Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Sunday 1 August 2021

ತಲೆ ತಗ್ಗಿಸುವ ಆಟದೊಳಗೆ

ಒಂಟಿ ಹೆಣ್ಣು ಸಿಕ್ಕರೆ ಶೌರ್ಯ ತೋರುವ ಗುಂಪುಗಳು ಗಂಡುಕುನ್ನಿಗಳಿಗಿಂತ ಭಿನ್ನವಲ್ಲ

ಬೇರೆಯವರು ಮಾಡಿದ ಕೆಲಸ ನೋಡಿ ನಾವು ಮುಜುಗರದಿಂದ ತಲೆ ತಗ್ಗಿಸುವ ಪರಿಸ್ಥಿತಿ ಬರಬಹುದು. ಪರರ ಮಾನಗೆಟ್ಟ ಕೆಲಸದಿಂದ ನಾವು ತಲೆ ತಗ್ಗಿಸಬೇಕಾದ ಹಲವು ಪ್ರಸಂಗಗಳನ್ನು ಹೇಗೆ ಎದುರಿಸಬೇಕಾಗುತ್ತದೆ ಎಂಬುದನ್ನು ಲಕ್ಷ್ಮಿ ದೊಡ್ಮನಿಯವರು " ಅರಳು ಮಲ್ಲಿಗೆ" ಸಂಕಲನದ ಗಜಲ್ ವೊಂದರಲ್ಲಿ ದಿಟ್ಟವಾಗಿ  ಹೇಗೆ ಓದುಗರ ಮುಂದಿಟ್ಟಿದ್ದಾರೆ ಎಂಬುದನ್ನುಲೇಖಕಿ ಶ್ರೀದೇವಿ ಕೆರೆಮನೆ  Newsroom9 ನ “ತೀರದ ಧ್ಯಾನ” ಅಂಕಣದಲ್ಲಿ ವಿವರಿಸಿದ್ದಾರೆ
https://newsroom9.com/harassment-on-women-government-protection-accused/

ತಲೆತಗ್ಗಿಸುವ ಆಟದೊಳಗೆ  

ತಲೆ ತಗ್ಗಿಸುವುದು ಎಂದರೆ ಅವಮಾನವಾಗುವುದು ಎಂದರ್ಥ. ಹಾಗಾದರೆ ಅವಮಾನ ಏಕಾಗುತ್ತದೆ? ನಮ್ಮದೇನಾದರೂ ತಪ್ಪಿದ್ದರೆ ಅದು ತಿದ್ದಿಕೊಳ್ಳುವ ವಿಷಯವೇ ಹೊರತು ತಲೆ ತಗ್ಗಿಸುವ ವಿಷಯವಲ್ಲ. ಆದರೆ ನಾವು ತಲೆ ತಗ್ಗಿಸುವುದು ಯಾವಾಗ ಎಂದರೆ ನಾವು ಮಾಡಿದ ಕೆಲಸ ನಮಗೇ ಸಹ್ಯವಾಗದಿರುವಾಗ ಕೆಲವೊಮ್ಮೆ ನಾವು ಮಾಡಿದ ಕೆಲಸಕ್ಕೆ ತಲೆ ತಗ್ಗಿಸುವ ಮಾತು ಅಂತಿರಲಿ, ಬೇರೆಯವರು ಮಾಡಿದ ಕೆಲಸ ನೋಡಿಯೂ ಮುಜುಗರದಿಂದ ತಲೆ ತಗ್ಗಿಸುವ ಪರಿಸ್ಥಿತಿ ಬರಬಹುದು.  ಪರರ ಮಾನಗೆಟ್ಟ ಕೆಲಸದಿಂದ ನಾವು ತಲೆ ತಗ್ಗಿಸುವಂತಾಗುವ ಹಲವಾರು ಪ್ರಸಂಗಗಳನ್ನು ನಾವು ಕಾಣಬಹುದು. 

