Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Wednesday 29 June 2022

ಹೊಸತನದ ಪರಿಭಾಷೆ ನೀಡುವ ಕವನಗಳು

 ಹೊಸತನದ ಪರಿಭಾಷೆ ನೀಡುವ ಕವನಗಳು 

   ಕವಿತೆ  ಹೇಗೆ ಹುಟ್ಟುತ್ತದೆ? ಕವಿತೆ ಸೃಷ್ಟಿಯಾಗಲು ಇರಬೇಕಾದ ಪೂರಕ ವಾತಾವರಣ ಯಾವುದು? ಕವಿತೆ ಬರೆಯಬೇಕೆಂದುಕೊಂಡರೆ ಲಿಪಿಕಾರನ ಮನಸ್ಸಿನಲ್ಲಿ ಮೂಡಬೇಕಾದ ಭಾವಗಳು ಯಾವವು? 
   ಇಂತಹುದ್ದೊಂದು ಪ್ರಶ್ನೆಗೆ ಚಿಕ್ಕದೊಂದು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ ಡಾ. ಪ್ರಭಾಕರ ನಾಯಕ. ತಮ್ಮ 'ಜೀವಮಂಡಲ' ಎನ್ನುವ ಕವನ ಸಂಕಲನದಲ್ಲಿ. 

ಕವಿತೆ ಎಂದಿಗು 
ಪುಕ್ಕಟೆ ಹುಟ್ಟುವುದಿಲ್ಲ 
ಅದು ತೀಟೆಯ ಕುರುಹಾಗಿ 
ಅಲೆಗಳ ಸೃಷ್ಟಿಸುವುದಿಲ್ಲ 

ಎನ್ನುತ್ತ ಚೊಚ್ಚಲ ಕವನ ಸಂಕಲನದ ಮೊದಲ ಕವನವೇ ಗಮನ ಸೆಳೆಯುತ್ತದೆ. 
 ಮೊದಲ ಕವಿತೆಯೇ ಕವಿತೆ ಹೇಗೆ ಹುಟ್ಟುತ್ತದೆ ಎಂಬುದನ್ನು ಅವರು ಹೇಳುವ ರೀತಿಗೆ ಕವಿತೆಯ ಹಲವಾರು ಆಯಾಮಗಳು ಕಣ್ಣೆದುರಿಗೆ ಹಾದುಹೋಗುತ್ತವೆ. 
ಕೊಳಚೆ ಹೂಗಳ ಮಾಂಸ ಪಕಳೆಯ
ಹಕ್ಕುದಾರಿಕೆಯನು ದಿಕ್ಕರಿಸಿ
ಕವಿತೆಯು ಸಿಡಿಲಾಗಿ ಹುಟ್ಟುತ್ತದೆ  
ಎಂದು ಹೇಳುತ್ತ ಕವಿತೆ ಸಿಡಿಲಾಗಬೇಕಾದ ಅವಶ್ಯಕತೆಯನ್ನು ತಿಳಿಸುತ್ತಾರೆ. 

ಕವನ ಸಂಕಲನದ ಪ್ರೌಢತೆ ಅದನ್ನು ಆಯ್ದುಕೊಂಡು ವಸ್ತುಗಳು ನಿರ್ಧರಿಸುತ್ತವೆ. ಅಂಕೋಲಾದ ಜಿ ಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿರುವ ಡಾ. ಪ್ರಭಾಕರ ನಾಯಕ ತುಂಬ ಶಿಸ್ತಿನ ಮನುಷ್ಯ ಎಂದು ಹೆಸರು ಮಾಡಿದ್ದವರು. ವಿದ್ಯಾರ್ಥಿಗಳು ಅವರನ್ನು ಕಂಡರೆ ಅಲ್ಲಲ್ಲೇ ಸರಿದು ಹೋಗುತ್ತಿದ್ದ ಮಾತುಗಳಿವೆ. ಅವರ ಗೌರವಪೂರ್ಣ ವ್ಯಕ್ತಿತ್ವ ಹಾಗೂ ಘನತೆ ಇದಕ್ಕೆ ಕಾರಣ. ಹೀಗಾಗಿಯೇ ಕವಿತೆಗಳೂ ತೀರಾ ಪ್ರೌಢತೆಯಿಂದ ಕೂಡಿವೆ. ಎಲ್ಲಿಯೂ ಎಳಸುತನದ ಮಾತಾಗಲಿ ಭಾವವಾಗಲಿ ಇಲ್ಲ. ಚೊಚ್ಚಲ ಸಂಕಲನದಲ್ಲಿ ಬಹುವಾಗಿ ಕಂಡುಬರುವ ಪ್ರೀತಿ ಪ್ರೇಮ ಜೊತೆಗೆ ವಿರಹದ ಕವನಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ವಿಷಯದ ಆಯ್ಕೆಯಲ್ಲಿಯೇ ಡಾ. ನಾಯಕ ಪ್ರಬುದ್ಧತೆ ತೋರಿದ್ದಾರೆ. 

