Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Saturday 23 March 2024

ಮಹಾಜನಗಳ ನಡುವೆ

ಮಹಾಜನಗಳ ನಡುವೆ

ಜಾರಿದ ಸೆರಗಿನ ಕಡೆ ಗಮನಿಸದೆ
ತರಾತುರಿಯಲ್ಲಿ ಹೊರಟ ಅವಳಿಗೆ 
ಮಾಡಿ ಮುಗಿಸಬೇಕಾದ ಕೆಲಸದ ಗಡಿಬಿಡಿ
 ಹೋಗದಿದ್ದರೆ ಹೇಳಿದ ಸಮಯಕ್ಕೆ 
ಕೈ ತಪ್ಪುವ ಭೀತಿ ಎದೆಯೊಳಗೆ
ಕೊಡುವ ಸಣ್ಣ ಪಗಾರದಲ್ಲಿ 
ಮತ್ತೊಂದಿಷ್ಟು ಸಣ್ಣ ಮೊಬಲಗು
ಐದು ಹತ್ತು ರೂಪಾಯಿಯೇ ಆದರೂ
ಅದೇ ಕೈ ಹಿಡಿಯುವುದು ತಿಂಗಳ ಕೊನೆಗೆ 

ಬರ್ತೀಯಾ? ತಾಸಿಗೆ ಇನ್ನೂರು
ಇಬ್ಬರಿದ್ದೇವೆ ಕೊಡುತ್ತೇನೆ ನಾನೂರು 
ಹಠಾತ್ತನೆ ಎದುರು ನಿಂತು ಕೇಳಿದ ಪ್ರಶ್ನೆ
ತನಗೇ ಎಂಬುದು ಅರ್ಥವಾಗಲೂ 
ಬೇಕಾಯಿತು ಅವಳಿಗೆ ಒಂದಿಷ್ಟು ನಿಮಿಷ  
ಬೆಪ್ಪಾಗಿ ನಿಂತವಳಿಗೆ ಮುನ್ನೂರಾದರೆ? 
ಮತ್ತೆ ಎದೆ ನಡುಗಿಸುವ ಪ್ರಶ್ನೆ 
ನಾನು ಅಂಥವಳಲ್ಲ ದನಿಯಲ್ಲಿ ಬಲವಿಲ್ಲ
ಜಾರಿದ ಸೆರಗಿನವಳು ಇನ್ನೇನಾಗಿರಲು ಸಾಧ್ಯ
ಎದೆಯೊಳಗೆ ಬಂದೂಕಿನ ಮೊನೆ ಮುರಿದ ಸದ್ದು
ನಿನ್ನ ಹೆಂಡತಿಯನ್ನೂ ಕರೆದು ತಾ
ಇಬ್ಬರೂ ಸೇರಿಯೇ ಬೀದಿಯಲ್ಲಿ 
ಮೆರವಣಿಗೆ ಹೊರಡುತ್ತೇವೆ ಸೆರಗು ಜಾರಿಸಿ
ಎದೆಯೊಳಗಿನ ಮಾತು ತುಟಿ ಮೀರಿ 
ಇನ್ನೊಂದು ಹೆಣ್ಣು ಜೀವ ನೋಯದಿರಲೆಂಬಂತೆ 
ಅವಡುಗಚ್ಚಿ ಕಣ್ಣೊಳಗೆ ತುಳುಕಿಸಿದಳು ನಗು  
ನಗು ಕಂಡವನೊಳಗೆ ಆತುರ ಮೈ ತುಂಬ 
ನಡೆ ನಿನ್ನ‌ ಮನೆಗೇ ಹೋಗೋಣ
ಎಂದವನ ತಡೆಯುತ್ತ ಹೇಳಿದಳು ತಣ್ಣಗೆ 
ಬೇಡ, ನಿನ್ನ ಮನೆಯೇ ಆದೀತು
ಇರಬಹುದು ಅಲ್ಲಿ ನಿನ್ನಪ್ಪ, ಅಜ್ಜನೂ 
ಕೊಡಬಹುದು ಅವರೂ ಮುನ್ನೂರು 
ನಿನ್ನ ಪುಟ್ಟ ಮಗನೂ ಇದ್ದರೆ ಒಳ್ಳೆಯದು
ಅವನೂ ಕೊಡುವ ಹಣ ಸೇರಿದರೆ  
ಸಿಗುವ ಆದಾಯದಿಂದ ಕೊಡಬಹುದು 
ನಿನ್ನವ್ವ ಹೆಂಡತಿಗೆ ಸೀರೆಯ ಉಡುಗೊರೆ
ಉಟ್ಟು ನಗಬಹುದು ಮೊಗವರಳಿಸಿ 
ಮಾತು ಮುಗಿಯುವ ಮುನ್ನವೇ 
ಹೊರಟವರ ತಡೆದು ಕೇಳಿದಳು ಸುತ್ತ ನೆರೆದವರ
ಬರಬೇಕೆ ನಿಮ್ಮಲ್ಲಿ ಯಾರ ಮನೆಗಾದರೂ
ತಗ್ಗಿಸಿದ ತಲೆಯೆತ್ತುವ ನೈತಿಕತೆಯೆಲ್ಲಿ 
ಸುಸಂಸ್ಕೃತರೆನಿಸಿಕೊಳ್ಳುತ್ತ ತಮಾಷೆ ನೋಡಿದ
ಮಹಾಜನಗಳ ಮಹಾ ಆಸ್ಥಾನದಲ್ಲಿ