ಮನುಜರು ಪಶುಗಳಂತೆ ಆಡುವುದ ಕಂಡು ತಲೆ ತಗ್ಗಿಸಿದ್ದೇನೆ 
ಮೋಹ ಬಲೆಯಲಿ ಹೊರಳಾಡುವುದ ಕಂಡು ತಲೆ ತಗ್ಗಿಸಿದ್ದೇನೆ 

ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳಬೇಕು. ಮಾನವೀಯತೆ ಎಂಬ ಪದ ಬಳಕೆಗೆ ಬಂದಿರುವುದೇ ಮನುಷ್ಯನ ಒಳ್ಳೆಯ ಗುಣಗಳಿಂದ ಅಂತ ನಂಬಿಕೊಂಡಿದ್ದೇವೆ. ಇಲ್ಲವೆಂದಾದರೆ ನಾಯಿಯತೆ, ಹುಲಿಯತೆ ಎಂದು ಪ್ರಾಣಿಗಳ ಹೆಸರಿನಿಂದ ಕರೆಯಬಹುದಾಗಿತ್ತೇನೋ. ಆದರೆ ಈ ಮನುಷ್ಯ ಈಗ ಅದನ್ನೆಲ್ಲ ಮರೆತು ಪ್ರಾಣಿಗಳಿಗಿಂತ ಕೀಳಾದ ವರ್ತನೆ ತೋರುತ್ತಿರುವಾಗ ತಲೆ ತಗ್ಗಿಸದೇ ಇರಲು ಹೇಗೆ ಸಾಧ್ಯ? 
    ಜೀವನದಲ್ಲಿ ಮೋಹವನ್ನು ಬಿಡಲು ಸಾಧ್ಯವಿಲ್ಲ. ಆದರೆ ಆ ಮೋಹದ ಕಾರಣದಿಂದಾಗಿ ತಲೆ ತಗ್ಗಿಸುವಂತಾದರೆ ಅದರ ಅವಮಾನದ ಭಾರ ಬಲು ಹೆಚ್ಚು. ಮೋಹ ಸಹಜ. ಆದರೆ ಮೋಹವನ್ನೆ ಕೊಚ್ಚೆ ಗುಂಡಿಯನ್ನಾಗಿಸಿಕೊಂಡು ಹಂದಿಯಂತೆ ಹೊರಳಾಡಿದರೆ ಹೆಮ್ಮೆ ಪಡಲು ಸಾಧ್ಯವೇ? 

ಉದರದೊಳಗಿನ ಮಾಂಸದ ಮುದ್ದೆಯ ಅಂಗ ಲಿಂಗ ಪರೀಕ್ಷಿಸಿ 
ಹೆಣ್ಣುಕೂಸಿನ ಉಸಿರು ನಿಲ್ಲಿಸುವುದು ಕಂಡು ತಲೆ ತಗ್ಗಿಸಿದ್ದೇನೆ   
ಹೆಣ್ಣೆಂದರೆ ಹೊರೆ ಎಂಬಂತಾಗಿದೆ ಇತ್ತೀಚಿನ ದಶಕಗಳಲ್ಲಿ ಹೆಣ್ಣು ಹುಟ್ಟಿದರೆ ಮನೆಗೆ ಕಳಶ ಎಂಬ ಮಾತು ಮರೆತು ಹೆಣ್ಣೆಂದರೆ ಕಂಕುಳಲ್ಲಿನ ಹುಣ್ಣು ಎಂದು ಪರಿಗಣಿಸಿ ಅದಾವುದೋ ಕಾಲವಾಯಿತು. ಕಂಕುಳಲ್ಲಿ ಹುಣ್ಣಾದರೆ ಕೈ ಮಡಚುವಂತಿಲ್ಲ, ಕ್ಷಣಮಾತ್ರಕೂ ಆರಾಮದಿಂದಿರುವಂತಿಲ್ಲ. ಹೆಣ್ಣೆಂದರೆ ಹಾಗೇ ಎಂದು ಭಾವಿಸಲು ಹಲವಾರು ಕಾರಣಗಳಿವೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ನಮ್ಮನ್ನು ಈ ಭಾವ ತಳೆಯಲು ಕಾರಣವಾಗಿದೆ. ಹೀಗಾಗಿ ಗರ್ಭದೊಳಗೇ ಭ್ರೂಣವನ್ನು ಪರೀಕ್ಷಿಸಿ ಬ್ರೂಣವನ್ನೆ ತೆಗೆಸಿಬಿಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಹಾಗೆ ನೋಡಿದರೆ ಇದೊಂದು ಲಾಭದಾಯಜ ದಂತೆಯಾಗಿ ಪರಿಣಮಿಸಿದೆ. ಕಾನೂನಿನ ದೃಷ್ಟಿಯಿಂದ ಬ್ರೂಣ ಹತ್ಯೆ ಅಪರಾಧ. ಆದರೆ ಕಾನೂನಿನ ಒಳಗಿರುವ ಸಣ್ಣ ತೂತಿನಲ್ಲೂ ಹೆಗ್ಗಣ ಒಳಸೇರಬಹುದು. ಅನಾರೋಗ್ಯದ ನೆಪ, ಬ್ರೂಣ ಸರಿಯಾಗಿ ಬೆಳೆದಿರದ ನೆಪ ಹೇಳಿ ಬ್ರೂಣ ಹತ್ಯೆ ಮಾಡುವುದನ್ನು ಕಂಡು ಪ್ರಜ್ಞಾವಂತರಾದವರು ತಲೆ ತಗ್ಗಿಸಲೇ ಬೇಕು