ಪಟ್ಟ ಭದ್ರರ ಅನಿಯಂತ್ರಿತ 
ಒಡೆತನ ದಬ್ಬಾಳಿಕೆಗೆ ಜರ್ಜರಿತವಾಗಿ 
ಅವರ ಪಾದದಡಿ 
ಮೂಕವಾಗಿ ಕೊಳೆತು ಹೋದವರ 
ದೇವಭೂಮಿಯ ಕಡ್ಡಾಯದ 
ತೆರೆದ ಸ್ತನಗಳ ಮೆರವಣಿಗೆಯಲಿ 
ಒಳಗೊಳಗೆ ಸುಟ್ಟು ಶೂನ್ಯವಾದವರ 
ಚರಿತೆಯೊಳು ತಂದುಬಿಡಿ (ಚರಿತೆಗೊಂದು ಹೊಸ ಜೀವ ಕೊಡಿ)
ಈ ಕವನ ಅಂತಹುದ್ದೊಂದು ಬಿಗಿತನಕ್ಕೆ ಉದಾಹರಣೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಾವು ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದೇವೆ. ದೇವರನಾಡು ಎಂದು ಕರೆಯಿಸಿಕೊಳ್ಳುವ ಕೇರಳದ ತಿರವಾಂಕೂರ ಪ್ರಾಂತ್ಯದಲ್ಲಿ ಮೊಲೆಕರಂಬು ಎಂಬ ಊರಿದೆ. ಅಲ್ಲಿ ಮೇಲ್ವರ್ಗದ ನಂಬೂದರಿಗಳು ಮುಲಕರಂ ಎನ್ನುವ ಸ್ತನ ತೆರಿಗೆಯನ್ನು ವಿಧಿಸುತ್ತಿದ್ದರು.   ಕೆಳವರ್ಗದ ಮಹಿಳೆಯರು ತಮ್ಮ ಸ್ತನಗಳನ್ನು ಮುಚ್ಚಿಕೊಳ್ಳಲು ಮೇಲ್ವರ್ಗದ ಅಧಿಕಾರಿಗಳಿಗೆ ತೆರಿಗೆ ನೀಡಬೇಕಿತ್ತು. ಸ್ತನಗಳ ಗಾತ್ರ ನೋಡಿ ತೆರಿಗೆ ವಿಧಿಸುವ ಪರಿಪಾಟವೂ ಇತ್ತು. ಹೀಗಾಗಿ ಹೆತ್ತ ತಾಯಿ ತನ್ನ ಹದಿಹರೆಯದ ಆಗತಾನೆ ಮೊಗ್ಗೊಡೆಯುವ ಮಗಳ ಸ್ತನದ ಗಾತ್ರ ಕುಗ್ಗಿಸಲೆಂದು ಅವೈಜ್ಞಾನಿಕವಾಗಿ ಪ್ರಯತ್ನಪಡುತ್ತಿದ್ದರಂತೆ. ಈ ಕಾರಣಕ್ಕಾಗಿ ಅದೆಷ್ಟೋ ಕಂದಮ್ಮಗಳ ಪ್ರಾಣಕ್ಕೆ ಹೆತ್ತ ತಾಯಿಯರೇ ಎರವಾದದ್ದೂ ಇದೆ. ಅಂತಹ ಒಂದು ಊರಲ್ಲಿ ಸ್ತನ ತೆರಿಗೆಯನ್ನು ವಿರೋಧಿಸಿ ಹೊಸದಾಗಿ ಮದುವೆಯಾಗಿ ಬಂದ  ಕನಸುಗಣ್ಣಿನ ಕೆಳವರ್ಗದ ಹೆಣ್ಣಾದ ನಾಂಗೇಲಿ ಎನ್ನುವವಳು ತನ್ನ ಸ್ತನಗಳನ್ನು ಕತ್ತರಿಸಿ ತೆರಿಗೆ ನೀಡಿದ ಆಘಾತಕಾರಿ ಚರಿತ್ರೆಯಿದೆ. ಈ ಸಾಲುಗಳು ಅಂತ ಇತಿಹಾಸವನ್ನು ಕಣ್ಣೆದುರಿಗೆ ಹಾಯುವಂತೆ ಮಾಡುತ್ತವೆ. 

 

ಇನ್ನ ಸ್ವಪ್ರಚಾರ ಬಹಳ ಜನ ರೂಢಿ. ಏನೂ ಮಾಡದ ಕತ್ತೆಗೂ ವಯಸ್ಸಾಗುತ್ತದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ  ಪತ್ರಿಕೆಗಳಲ್ಲಿ ಫೋಟೋ ಹಾಕಿಸಿ ಸನ್ಮಾನ ಮಾಡಿಸಿಕೊಳ್ಳಯವುದು ಅದೆಷ್ಟು ಸರಿ? ಕೆಲವರಂತೂ ತಾವೇ ಹಣ ಕೊಟ್ಟು  ಬೇರೆಯವರ ಹೆಸರಿನಲ್ಲಿ ಪ್ರಕಟಣೆ ನೀಡುವುದನ್ನು ಕಾಣಬಹುದು.  ಅಂಥವರ ಮರ್ಮಕ್ಕೆ ತಾಗುವಂತೆ ಈ ಕವನವಿದೆ. 

ನಮ್ಮ ಶ್ರಾದ್ಧವನ್ನು 
ನಾವೇ ಮಾಡಿಕೊಳ್ಳುವುದೆಂದರೆ
ಐವತ್ತು ಅರವತ್ತು ಎಪ್ಪತ್ತು 
ಹೀಗೆ ವರ್ಷದ ಘಟ್ಟ ತಲುಪಿದಾಗೆಲ್ಲ 
ನಾವೇ ಚಿತ್ರಿಸಿಕೊಟ್ಟ ನಮ್ಮ 
ಕ್ಷೀರಾಭಿಷೇಕದ ಹೆಸರಿನಲ್ಲಿ ಪ್ರಕಟಿಸಿ 
ಬಹುಪರಾಕ ಹಾಕಿಸಿಕೊಳ್ಳುವುದು  (ಸ್ವಯಂ ಶ್ರಾದ್ಧ)
ಇದರ ಮುಂದಿನ ಸಾಲುಗಳೂ ವಿಡಂಬನಾತ್ಮಕವಾಗಿದ್ದು ನಮ್ಮನ್ನು ಒರೆಗೆ ಹಚ್ಚುತ್ತವೆ. 

