಮಾಧಾನದಲಿ 
ಕಳೆದರೆ ಒಂದು ದಿನ 
ಜಗದ ನಿಜದ ಸುಖ ಎನ್ನುವ ಸತ್ಯ




Friday, 1 July 2022

ನಿಗೂಢ ಬರೆಹಗಾರ್ತಿ ಮೇರಿ ಡೇವಿಸ್

ನಿಗೂಢ ಬರೆಹಗಾರ್ತಿ ಮೇರಿ ಡೇವಿಸ್


     ಬಾಲ್ಯದಲ್ಲಿ ತಂದೆ ತಾಯಿ ಇಟ್ಟಿದ್ದ ಹೆಸರೂ ಸಹ ತಿಳಿದಿಲ್ಲದ ಮೇರಿ ಡೇವಿಸ್‌ನಷ್ಟು ನಿಗೂಢ ಬರಹಗಾರ್ತಿ ಆಂಗ್ಲ ಸಾಹಿತ್ಯದಲ್ಲಿ ಇನ್ನೊಬ್ಬರು ದೊರಕಲಾರರು. ಒಮ್ಮೆ ಜೀವನ ಚರಿತ್ರೆಯ ಮೇಲೆ ಸುಮ್ಮನೆ ಕಣ್ಣಾಡಿಸಿದರೂ ಸಾಕು, ರಾಶಿ ರಾಶಿ ಮಾಹಿತಿಗಳನ್ನು ಒದಗಿಸಿಬಿಡುವ ಇಂಗ್ಲೀಷ್ ಸಾಹಿತಿಗಳಲ್ಲಿ ಮೇರಿ ಡೇವಿಸ್ ವಿಶಿಷ್ಟವಾಗಿ ನಿಲ್ಲುವುದು ಮೊದಲನೆಯದಾಗಿ ಈ ಕಾರಣಕ್ಕೆ.  ಅವರ ಗಂಡ  ಪೀಟರ್ ಡೇವಿಸ್. ಆತ ಡಬ್ಲಿನ್ ಚರ್ಚ್ ಆಫ್ ಐರ್ಲೆಂಡ್‌ನ ಪಾದ್ರಿಯಾಗಿದ್ದ. ಕೆಲವೊಮ್ಮೆ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಒಮ್ಮೊಮ್ಮೆ ಶಾಲೆಯ ಶಿಕ್ಷಕನಾಗಿಯೂ ಕೆಲಸ ಮಾಡುತ್ತಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಆತ ಇಂಗ್ಲೀಷ್ ಸಾಹಿತ್ಯದ ಪ್ರಖ್ಯಾತ ಲೇಖಕ ಜೊನಾಥನ್ ಸ್ವಿಫ್ಟ್‌ರವರ ಸ್ನೇಹಿತ ಮತ್ತು ಸಂವಹನಕಾರನಾಗಿದ್ದ. ಮೇರಿಯ ಹೆಸರು ಆಂಗ್ಲ ಸಾಹಿತ್ಯದಲ್ಲಿ ದಾಖಲಾಗಲು  ಇದು ಮುಖ್ಯ ಕಾರಣ.

    ಮೇರಿ ೧೬೭೪ ರಲ್ಲಿ ಐರ್ಲೆಂಡಿನಲ್ಲಿ ಜನಿಸಿದಳೆಂಬುದು ತಿಳಿದಿದ್ದರೂ ಅವರ ಜನ್ಮಸ್ಥಳದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಕೆಲವರು ಆಕೆ ಜನಿಸಿದ್ದು ಇಂಗ್ಲೆಂಡಿನಲ್ಲಿ ಎಂದು ಹೇಳುತ್ತಾರಾದರೂ ತನ್ನ ' ದಿ ಮೇರಿ ವಾಂಡರರ್ ಕೃತಿಯಲ್ಲಿ ತನ್ನ ಐರಿಶ್ ಜನ್ಮದ ಕುರಿತು ಕೆಲವು ಅಸ್ಪಷ್ಟ ಮಾತುಗಳನ್ನು ಹಂಚಿಕೊಂಡಿದಾರೆ. ೧೬೯೮ರಲ್ಲಿ ಅವರ ಪತಿ ತೀರಿಕೊಂಡಾಗ ಮೇರಿ ಡೆವಿಸ್ ಅಕ್ಷರಶಃ ಕುಸಿದು ಹೋಗುತ್ತಾರ. ಯಾಕೆಂದರೆ ಅದಕ್ಕೂ ಮೊದಲೇ ಇನ್ನೂ ಬಾಲ್ಯಾವಸ್ಥೆಯನ್ನೂ ದಾಟದಿದ್ದ ವರ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಅಕಾಲ ಮೃತ್ಯುವಿಗೀಡಾಗಿದ್ದರು. ಇದರ ಹೊರತಾಗಿ ಅವರ ಕುರಿತಾದ  ಯಾವ ವೈಯಕ್ತಿಕ ಮಾಹಿತಿಯೂ ಅಧಿಕೃತವಾಗಿ ಲಭ್ಯವಿಲ್ಲ. ಆದರೆ ಕುಟುಂಬದ ಬಗ್ಗೆ ಏನೇನೂ ತಿಳಿದಿಲ್ಲವಾದರೂ ಅವರ ಸ್ನೇಹ ಬಳಗ ಬಹು ದೊಡ್ಡದಾಗಿತ್ತು. ಸರ್  ಜಾನ್ ಜೆಫ್ರಿಸನ್ ಅವರ ಮಗಳಾದ ಮಾರ್ಗರೇಟ್ ವಾಕರ್, ಐರ್ಲೆಂಡಿನ ಕೋರ್ಟ ಆಫ್ ಕಾಮನ್ ಪ್ಲೀಸ್‌ನ್ ನ್ಯಾಯಾಧೀಶರು, ಹಾಗೂ ಅನೇಕ ಸಮಾಜಿಕ ಕಾರ್‍ಯಕರ್ತರು ಅವರ ಆತ್ಮೀಯರಾಗಿದ್ದರು.
        ಮೇರಿ ಡೇವಿಸ್ ಬರೆಯಲು ಪ್ರಾರಂಭಿಸಿದ್ದು ಅವರ ಪತಿ ತೀರಿಕೊಂಡ ನಂತರ. ಪತಿಯ ಮರಣದಿಂದಾಗಿ ಲಂಡನ್ ನಗರವನ್ನು ತ್ಯಜಿಸಿದ ಮೇರಿ ಡೆವಿಸ್ ೧೭೦೦ರಲ್ಲಿ ಪುನಃ ಲಂಡನ್‌ಗೆ ಹಿಂದಿರುಗಿದರು. ೧೭೦೪ರಲ್ಲಿ ತನ್ನ ಪ್ರಥಮ ಪುಸ್ತಕವಾದ 'ದಿ ಅಮೋರ್ಸ್ ಆಫ್ ಅಲ್ಸಿಪ್ಪಸ್ ಆಂಡ್ ಲೂಸಿಪ್ಪಿ'ಯನ್ನು ಪ್ರಕಟಿಸಿದರು.  ಈ ಪುಸ್ತಕವನ್ನು ಸ್ನೇಹಿತೆಯಾಗಿದ್ದ ಮಾರ್ಗರೇಟ್ ವಾಕರ್‌ರವರಿಗೆ ಅರ್ಪಿಸಿದ್ದಾರೆ. ಇದು ೧೭೨೫ರಲ್ಲಿ 'ದಿ ಲೇಡಿಸ್ ಟೇಲ್ ಎಂಬ ಹೆಸರಿನಲ್ಲಿ ಮರುಮುದ್ರಣಗೊಂಡಿತು. ಮತ್ತೊಂದು ಪುಸ್ತಕ 'ದಿ ಪ್ಯುಗಿಟಿವ್' ೧೭೦೫ರಲ್ಲಿ ಪ್ರಕಟವಾಯಿತು. ಇದನ್ನು ಜೊನಾಥನ್ ಸ್ವಿಫ್ಟ್‌ರವರ ಪ್ರೇಯಸಿ ಸ್ಟೆಲ್ಲಾರವವರಿಗೆ ಅರ್ಪಿಸಲಾಗಿದೆ. ಇದೂ ಕೂಡ ೧೭೨೫ರಲ್ಲಿ 'ದಿ ಮೇರಿ ವಾಂಡರರ್' ಎಂದು ಪುನರ್ ಮುದ್ರಣಗೊಂಡಿತು. ಕೆಲವು ಕಾಲ ಯಾರ್ಕನಲ್ಲಿ ನೆಲೆಸಿದ್ದ ಮೇರಿ  ೧೭೧೬ರಲ್ಲಿ ತಮ್ಮ ನಾಟಕಗಳ ನಿರ್ಮಾಣಕ್ಕಾಗಿ ಲಂಡನ್‌ಗೆ ಹಿಂದಿರುಗಿದರು. ಮೂರು ರಾತ್ರಿಗಳ ಕಾಲ ಭರ್ಜರಿ ಪ್ರದರ್ಶನ ಕಂಡ ಅವರ ನಾಟಕವು ಬರಹಗಾರ್ತಿಗೆ ಲಾಭವನ್ನು ತಂದುಕೊಟ್ಟಿತು. ಹೀಗಾಗಿ ಅವರು ಪಟ್ಟಣದ ಹೆಸರುವಾಸಿ ಲೇಖಕಿಯಾಗಬೇಕೆಂಬ ಬಯಕೆಯಿಂದ ಇನ್ನಷ್ಟು ದಿನಗಳ ಕಾಲ ಲಂಡನ್‌ನ್ನಿನಲ್ಲಿಯೆ ಉಳಿಯಬೇಕೆಂದುಕೊಂಡರು.  ಬಹುಶಃ ಅದೇ ಸಮಯದಲ್ಲಿ ಅವರು 'ಪ್ಯಾಮಿಲಿಯರ್ ಲೆಟರ್‍ಸ್ ಬಿಟ್ವುಕ್ಸ್ ಎ ಜಂಟಲ್‌ಮ್ಯಾನ್ ಆಂಡ ಎ ಲೇಡಿ' ಎನ್ನುವ ಸಂಕಲನವನ್ನು ಬರೆದರಾದರೂ ಅದನ್ನು ಪ್ರಕಟಿಸಲಾಗಲಿಲ್ಲ. ೧೭೨೫ರ ಸುಮಾರಿಗೆ 'ದಿ ವರ್ಕ್ಸ' ಎನ್ನುವ ಕೃತಿಯೊಟ್ಟಿಗೆ ಇದು ಪ್ರಕಟವಾಯಿತು. ಯಶಸ್ವಿ ಹಾಗೂ ಪ್ರಸಿದ್ಧಿ ಪಡೆದ ಬರಹಗಾರ್ತಿಯಾಗಬೇಕೆಂಬ ಅವರ ಆಸೆ ಈಡೇರುವ ಲಕ್ಷಣಗಳಿರಲಿಲ್ಲ. ೧೭೧೮ ಹೊತ್ತಿಗೆ ಕಡಿಮೆಯಾಗುತ್ತ ಬಂದ ಭರವಸೆಯಿಂದಾಗಿ ಭ್ರಮನಿರಸನಗೊಂಡಿದ್ದರು. 'ತನ್ನ ನಾಟಕಗಳು ಡ್ರೂರಿಲೇನ್ ಥಿಯೇಟರ್‌ನಲ್ಲಿ ಪ್ರದರ್ಶನ ಗೊಳ್ಳಬೇಕಾಗಿತ್ತು' ಎನ್ನುವ ನಿರಾಸೆಯ ಮಾತುಗಳಲ್ಲಿ ಈ ಛಾಯೆಯನ್ನು ಕಾಣಬಹುದು. ಹೀಗಾಗಿ ನಿರಾಸೆಯಿಂದ ಕೆಂಬ್ರಿಡ್ಜ್‌ಗೆ ತೆರಳಿದ ಅವರು ಅಲ್ಲಿ ಕಾಫಿ ಹೌಸ್ ಒಂದನ್ನು ಪ್ರಾರಂಭಿಸಿದರು. ಕೇಂಬ್ರಿಡ್ಜ್‌ನ ಸೇಂಟ್ ಜಾನ್ಸ್ ಕಾಲೇಜಿನ ವಿದ್ಯಾರ್ಥಿಗಳಿಂದಾಗಿ ಕಾಫಿ ಹೌಸ್ ಚೆನ್ನಾಗಿ ನಡೆಯುತ್ತಿತ್ತು. ತಮ್ಮ ಒಂದು ಪುಸ್ತಕದ ಮೊದಲ ಮಾತುಗಳಲ್ಲಿ ಈ ವಿದ್ಯಾರ್ಥಿಗಳ ಸಹಾಯಕ್ಕಾಗಿ ಕೃತಜ್ಞತೆಯನ್ನು ತಿಳಿಸಿದ್ದಾರೆ.