ಗುಂಪು ಕಟ್ಟಿಕೊಂಡಿರುವ ನಾಯಿಗಳು ಅಬಲೆಯ ಬಲಿಪಡೆದವು 
ಕಾಮ ಅಟ್ಟಹಾಸಕೆ ಬಲಿಯಾಗುವುದು ಕಂಡು ತಲೆ ತಗ್ಗಿಸಿದ್ದೇನೆ 

ಹೆಣ್ಣು ನಾಯಿಯನ್ನು ಕಂಡರೆ ಗಂಡುಕುನ್ನಿಗಳು ಹಿಂಡುಹಿಂಡಾಗಿ ಹಿಂಬಾಲಿಸುತ್ತವೆ. ಒಟ್ಟಾಗಿ ಹೆಣ್ಣು ನಾಯಿಯ ಮೇಲೆ ಎರಗುತ್ತವೆ. ಹಾಗಂತ ಮನುಷ್ಯರ ನಡವಳಿಕೆ ಇದಕ್ಕಿಂತ ಭಿನ್ನವಾಗಿಲ್ಲ.  ಒಂಟಿ ಹೆಣ್ಣು ಸಿಕ್ಕರೆ ತಮ್ಮ ಶೌರ್ಯದ ಪ್ರದರ್ಶನ ಮಾಡುವ ಈ ಗುಂಪುಗಳು ಗಂಡುಕುನ್ನಿಗಳಿಗಿಂತ ಭಿನ್ನವೇನಲ್ಲ. ಅತ್ಯಾಚಾರವೆಸಗಿ, ಅಷ್ಟರಿಂದಲೂ ತೃಪ್ತಿ ಸಿಗದೇ ವಿಕೃತವಾಗಿ ವರ್ತಿಸಿ, ಕೊಲೆಗೈಯ್ಯು ಇವರು ಕ್ರೂರ ಕಾಡು ಪ್ರಾಣಿಗಳಿಗಿಂತ ಹೇಯ. 

   ಕಾಮ ಎನ್ನುವುದು ಪ್ರಕೃತಿ ಸಹಜ. ಪರಸ್ಪರ ಒಪ್ಪಿಗೆಯ ಮೇರೆಗೆ ನಡೆದರೆ ಅದು ಅಲೌಕಿಕ. ಆದರೆ ಬಲವಂತವಾಗಿ ಅಟ್ಟಹಾಸಗೈದರೆ ಮಾತ್ರ ಬೀಭತ್ಸ. ಅಂತರ ಘೋರ ಅತ್ಯಾಚಾರ, ನಂತರದ ಹಲ್ಲೆ ಹಾಗೂ ಕೊಲೆಗಳನ್ನು ಕಂಡು ತಲೆತಗ್ಗಿಸದೇ ಹೋದರೆ ನಮ್ಮನ್ನು ನಾವು ಮಾನವಂತರು ಎಂದುಕೊಳ್ಳಲು ಸಾಧ್ಯವೇ? 