 ಬರೆ ಎಂಬ ಕಥನ ಕವನ ಅತಿ ಹೆಚ್ಚು ಗಮನಸೆಳೆಯುವ ಕವನ. ಕುಡುಕ ಕರಿಗೌಡನ ಮನೆಗೆ ಬೆಂಕಿಬಿದ್ದಿದೆ. ಒಣಮೀನನ್ನಾದರೂ ಸುಟ್ಟು ಗಂಜಿ ಉಂಡರಾಯಿತೆಂದುಕೊಂಡ ತಾಯಿಯ ನಿರ್ಲಕ್ಷ ಅವಘಡಕ್ಕೆ ಕಾರಣ. ಎಲ್ಲವೂ ಸುಟ್ಟು ಬೂದಿಯಾಗಿದೆ. ಎಂಟನೆ ತರಗತಿ ಓದುತ್ತಿದ್ದ ಮಗನ ಪುಸ್ತಕಗಳೂ ಸಹ ಕರಕಲಾಗಿವೆ. ಸರಕಾರ ಒಂದಿಷ್ಟು ಪರಿಹಾರ ನೀಡಿದೆ. ಆದರೆ ಪ್ರತಿದಿನ ಹತಾನು ದುಡಿದಿದ್ದನ್ನು ಹೆಂಡದಂಗಡಿಗೆ ಹಾಕಿ ಹೆಂಡತಿಯ ದುಡಿಮೆಯಲ್ಲಿ ಬದುಕುವ ಕರಿಗೌಡ ಪರಿಹಾರದ ಹಣವನ್ನೂ ಎತ್ತಿಕೊಂಡು ಹೋಗಿ ಪಾಗಾರಕ್ಕೆ ಡಿಕ್ಕಿ ಹೊಡೆಯುವಷ್ಟು ಕುಡಿದಿದ್ದಾನೆ. ತೆಂಗಿನ ಗರಿ ಹೊದಿಸಿದ ಮಾಡಲ್ಲಿ ಈಗ ಮತ್ತದೆ ಬಡತನದ ಬದುಕು. ಎಲ್ಲಕ್ಕಿಂತ ಹೆಚ್ಚಾಗಿ ಶಾಲೆಗೆ ಹೋಗುವ ಹದಿನೈದರ ಬಾಲಕ ಉಪ್ಪಿನಾಗರದಲ್ಲಿ ಉರಿಬಿಸಿಲಿನಲ್ಲಿ ಕೆಲಸಕ್ಕೆ ಹೋಗುವಂತಾದ ಚಿತ್ರಣ ಎದೆ ಕಲಕುತ್ತದೆ. ಕಥನಕಾವ್ಯದ ಮತ್ತಿಷ್ಟು ಅಂಶಗಳನ್ನು ಒಳಗೊಂಡಿದ್ದರೆ ಈ ಕವನ ಅತ್ಯುತ್ತಮ ಎನ್ನಿಸುವ ಕವನಗಳ ಸಾಲಿನಲ್ಲಿ ಸೇರಿಬಿಡುತ್ತಿತ್ತು. ಅದೇ ಸಾಲಿಗೆ ಬುಲ್ ಬುಲ್ ತರಂಗ ಎಂಬ ಕವನವೂ ಸೇರಿಕೊಳ್ಳುತ್ತದೆ. ಸ್ಕೂಟರ್ ನಲ್ಲಿ ಗೂಡು ಕಟ್ಟಿದ ಬುಲ್ ಬುಲ್ ಹಕ್ಕಿಯ ಸಂಸಾರದ ಚಿತ್ರಣ ಕೊಡುವ ಈ ಕವನದ ಆರಂಭ ಅದ್ಭುತವಾಗಿದೆ. ರೂಪಕಗಳ ಅಳವಡಿಕೆ ಇನ್ನಷ್ಟು ಹೆಚ್ಚಿದ್ದರೆ ಇದೂ ಕೂಡ ಒಂದು ಒಳ್ಳೆಯ ಕಾವ್ಯವಾಗುತ್ತಿತ್ತು.

ಇಡಿ ಸಂಕಲನದಲ್ಲಿ ಅಲ್ಲಲ್ಲಿ ಮಿಂಚು ಹೊಡೆದಂತೆ ನಮ್ಮನ್ನು ಥಟ್ಟನೆ ಆವರಿಸಿಬಿಡುವ ಸಾಲು ಗುಚ್ಛಗಳನ್ನು ಕಾಣಬಹುದು. ಉದಾಹರಣೆಗೆ, 

ನಾಟಿ ಮಾಡಿದ ಸಸಿಗಳ ಪಾಡು 
ಜಲದೊಳಗಿನ ದುರ್ಯೋಧನ  (ನಿರ್ಯಾಣ)

ಈ ಸಾಲುಗಳನ್ನೇ ಗಮನಿಸಿ. ಪ್ರವಾಹದ ನೀರಲ್ಲಿ ಮುಳುಗಿದ ಸಸಿಗಳನ್ನು ಕವಿ ಅಂತ್ಯಕಾಲದಲ್ಲಿ ಜಲಸ್ಥಂಭನ ವಿದ್ಯೆಯಿಂದ ಸರೋವರದಲ್ಲಿ ಕುಳಿತ ದುರ್ಯೋಧನನಿಗೆ ಹೋಲಿಸುತ್ತಾರೆ. ಸರೋವರದಲ್ಲಿ ಮುಳುಗಿದ ದುರ್ಯೋದಸನ ಹೇಗೆ ಮೇಲೆ ಬಂದು ಪ್ರಾಣತ್ಯಾಗ ಮಾಡಿದನೋ ಈ ನಾಟಿ ಮಾಡಿದ ಸಸಿಗಳೂ ಕೂಡ ಪ್ರವಾಹದ ನೀರು ಇಳಿದು ಮೇಲೆ ಕಾಣಿಸಿದಾಗ ಕೊಳೆತು ಸತ್ತುಹೋಗುತ್ತವೆ. ಇಂತಹ ಸಾಲುಗಳು ಸಂಕಲನದ ತುಂಬ ಯಥೇಶ್ಚವಾಗಿ ಸಿಗುತ್ತವೆ. ಹಾಗೂ ಕವನದ ಓದನ್ನು ಇನ್ನಷ್ಟು ಮುದಗೊಳಿಸುತ್ತವೆ.

ಹೇಗೋ ಕಸರತ್ತು ಮಾಡಿ 
ಪರದೆಯ ಒಳಹೊಕ್ಕ ಸೊಳ್ಳೆ 
ಹೊರಬರಲಾರದೆ 
ಒದ್ದಾಡಿದರು ಒಳಗಿದ್ದ 
ಅಮಾಯಕನ ರಕ್ತ 
ಹೀರುವುದನ್ನು ಮಾತ್ರ 
ಮರೆಯಲಿಲ್ಲ

ಡಾ. ನಾಯಕ ಬಳಸುವ ರೂಪಕಗಳನ್ನು ಗಮನಿಸಬೇಕು. ಇಲ್ಲಿ ಸೊಳ್ಳೆಯನ್ನು ರೂಪಕವಾಗಿಟ್ಟುಕೊಂಡು ಸಮಾಜದ ಎಲ್ಲ ಅನಿಷ್ಟತೆಯನ್ನು ತೆರೆದಿಡುತ್ತಾರೆ. ರಕ್ತ ಹೀರುವ ಈ ವ್ಯವಸ್ಥೆಯನ್ನು ಮೊನಚಾಗಿ ತಿವಿಯುತ್ತಾರೆ. 