          ಕೇಂಬ್ರಿಡ್ಜ್‌ನಲ್ಲಿ ಹೆಚ್ಚು ಹೆಚ್ಚು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ಸಾಹಿತ್ಯಿಕ ಜೀವನದಲ್ಲಿ ಅವರಿಗೆ ಹೆಸರು ತಂದುಕೊಟ್ಟಿದ್ದು ಈ ಕಾದಂಬರಿಗಳು. 'ದಿ ರಿಫಾರ್ಮ್ಡ್ ಕಾಕ್ವೆಟ್' ಇಂತಹ ಆರಂಭಿಕವಾಗಿ ಯಶಸ್ಸನ್ನು ತಂದುಕೊಟ್ಟ ಕಾದಂಬರಿಗಳಲ್ಲಿ ಒಂದು. ಅವರ ಕಾದಂಬರಿಗಳು ಸರಳವಾದ ಶಬ್ಧಗಳಿಂದ ಕುಡಿದ್ದರೂ ಶೈಕ್ಷಣಿಕ ಮಹತ್ವವುಳ್ಳದ್ದು. ಇಂಗ್ಲೀಷ್ ಸಾಹಿತ್ಯದಲ್ಲಿ ವಿಶಿಷ್ಟ ಮಹತ್ವ ಪಡೆದ ಎಪಿಸ್ಟಾಲರಿ ಕಾದಂಬರಿಗಳ ಶೈಲಿಯಲ್ಲಿ ಬರೆದ ಇವರ ಎಲ್ಲ ಕಾದಂಬರಿಗಳು ಆ ಕಾಲದ ಜನಪ್ರಿಯ ಕಾದಂಬರಿಗಳೆನಿಸಿದವು. ಆದರೂ ಆ ಶೈಲಿ ಆಗಷ್ಟೇ ಸಾಹಿತ್ಯ ಲೋಕಕ್ಕೆ ಪರಿಚಯಿಸಲ್ಪಟ್ಟ ಶೈಲಿಯಾಗಿದ್ದರಿಂದ ಒಂದಿಷ್ಟು ಕಟು ವಿಮರ್ಶೆಗಳನ್ನೂ ಕೇಳಬೇಕಾಯಿತು. ಇವರ ನಂತರ ಸಾಮ್ಯುಯೆಲ್ ರಿಚರ್ಡಸನ್ ಈ ಎಲಿಸ್ಟಾಲರಿ ಕಾದಂಬರಿಗಳನ್ನು ಬರೆದು ಅದನ್ನು ಆಂಗ್ಲ ಸಾಹಿತ್ಯದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದ್ದನ್ನು ಕಾಣಬಹುದು.
    ಮೊನಚಾದ ಆದರೆ ಅಷ್ಟೇ ಹಠಮಾರಿತನದಿಂದ ಕೂಡಿದ ಬರವಣಿಗೆಯ ಶೈಲಿ ಇವರದ್ದು. ತಮ್ಮ ಕಾದಂಬರಿಗಳ ಪಾತ್ರಗಳನ್ನು ಅತ್ಯಂತ ತೀಕ್ಷ್ಣ ಸ್ವಭಾವದಾಗಿದ್ದರೂ ವಿಚಿತ್ರವಾದ ವಿಡಂಬನೆಯಿಂದ ಕೂಡಿರುವಂತೆ ಚಿತ್ರಿಸುತ್ತಿದ್ದರು. ಅವರ ಸ್ತ್ರೀ ಪಾತ್ರಗಳು ಯಾವುದನ್ನೂ ಸಿಗ್ಗಿಲ್ಲದೆ ಹೇಳಿಬಿಡುವ ಪಾತ್ರಗಳಾಗಿದ್ದವು.  ತಮ್ಮ ಕಾದಂಬರಿಗಳಲ್ಲಿ ಅತಿಯಾದ ಕಾಮ, ಕುಡಿತ ಹಾಗೂ ಮಾದಕದ್ರವ್ಯಗಳ ಬಳಕೆಗಳ ಕುರಿತು ಬರೆಯುತ್ತಿದ್ದುದರಿಂದ 'ಡಿಬೌಚ್ಡ್ ವುಮನೈಸರ್' ಎಂಬ ಕುಖ್ಯಾತಿಗೆ ಪಾತ್ರರಾಗಬೇಕಾಯಿತು. 'ಸಂಬಂಧಗಳ ಕುರಿತು ಸೂಕ್ಷ್ಮ ಗ್ರಹಿಕೆಗಳಿಲ್ಲದ ಬರಹಗಾರ್ತಿ' ಎಂಬ ಅವಹೇಳನಕ್ಕೂ ತುತ್ತಾಗಬೇಕಾಯಿತು. ಈ ಕಾರಣಕ್ಕೋಸ್ಕರವೇ ೧೭೩೧ರಲ್ಲಿ ದಿ ಗ್ರಬ್ ಸ್ಟೇಟ್ ಜರ್ನಲ್‌ನಲ್ಲಿ 'ಬೌಡಿ' ಎಂದು ಓದುಗರ ತೀಕ್ಷ್ಣವಾದ ಪ್ರತಿಕ್ರಿಯೆಗೆ ಒಳಗಾಗಬೇಕಾಯಿತು. ಬೌಡಿ ಎಂದರೆ ಲೈಂಗಿಕ ಸಂಬಂಧಗಳನ್ನು ಅಥವಾ ಕಾಮದ ವಿಷಯಗಳನ್ನು ಹಾಸ್ಯದ ರೂಪದಲ್ಲಿ ಅಥವಾ ಹಾಸ್ಯಾಸ್ಪದವಾಗಿ ಚಿತ್ರಿಸುವ ವ್ಯಕ್ತಿ ಎಂದರ್ಥ. ಆದರೂ ಈ ವಿಷಯವಾಗಿ ಒಂದಿಷ್ಟೂ ತಲೆಕೆಡಿಸಿಕೊಳ್ಳದ ಮೇರಿ ಡೇವಿಸ್ ಈ ದಾಳಿಗೂ ತುಂಬ ಉತ್ಸಾಹದಿಂದಲೇ ಪ್ರತಿಕ್ರಿಯಿದ್ದರು.
       ೧೭೨೫ರಲ್ಲಿ 'ದಿ ವರ್ಕ್ಸ್ ಆಪ್ ಮಿಸೆಸ್ ಡೇವಿಸ್' ಎಂಬ ಅವರ ಸಮಗ್ರ ಸಂಕಲನ ಪ್ರಕಟಗೊಂಡಿತು. ೧೭೨೭ರಲ್ಲಿ 'ದಿ ಎನ್‌ಕಂಪ್ಲಿಷ್ಡ್ ರೇಕ್' ಅಥವಾ 'ಮೊಡರ್ನ್ ಫೈನ್ ಜೆಂಟಲ್‌ಮನ್' ೧೭೩೨ರಲ್ಲಿ 'ದಿ ಕಸಿನ್ಸ್' ಪ್ರಕಟಗೊಂಡಿತು. ಇವೆಲ್ಲದರ ನಡುವೆ ೧೭೨೫ರಲ್ಲಿ 'ದಿ ಮಾಡರ್ನ್ ಪೋಯೆಟ್' ಎನ್ನುವ ಕವನ ಸಂಕಲನವೂ ಹೊರಬಂತು.
೫ ಜುಲೈ ೧೭೩೨ರಂದು ನಿಧನ ಹೊಂದುವವರೆಗೂ ಮೇರಿ ಡೇವಿಸ್ ಕ್ರಾಂಬ್ರಿಡ್ಜ್‌ನಲ್ಲಿಯೇ ನೆಲೆಸಿದ್ದರು. ಕ್ಯಾಂಬ್ರಿಡ್ಜ್‌ನ ಹೋಲಿ ಸೆಫಲ್ಟರ್ ಚರ್ಚನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
 

  ಸಿಯೋಭನ್ ಕಿಲ್‌ಫೀದರ್ ಇವರನ್ನು 'ರಾಷ್ಟ್ರೀಯ ಮತ್ತು ಲೈಂಗಿಕ ಗುರುತುಗಳನ್ನು ಅನ್ವೇಷಿಸಲು ಇಂಗ್ಲಿಷ್‌ನಲ್ಲಿ ಬರೆಯುವ ಮೊದಲ ಐರಿಶ್ ಮಹಿಳೆ' ಎಂದು ಗುರುತಿಸಿದ್ದಾರೆ. ನೇರವಾದ ಹಾಗೂ ತೀಕ್ಷ್ಣವಾದ ಬರವಣಿಗೆ ಇವರ ಶೈಲಿ. ಉದಾಹರಣೆಗೆ, ದಿ ಅಕಾಂಪ್ಲಿಶ್"ಡಿ ರೇಕ್‌ನಲ್ಲಿನ ಮುಖ್ಯ ಪಾತ್ರವಾದ ಸರ್ ಜಾನ್ ಗ್ಯಾಲಿಯಾರ್ಡ್‌ಎಂಬ ಒಬ್ಬಳು ಭ್ರಷ್ಟ ಮಹಿಳೆಯನ್ನು ಸ್ವಲ್ಪವೂ ಮೃದುವಾದ ಮಾತುಗಳಿಲ್ಲದಂತೆ ವ್ಯಂಗ್ಯವಾಗಿ ಚಿತ್ರಿಸಿದ್ದಾರೆ. ತನ್ನ ಐವತ್ತನೆಯ ವಯಸ್ಸಿನಲ್ಲಿ  ಬರೆಯುವುದನ್ನು ಮುಂದುವರಿಸಲು ಆರ್ಥಿಕ ಮತ್ತು ಮಾನಸಿಕ ಸಂಪನ್ಮೂಲಗಳ ಕೊರತೆ ಇದ್ದಾಗಲೂ ಆಕೆ ಎದೆಗುಂದಲಿಲ್ಲ. ಅಲ್ಲದೆ ಆ ಸಮಯದಲ್ಲಿ ವೃತ್ತಿಪರ  ಲೇಖಕಿಯರಿಗೆ ಒಂದು ರೀತಿಯ ಸಾಮಾಜಿಕ ವಿರೋಧಗಳೂ ಇದ್ದವು. ಅದರಲ್ಲೂ ಮಹಿಳೆಯರ ಲೈಂಗಿಕ ಜೀವನವನ್ನು ತೀಕ್ಷ್ಣ ಮಾತುಗಳಿಂದ ವಿಂಡಂಬನಾತ್ಮಕವಾಗಿ ಬರೆಯುವ ಮೇರಿ ಡೇವಿಸ್‌ಗೆ ಹೆಚ್ಚಿನ ಪ್ರತಿರೋಧಗಳು ಎದುರಾದವು. ಆದರೂ ಹಠ ಹಿಡಿದು ಬರೆದ ಮೇರಿ ಡೇವಿಸ್ ಇಂದು ಆಂಗ್ಲ ಸಾಹಿತ್ಯದಲ್ಲಿ ಒಂದು ಗಟ್ಟಿಯಾದ ಸ್ಥಾನವನ್ನು ದೊರಕಿಸಿಕೊಂಡಿದ್ದಾರೆ.  
                         ಶ್ರೀದೇವಿ ಕೆರೆಮನೆ


Wednesday, 29 June 2022

ಹೊಸತನದ ಪರಿಭಾಷೆ ನೀಡುವ ಕವನಗಳು

 ಹೊಸತನದ ಪರಿಭಾಷೆ ನೀಡುವ ಕವನಗಳು 

   ಕವಿತೆ  ಹೇಗೆ ಹುಟ್ಟುತ್ತದೆ? ಕವಿತೆ ಸೃಷ್ಟಿಯಾಗಲು ಇರಬೇಕಾದ ಪೂರಕ ವಾತಾವರಣ ಯಾವುದು? ಕವಿತೆ ಬರೆಯಬೇಕೆಂದುಕೊಂಡರೆ ಲಿಪಿಕಾರನ ಮನಸ್ಸಿನಲ್ಲಿ ಮೂಡಬೇಕಾದ ಭಾವಗಳು ಯಾವವು? 
   ಇಂತಹುದ್ದೊಂದು ಪ್ರಶ್ನೆಗೆ ಚಿಕ್ಕದೊಂದು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ ಡಾ. ಪ್ರಭಾಕರ ನಾಯಕ. ತಮ್ಮ 'ಜೀವಮಂಡಲ' ಎನ್ನುವ ಕವನ ಸಂಕಲನದಲ್ಲಿ. 