ಅನ್ಯಾಯ ತಡೆಯದ ವ್ಯವಸ್ಥೆ ಅತ್ಯಾಚಾರ ನಿಲ್ಲಿಸಲಾಗದ  ಕೈಗಳು  
ದಂಡಿಸಲು ಅಸಮರ್ಥ ಕಾನೂನುಗಳ ಕಂಡು ತಲೆ ತಗ್ಗಿಸಿದ್ದೇನೆ 

ಇಂದಿನ ಸಮಾಜ ಕೊಳೆತು ನಾರುತ್ತಿದೆ. ವಾರದ ಸಂತೆಯ ನಂತರ ನಾರುವ ರಸ್ತೆಯಂತೆ. ಯಾವ ಸರಕಾರ ಬಂದರೂ ಅಷ್ಟೇ. ಹೆಣ್ಣಿನ ಮೇಲೆ ದೌರ್ಜನ್ಯ ನಿಲ್ಲುವುದಿಲ್ಲ. ಅಸಹಾಯಕರನ್ನು ಶೋಷಿಸುವುದು ತಪ್ಪುವುದಿಲ್ಲ. ವ್ಯವಸ್ಥೆಯೇ ಹಾಗಿದೆ. ಅನ್ಯಾಯವನ್ನು ತಡೆಯುವ ಮನಸುಳ್ಳ ಕೈಗಳಿಗೆ ಕೋಳ ಹಾಕಲಾಗಿದೆ. ಅದು ಪೋಲಿಸರದ್ದಾದರೂ ಅಷ್ಟೇ, ವಕೀಲರದ್ದಾದರೂ ಅಷ್ಟೇ. ಆಳುವ ವರ್ಗವೇ ಅನ್ಯಾಯಕ್ಕೆ ಬೆಂಬಲವಾಗಿ ನಿಂತು ರಕ್ಷಿಸುತ್ತದೆ. ಅನ್ಯಾಯ ಎಸಗುವವರಿಗೆ  ಶಿಕ್ಷೆ ವಿಧಿಸದ  ಕಾನೂನನ್ನು ಕಂಡು ಎಲ್ಲರೂ ತಲೆ ತಗ್ಗಿಸಬೇಕಿದೆ.


ಹೆಣ್ಣು ರಾತ್ರಿ ನಿರ್ಭಯವಾಗಿ ಹೊರಬೀಳುವುದು ಇಲ್ಲಿ ಸಾಧ್ಯವೇ 
ಹಗಲಿನಲೂ ಕೂಸು ಹೆದರುತಿರುವುದು ಕಂಡು ತಲೆ ತಗ್ಗಿಸಿದ್ದೇನೆ 

ಹೆಣ್ಣೊಬ್ಬಳು ಮಧ್ಯರಾತ್ರಿ ನಿರ್ಭಯಳಾಗಿ ಓಡಾಡುವಂತಾದರೆ ಆ ದಿನ ನಮಗೆ ನಿಜವಾದ ಸ್ವಾತಂತ್ರ್ಯ ಲಭಿಸಿದಂತೆ ಎಂದು ಗಾಂಧೀಜಿಯವರು ಹೇಳಿದ್ದರು. ಆದರೆ ಸ್ವಾತಂತ್ರ್ಯ ಸಿಕ್ಕಿ ಅರ್ಧ ಶತಮಾನ ಕಳೆದು ಮುಕ್ಕಾಲು ಶತಮಾನದ ಹತ್ತಿರ ಇರುವಾಗಲೂ ಹೆಣ್ಣೊಬ್ಬಳು ರಾತ್ರಿಯ ಹೊತ್ತು ಬಿಡಿ, ಹಗಲಿನಲ್ಲಿಯೂ ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. 