ಅತ್ಯುತ್ತಮ ಕವಿತೆ ಹೇಳಿರಬೇಕು ಎಂದು ಯಾರಾದರೂ ಕೇಳಿದರೆ ಏನು ಉತ್ತರ ಕೊಡಬಹುದು? ಒಳ್ಳೆಯ ಕವಿತೆ ಎನ್ನಲು ಮಾನದಂಡ ಯಾವುದು? ಗಣಗಳು, ಮಾತ್ರೆಗಳು ಎಲ್ಲವನ್ನೂ ಲೆಕ್ಕಾಚಾರ ಹಾಕಿ ನಿಯಮಬದ್ಧವಾಗಿ ಬರೆದರೆ ಅದು ಒಳ್ಳೆಯ ಕವಿತೆಯೆ? ಅಥವಾ ವಿಷಯವನ್ನು ಹೇರಳವಾಗಿ ನೀಡಿ ಗದ್ಯವನ್ನು ತುಂಡರಿಸಿದಂತೆ ಬರೆದರೆ ಅದು ಉತ್ತಮ ಕವಿತೆ ಆಗಬಹುದೇ? ಇದಕ್ಕೆ ನಿರ್ದಿಷ್ಟ ಉತ್ತರವನ್ನು ಯಾರಾದರೂ ಹೇಳಲು ಸಾಧ್ಯವೆ ಎನ್ನುವ ನನ್ನ ಪ್ರಾರಂಭದ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಈ ಸಂಕಲನವಿದೆ. ಹೊಸತನದ ರೂಪಕಗಳು ಹಾಗೂ ಕವನದ  ಪರಿಭಾಷೆಗಳು ನಮ್ಮನ್ನು ನಿಂತು ಮತ್ತೊಮ್ಮೆ ಓದುವಂತೆ ಒತ್ತಾಯಿಸುತ್ತವೆ. 

ಕವಿತೆ ಸುಮ್ಮನೆ 
ಹುಟ್ಟುವುದಿಲ್ಲ
ಅದೊಂದು ಅಮೂರ್ತ ಪ್ರಭೆ 
ಕಾವ್ಯ ಪರಾಗದ ಪಲ್ಲಕ್ಕಿಯಲಿ 
ಪವಡಿಸುವ ಭಾಗ್ಯ 
ಎಲ್ಲರಿಗೂ ಸಿಕ್ಕುವುದಿಲ್ಲ. 
ಡಾ. ಪ್ರಭಾಕರ ನಾಯಕರಿಗೆ ಈ ಭಾಗ್ಯ ಸಿಕ್ಕಿದೆ. ಕಾವ್ಯಕಟ್ಟುವ ಕುಸುರಿಯಲ್ಲಿ ಅವರು ಇನ್ನಷ್ಟು ತೊಡಗಿಸಿಕೊಳ್ಳಲಿ. 