ಕವಿತೆ ಎಂದಿಗು 
ಪುಕ್ಕಟೆ ಹುಟ್ಟುವುದಿಲ್ಲ 
ಅದು ತೀಟೆಯ ಕುರುಹಾಗಿ 
ಅಲೆಗಳ ಸೃಷ್ಟಿಸುವುದಿಲ್ಲ 

ಎನ್ನುತ್ತ ಚೊಚ್ಚಲ ಕವನ ಸಂಕಲನದ ಮೊದಲ ಕವನವೇ ಗಮನ ಸೆಳೆಯುತ್ತದೆ. 
 ಮೊದಲ ಕವಿತೆಯೇ ಕವಿತೆ ಹೇಗೆ ಹುಟ್ಟುತ್ತದೆ ಎಂಬುದನ್ನು ಅವರು ಹೇಳುವ ರೀತಿಗೆ ಕವಿತೆಯ ಹಲವಾರು ಆಯಾಮಗಳು ಕಣ್ಣೆದುರಿಗೆ ಹಾದುಹೋಗುತ್ತವೆ. 
ಕೊಳಚೆ ಹೂಗಳ ಮಾಂಸ ಪಕಳೆಯ
ಹಕ್ಕುದಾರಿಕೆಯನು ದಿಕ್ಕರಿಸಿ
ಕವಿತೆಯು ಸಿಡಿಲಾಗಿ ಹುಟ್ಟುತ್ತದೆ  
ಎಂದು ಹೇಳುತ್ತ ಕವಿತೆ ಸಿಡಿಲಾಗಬೇಕಾದ ಅವಶ್ಯಕತೆಯನ್ನು ತಿಳಿಸುತ್ತಾರೆ. 

ಕವನ ಸಂಕಲನದ ಪ್ರೌಢತೆ ಅದನ್ನು ಆಯ್ದುಕೊಂಡು ವಸ್ತುಗಳು ನಿರ್ಧರಿಸುತ್ತವೆ. ಅಂಕೋಲಾದ ಜಿ ಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿರುವ ಡಾ. ಪ್ರಭಾಕರ ನಾಯಕ ತುಂಬ ಶಿಸ್ತಿನ ಮನುಷ್ಯ ಎಂದು ಹೆಸರು ಮಾಡಿದ್ದವರು. ವಿದ್ಯಾರ್ಥಿಗಳು ಅವರನ್ನು ಕಂಡರೆ ಅಲ್ಲಲ್ಲೇ ಸರಿದು ಹೋಗುತ್ತಿದ್ದ ಮಾತುಗಳಿವೆ. ಅವರ ಗೌರವಪೂರ್ಣ ವ್ಯಕ್ತಿತ್ವ ಹಾಗೂ ಘನತೆ ಇದಕ್ಕೆ ಕಾರಣ. ಹೀಗಾಗಿಯೇ ಕವಿತೆಗಳೂ ತೀರಾ ಪ್ರೌಢತೆಯಿಂದ ಕೂಡಿವೆ. ಎಲ್ಲಿಯೂ ಎಳಸುತನದ ಮಾತಾಗಲಿ ಭಾವವಾಗಲಿ ಇಲ್ಲ. ಚೊಚ್ಚಲ ಸಂಕಲನದಲ್ಲಿ ಬಹುವಾಗಿ ಕಂಡುಬರುವ ಪ್ರೀತಿ ಪ್ರೇಮ ಜೊತೆಗೆ ವಿರಹದ ಕವನಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ವಿಷಯದ ಆಯ್ಕೆಯಲ್ಲಿಯೇ ಡಾ. ನಾಯಕ ಪ್ರಬುದ್ಧತೆ ತೋರಿದ್ದಾರೆ. 

ಪಟ್ಟ ಭದ್ರರ ಅನಿಯಂತ್ರಿತ 
ಒಡೆತನ ದಬ್ಬಾಳಿಕೆಗೆ ಜರ್ಜರಿತವಾಗಿ 
ಅವರ ಪಾದದಡಿ 
ಮೂಕವಾಗಿ ಕೊಳೆತು ಹೋದವರ 
ದೇವಭೂಮಿಯ ಕಡ್ಡಾಯದ 
ತೆರೆದ ಸ್ತನಗಳ ಮೆರವಣಿಗೆಯಲಿ 
ಒಳಗೊಳಗೆ ಸುಟ್ಟು ಶೂನ್ಯವಾದವರ 
ಚರಿತೆಯೊಳು ತಂದುಬಿಡಿ (ಚರಿತೆಗೊಂದು ಹೊಸ ಜೀವ ಕೊಡಿ)
ಈ ಕವನ ಅಂತಹುದ್ದೊಂದು ಬಿಗಿತನಕ್ಕೆ ಉದಾಹರಣೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಾವು ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದೇವೆ. ದೇವರನಾಡು ಎಂದು ಕರೆಯಿಸಿಕೊಳ್ಳುವ ಕೇರಳದ ತಿರವಾಂಕೂರ ಪ್ರಾಂತ್ಯದಲ್ಲಿ ಮೊಲೆಕರಂಬು ಎಂಬ ಊರಿದೆ. ಅಲ್ಲಿ ಮೇಲ್ವರ್ಗದ ನಂಬೂದರಿಗಳು ಮುಲಕರಂ ಎನ್ನುವ ಸ್ತನ ತೆರಿಗೆಯನ್ನು ವಿಧಿಸುತ್ತಿದ್ದರು.   ಕೆಳವರ್ಗದ ಮಹಿಳೆಯರು ತಮ್ಮ ಸ್ತನಗಳನ್ನು ಮುಚ್ಚಿಕೊಳ್ಳಲು ಮೇಲ್ವರ್ಗದ ಅಧಿಕಾರಿಗಳಿಗೆ ತೆರಿಗೆ ನೀಡಬೇಕಿತ್ತು. ಸ್ತನಗಳ ಗಾತ್ರ ನೋಡಿ ತೆರಿಗೆ ವಿಧಿಸುವ ಪರಿಪಾಟವೂ ಇತ್ತು. ಹೀಗಾಗಿ ಹೆತ್ತ ತಾಯಿ ತನ್ನ ಹದಿಹರೆಯದ ಆಗತಾನೆ ಮೊಗ್ಗೊಡೆಯುವ ಮಗಳ ಸ್ತನದ ಗಾತ್ರ ಕುಗ್ಗಿಸಲೆಂದು ಅವೈಜ್ಞಾನಿಕವಾಗಿ ಪ್ರಯತ್ನಪಡುತ್ತಿದ್ದರಂತೆ. ಈ ಕಾರಣಕ್ಕಾಗಿ ಅದೆಷ್ಟೋ ಕಂದಮ್ಮಗಳ ಪ್ರಾಣಕ್ಕೆ ಹೆತ್ತ ತಾಯಿಯರೇ ಎರವಾದದ್ದೂ ಇದೆ. ಅಂತಹ ಒಂದು ಊರಲ್ಲಿ ಸ್ತನ ತೆರಿಗೆಯನ್ನು ವಿರೋಧಿಸಿ ಹೊಸದಾಗಿ ಮದುವೆಯಾಗಿ ಬಂದ  ಕನಸುಗಣ್ಣಿನ ಕೆಳವರ್ಗದ ಹೆಣ್ಣಾದ ನಾಂಗೇಲಿ ಎನ್ನುವವಳು ತನ್ನ ಸ್ತನಗಳನ್ನು ಕತ್ತರಿಸಿ ತೆರಿಗೆ ನೀಡಿದ ಆಘಾತಕಾರಿ ಚರಿತ್ರೆಯಿದೆ. ಈ ಸಾಲುಗಳು ಅಂತ ಇತಿಹಾಸವನ್ನು ಕಣ್ಣೆದುರಿಗೆ ಹಾಯುವಂತೆ ಮಾಡುತ್ತವೆ. 

 

ಇನ್ನ ಸ್ವಪ್ರಚಾರ ಬಹಳ ಜನ ರೂಢಿ. ಏನೂ ಮಾಡದ ಕತ್ತೆಗೂ ವಯಸ್ಸಾಗುತ್ತದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ  ಪತ್ರಿಕೆಗಳಲ್ಲಿ ಫೋಟೋ ಹಾಕಿಸಿ ಸನ್ಮಾನ ಮಾಡಿಸಿಕೊಳ್ಳಯವುದು ಅದೆಷ್ಟು ಸರಿ? ಕೆಲವರಂತೂ ತಾವೇ ಹಣ ಕೊಟ್ಟು  ಬೇರೆಯವರ ಹೆಸರಿನಲ್ಲಿ ಪ್ರಕಟಣೆ ನೀಡುವುದನ್ನು ಕಾಣಬಹುದು.  ಅಂಥವರ ಮರ್ಮಕ್ಕೆ ತಾಗುವಂತೆ ಈ ಕವನವಿದೆ. 

ನಮ್ಮ ಶ್ರಾದ್ಧವನ್ನು 
ನಾವೇ ಮಾಡಿಕೊಳ್ಳುವುದೆಂದರೆ
ಐವತ್ತು ಅರವತ್ತು ಎಪ್ಪತ್ತು 
ಹೀಗೆ ವರ್ಷದ ಘಟ್ಟ ತಲುಪಿದಾಗೆಲ್ಲ 
ನಾವೇ ಚಿತ್ರಿಸಿಕೊಟ್ಟ ನಮ್ಮ 
ಕ್ಷೀರಾಭಿಷೇಕದ ಹೆಸರಿನಲ್ಲಿ ಪ್ರಕಟಿಸಿ 
ಬಹುಪರಾಕ ಹಾಕಿಸಿಕೊಳ್ಳುವುದು  (ಸ್ವಯಂ ಶ್ರಾದ್ಧ)
ಇದರ ಮುಂದಿನ ಸಾಲುಗಳೂ ವಿಡಂಬನಾತ್ಮಕವಾಗಿದ್ದು ನಮ್ಮನ್ನು ಒರೆಗೆ ಹಚ್ಚುತ್ತವೆ. 