ರಾತ್ರಿ ಕೆಟ್ಟ ಕನಸು ಬೀಳುವುದು ಸಹಜ. ಆದರೆ ಅದು ವಾಸ್ತವವಲ್ಲ. ಕನಸು ತಿಳಿದೆದ್ದ ಮೇಲೆ ಮತ್ತೆ ಆ ಕನಸು ಮರೆವಾಗುತ್ತದೆ. ಆದರೆ ಹಗಲಿನಲ್ಲಿ ನಿದ್ದೆಯಿಲ್ಲದೆ ಎಚ್ಚರದಿಂದ ಇರುವಾಗಲೂ ಹೆಣ್ಣು ಕೂಸೊಂದು ಬೆಚ್ಚಿ ಬೀಳುವ ಅನಾಗರಿಕ ಸಮಾಜವನ್ನು ನಿರ್ಮಿಸಿ ಬಿಟ್ಟಿದ್ದೇವೆ. ಇಂತಹ ಅಸಹ್ಯ ಸಮಾಜದ ನಿರ್ಮಾಣದಲ್ಲಿ ನಮ್ಮ ಪಾತ್ರವೆಷ್ಟು? ಯೋಚಿಸಿದರೆ ನಾವು ಖಂಡಿತಾ ತಲೆ ತಗ್ಗಿಸಲೇ ಬೇಕು. 


ಶ್ರೇಷ್ಠ ಸಂಸ್ಕೃತಿಯ ವಾರಸುದಾರದೆಂದು  ಬೀಗಿದರೇನು ಮಲ್ಲಿಗೆ 
ಸನ್ಯಾಸಿಗಳೂ ಭೋಗ ಬಯಸುವುಸುದು ಕಂಡು ತಲೆ ತಗ್ಗಿಸಿದ್ದೇನೆ 