ಶ್ರೀದೇವಿ ಕೆರೆಮನೆ

ಹಲವು ಮೊದಲುಗಳ ಎಡೋರಾ ಆಲಿಸ್ ವೆಲ್ಟಿ


ಹಲವು ಮೊದಲುಗಳ ಎಡೋರಾ ಆಲಿಸ್ ವೆಲ್ಟಿ
              ಅಮೇರಿಕಾದ ಪ್ರಸಿದ್ದ ಕಥೆಗಾರ್ತಿ ಹಾಗೂ ಕಾದಂಬರಿಕಾರ್ತಿಯಾದ ಎಡೋರಾ ಆಲಿಸ್ ವೆಲ್ಟಿ ಜನಿಸಿದ್ದು ಮಿಸ್ಸಿಸಿಪ್ಪಿಯ ಕಾಕಸನ್‌ನಲ್ಲಿ ೧೩ ಎಪ್ರಿಲ್ ೧೯೦೯ ರಂದು. ದಕ್ಷಿಣ ಅಮೇರಿಕಾದ ಕುರಿತು ಗಾಢ ಅನುಭವಗಳನ್ನು ದಾಖಲಿಸಿದ ಎಡೋರಾ ಒಳ್ಳೆಯ ಫೋಟೊಗ್ರಾಫರ್ ಎಂದೂ ಹೆಸರು ಪಡೆದವರು. ತಂದೆ ಕ್ರಿಶ್ಚಿಯನ್ ವೆಬ್ ವೆಲ್ಟಿ ವಿಮಾ ಕಾರ್‍ಯನಿರ್ವಾಹಕ ಹಾಗೂ ಆಧುನಿಕ ತಂತ್ರಜ್ಞಾನ, ಯಂತ್ರಗಳು ಹಾಗೂ ಗ್ಯಾಜೆಟ್‌ಗಳ ಬಗ್ಗೆ ಅಪಾರ ಕುತೂಹಲವಿರುವ ವ್ಯಕಿ ಜೊತೆಗೆ ಒಳ್ಳೆಯ ಛಾಯಾಚಿತ್ರಕಾರ ಕೂಡ.  ತಾಯಿ ಮೇರಿ ಚೆಸ್ಟಿನಾ ವೆಲ್ಟಿ  'ತಮ್ಮ ಮನೆಯ ಯಾವುದೆ ಕೊಠಡಿ ದಿನದ ಯಾವುದೇ ಸಮಯದಲ್ಲಾದರೂ ಓದಲು ತೆರೆದುಕೊಳ್ಳುವಂತಿರಬೇಕು' ಎಂದು ನಂಬಿದ್ದ ಶಿಕ್ಷಕಿಯಾಗಿದ್ದರಿಂದ ಚಿಕ್ಕಂದಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡ ಎಡೋರಾ ತಂದೆಯ ಯಂತ್ರ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ರೂಪಕವಾಗಿಟ್ಟುಕೊಂಡು ಬರೆದ ಕಥೆಗಳು ಹೊಸ ಜಗತ್ತಿನ ತಲ್ಲಣಗಳಿಗೆ ಉತ್ತರದಂತಿವೆ.
                  ಜಾಕ್ಸನ್ ಹಾಗೂ ಮಿಸ್ಸಿಸಿಪ್ಪಿಯಲ್ಲಿ ವಿದ್ಯಾಭ್ಯಾಸ ಮಾಡಿದ ಎಡೋರಾ ವಿಸ್ಕೋನ್‌ಸಿನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ತಂದೆಯ ಸಲಹೆಯಂತೆ ಜಾಹಿರಾತು ವಿಷಯದಲ್ಲಿ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದುಕೊಂಡರು.  ೧೧೧೯, ಫೈನ್‌ಹರ್ಸ್ಟ್ ಬೀದಿಯಲ್ಲಿ  ಅರಮನೆಯಂತೆ ವಿನ್ಯಾಸಗೊಳಿಸಿದ ಮನೆಗೆ ತನ್ನ ವಾಸವನ್ನು ಬದಲಿಸಿದ ನಂತರ ಅದು ಅವರ ಖಾಯಂ ವಿಳಾಸವಾಗಿತ್ತು.
   ನ್ಯೂಯಾರ್ಕನಲ್ಲಿ ಕೆಲಸ ಹುಡುಕಲು ಪ್ರಯತ್ನಿಸಿದರೂ ೧೯೩೧ರಲ್ಲಿ ತಂದೆಯ ಅನಿರೀಕ್ಷಿತ ಸಾವಿನಿಂದಾಗಿ ಜಾಕ್ಸನ್‌ಗೆ ಹಿಂದುರಿಗಿದ ಎಡೋರಾ ಅಲ್ಲಿನ ರೇಡಿಯೋ ಸ್ಟೇಶನ್‌ನಲ್ಲಿ ಕೆಲಸ ಪ್ರಾರಂಭಿಸಿದರು. ಜೊತೆಗೆ ಸ್ಥಳಿಯ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯಲಾರಂಭಿಸಿದರು. ವರ್ಕ್ಸ ಪ್ರೊಗ್ರೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಪ್ರಚಾರಕಿಯಾಗಿ ಕೆಲಸಕ್ಕೆ ಸೇರಿದ್ದರಿಂದ ಆ ಕಂಪನಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳನ್ನು ಸಂಗ್ರಹಿಸಬೇಕಾಯಿತು, ಕೆಲವು ಮುಖ್ಯವಾದ ಜನರ ಸಂದರ್ಶನ ಮಾಡಬೇಕಾಗಿತ್ತು, ಫೋಟೋಗಳನ್ನೂ ತೆಗೆದುಕೊಳ್ಳಬೇಕಾಗಿತ್ತು. ಹೀಗಾಗಿ ದಕ್ಷಿಣ ಭಾಗದ ಸಮಗ್ರ ಪರಿಚಯ ಹಾಗೂ ಚಿತ್ರಣ ಅವರಿಗೆ ದೊರಕಿತ್ತು. ಇವೆಲ್ಲವೂ ಅವರ ಕಥೆಗಳಲ್ಲಿ ಚಿತ್ರಿತವಾಗಿವೆ. ಅದೇ ಸಮಯದಲ್ಲಿ ತನ್ನ ಸಮಕಾಲೀನ ಬರಹಗಾರರ ಕೂಟವನ್ನೂ ಆಯೋಜಿಸುತ್ತಿದ್ದಳು. 'ರಾತ್ರಿ ಅರಳುವ ಪಾಪಾಸುಕಳ್ಳಿ' ಎಂದು ಆಕೆ ಆ ಕೂಟವನ್ನು ಕರೆಯುತ್ತಿದ್ದಳು. ಮೂರು ವರ್ಷಗಳ ನಂತರ ಬರವಣಿಗೆಯಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಆಕೆ ತನ್ನ ಕೆಲಸವನ್ನು ಬಿಟ್ಟರು.  