 ಬರೆ ಎಂಬ ಕಥನ ಕವನ ಅತಿ ಹೆಚ್ಚು ಗಮನಸೆಳೆಯುವ ಕವನ. ಕುಡುಕ ಕರಿಗೌಡನ ಮನೆಗೆ ಬೆಂಕಿಬಿದ್ದಿದೆ. ಒಣಮೀನನ್ನಾದರೂ ಸುಟ್ಟು ಗಂಜಿ ಉಂಡರಾಯಿತೆಂದುಕೊಂಡ ತಾಯಿಯ ನಿರ್ಲಕ್ಷ ಅವಘಡಕ್ಕೆ ಕಾರಣ. ಎಲ್ಲವೂ ಸುಟ್ಟು ಬೂದಿಯಾಗಿದೆ. ಎಂಟನೆ ತರಗತಿ ಓದುತ್ತಿದ್ದ ಮಗನ ಪುಸ್ತಕಗಳೂ ಸಹ ಕರಕಲಾಗಿವೆ. ಸರಕಾರ ಒಂದಿಷ್ಟು ಪರಿಹಾರ ನೀಡಿದೆ. ಆದರೆ ಪ್ರತಿದಿನ ಹತಾನು ದುಡಿದಿದ್ದನ್ನು ಹೆಂಡದಂಗಡಿಗೆ ಹಾಕಿ ಹೆಂಡತಿಯ ದುಡಿಮೆಯಲ್ಲಿ ಬದುಕುವ ಕರಿಗೌಡ ಪರಿಹಾರದ ಹಣವನ್ನೂ ಎತ್ತಿಕೊಂಡು ಹೋಗಿ ಪಾಗಾರಕ್ಕೆ ಡಿಕ್ಕಿ ಹೊಡೆಯುವಷ್ಟು ಕುಡಿದಿದ್ದಾನೆ. ತೆಂಗಿನ ಗರಿ ಹೊದಿಸಿದ ಮಾಡಲ್ಲಿ ಈಗ ಮತ್ತದೆ ಬಡತನದ ಬದುಕು. ಎಲ್ಲಕ್ಕಿಂತ ಹೆಚ್ಚಾಗಿ ಶಾಲೆಗೆ ಹೋಗುವ ಹದಿನೈದರ ಬಾಲಕ ಉಪ್ಪಿನಾಗರದಲ್ಲಿ ಉರಿಬಿಸಿಲಿನಲ್ಲಿ ಕೆಲಸಕ್ಕೆ ಹೋಗುವಂತಾದ ಚಿತ್ರಣ ಎದೆ ಕಲಕುತ್ತದೆ. ಕಥನಕಾವ್ಯದ ಮತ್ತಿಷ್ಟು ಅಂಶಗಳನ್ನು ಒಳಗೊಂಡಿದ್ದರೆ ಈ ಕವನ ಅತ್ಯುತ್ತಮ ಎನ್ನಿಸುವ ಕವನಗಳ ಸಾಲಿನಲ್ಲಿ ಸೇರಿಬಿಡುತ್ತಿತ್ತು. ಅದೇ ಸಾಲಿಗೆ ಬುಲ್ ಬುಲ್ ತರಂಗ ಎಂಬ ಕವನವೂ ಸೇರಿಕೊಳ್ಳುತ್ತದೆ. ಸ್ಕೂಟರ್ ನಲ್ಲಿ ಗೂಡು ಕಟ್ಟಿದ ಬುಲ್ ಬುಲ್ ಹಕ್ಕಿಯ ಸಂಸಾರದ ಚಿತ್ರಣ ಕೊಡುವ ಈ ಕವನದ ಆರಂಭ ಅದ್ಭುತವಾಗಿದೆ. ರೂಪಕಗಳ ಅಳವಡಿಕೆ ಇನ್ನಷ್ಟು ಹೆಚ್ಚಿದ್ದರೆ ಇದೂ ಕೂಡ ಒಂದು ಒಳ್ಳೆಯ ಕಾವ್ಯವಾಗುತ್ತಿತ್ತು.

ಇಡಿ ಸಂಕಲನದಲ್ಲಿ ಅಲ್ಲಲ್ಲಿ ಮಿಂಚು ಹೊಡೆದಂತೆ ನಮ್ಮನ್ನು ಥಟ್ಟನೆ ಆವರಿಸಿಬಿಡುವ ಸಾಲು ಗುಚ್ಛಗಳನ್ನು ಕಾಣಬಹುದು. ಉದಾಹರಣೆಗೆ, 

ನಾಟಿ ಮಾಡಿದ ಸಸಿಗಳ ಪಾಡು 
ಜಲದೊಳಗಿನ ದುರ್ಯೋಧನ  (ನಿರ್ಯಾಣ)

ಈ ಸಾಲುಗಳನ್ನೇ ಗಮನಿಸಿ. ಪ್ರವಾಹದ ನೀರಲ್ಲಿ ಮುಳುಗಿದ ಸಸಿಗಳನ್ನು ಕವಿ ಅಂತ್ಯಕಾಲದಲ್ಲಿ ಜಲಸ್ಥಂಭನ ವಿದ್ಯೆಯಿಂದ ಸರೋವರದಲ್ಲಿ ಕುಳಿತ ದುರ್ಯೋಧನನಿಗೆ ಹೋಲಿಸುತ್ತಾರೆ. ಸರೋವರದಲ್ಲಿ ಮುಳುಗಿದ ದುರ್ಯೋದಸನ ಹೇಗೆ ಮೇಲೆ ಬಂದು ಪ್ರಾಣತ್ಯಾಗ ಮಾಡಿದನೋ ಈ ನಾಟಿ ಮಾಡಿದ ಸಸಿಗಳೂ ಕೂಡ ಪ್ರವಾಹದ ನೀರು ಇಳಿದು ಮೇಲೆ ಕಾಣಿಸಿದಾಗ ಕೊಳೆತು ಸತ್ತುಹೋಗುತ್ತವೆ. ಇಂತಹ ಸಾಲುಗಳು ಸಂಕಲನದ ತುಂಬ ಯಥೇಶ್ಚವಾಗಿ ಸಿಗುತ್ತವೆ. ಹಾಗೂ ಕವನದ ಓದನ್ನು ಇನ್ನಷ್ಟು ಮುದಗೊಳಿಸುತ್ತವೆ.

ಹೇಗೋ ಕಸರತ್ತು ಮಾಡಿ 
ಪರದೆಯ ಒಳಹೊಕ್ಕ ಸೊಳ್ಳೆ 
ಹೊರಬರಲಾರದೆ 
ಒದ್ದಾಡಿದರು ಒಳಗಿದ್ದ 
ಅಮಾಯಕನ ರಕ್ತ 
ಹೀರುವುದನ್ನು ಮಾತ್ರ 
ಮರೆಯಲಿಲ್ಲ

ಡಾ. ನಾಯಕ ಬಳಸುವ ರೂಪಕಗಳನ್ನು ಗಮನಿಸಬೇಕು. ಇಲ್ಲಿ ಸೊಳ್ಳೆಯನ್ನು ರೂಪಕವಾಗಿಟ್ಟುಕೊಂಡು ಸಮಾಜದ ಎಲ್ಲ ಅನಿಷ್ಟತೆಯನ್ನು ತೆರೆದಿಡುತ್ತಾರೆ. ರಕ್ತ ಹೀರುವ ಈ ವ್ಯವಸ್ಥೆಯನ್ನು ಮೊನಚಾಗಿ ತಿವಿಯುತ್ತಾರೆ. 

ಅತ್ಯುತ್ತಮ ಕವಿತೆ ಹೇಳಿರಬೇಕು ಎಂದು ಯಾರಾದರೂ ಕೇಳಿದರೆ ಏನು ಉತ್ತರ ಕೊಡಬಹುದು? ಒಳ್ಳೆಯ ಕವಿತೆ ಎನ್ನಲು ಮಾನದಂಡ ಯಾವುದು? ಗಣಗಳು, ಮಾತ್ರೆಗಳು ಎಲ್ಲವನ್ನೂ ಲೆಕ್ಕಾಚಾರ ಹಾಕಿ ನಿಯಮಬದ್ಧವಾಗಿ ಬರೆದರೆ ಅದು ಒಳ್ಳೆಯ ಕವಿತೆಯೆ? ಅಥವಾ ವಿಷಯವನ್ನು ಹೇರಳವಾಗಿ ನೀಡಿ ಗದ್ಯವನ್ನು ತುಂಡರಿಸಿದಂತೆ ಬರೆದರೆ ಅದು ಉತ್ತಮ ಕವಿತೆ ಆಗಬಹುದೇ? ಇದಕ್ಕೆ ನಿರ್ದಿಷ್ಟ ಉತ್ತರವನ್ನು ಯಾರಾದರೂ ಹೇಳಲು ಸಾಧ್ಯವೆ ಎನ್ನುವ ನನ್ನ ಪ್ರಾರಂಭದ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಈ ಸಂಕಲನವಿದೆ. ಹೊಸತನದ ರೂಪಕಗಳು ಹಾಗೂ ಕವನದ  ಪರಿಭಾಷೆಗಳು ನಮ್ಮನ್ನು ನಿಂತು ಮತ್ತೊಮ್ಮೆ ಓದುವಂತೆ ಒತ್ತಾಯಿಸುತ್ತವೆ. 

ಕವಿತೆ ಸುಮ್ಮನೆ 
ಹುಟ್ಟುವುದಿಲ್ಲ
ಅದೊಂದು ಅಮೂರ್ತ ಪ್ರಭೆ 
ಕಾವ್ಯ ಪರಾಗದ ಪಲ್ಲಕ್ಕಿಯಲಿ 
ಪವಡಿಸುವ ಭಾಗ್ಯ 
ಎಲ್ಲರಿಗೂ ಸಿಕ್ಕುವುದಿಲ್ಲ. 
ಡಾ. ಪ್ರಭಾಕರ ನಾಯಕರಿಗೆ ಈ ಭಾಗ್ಯ ಸಿಕ್ಕಿದೆ. ಕಾವ್ಯಕಟ್ಟುವ ಕುಸುರಿಯಲ್ಲಿ ಅವರು ಇನ್ನಷ್ಟು ತೊಡಗಿಸಿಕೊಳ್ಳಲಿ. 