ಮನುಷ್ಯ ಶ್ರೇಷ್ಠ ಎಂದುಕೊಳ್ಳುತ್ತೇವೆ. ಮಾನವ ಜನ್ಮದಷ್ಟು ದೊಡ್ಡದು ಯಾವುದೂ ಇಲ್ಲ ಎನ್ನುತ್ತೇವೆ.  ಆದರೆ ಎಲ್ಲ ಮಾನವರೂ ಶ್ರೇಷ್ಠರೇ? ಖಂಡಿತಾ ಇಲ್ಲ. ಮನುಷ್ಯರಲ್ಲಿಯೇ ಕೆಲವರನ್ನು ನಿಕೃಷ್ಟವಾಗಿ ಕಾಣುತ್ತೇವೆ. ಕೆಲವರನ್ನು ಮುಟ್ಟಿಸಿಕೊಳ್ಳಲೂ ಹಿಂಜರೆಯುತ್ತೇವೆ. ಆದರೆ ಕೆಲವರು ಜಾತಿ ಧರ್ಮದ ಹೆಸರು ಹೇಳಿ ನಮ್ಮ ಶ್ರೇಷ್ಠತೆಗೆ ಸಾಕ್ಷಿ ಒದಗಿಸಿಕೊಳ್ಳುತ್ತಾರೆ. ತಾವು ಯಾವುದೋ ಶ್ರೇಷ್ಠ ಮನೆತನದ ವಂಶಜರು ಎಂದುಕೊಳ್ಳುವ ನಾವು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುತ್ತೇವೆ. 
  ಇಂತಹ ಶ್ರೇಷ್ಠತೆಯ ಮುಂದುವರಿಕೆಗಾಗಿ ಮಠ ಕಟ್ಟಿಕೊಂಡಿದ್ದೇವೆ. ಇನ್ನೂ ಬಯಕೆ ತೀರದವರನ್ನು ತಂದು ಮಠಾಧೀಶರನ್ನಾಗಿಸಿದ್ದೇವೆ. ಜಗದ್ಗುರು ಎಂದು ದೀರ್ಘದಂಡ ನಮಸ್ಕಾರ ಮಾಡುತ್ತೇವೆ. ಆದರೆ ಆ ಸರ್ವತ್ಯಾಗಿಗಳಾದ ಸ್ವಾಮಿಗಳು ವೈಭೋಗದ ಜೀವನಕ್ಕಾಗಿ ಹಾತೊರೆಯುತ್ತಾರೆ.‌ ಪರಿತ್ಯಾಗಿಗಳ ಓಡಾಟಕ್ಕೆ ದುಬಾರಿ ಬೆಲೆಯ ಕಾರೇ ಬೇಕು, ಪಲ್ಲಕಿ ಬೇಕು. ವೈಭವದ ಹೊಟೇಲ್ ರೂಂ ಬೇಕು. ರಾಜಕೀಯ ಅಧಿಕಾರ ಬೇಕು. ಹೇಳುವುದು ಎಲ್ಲ ಸುಖವನ್ನೂ ತ್ಯಜಿಸಿದ ಸ್ಥಿತಿಪ್ರಜ್ಞರು. ಆದರೆ ರಾಜಕೀಶ ಸಮಾವೇಶಗಳಲ್ಲಿ ಭಾಗವಹಿಸಿ ಅವರೆಸೆಯುವ ಭಿಕ್ಷೆಗೆ ಕೈ ಚಾಚುವುದನ್ನು ಕಂಡರೆ ತಲೆ ತಗ್ಗಿಸದೇ ಇರಲು ಹೇಗೆ ಸಾಧ್ಯ? 
 ಲಕ್ಷ್ಮಿ ದೊಡ್ಮನಿಯವರ ಅರಳು ಮಲ್ಲಿಗೆ ಸಂಕಲನದ ಗಜಲ್ ಇದು.  ಕಂಡು ತಲೆ ತಗ್ಗಿಸಿದ್ದೇನೆ ಎನ್ನುವುದು ರಧೀಪ್  ದು ಎಂಬುವುದು ರವೀಶ. ಮಲ್ಲಿಗೆ ಎಂಬುದು ಲಕ್ಷ್ಮಿಯವರ ತಖಲ್ಲೂಸ್
ಮಹಾರಾಷ್ಟ್ರದ ಅಕ್ಕಲಕೋಟೆಯ ಲಕ್ಷ್ಮಿಯವರದ್ದು ಕನ್ನಡ ಮನಸ್ಸು. ಕನ್ನಡ ಮನೆ ಮಾತು. ಕನ್ನಡದಲ್ಲಿ ಕಾವ್ಯರಚನೆ ಮಾಡುತ್ತ ತಮ್ಮ ಮೂಲವಾದಾ ಕರ್ನಾಟಕದೊಂದಿಗೆ ಮಾನಸಿಕವಾಗಿ ಬೆಸೆದುಕೊಂಡಿದ್ದಾರೆ. 
  ಈ ಗಜಲ್ ಸಾಮಾಜಿಕ ವಿಡಂಬನೆಗೆ ಉತ್ತಮ ಉದಾಹರಣೆಯಾಗಿ ನಮ್ಮೆದುರಿಗಿದೆ. ವಿಷಾದ ಭಾವ ದಟ್ಟವಾಗಿ ಆವರಿಸಿದಂತೆ ಕಂಡರೂ ಹೇಳಬೇಕಾದುದನ್ನು ಹೇಳುವ ದಿಟ್ಟತೆ ಇದೆ. ಪ್ರಸ್ತುತ ಸನ್ನಿವೇಶಕ್ಕೆ ಅತ್ಯುತ್ತಮವಾಗಿ ತಾಳೆಯಾಗುವ ಗಜಲ್ ಇದು
https://newsroom9.com/harassment-on-women-government-protection-accused/

1 comment:

  1. ಸುಂದರ ವಿಶ್ಲೇಷಣೆ ಮೇಡಂ..ಗಹಲ್ ಸಾರ್ಥಕತೆ ಪಡೆಯಿತು

    ReplyDelete