  ೧೯೩೯ರಲ್ಲಿ ಅವರ ಮೊದಲ ಕಥೆ 'ದಿ ಡೆತ್ ಆಫ್ ಅ ಟ್ರಾವೆಲಿಂಗ್ ಸೇಲ್ಸ್‌ಮನ್' ಪ್ರಕಟವಾಯಿತು. ನಂತರ ಹಲವಾರು ಪತ್ರಿಕೆಗಳಲ್ಲಿ ಅವರ ಕಥೆಗಳು ಪ್ರಕಟಗೊಳ್ಳುತ್ತಲೆ ಹೋದವು. ಅವರ ಮೊದಲ ಕಥಾ ಸಂಕಲನ 'ಎ ಕರ್ಟನ್ ಆಫ್ ಗ್ರೀನ್' ಪ್ರಕಟವಾಗುವ ಸಮಯಕ್ಕಾಗಲೇ ದಕ್ಷಿಣದ ಪ್ರಭಾವಶಾಲಿ ಕಥೆಗಾರ್ತಿ ಎಂದು ಗುರುತಿಸಲ್ಪಟ್ಟಿದ್ದರು. ತನ್ನ ಪುಸ್ತಕಕ್ಕಾಗಿ ಪಡೆದ ಫೆಲೋಶಿಪ್‌ನಿಂದಾಗಿ ಇಂಗ್ಲೆಂಡ್, ಪ್ರಾನ್ಸ್, ಈರ್ಲಾಂಡ್, ಜರ್ಮನಿ ಮುಂತಾದ ದೇಶಗಳಿಗೆ ಪ್ರವಾಸಕ್ಕೆ ಹೋದರು. ಕಾಂಬ್ರಿಜ್ ಹಾಗೂ ಆಕ್ಸಫರ್ಡ ವಿಶ್ವವಿದ್ಯಾಲಯಗಳಲ್ಲಿ ಕೆಲಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದರು. ಪೀಟರ್‌ಹೌಸ್ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಅನುಮತಿ ಪಡೆದ ಮೊಟ್ಟಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಈ ನಡುವೆ ಅವರ ಹಲವಾರು ಪುಸ್ತಕಗಳು ಪ್ರಕಟಗೊಂಡವು. ೧೯೭೧ರಲ್ಲಿ ಅವರ ಫೋಟೋಗಳ ಸಂಗ್ರಹವನ್ನು  'ಒನ್ ಟೈಮ್, ಒನ್ ಪ್ಲೇಸ್' ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು.  ಹಾವರ್ಡ ವಿಶ್ವವಿದ್ಯಾಲಯದಲ್ಲೂ ಉಪನ್ಯಾಸ ನೀಡಿದ ಹೆಗ್ಗಳಿಕೆ ಇವರದ್ದು.  
ಅಮೇರಿಕಾದ ದಕ್ಷಿಣ ಭಾಗದ ನುಡಿಗಟ್ಟುಗಳನ್ನು ತನ್ನ ಕಾದಂಬರಿ ಹಾಗೂ ಕಥೆಗಳಲ್ಲಿ ಯಥೇಶ್ಚವಾಗಿ ಬಳಸಿರುವ ಎಡೋರಾ ದಕ್ಷಿಣ ಭಾಗದ ರೂಪಕಗಳು, ಋಊಢಿಗತ ಆಚರಣೆಗಳು, ಆಚಾರ ವಿಚಾರಗಳು.  ಕೌಟುಂಬಿಕ ಸಂಬಂಧಗಳಲ್ಲಿರುವ ದ್ವೇಷ- ಅಸೂಯೆ ಹಾಗೂ ಪ್ರೀತಿಯನ್ನು ಯಥಾವತ್ತಾಗಿ ಚಿತ್ರಿಸಿದರು. ಪ್ರಮುಖ ಕಥೆಗಾರ್ತಿ ಎಂದು ಗುರುತಿಸಲ್ಪಟ್ಟರು.   ೧೯೪೨ರಲ್ಲಿ ಪ್ರಕಟಗೊಂಡ ಅವರ ಕಾದಂಬರಿ ದಿ ರಾಬರ್ ಬ್ರೈಡ್‌ಗ್ರೂಮ್ ಯಕ್ಷಿಣಿ ಕಥೆಗಳಂತೆ ತೋರುತ್ತಿದ್ದು ಅಮೇರಿಕಾದ ದಕ್ಷಿಣ ಭಾಗದ ಮೊಟ್ಟಮೊದಲ ಫೇರಿಟೇಲ್ ಬರವಣಿಗೆ ಎಂದು ಗುರುತಿಸಲ್ಪಟ್ಟಿದ್ದರೂ ಆಳದಲ್ಲಿ ಅದೂ ಕೂಡ ಮನುಷ್ಯ ಸಂಬಂಧಗಳ ಕುರಿತು ಮಾತನಾಡುತ್ತದೆ.                                                                                                                                                          
ಇವರ 'ಆಪ್ಟಿಮಿಸ್ಟ್ಸ್ ಡಾಟರ್' ( ಆಶಾವಾದಿಯ ಮಗಳು) ಕಾದಂಬರಿಗೆ ೧೯೭೩ರಲ್ಲಿ ಖ್ಯಾತ ಪುಲಿಟ್ಚರ್ ಪ್ರಶಸ್ತಿ ಲಭಿಸಿದೆ. ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಪ್ರೀಡಮ್ ಹಾಗೂ ಆರ್ಡರ್ ಆಫ್ ದಿ ಸೌತ್, ಓ ಹೆನ್ರಿ ಅವಾರ್ಡನಲ್ಲಿ ಎರಡನೆ ಸ್ಥಾನ ಹೀಗೆ ಹಲವಾರು ಖ್ಯಾತ ಪ್ರಶಸ್ತಿಗಳು ಇವರ ಬರವಣಿಗೆಯನ್ನು ಅರಸಿ ಬಂದಿವೆ. ೧೯೮೩ರಲ್ಲಿ ಹಾವರ್ಡ ವಿಶ್ವವಿದ್ಯಾಲಯವು ಅವರ ಭಾಷಣಗಳ ಸರಣಿಗಳನ್ನು ಸೇರಿಸಿ 'ಒನ್ ರೈಟರ್‍ಸ್ ಬಿಗಿನಿಂಗ್' ಎಂಬ ಹೆಸರಿನಲ್ಲಿ ಪ್ರಕಟಿಸಿದ ಪುಸ್ತಕಕ್ಕೆ ೧೯೮೪ರಲ್ಲಿ ನಾನ್‌ಫಿಕ್ಷನ್ ವಿಭಾಗದಲ್ಲಿ ನ್ಯಾಷನಲ್ ಬುಕ್ ಅವಾರ್ಡ' ಲಭಿಸಿತು. ೧೯೯೨ರಲ್ಲಿ ಜೀವಮಾನದ ಸಣ್ಣಕಥೆಗಳ ಬರವಣಿಗೆಗಾಗಿ ರಿಯಾ ಅವಾರ್ಡ ದೊರಕಿದೆ. ಲೈಬ್ರರಿ ಆಫ್ ಅಮೇರಿಕಾವು ಬದುಕಿರುವ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದವರಲ್ಲಿ ಮೊದಲಿಗಳು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಮಿಸ್ಸಿಸಿಪ್ಪಿಯ  ಜಾಕ್ಸನ್‌ನಲ್ಲಿರುವ ಇವರ ಮನೆಯನ್ನು ರಾಷ್ಟೀಯ ಐತಿಹಾಸಿಕ ಸ್ಥಳ ಎಂದು ಗುರುತಿಸಲಾಗಿದ್ದು ಸಾರ್ವಜನಿಕಋ ಮುಕ್ತ ಪ್ರವೇಶಕ್ಕೆ ಚಿಲ್ಲಿನ ಸರಕಾರ ಅನುವು ಮಾಡಿಕೊಟ್ಟಿದೆ.
ಲೋಕಧ್ವನಿ-೩                                     