ಶ್ರೀದೇವಿ ಕೆರೆಮನೆ

ಹಲವು ಮೊದಲುಗಳ ಎಡೋರಾ ಆಲಿಸ್ ವೆಲ್ಟಿ


ಹಲವು ಮೊದಲುಗಳ ಎಡೋರಾ ಆಲಿಸ್ ವೆಲ್ಟಿ
              ಅಮೇರಿಕಾದ ಪ್ರಸಿದ್ದ ಕಥೆಗಾರ್ತಿ ಹಾಗೂ ಕಾದಂಬರಿಕಾರ್ತಿಯಾದ ಎಡೋರಾ ಆಲಿಸ್ ವೆಲ್ಟಿ ಜನಿಸಿದ್ದು ಮಿಸ್ಸಿಸಿಪ್ಪಿಯ ಕಾಕಸನ್‌ನಲ್ಲಿ ೧೩ ಎಪ್ರಿಲ್ ೧೯೦೯ ರಂದು. ದಕ್ಷಿಣ ಅಮೇರಿಕಾದ ಕುರಿತು ಗಾಢ ಅನುಭವಗಳನ್ನು ದಾಖಲಿಸಿದ ಎಡೋರಾ ಒಳ್ಳೆಯ ಫೋಟೊಗ್ರಾಫರ್ ಎಂದೂ ಹೆಸರು ಪಡೆದವರು. ತಂದೆ ಕ್ರಿಶ್ಚಿಯನ್ ವೆಬ್ ವೆಲ್ಟಿ ವಿಮಾ ಕಾರ್‍ಯನಿರ್ವಾಹಕ ಹಾಗೂ ಆಧುನಿಕ ತಂತ್ರಜ್ಞಾನ, ಯಂತ್ರಗಳು ಹಾಗೂ ಗ್ಯಾಜೆಟ್‌ಗಳ ಬಗ್ಗೆ ಅಪಾರ ಕುತೂಹಲವಿರುವ ವ್ಯಕಿ ಜೊತೆಗೆ ಒಳ್ಳೆಯ ಛಾಯಾಚಿತ್ರಕಾರ ಕೂಡ.  ತಾಯಿ ಮೇರಿ ಚೆಸ್ಟಿನಾ ವೆಲ್ಟಿ  'ತಮ್ಮ ಮನೆಯ ಯಾವುದೆ ಕೊಠಡಿ ದಿನದ ಯಾವುದೇ ಸಮಯದಲ್ಲಾದರೂ ಓದಲು ತೆರೆದುಕೊಳ್ಳುವಂತಿರಬೇಕು' ಎಂದು ನಂಬಿದ್ದ ಶಿಕ್ಷಕಿಯಾಗಿದ್ದರಿಂದ ಚಿಕ್ಕಂದಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡ ಎಡೋರಾ ತಂದೆಯ ಯಂತ್ರ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ರೂಪಕವಾಗಿಟ್ಟುಕೊಂಡು ಬರೆದ ಕಥೆಗಳು ಹೊಸ ಜಗತ್ತಿನ ತಲ್ಲಣಗಳಿಗೆ ಉತ್ತರದಂತಿವೆ.
                  ಜಾಕ್ಸನ್ ಹಾಗೂ ಮಿಸ್ಸಿಸಿಪ್ಪಿಯಲ್ಲಿ ವಿದ್ಯಾಭ್ಯಾಸ ಮಾಡಿದ ಎಡೋರಾ ವಿಸ್ಕೋನ್‌ಸಿನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ತಂದೆಯ ಸಲಹೆಯಂತೆ ಜಾಹಿರಾತು ವಿಷಯದಲ್ಲಿ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದುಕೊಂಡರು.  ೧೧೧೯, ಫೈನ್‌ಹರ್ಸ್ಟ್ ಬೀದಿಯಲ್ಲಿ  ಅರಮನೆಯಂತೆ ವಿನ್ಯಾಸಗೊಳಿಸಿದ ಮನೆಗೆ ತನ್ನ ವಾಸವನ್ನು ಬದಲಿಸಿದ ನಂತರ ಅದು ಅವರ ಖಾಯಂ ವಿಳಾಸವಾಗಿತ್ತು.
   ನ್ಯೂಯಾರ್ಕನಲ್ಲಿ ಕೆಲಸ ಹುಡುಕಲು ಪ್ರಯತ್ನಿಸಿದರೂ ೧೯೩೧ರಲ್ಲಿ ತಂದೆಯ ಅನಿರೀಕ್ಷಿತ ಸಾವಿನಿಂದಾಗಿ ಜಾಕ್ಸನ್‌ಗೆ ಹಿಂದುರಿಗಿದ ಎಡೋರಾ ಅಲ್ಲಿನ ರೇಡಿಯೋ ಸ್ಟೇಶನ್‌ನಲ್ಲಿ ಕೆಲಸ ಪ್ರಾರಂಭಿಸಿದರು. ಜೊತೆಗೆ ಸ್ಥಳಿಯ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯಲಾರಂಭಿಸಿದರು. ವರ್ಕ್ಸ ಪ್ರೊಗ್ರೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಪ್ರಚಾರಕಿಯಾಗಿ ಕೆಲಸಕ್ಕೆ ಸೇರಿದ್ದರಿಂದ ಆ ಕಂಪನಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳನ್ನು ಸಂಗ್ರಹಿಸಬೇಕಾಯಿತು, ಕೆಲವು ಮುಖ್ಯವಾದ ಜನರ ಸಂದರ್ಶನ ಮಾಡಬೇಕಾಗಿತ್ತು, ಫೋಟೋಗಳನ್ನೂ ತೆಗೆದುಕೊಳ್ಳಬೇಕಾಗಿತ್ತು. ಹೀಗಾಗಿ ದಕ್ಷಿಣ ಭಾಗದ ಸಮಗ್ರ ಪರಿಚಯ ಹಾಗೂ ಚಿತ್ರಣ ಅವರಿಗೆ ದೊರಕಿತ್ತು. ಇವೆಲ್ಲವೂ ಅವರ ಕಥೆಗಳಲ್ಲಿ ಚಿತ್ರಿತವಾಗಿವೆ. ಅದೇ ಸಮಯದಲ್ಲಿ ತನ್ನ ಸಮಕಾಲೀನ ಬರಹಗಾರರ ಕೂಟವನ್ನೂ ಆಯೋಜಿಸುತ್ತಿದ್ದಳು. 'ರಾತ್ರಿ ಅರಳುವ ಪಾಪಾಸುಕಳ್ಳಿ' ಎಂದು ಆಕೆ ಆ ಕೂಟವನ್ನು ಕರೆಯುತ್ತಿದ್ದಳು. ಮೂರು ವರ್ಷಗಳ ನಂತರ ಬರವಣಿಗೆಯಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಆಕೆ ತನ್ನ ಕೆಲಸವನ್ನು ಬಿಟ್ಟರು.  
  ೧೯೩೯ರಲ್ಲಿ ಅವರ ಮೊದಲ ಕಥೆ 'ದಿ ಡೆತ್ ಆಫ್ ಅ ಟ್ರಾವೆಲಿಂಗ್ ಸೇಲ್ಸ್‌ಮನ್' ಪ್ರಕಟವಾಯಿತು. ನಂತರ ಹಲವಾರು ಪತ್ರಿಕೆಗಳಲ್ಲಿ ಅವರ ಕಥೆಗಳು ಪ್ರಕಟಗೊಳ್ಳುತ್ತಲೆ ಹೋದವು. ಅವರ ಮೊದಲ ಕಥಾ ಸಂಕಲನ 'ಎ ಕರ್ಟನ್ ಆಫ್ ಗ್ರೀನ್' ಪ್ರಕಟವಾಗುವ ಸಮಯಕ್ಕಾಗಲೇ ದಕ್ಷಿಣದ ಪ್ರಭಾವಶಾಲಿ ಕಥೆಗಾರ್ತಿ ಎಂದು ಗುರುತಿಸಲ್ಪಟ್ಟಿದ್ದರು. ತನ್ನ ಪುಸ್ತಕಕ್ಕಾಗಿ ಪಡೆದ ಫೆಲೋಶಿಪ್‌ನಿಂದಾಗಿ ಇಂಗ್ಲೆಂಡ್, ಪ್ರಾನ್ಸ್, ಈರ್ಲಾಂಡ್, ಜರ್ಮನಿ ಮುಂತಾದ ದೇಶಗಳಿಗೆ ಪ್ರವಾಸಕ್ಕೆ ಹೋದರು. ಕಾಂಬ್ರಿಜ್ ಹಾಗೂ ಆಕ್ಸಫರ್ಡ ವಿಶ್ವವಿದ್ಯಾಲಯಗಳಲ್ಲಿ ಕೆಲಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದರು. ಪೀಟರ್‌ಹೌಸ್ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಅನುಮತಿ ಪಡೆದ ಮೊಟ್ಟಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಈ ನಡುವೆ ಅವರ ಹಲವಾರು ಪುಸ್ತಕಗಳು ಪ್ರಕಟಗೊಂಡವು. ೧೯೭೧ರಲ್ಲಿ ಅವರ ಫೋಟೋಗಳ ಸಂಗ್ರಹವನ್ನು  'ಒನ್ ಟೈಮ್, ಒನ್ ಪ್ಲೇಸ್' ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು.  ಹಾವರ್ಡ ವಿಶ್ವವಿದ್ಯಾಲಯದಲ್ಲೂ ಉಪನ್ಯಾಸ ನೀಡಿದ ಹೆಗ್ಗಳಿಕೆ ಇವರದ್ದು.  
ಅಮೇರಿಕಾದ ದಕ್ಷಿಣ ಭಾಗದ ನುಡಿಗಟ್ಟುಗಳನ್ನು ತನ್ನ ಕಾದಂಬರಿ ಹಾಗೂ ಕಥೆಗಳಲ್ಲಿ ಯಥೇಶ್ಚವಾಗಿ ಬಳಸಿರುವ ಎಡೋರಾ ದಕ್ಷಿಣ ಭಾಗದ ರೂಪಕಗಳು, ಋಊಢಿಗತ ಆಚರಣೆಗಳು, ಆಚಾರ ವಿಚಾರಗಳು.  ಕೌಟುಂಬಿಕ ಸಂಬಂಧಗಳಲ್ಲಿರುವ ದ್ವೇಷ- ಅಸೂಯೆ ಹಾಗೂ ಪ್ರೀತಿಯನ್ನು ಯಥಾವತ್ತಾಗಿ ಚಿತ್ರಿಸಿದರು. ಪ್ರಮುಖ ಕಥೆಗಾರ್ತಿ ಎಂದು ಗುರುತಿಸಲ್ಪಟ್ಟರು.   ೧೯೪೨ರಲ್ಲಿ ಪ್ರಕಟಗೊಂಡ ಅವರ ಕಾದಂಬರಿ ದಿ ರಾಬರ್ ಬ್ರೈಡ್‌ಗ್ರೂಮ್ ಯಕ್ಷಿಣಿ ಕಥೆಗಳಂತೆ ತೋರುತ್ತಿದ್ದು ಅಮೇರಿಕಾದ ದಕ್ಷಿಣ ಭಾಗದ ಮೊಟ್ಟಮೊದಲ ಫೇರಿಟೇಲ್ ಬರವಣಿಗೆ ಎಂದು ಗುರುತಿಸಲ್ಪಟ್ಟಿದ್ದರೂ ಆಳದಲ್ಲಿ ಅದೂ ಕೂಡ ಮನುಷ್ಯ ಸಂಬಂಧಗಳ ಕುರಿತು ಮಾತನಾಡುತ್ತದೆ.                                                                                                                                                          
ಇವರ 'ಆಪ್ಟಿಮಿಸ್ಟ್ಸ್ ಡಾಟರ್' ( ಆಶಾವಾದಿಯ ಮಗಳು) ಕಾದಂಬರಿಗೆ ೧೯೭೩ರಲ್ಲಿ ಖ್ಯಾತ ಪುಲಿಟ್ಚರ್ ಪ್ರಶಸ್ತಿ ಲಭಿಸಿದೆ. ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಪ್ರೀಡಮ್ ಹಾಗೂ ಆರ್ಡರ್ ಆಫ್ ದಿ ಸೌತ್, ಓ ಹೆನ್ರಿ ಅವಾರ್ಡನಲ್ಲಿ ಎರಡನೆ ಸ್ಥಾನ ಹೀಗೆ ಹಲವಾರು ಖ್ಯಾತ ಪ್ರಶಸ್ತಿಗಳು ಇವರ ಬರವಣಿಗೆಯನ್ನು ಅರಸಿ ಬಂದಿವೆ. ೧೯೮೩ರಲ್ಲಿ ಹಾವರ್ಡ ವಿಶ್ವವಿದ್ಯಾಲಯವು ಅವರ ಭಾಷಣಗಳ ಸರಣಿಗಳನ್ನು ಸೇರಿಸಿ 'ಒನ್ ರೈಟರ್‍ಸ್ ಬಿಗಿನಿಂಗ್' ಎಂಬ ಹೆಸರಿನಲ್ಲಿ ಪ್ರಕಟಿಸಿದ ಪುಸ್ತಕಕ್ಕೆ ೧೯೮೪ರಲ್ಲಿ ನಾನ್‌ಫಿಕ್ಷನ್ ವಿಭಾಗದಲ್ಲಿ ನ್ಯಾಷನಲ್ ಬುಕ್ ಅವಾರ್ಡ' ಲಭಿಸಿತು. ೧೯೯೨ರಲ್ಲಿ ಜೀವಮಾನದ ಸಣ್ಣಕಥೆಗಳ ಬರವಣಿಗೆಗಾಗಿ ರಿಯಾ ಅವಾರ್ಡ ದೊರಕಿದೆ. ಲೈಬ್ರರಿ ಆಫ್ ಅಮೇರಿಕಾವು ಬದುಕಿರುವ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದವರಲ್ಲಿ ಮೊದಲಿಗಳು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಮಿಸ್ಸಿಸಿಪ್ಪಿಯ  ಜಾಕ್ಸನ್‌ನಲ್ಲಿರುವ ಇವರ ಮನೆಯನ್ನು ರಾಷ್ಟೀಯ ಐತಿಹಾಸಿಕ ಸ್ಥಳ ಎಂದು ಗುರುತಿಸಲಾಗಿದ್ದು ಸಾರ್ವಜನಿಕಋ ಮುಕ್ತ ಪ್ರವೇಶಕ್ಕೆ ಚಿಲ್ಲಿನ ಸರಕಾರ ಅನುವು ಮಾಡಿಕೊಟ್ಟಿದೆ.
ಲೋಕಧ್ವನಿ-೩                                     