Saturday 16 March 2024

ಚಿತಾಗ್ನಿಯಲ್ಲಿನ ಕೊರಡು

ಚಿತಾಗ್ನಿಯಲ್ಲಿನ ಕೊರಡು

ಆತ ಒಮ್ಮೆಯೂ ಹಿಂದಿರುಗಿ ನೋಡದೆ 
ಹೊರಟು ಹೋಗಿ ಅವನದ್ದೇ ಲೋಕದಲ್ಲಿ 
ತಲ್ಲೀನವಾಗಿ ಹಳೆಯದನ್ನೆಲ್ಲ ಮರೆತಿರುವಾಗಲೂ
ಹಿಂದಿರುಗಿ ಬಂದೇ ಬರುತ್ತಾನೆಂದು
ಅವನು ಹೋದ ಹಾದಿಗೆ ಕಣ್ಣು ಕೀಲಿಸಿ
ಕಲ್ಲಾಗಿ ಕಾಯುತ್ತಾಳೆ ಅಹಲ್ಯೆಯಂತೆ 
ಅವನೆಂದೂ ಹಿಂದಿರುಗಲಾರ
ಸ್ಪರ್ಶಿಸಿ ಮತ್ತೆಂದೂ ತನ್ನ ಹೆಣ್ಣಾಗಿಸಲಾರ
ಎಂಬ ಸತ್ಯ ಅರಿವಾಗುವಾಗುವಷ್ಟರಲ್ಲಿ 
ಅವಳು ತಲೆ ನೆರೆತ, ಬಾಗಿದ ಬೆನ್ನಿನ ಮುದುಕಿ 
ಅವನ ಬಣ್ಣಬಣ್ಣದ ಮಾತಿಗೆ ಅರಳಿ
ಕನಲಿ, ನಲುಗಿ ಸುರಿವ ಜೇನಿನಂತಹ
ಪ್ರೇಮವನ್ನು ಎದೆಯ ತುಂಬ ತುಂಬಿಕೊಂಡು
ವ್ಯಭಿಚಾರಿಯ ಪಟ್ಟ ಹೊರುವ ಹೆಣ್ಣುಗಳಿಗೆ
ಲೋಕದ ಅಪವಾದ ನಿಂದನೆಗಳನ್ನಷ್ಟೇ ಅಲ್ಲ
ಬೈಗುಳ, ಸಿಡುಕು, ತಿರಸ್ಕಾರಗಳನ್ನೆಲ್ಲ 
ವಿನಾಕಾರಣ ಎದೆಗೆಳೆದುಕೊಳ್ಳುವ ಹುಚ್ಚು 