Friday 24 June 2022

ಖಾಸಗಿ ವಿಷಯಗಳನ್ನೇ ಕಾದಂಬರಿಯ ವಸ್ತುವಾಗಿಸಿದ ಎಲಿಜಬೆತ್ ವಾನ್ ಅರ್ನಿಮ್

ಖಾಸಗಿ ವಿಷಯಗಳನ್ನೇ ಕಾದಂಬರಿಯ ವಸ್ತುವಾಗಿಸಿದ ಎಲಿಜಬೆತ್ ವಾನ್ ಅರ್ನಿಮ್


ಮೇರಿ ಆನೆಟ್ ಬ್ಯೂಚಾಂಪ್ ಎಂಬ ಹೆಸರು ಹೇಳಿದರೆ ಯಾರೂ ಗುರುತಿಸದಿದ್ದರೂ ಎಲಿಜಬೆತ್ ವಾನ್ ಆರ್ನಿಮ್ ಎಂದರೆ ಒಂದುಕ್ಷಣ ಇಂಗ್ಲೀಷ್ ಸಾಹಿತ್ಯದ ಅಧ್ಯಯನಿಗಳು ಕಣ್ಣರಳಿಸದೆ ಇರಲಾರರು. ಆಸ್ಟ್ರೇಲಿಯಾದಲ್ಲಿ ಹುಟ್ಟಿ ಜರ್ಮನ್ ಶ್ರೀಮಂತರನ್ನು ವಿವಾಹವಾಗಿ ಇಂಗ್ಲೀಷ್ ಸಾಹಿತ್ಯದಲ್ಲಿ ಹೆಸರು ಮಾಡಿದ ಎಲಿಜಬೆತ್ ವಾನ್ ಅರ್ನಿಮ್‌ರವರ ಸಾಹಿತ್ಯದ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ವಿಶಿಷ್ಟ ವೈಚಿತ್ರ್ಯಗಳಿಂದ ಕೂಡಿದೆ. ತನ್ನ ಮೊದಮೊದಲ ಬರವಣಿಗೆಯನ್ನು ಜರ್ಮನ್‌ಲ್ಲಿ ಪ್ರಾರಂಭಿಸಿದ ಎಲಿಜಬೆತ್ ವಾನ್ ಆರ್ನಿಮ್ ಜನಿಸಿದ್ದು 31ಆಗಸ್ಟ್ 1866 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ನಿರ್ದಿಷ್ಟವಾದ ಸ್ಥಳದ ಹೆಸರು ಗೊಂದಲದಲ್ಲಿದೆಯಾದರೂ ಆ ಸಮಯದಲ್ಲಿ ಅವಳ ಕುಟುಂಬವು ಸಿಡ್ನಿಯ ಕಿರಿಬಿಲ್ಲಿ ಪಾಯಿಂಟ್‌ನಲ್ಲಿರುವ ಪ್ರತಿಷ್ಠಿತ ಮನೆಯೊಂದರಲ್ಲಿ ವಾಸಿಸುತ್ತಿದ್ದರಿಂದ ಅದನ್ನೇ ಆಕೆಯ ಜನ್ಮಸ್ಥಳ ಎಂದು ಊಹಿಸಲಾಗಿದೆ. ಆಕೆಯ ತಂದೆ ಹೆನ್ರಿ ಹೆರಾನ್  ಬ್ಯೂಚಾಂಪ್ ಆಸ್ಟ್ರೇಲಿಯಾಕ್ಕೆ ವಲಸೆ ಹೋದ ಲಂಡನ್‌ನ ಒಬ್ಬ ಸುಸಂಸ್ಕೃತ ಮನೆತನದಲ್ಲಿ ಜನಿಸಿದ ವ್ಯಕ್ತಿ. ಸಿಡ್ನಿಯಲ್ಲಿ ಹಡಗು ವ್ಯಾಪಾರಿಯಾಗಿ ಅಪಾರ ಸಂಪತ್ತನ್ನು ಗಳಿಸಿದ ಹೆನ್ರಿ ಆಸ್ಟ್ರೇಲಿಯಾದಲ್ಲಿಯೇ ಹುಟ್ಟಿ ಬೆಳೆದ ಬ್ರಿಟಿಷ್ ಮೂಲದ ಎಲಿಜಬೆತ್ ವೈಸ್ ಲಾಸ್ಸೆಟರ್ ಎಂಬ ಯುವತಿಯನ್ನು ವಿವಾಹವಾದರು. ಇವರ ಒಟ್ಟೂ ಆರು ಮಕ್ಕಳಲ್ಲಿ  ಎಲಿಜಬೆತ್ ವಾನ್ ಆರ್ನಿಮ್ ಕಿರಿಯವಳು. ಆಕೆಗೆ ಮೂರು ವರ್ಷ ವಯಸ್ಸಾದಾಗ ಅವಳ ತಂದೆ ತಾಯಿ ಸಿಡ್ನಿಯನ್ನು ಬಿಟ್ಟು ಲಂಡನ್‌ನಲ್ಲಿ ವಾಸಿಸಲು ತೀರ್ಮಾನಿಸಿದರು. ಇಂಗ್ಲೆಂಡ್‌ನ ಸಂಸ್ಕೃತಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳು ಸಂಸ್ಕಾರವಂತರಾಗುತ್ತಾರೆಂಬ ನಂಬಿಕೆ ಅವರದ್ದಾಗಿತ್ತು.  ಹೀಗಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನಲ್ಲಿ ಇದ್ದ ಹೆನ್ರಿಯವರ ಇಬ್ಬರು ಸಹೋದರರಲ್ಲಿ ಒಬ್ಬರಾದ ಆರ್ಥರ್‌ರವರ ಮಗ ಹೆರಾಲ್ಡ್‌ಗೆ ತಮ್ಮ ಎಲ್ಲ ವ್ಯವಹಾರವನ್ನು ಒಪ್ಪಿಸಿ ತಮ್ಮ ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಲಂಡನ್ನಿಗೆ ಪ್ರಯಾಣ ಬೆಳಿಸಿದರು. ಆ ಸಮಯದಲ್ಲಿ ಕುಟುಂಬದವರಿಂದ 'ಮೇ' ಎಂದು ಕರೆಯಿಸಿಕೊಳ್ಳುತ್ತಿದ್ದ ಎಲಿಜಬೆತ್‌ಗೆ ಕೇವಲ ಮೂರು ವರ್ಷ ವಯಸ್ಸು. ಆಸ್ಟ್ರೇಲಿಯಾದಲ್ಲಿ ಇವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಹೆರಾಲ್ಡ್‌ರವರ ಮಗಳು ಕ್ಯಾಥರಿನ್ ಬ್ಯೂಚಾಂಪ್ ಮುಂದೆ ಕ್ಯಾಥರಿನ್ ಮ್ಯಾನ್ಸ್‌ಫೀಲ್ಡ್ ಎಂದು ಇಂಗ್ಲಿಷ್ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ ಲೇಖಕಿ.  ಮೇರಿ ಆರ್ನೆಟ್ ಬ್ಯೂಚಾಂಪ್ ಹೆಸರಿನ ಇವರು ಕುಟುಂಬದ ಮುದ್ದಿನ ಮೇ,  ನಂತರ ಎಲಿಜಬೆತ್ ವಾನ್ ಅರ್ನಿಮ್ ಎಂದು ಗುರುತಿಸಿಕೊಳ್ಳುವವರೆಗಿನ ಪಯಣ ಒಂದು ರೋಚಕ ಹಾದಿಯ ನಡಿಗೆ.