Friday, 24 June 2022

ಖಾಸಗಿ ವಿಷಯಗಳನ್ನೇ ಕಾದಂಬರಿಯ ವಸ್ತುವಾಗಿಸಿದ ಎಲಿಜಬೆತ್ ವಾನ್ ಅರ್ನಿಮ್

ಖಾಸಗಿ ವಿಷಯಗಳನ್ನೇ ಕಾದಂಬರಿಯ ವಸ್ತುವಾಗಿಸಿದ ಎಲಿಜಬೆತ್ ವಾನ್ ಅರ್ನಿಮ್


ಮೇರಿ ಆನೆಟ್ ಬ್ಯೂಚಾಂಪ್ ಎಂಬ ಹೆಸರು ಹೇಳಿದರೆ ಯಾರೂ ಗುರುತಿಸದಿದ್ದರೂ ಎಲಿಜಬೆತ್ ವಾನ್ ಆರ್ನಿಮ್ ಎಂದರೆ ಒಂದುಕ್ಷಣ ಇಂಗ್ಲೀಷ್ ಸಾಹಿತ್ಯದ ಅಧ್ಯಯನಿಗಳು ಕಣ್ಣರಳಿಸದೆ ಇರಲಾರರು. ಆಸ್ಟ್ರೇಲಿಯಾದಲ್ಲಿ ಹುಟ್ಟಿ ಜರ್ಮನ್ ಶ್ರೀಮಂತರನ್ನು ವಿವಾಹವಾಗಿ ಇಂಗ್ಲೀಷ್ ಸಾಹಿತ್ಯದಲ್ಲಿ ಹೆಸರು ಮಾಡಿದ ಎಲಿಜಬೆತ್ ವಾನ್ ಅರ್ನಿಮ್‌ರವರ ಸಾಹಿತ್ಯದ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ವಿಶಿಷ್ಟ ವೈಚಿತ್ರ್ಯಗಳಿಂದ ಕೂಡಿದೆ. ತನ್ನ ಮೊದಮೊದಲ ಬರವಣಿಗೆಯನ್ನು ಜರ್ಮನ್‌ಲ್ಲಿ ಪ್ರಾರಂಭಿಸಿದ ಎಲಿಜಬೆತ್ ವಾನ್ ಆರ್ನಿಮ್ ಜನಿಸಿದ್ದು 31ಆಗಸ್ಟ್ 1866 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ನಿರ್ದಿಷ್ಟವಾದ ಸ್ಥಳದ ಹೆಸರು ಗೊಂದಲದಲ್ಲಿದೆಯಾದರೂ ಆ ಸಮಯದಲ್ಲಿ ಅವಳ ಕುಟುಂಬವು ಸಿಡ್ನಿಯ ಕಿರಿಬಿಲ್ಲಿ ಪಾಯಿಂಟ್‌ನಲ್ಲಿರುವ ಪ್ರತಿಷ್ಠಿತ ಮನೆಯೊಂದರಲ್ಲಿ ವಾಸಿಸುತ್ತಿದ್ದರಿಂದ ಅದನ್ನೇ ಆಕೆಯ ಜನ್ಮಸ್ಥಳ ಎಂದು ಊಹಿಸಲಾಗಿದೆ. ಆಕೆಯ ತಂದೆ ಹೆನ್ರಿ ಹೆರಾನ್  ಬ್ಯೂಚಾಂಪ್ ಆಸ್ಟ್ರೇಲಿಯಾಕ್ಕೆ ವಲಸೆ ಹೋದ ಲಂಡನ್‌ನ ಒಬ್ಬ ಸುಸಂಸ್ಕೃತ ಮನೆತನದಲ್ಲಿ ಜನಿಸಿದ ವ್ಯಕ್ತಿ. ಸಿಡ್ನಿಯಲ್ಲಿ ಹಡಗು ವ್ಯಾಪಾರಿಯಾಗಿ ಅಪಾರ ಸಂಪತ್ತನ್ನು ಗಳಿಸಿದ ಹೆನ್ರಿ ಆಸ್ಟ್ರೇಲಿಯಾದಲ್ಲಿಯೇ ಹುಟ್ಟಿ ಬೆಳೆದ ಬ್ರಿಟಿಷ್ ಮೂಲದ ಎಲಿಜಬೆತ್ ವೈಸ್ ಲಾಸ್ಸೆಟರ್ ಎಂಬ ಯುವತಿಯನ್ನು ವಿವಾಹವಾದರು. ಇವರ ಒಟ್ಟೂ ಆರು ಮಕ್ಕಳಲ್ಲಿ  ಎಲಿಜಬೆತ್ ವಾನ್ ಆರ್ನಿಮ್ ಕಿರಿಯವಳು. ಆಕೆಗೆ ಮೂರು ವರ್ಷ ವಯಸ್ಸಾದಾಗ ಅವಳ ತಂದೆ ತಾಯಿ ಸಿಡ್ನಿಯನ್ನು ಬಿಟ್ಟು ಲಂಡನ್‌ನಲ್ಲಿ ವಾಸಿಸಲು ತೀರ್ಮಾನಿಸಿದರು. ಇಂಗ್ಲೆಂಡ್‌ನ ಸಂಸ್ಕೃತಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳು ಸಂಸ್ಕಾರವಂತರಾಗುತ್ತಾರೆಂಬ ನಂಬಿಕೆ ಅವರದ್ದಾಗಿತ್ತು.  ಹೀಗಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನಲ್ಲಿ ಇದ್ದ ಹೆನ್ರಿಯವರ ಇಬ್ಬರು ಸಹೋದರರಲ್ಲಿ ಒಬ್ಬರಾದ ಆರ್ಥರ್‌ರವರ ಮಗ ಹೆರಾಲ್ಡ್‌ಗೆ ತಮ್ಮ ಎಲ್ಲ ವ್ಯವಹಾರವನ್ನು ಒಪ್ಪಿಸಿ ತಮ್ಮ ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಲಂಡನ್ನಿಗೆ ಪ್ರಯಾಣ ಬೆಳಿಸಿದರು. ಆ ಸಮಯದಲ್ಲಿ ಕುಟುಂಬದವರಿಂದ 'ಮೇ' ಎಂದು ಕರೆಯಿಸಿಕೊಳ್ಳುತ್ತಿದ್ದ ಎಲಿಜಬೆತ್‌ಗೆ ಕೇವಲ ಮೂರು ವರ್ಷ ವಯಸ್ಸು. ಆಸ್ಟ್ರೇಲಿಯಾದಲ್ಲಿ ಇವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಹೆರಾಲ್ಡ್‌ರವರ ಮಗಳು ಕ್ಯಾಥರಿನ್ ಬ್ಯೂಚಾಂಪ್ ಮುಂದೆ ಕ್ಯಾಥರಿನ್ ಮ್ಯಾನ್ಸ್‌ಫೀಲ್ಡ್ ಎಂದು ಇಂಗ್ಲಿಷ್ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ ಲೇಖಕಿ.  ಮೇರಿ ಆರ್ನೆಟ್ ಬ್ಯೂಚಾಂಪ್ ಹೆಸರಿನ ಇವರು ಕುಟುಂಬದ ಮುದ್ದಿನ ಮೇ,  ನಂತರ ಎಲಿಜಬೆತ್ ವಾನ್ ಅರ್ನಿಮ್ ಎಂದು ಗುರುತಿಸಿಕೊಳ್ಳುವವರೆಗಿನ ಪಯಣ ಒಂದು ರೋಚಕ ಹಾದಿಯ ನಡಿಗೆ.

ಕೆಲವು ವರ್ಷ ಸ್ವಿಟ್ಜರ್ಲೆಂಡ್‌‌ನಲ್ಲಿ ಕಳೆದ ಬ್ಯೂಚಾಂಪ್ ಕುಟುಂಬ ನಂತರ ಇಂಗ್ಲೆಂಡಿಗೆ ಹಿಂದಿರುಗಿತಾದರೂ ಸ್ವಿಟ್ಜರ್ಲೆಂಡ್‌‌ನ ಮೋಹಕ ವಾತಾವರಣ ಎಳೆಯ ಮೇ ಮೇಲೆ ಅಗಾಧ ಪರಿಣಾಮ ಬೀರಿತು. ಅದು ಕೊನೆಯವರೆಗೂ ಆಕೆಯ ಸಾಹಿತ್ಯದ ಮೇಲೆ ತನ್ನ ಪ್ರಭಾವ ಬೀರಿತು. ಶಾಲೆಯಲ್ಲಿ ಬುದ್ಧಿವಂತ ಮಗು ಎನ್ನಿಸಿಕೊಂಡಿದ್ದ ಮೇ ಗೆ ಸಂಗೀತದಲ್ಲಿ ಎಲ್ಲಿಲ್ಲದ ಆಸಕ್ತಿ. ಹೀಗಾಗಿ ರಾಯಲ್   ಕಾಲೇಜ್ ಆಫ್ ಮ್ಯೂಸಿಕ್ನಲ್ಲಿ ಅಧ್ಯಯನ ನಡೆಸಿದಳು. ಅಲ್ಲಿಯ ಶಿಕ್ಷಕ ಸರ್ ವಾಲ್ಟರ ಪ್ಯಾರೆಟ್ ಇವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದನ್ನು ಎಲಿಜಬೆತ್ ನಂತರ ಹೇಳಿಕೊಂಡಿದ್ದಾರೆ. 

ಇಪ್ಪತ್ತೆರಡು ವರ್ಷದ ಮಗಳು ಇನ್ನೂ ವೈವಾಹಿಕ ಬಂಧನಕ್ಕೆ ಸಿಲುಕದ ಕುರಿತು ಹೆತ್ತವರು ಚಿಂತಿಸುತ್ತ ಯುರೋಪ ಪ್ರವಾಸವನ್ನು ಹಮ್ಮಿಕೊಂಡಿದ್ದಾಗ ರೋಮ್ ನಲ್ಲಿ ಮೇರಿ ಆನೆಟ್ ಬ್ಯೂಚಾಂಪ್ ಆಗಷ್ಟೇ ಹೆಂಡತಿಯನ್ನು ಕಳೆದುಕೊಂಡಿದ್ದ ಪ್ರಶ್ಯಾ ದೇಶದ ಗ್ರಾಫ್ ಹೆನ್ನಿಂಗ್ ವಾನ್ಅಅರ್ನಿಮ್-ಶ್ಲಾಜೆಂಟಿನ್ ಎಂಬ ಶ್ರೀಮಂತ ಕುಟುಂಬದ ವಿದುರನನ್ನು ಭೇಟಿಯಾದರು.  ಪ್ರತಿಭಾನ್ವಿತಳಾದ ಹಾಗೂ ಉತ್ಸಾಹಭರಿತ ಸುಂದರಿಯಿಂದ ಆಕರ್ಷಿತನಾಗಿದ್ದಷ್ಟೇ ಅಲ್ಲ ಅವಳ ಸಂಗೀತ ವಾದ್ಯಗಳ ನುಡಿಸುವಿಕೆಗೆ ಆತ ಮನಸೋತರು. ಅದಾದ ಎರಡು ವರ್ಷಗಳ ನಂತರ, ಫೆಬ್ರವರಿ 1891 ರಲ್ಲಿ ಇವರಿಬ್ಬರೂ ಲಂಡನ್ನಲ್ಲಿ ವಿವಾಹವಾದರು.  ಹೀಗಾಗಿ ಮೇರಿ ಆನೆಟ್ ಬ್ಯೂಚಾಂಪ್ ಮೇರಿ ಗ್ರ್ಯಾಫಿನ್ ವಾನ್ ಆರ್ನಿಮ್ ಆದರು.  ಜರ್ಮನ್ ಮತ್ತು ಫ್ರೆಂಚ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಮೇರಿ ಹಾಗೂ ಅವಳ ಗಂಡ  ಬರ್ಲಿನ್‌ನಲ್ಲಿ ಶ್ರೀಮಂತ ಜೀವನ ಪ್ರಾರಂಭಿಸಿದರು.  ಬಹುಬೇಗನೆ ಅವರಿಬ್ಬರಿಗೆ  ಮೂರು ಹೆಣ್ಣುಮಕ್ಕಳು ಜನಿಸಿದರು.  