ತಿರಸ್ಕರಿಸಿದಷ್ಟೂ ಸ್ವಾಭಿಮಾನವ ಮುಡಿಪಿಟ್ಟು
ಬಾಚಿ, ತಬ್ಬಿ, ಆದರಸುತ್ತ 
ಮಾಗಿ, ಬಳಲಿ, ಬೆಂಡಾಗಿ ಮುರಿಯುತ್ತ
ಬೂದಿ ತೀಡಿದ ನಿಗಿನಿಗಿ ಕೆಂಡ 
ಅವಳ ಒಳಹೊರಗನ್ನೆಲ್ಲ ದಹಿಸುವುದು 
ಜಗದ ಕಣ್ಣಿಗೆ ದೇಹ ದಹಿಸುವ ಚಿತಾಗ್ನಿ
ಅವಳಂತೂ ಉರಿದು ಬೂದಿಯಾಗುವ ಕೊರಡು

ಶ್ರೀದೇವಿ ಕೆರೆಮನೆ

Tuesday 12 March 2024

ಹೇಳಿ ಹೋಗು



ಹೇಳಿ ಹೋಗು 

ನಿನ್ನನ್ನು ಮಾತನಾಡಿಸುವ 
ನನ್ನೆಲ್ಲ ತರೆಹವಾರಿ ಪ್ರಯತ್ನಗಳು
ಮಕಾಡೆ ಬಿದ್ದು ವಿಫಲವಾದ ನಂತರ 
ನಾನೂ ಸಹ ಮೌನವಾಗಿ 
ನಿನ್ನಿಂದ ದೂರ ಹೊರಟುಬಿಡುವ 
ಗಟ್ಟಿ ನಿರ್ಧಾರ ಮಾಡಿದ್ದೇನೆ

ಹೀಗೆ ಬಂದು ಹಾಗೆ ಹೋಗುವ
ನಿನ್ನ ಬಾಳ ಪಯಣದಲ್ಲಿ 
ಹೆಸರಿಲ್ಲದ ಒಂದು ಸಣ್ಣ 
ನಿಲ್ದಾಣ ನಾನಾಗಿದ್ದಕ್ಕೆ 
ಸಮಾಧಾನ ಪಡುವುದೋ 
ವಿಷಾದಿಸುವುದೋ ಎಂಬುದು
ಅರ್ಥವಾಗದೆ ದಿಗ್ಭ್ರಾಂತಳಾಗಿರುವಾಗ 
ಒಮ್ಮೆಯೂ ಹಿಂದಿರುಗಿ ನೋಡದೆ 
ನೀ ನಡೆದು ಹೋದ ಹಾದಿಯ 
ಬದಿಯ ಕಲ್ಲುಬಂಡೆಯಾಗಿದ್ದೇನೆ
ವಿದಾಯದ ಕಣ್ಣೀರನ್ನು ಒಳಗೊಳಗೇ ನುಂಗಿ

ಹೊರಟು ಹೋಗುವ ಮುನ್ನ 
ಒಂದೇ ಒಂದು ಮಾತು ಹೇಳಿ ಬಿಡು
ಅಲೆಗಳೇ ಇಲ್ಲದ ನನ್ನ ಬಾಳಲ್ಲಿ
ನೀನು ಬಂದು ತಂಪು ಸುರಿದಿದ್ದೇಕೆ
ಈಗ ಕಾರಣವೇ ಹೇಳದೆ 
ಹೊರಟು ಹೋಗುತ್ತಿರುವುದಾದರೂ ಏಕೆ?

...ಶ್ರೀದೇವಿ ಕೆರೆಮನೆ