 1896 ರ ರಲ್ಲಿ ನಾಸೆನ್‌ಹೈಡ್‌ನಲ್ಲಿರುವ ಕೌಂಟ್ ವಾನ್ ಅರ್ನಿಮ್‌ನ ಕಂಟ್ರಿ ಎಸ್ಟೇಟ್‌ಗೆ ಭೇಟಿ ನೀಡಿದಾಗ ಅವರ ಭವಿಷ್ಯವು ಶಾಶ್ವತವಾಗಿ ಬದಲಾಯಿತು. ಅವರು ಕುಟುಂಬದೊಂದಿಗೆ ಅಲ್ಲಿ ವಾಸಿಸಲು ತಕ್ಷಣವೇ ನಿರ್ಧರಿಸಿದರು.  ತನ್ನ ಕನಸಿನ  ಜರ್ಮನ್ ಗಾರ್ಡನ್‌ಗೆ ಅವರು ಬಂದಿದ್ದರು

 ಈ ಸಂದರ್ಭದಲ್ಲಿ ಅವರು ತನ್ನ ಮೊದಲ ಕಾದಂಬರಿ 'ಎಲಿಜಬೆತ್ ಆಂಡ್ ಹರ್ ಜರ್ಮನ್ ಗಾರ್ಡನ್' ಅನ್ನು ಬರೆದರು.  ಇದನ್ನು 1898 ರಲ್ಲಿ ಮ್ಯಾಕ್‌ಮಿಲನ್ ಸಂಸ್ಥೆಯಿಂದ ಪ್ರಕಟಿಸಿತು. ಮತ್ತು  ಆಕಾಲದಲ್ಲಿ ಅತ್ಯಂತ ವೇಗವಾಗಿ ಮಾರಾಟಗೊಂಡ  ಬೆಸ್ಟ್ ಸೆಲ್ಲರ್ ಪುಸ್ತಕವಾಗಿತ್ತು. ಈ ಪುಸ್ತಕ ಅವರ ಅದೃಷ್ಟದ ಬಾಗಿಲನ್ನು ತೆರೆಯಿತು. 
ಇದು  ಅವರ ಕುಟುಂಬದ ಎಸ್ಟೇಟ್‌ನಲ್ಲಿ ಉದ್ಯಾನವನ್ನು ರಚಿಸಲು ನಾಯಕಿ ಎಲಿಜಬೆತ್‌ನ ಹೋರಾಟಗಳು ಮತ್ತು ಜರ್ಮನ್ ನ ಶ್ರೀಮಂತ ಜಂಕರ್ ಸಮಾಜದಲ್ಲಿ ಅದು ವಿಫಲಗೊಳ್ಳುವುದನ್ನು ವಿವರಿಸುತ್ತದೆ. ಈ ಕಾದಂಬರಿಯಲ್ಲಿ ಅವರು ತನ್ನ ಗಂಡನನ್ನು "ದಿ ಮ್ಯಾನ್ ಆಫ್ ಕ್ರೋತ್" ಎಂಬ ಕಾಲ್ಪನಿಕ ಪಾತ್ರಕ್ಕೆ ಹೋಲಿಸಿದರು. 1899 ರ ಹೊತ್ತಿಗೆ ಆ ಕಾದಂಬರಿ ಇಪ್ಪತ್ತಕ್ಕೂ ಹೆಚ್ಚುಸಲ ಮರು ಮುದ್ರಣಗೊಂಡಿತು. 
ದಿ ಸೋಲಿಟರಿ ಸಮ್ಮರ್ (1899). ದಿ ಬೆನೆಫಾಕ್ಟ್ರೆಸ್ (1902), ದಿ ಅಡ್ವೆಂಚರ್ಸ್ ಆಫ್ ಎಲಿಜಬೆತ್ ಆನ್ ರುಗೆನ್ (1904), ವೆರಾ (1921), ಮತ್ತು ಲವ್ (1925) ನಂತಹ ಇತರ ಕೃತಿಗಳು ಸಹ ಅವರ ಅರೆ-ಆತ್ಮಚರಿತ್ರೆಯವುಗಳಾಗಿವೆ.

ನಂತರದ  ವರ್ಷಗಳಲ್ಲಿ  ಹೆಚ್ಚು ಹೆಚ್ಚು ಯಶಸ್ವಿ ಕಾದಂಬರಿಗಳನ್ನು ಬರೆದ ಮೇರಿ 'ಎಲಿಜಬೆತ್' ಆಗಿ, ಅವರು ಅಂತರರಾಷ್ಟ್ರೀಯ ಸಾಹಿತ್ಯಿಕ ಖ್ಯಾತಿಯನ್ನು ಗಳಿಸಿದರು. ಯಾಕೆಂದರೆ  ಅವರ ಕೃತಿಗಳಲ್ಲಿ ಸಾಮಾನ್ಯವಾಗಿ 'ಎಲಿಜಬೆತ್ ಮತ್ತು ಅವರ ಜರ್ಮನ್ ಗಾರ್ಡನ್  ಬರೆದ ಲೇಖಕರು' ಎಂದು ಉಲ್ಲೇಖಿಸುತ್ತಿದ್ದುದರಿಂದ ಎಲಿಜಬೆತ್‌ ಎಂಬುದು ಅವರ ಓದುಗರ ವಲಯವಷ್ಟೇ ಅಲ್ಲ ಅವಳ ಸ್ನೇಹಿತರು ಹಾಗೂ ಕುಟುಂಬದಲ್ಲಿಯೂ ಪ್ರಚಲಿತಗೊಂಡ ಹೆಸರಾಯಿತು. ನಂತರ ಕ್ರಿಸ್ಟಿನ್ ಎಂಬ ಕಾದಂಬರಿಗಾಗಿ 'ಆಲಿಸ್ ಚೋಲ್ಮಾಂಡೆಲಿ' ಎಂಬ ಗುಪ್ತನಾಮವನ್ನು ಬಳಸಿದರೂ  'ಎಲಿಜಬೆತ್' ಹೆಚ್ಚಿನವರಿಗೆ ತಿಳಿದಿರುವ ಹೆಸರಾಯಿತು.  ಹೀಗಾಗಿ ಮೇರಿ ಎಂಬ ಹೆಸರು ಹಿನ್ನಲೆಗೆ ಸರಿದು ಎಲಿಜಬೆತ್ ಆಗಿ  ಪ್ರಸಿದ್ದಿ ಪಡೆದರು. 


 ಅವರ ಅತ್ಯಂತ ಜನಪ್ರಿಯವಾದ ಕಾದಂಬರಿ  'ದಿ ಎನ್‌ಚ್ಯಾಂಟೆಡ್ ಏಪ್ರಿಲ್ (1922)', ಇದನ್ನು 1935 ರಲ್ಲಿ ಹ್ಯಾರಿ ಬ್ಯೂಮಾಂಟ್ ಮತ್ತು 1992ರಲ್ಲಿ ಮೈಕ್ ನೆವೆಲ್ ಚಲನಚಿತ್ರ ಮಾಡಿದರು. ಅವರ ಇತರ ಕಾದಂಬರಿಗಳನ್ನು ಸಹ ನಾಟಕಕ್ಕೆ ಅಥವಾ ಚಲನಚಿತ್ರಕ್ಕೆ ಬಳಸಿಕೊಳ್ಳಲಾಗಿದೆ;  ಎಲ್ಲವೂ ಗಮನಾರ್ಹ ಕೃತಿಗಳೇ ಆಗಿದ್ದರೂ ವೆರಾ (1921) ಮತ್ತು ಶ್ರೀ ಸ್ಕೆಫಿಂಗ್ಟನ್ (1940). ಹೆಚ್ಚು ಪ್ರಸಿದ್ದಿ ಪಡೆದಿವೆ. 
1910 ರಲ್ಲಿ ಅವರ ಪತಿ ಕೌಂಟ್ ವಾನ್ ಅರ್ನಿಮ್ ಅವರ ಮರಣದ ನಂತರ, ಅವರು ಮತ್ತು ಅವರ ಐದು ಮಕ್ಕಳು ಪ್ರಶ್ಯವನ್ನು ತೊರೆದರು. ಪದೇಪದೇ ಬೇರೆಬೇರೆ ದೇಶಗಳಿಗೆ ಹೋಗಿ ಉಳಿಯುತ್ತಿದ್ದ ಎಲಿಜಬೆತ್ ಗೆ ಸ್ವಾಭಾವಿಕವಾಗಿಯೇ  ಅನೇಕ ಸಾಹಿತ್ಯಿಕ ಮತ್ತು ಬೌದ್ಧಿಕ ವ್ಯಕ್ತಿಗಳ ಸ್ನೇಹವಿತ್ತು.  ಒಂದನೆ ವರ್ಡ್ ವಾರ್ ಗಿಂತ ಮೊದಲು ಎಚ್ ಜಿ ವೆಲ್ಸ್ ರವರೊಂದಿಗೆ ಸಂಬಂಧ ಪ್ರಾರಂಭವಾಗಿ ಅವರೊಂದಿಗೆ ಅವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರಾದರೂ ಆ ಸಂಬಂಧಕ್ಕೆ ಮದುವೆಯ ಯೋಗವಿರಲಿಲ್ಲ.  ಆದರೂ ಅವರಿಬ್ಬರೂ ಆಜೀವ ಸ್ನೇಹಿತರಾಗಿ ಉಳಿದರು.   

 1914 ರಲ್ಲಿ ಯುದ್ಧ ಪ್ರಾರಂಭವಾದ ನಂತರ, ಮೇರಿ ಆನೆಟ್ (ಎಲಿಜಬೆತ್) ವಾನ್ ಅರ್ನಿಮ್  ಬ್ರಿಟಿಷ್ ಪ್ರಜೆಯಾಗಬೇಕಾಯಿತು.  1916 ರಲ್ಲಿ, ಅವರು ಬರ್ಟ್ರಾಂಡ್ ರಸ್ಸೆಲ್ ಅವರ ಹಿರಿಯ ಸಹೋದರ ಅರ್ಲ್ ಫ್ರಾನ್ಸಿಸ್ ರಸ್ಸೆಲ್ ಅವರನ್ನು ವಿವಾಹವಾಗಿ  ಕೌಂಟೆಸ್ ರಸ್ಸೆಲ್ ಆದರು. ಆದರೆ ಅದೊಂದು  ದುರಂತದ ಮದುವೆ. ದಂಪತಿಗಳು ಮೂರು ವರ್ಷಗಳ ನಂತರ ಬೇರ್ಪಟ್ಟರು.  ಆದಾಗ್ಯೂ ಅವರು ಎಂದಿಗೂ ವಿಚ್ಛೇದನ ಪಡೆಯಲಿಲ್ಲ ಹೀಗಾಗಿ ಎಲಿಜಬೆತ್ ರನ್ನು ಎಲಿಜಬೆತ್ ಕೌಂಟೆಸ್ ರಸ್ಸೆಲ್ ಎಂದೂ ಕರೆಯಲಾಗುತ್ತಿತ್ತು.  ಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ತನ್ನ 16 ನೇ ವಯಸ್ಸಿನ ಕಿರಿಯ ಮಗಳು ಫೆಲಿಸಿಟಾಸ್ ಸೇರಿದಂತೆ ಹಲವಾರು ಸ್ನೇಹಿತರನ್ನು ಮತ್ತು ಕುಟುಂಬ ಸದಸ್ಯರನ್ನು ಕಳೆದುಕೊಳ್ಳಬೇಕಾಯಿತು. 

 1920 ರಲ್ಲಿ 'ಎಲಿಜಬೆತ್' ತನ್ನ ಮನೆಗೆ ಮರಳಿದರು. ಆಗಲೇ ಅವರಿಗೆ  ಆರೋಗ್ಯದ ಕಾರಣಗಳಿಗಾಗಿ ಮೊಂಟಾನಾದಲ್ಲಿ ತಂಗಿದ್ದ ತನ್ನ ಕಿರಿಯ ಸೋದರಸಂಬಂಧಿ  ಇಂಗ್ಲೀಷ್ ನ ಖ್ಯಾತ ಬರಹಗಾರ್ತಿ ಕ್ಯಾಥರೀನ್ ಮ್ಯಾನ್ಸ್‌ಫೀಲ್ಡ್ (1888 - 1923) ಜೊತೆ ಕಾಲ ಕಳೆಯಲು ಅವಕಾಶ ದೊರಕಿತು.

ಅದೇ ಸಂದರ್ಭದಲ್ಲಿ ಎಲಿಜಬೆತ್ ನ ಮನೆಯೊಳಗಿರುವ ವಿಶಾಲವಾದ ಪುಸ್ತಕ ಸಂಗ್ರಹ ನೋಡಲು ಪದೇ ಪದೇ ಬರುತ್ತಿದ್ದ  ಚಾಲೆಟ್ ಸೊಲೈಲ್ ನ ಯುವಕ  ಅಲೆಕ್ಸಾಂಡರ್ ಸ್ಟುವರ್ಟ್ ಫ್ರೆರೆ-ರೀವ್ಸ್ ರವರ ಪರಿಚಯ ಪ್ರಣಯಕ್ಕೆ ತಿರುಗಿತು. ಚಿಕ್ಕ ವಯಸ್ಸಿನ ಯುವಕನೊಂದಿಗಿನ ಸಂಬಂಧದ ಕುರಿತು ತೀವ್ರವಾದ ಚರ್ಚೆ ಕೂಡ ಆಗ ನಡೆದಿತ್ತು.  ನಂತರದ ದಿನಗಳಲ್ಲಿ ಫ್ರೆರೆ-ರೀವ್ಸ್ ಹೈನ್‌ಮನ್‌ನ ಅಧ್ಯಕ್ಷರಾದರು.



 1930 ರಲ್ಲಿ, ಬೆಚ್ಚಗಿನ ವಾತಾವರಣವನ್ನು ಬಯಸಿ,  ಫ್ರಾನ್ಸ್‌ನ ಮೌಗಿನ್ಸ್‌ನಲ್ಲಿರುವ ಮಾಸ್ ಡೆಸ್ ರೋಸಸ್‌ನಲ್ಲಿ ಮನೆ ಮಾಡಿಕೊಂಡ ಎಲಿಜಬೆತ್  ಒಂಬತ್ತು ವರ್ಷಗಳ ಕಾಲ ಅಲ್ಲಿ ಸುಂದರವಾದ ಹೂದೋಟ ಮಾಡಿಕೊಂಡು ನಾಯಿಗಳನ್ನು ಸಾಕಿಕೊಂಡು ಉಳಿದರು.  ಅವರ ಪುಸ್ತಕಗಳ ಸಂಗ್ರಹವನ್ನು ಕೂಡ ಮಾಸ್ ಡೆಸ್ ರೋಸಸ್‌ಗೆ ವರ್ಗಾಯಿಸಲಾಯಿತು.

  1939 ರಲ್ಲಿ ಯುದ್ಧದ ಬೆದರಿಕೆಯ ಕಾರಣದಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ಪಲಾಯನ ಮಾಡುವಂತೆ ಸರಕಾರ ಒತ್ತಾಯಿಸಿತು, ಅಲ್ಲಿ ಅವಳ ಇಬ್ಬರು ಪುತ್ರಿಯರು ಮತ್ತು ಮಗ ವಾಸಿಸುತ್ತಿದ್ದರು. ಆದರೆ ಅವಳ ಮೂರನೇ ಮಗಳು ಜರ್ಮನಿಯಲ್ಲಿ ಉಳಿಯಬೇಕಾಗಿತ್ತು.


ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದಾಗ ಅವರ  ಕೊನೆಯ ಕಾದಂಬರಿ, 'ಮಿಸ್ಟರ್ ಸ್ಕೆಫಿಂಗ್‌ಟನ್‌'  ಪ್ರಕಟಗೊಂಡಿತು. ಇದು ಅವರನ್ನು ಅಮೇರಿಕನ್ ಸಾಹಿತ್ಯ ಪ್ರಿಯರಲ್ಲಿ  ಜನಪ್ರಿಯಗೊಳಿಸಿತು.  

 ಅವರು 1941 ರಲ್ಲಿ ದಕ್ಷಿಣ ಕೆರೊಲಿನಾದಲ್ಲಿ ಮರಣಹೊಂದಿದರು. ಎರಡನೆಯ ಮಹಾಯುದ್ಧದ ಅಂತ್ಯದ ನಂತರ ಅವರ ಚಿತಾಭಸ್ಮವನ್ನು ಅವರ ಇಚ್ಛೆಗೆ ಅನುಗುಣವಾಗಿ ಅವರ ಸಹೋದರ ಸರ್ ಸಿಡ್ನಿ ಬ್ಯೂಚಾಂಪ್‌ ಚಿತಾಭಸ್ಮದ ಜೊತೆ  ಇಂಗ್ಲೆಂಡಿನ ಬಂಕಿಂಗ್ ಹ್ಯಾಮ್ ಶೈರ್ ನಲ್ಲಿರುವ  ಟೈಲರ್ ಗ್ರೀನ್ ನ ಸೇಂಟ್ ಮಾರ್ಗರೇಟ್ ಚರ್ಚ್ ನ ಚರ್ಚ್ ಯಾರ್ಡ್‌ನಲ್ಲಿ ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂಡು ಹೋದರು.  


  ಈಗ  ಕ್ಯಾಲಿಪೋರ್ನಿಯಾದ ಸಾನ್ ಮರಿನೋದ ಹಂಟಿಂಗ್ಟನ್ ಲೈಬ್ರರಿಯಲ್ಲಿ ಅವರ ಪುಸ್ತಕಗಳ ಕೆಲವು ಪ್ರತಿಗಳನ್ನು ಹಾಗೂ ಇನ್ನೂ ಕೆಲವು ಪುಸ್ತಕಗಳನ್ನು ಫ್ರಾನ್ಸ್ ನ ಟೌಲನ್ ವಿಶ್ವವಿದ್ಯಾನಿಲಯದ ಲೈಬ್ರರಿ ಸಂಗ್ರಹಗಳಲ್ಲಿ ಇರಿಸಲಾಗಿದೆ,

 
 1921 ರಲ್ಲಿ ಬರೆದ ಕಾದಂಬರಿ ವೆರಾ, ಅರ್ಲ್ ರಸ್ಸೆಲ್‌ನೊಂದಿಗಿನ ಅವಳ ವೈಪರಿತ್ಯ ವಿವಾಹ ಸಂಬಂಧದ ಮೇಲೆ ಚಿತ್ರಿಸಿದ ಡಾರ್ಕ್ ಟ್ರಾಜಿ-ಕಾಮಿಡಿ ವಿಮರ್ಶಾತ್ಮಕವಾಗಿ  ಅತಿ ಹೆಚ್ಚು ಮೆಚ್ಚುಗೆ ಪಡೆದ ಕೃತಿಯಾಗಿದೆ, ಇದನ್ನು ಜಾನ್ ಮಿಡಲ್‌ಟನ್ ಮರ್ರಿ "ಜೇನ್ ಆಸ್ಟೆನ್‌ನ ವುಥರಿಂಗ್ ಹೈಟ್ಸ್" ಗೆ ಹೋಲಿಸಿದ್ದಾರೆ.

  1922 ರಲ್ಲಿ ಬರೆದ  ದಿ ಎನ್‌ಚ್ಯಾಂಟೆಡ್ ಏಪ್ರಿಲ್,  ಅವರ ಕಾದಂಬರಿಗಳಲ್ಲಿ ಅತ್ಯಂತ ಉಲ್ಲಾಸದಾಯಕ ಕೃತಿ.  ಇದನ್ನು ಪದೇ ಪದೇ ನಾಟಕಗಳಿಗೆ ಮತ್ತು ಸಿನೆಮಾಕ್ಕೆ ಅಳವಡಿಸಿಕೊಳ್ಳಲಾಗಿದೆ: 1925 ರಲ್ಲಿ ಬ್ರಾಡ್‌ವೇ ನಾಟಕವಾಗಿ, 1935 ರ ಅಮೇರಿಕನ್ ಚಲನಚಿತ್ರ, 1992 ರಲ್ಲಿ ಅಕಾಡೆಮಿ ಪ್ರಶಸ್ತಿ-ನಾಮನಿರ್ದೇಶಿತ ಚಲನಚಿತ್ರ, ಟೋನಿ ಪ್ರಶಸ್ತಿ  2003 ರಲ್ಲಿ ನಾಮನಿರ್ದೇಶನಗೊಂಡ ರಂಗ ನಾಟಕ, 2010 ರಲ್ಲಿ ಸಂಗೀತ ನಾಟಕ, ಮತ್ತು 2015 ರಲ್ಲಿ BBC ರೇಡಿಯೋ 4 ನಲ್ಲಿ ಧಾರಾವಾಹಿ ಹೀಗೆ ಬಹಳಷ್ಟು ಪ್ರಸಿದ್ದಿ ಪಡೆದ ಹಾಗೂ ಪ್ರಶಸ್ತಿಗಳನ್ನು ಬಾಚಿಕೊಂಡ ಕಾದಂಬರಿ ಇದು. 

1940 ರಲ್ಲಿ ಬರೆದ ಮಿಸ್ಟರ್ ಸ್ಕೆಫಿಂಗ್ಟನ್ ಹಾಗೂ 1944 ರಲ್ಲಿ ಬರೆದ ವಾರ್ನರ್ ಬ್ರದರ್ಸ್ ಕಾದಂಬರಿಗಳು ಅಕಾಡೆಮಿ ಪ್ರಶಸ್ತಿಪಡೆದು ಚಲನಚಿತ್ರಗಳಾಗಿವೆ.  ತನ್ನ ಕಾದಂಬರಿಗಳಷ್ಟೇ ಪ್ರಣಯ ಹಾಗೂ ವಿವಾಹದ ವಿಷಯದಲ್ಲಿ ಚರ್ಚೆಗೆ ಒಳಪಡುತ್ತಿದ್ದ ಎಲಿಜಬೆತ್ ಸಾಹಿತ್ಯಪ್ರಿಯರ ಹಾಗೂ ಮಹಿಳಾ ಸ್ವಾತಂತ್ರ್ಯಪ್ರಿಯರ ಅಚ್ಚುಮೆಚ್ಚಿನ ಲೇಖಕಿ.