ಕೆಲವು ವರ್ಷ ಸ್ವಿಟ್ಜರ್ಲೆಂಡ್‌‌ನಲ್ಲಿ ಕಳೆದ ಬ್ಯೂಚಾಂಪ್ ಕುಟುಂಬ ನಂತರ ಇಂಗ್ಲೆಂಡಿಗೆ ಹಿಂದಿರುಗಿತಾದರೂ ಸ್ವಿಟ್ಜರ್ಲೆಂಡ್‌‌ನ ಮೋಹಕ ವಾತಾವರಣ ಎಳೆಯ ಮೇ ಮೇಲೆ ಅಗಾಧ ಪರಿಣಾಮ ಬೀರಿತು. ಅದು ಕೊನೆಯವರೆಗೂ ಆಕೆಯ ಸಾಹಿತ್ಯದ ಮೇಲೆ ತನ್ನ ಪ್ರಭಾವ ಬೀರಿತು. ಶಾಲೆಯಲ್ಲಿ ಬುದ್ಧಿವಂತ ಮಗು ಎನ್ನಿಸಿಕೊಂಡಿದ್ದ ಮೇ ಗೆ ಸಂಗೀತದಲ್ಲಿ ಎಲ್ಲಿಲ್ಲದ ಆಸಕ್ತಿ. ಹೀಗಾಗಿ ರಾಯಲ್   ಕಾಲೇಜ್ ಆಫ್ ಮ್ಯೂಸಿಕ್ನಲ್ಲಿ ಅಧ್ಯಯನ ನಡೆಸಿದಳು. ಅಲ್ಲಿಯ ಶಿಕ್ಷಕ ಸರ್ ವಾಲ್ಟರ ಪ್ಯಾರೆಟ್ ಇವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದನ್ನು ಎಲಿಜಬೆತ್ ನಂತರ ಹೇಳಿಕೊಂಡಿದ್ದಾರೆ. 

ಇಪ್ಪತ್ತೆರಡು ವರ್ಷದ ಮಗಳು ಇನ್ನೂ ವೈವಾಹಿಕ ಬಂಧನಕ್ಕೆ ಸಿಲುಕದ ಕುರಿತು ಹೆತ್ತವರು ಚಿಂತಿಸುತ್ತ ಯುರೋಪ ಪ್ರವಾಸವನ್ನು ಹಮ್ಮಿಕೊಂಡಿದ್ದಾಗ ರೋಮ್ ನಲ್ಲಿ ಮೇರಿ ಆನೆಟ್ ಬ್ಯೂಚಾಂಪ್ ಆಗಷ್ಟೇ ಹೆಂಡತಿಯನ್ನು ಕಳೆದುಕೊಂಡಿದ್ದ ಪ್ರಶ್ಯಾ ದೇಶದ ಗ್ರಾಫ್ ಹೆನ್ನಿಂಗ್ ವಾನ್ಅಅರ್ನಿಮ್-ಶ್ಲಾಜೆಂಟಿನ್ ಎಂಬ ಶ್ರೀಮಂತ ಕುಟುಂಬದ ವಿದುರನನ್ನು ಭೇಟಿಯಾದರು.  ಪ್ರತಿಭಾನ್ವಿತಳಾದ ಹಾಗೂ ಉತ್ಸಾಹಭರಿತ ಸುಂದರಿಯಿಂದ ಆಕರ್ಷಿತನಾಗಿದ್ದಷ್ಟೇ ಅಲ್ಲ ಅವಳ ಸಂಗೀತ ವಾದ್ಯಗಳ ನುಡಿಸುವಿಕೆಗೆ ಆತ ಮನಸೋತರು. ಅದಾದ ಎರಡು ವರ್ಷಗಳ ನಂತರ, ಫೆಬ್ರವರಿ 1891 ರಲ್ಲಿ ಇವರಿಬ್ಬರೂ ಲಂಡನ್ನಲ್ಲಿ ವಿವಾಹವಾದರು.  ಹೀಗಾಗಿ ಮೇರಿ ಆನೆಟ್ ಬ್ಯೂಚಾಂಪ್ ಮೇರಿ ಗ್ರ್ಯಾಫಿನ್ ವಾನ್ ಆರ್ನಿಮ್ ಆದರು.  ಜರ್ಮನ್ ಮತ್ತು ಫ್ರೆಂಚ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಮೇರಿ ಹಾಗೂ ಅವಳ ಗಂಡ  ಬರ್ಲಿನ್‌ನಲ್ಲಿ ಶ್ರೀಮಂತ ಜೀವನ ಪ್ರಾರಂಭಿಸಿದರು.  ಬಹುಬೇಗನೆ ಅವರಿಬ್ಬರಿಗೆ  ಮೂರು ಹೆಣ್ಣುಮಕ್ಕಳು ಜನಿಸಿದರು.  

 1896 ರ ರಲ್ಲಿ ನಾಸೆನ್‌ಹೈಡ್‌ನಲ್ಲಿರುವ ಕೌಂಟ್ ವಾನ್ ಅರ್ನಿಮ್‌ನ ಕಂಟ್ರಿ ಎಸ್ಟೇಟ್‌ಗೆ ಭೇಟಿ ನೀಡಿದಾಗ ಅವರ ಭವಿಷ್ಯವು ಶಾಶ್ವತವಾಗಿ ಬದಲಾಯಿತು. ಅವರು ಕುಟುಂಬದೊಂದಿಗೆ ಅಲ್ಲಿ ವಾಸಿಸಲು ತಕ್ಷಣವೇ ನಿರ್ಧರಿಸಿದರು.  ತನ್ನ ಕನಸಿನ  ಜರ್ಮನ್ ಗಾರ್ಡನ್‌ಗೆ ಅವರು ಬಂದಿದ್ದರು

 ಈ ಸಂದರ್ಭದಲ್ಲಿ ಅವರು ತನ್ನ ಮೊದಲ ಕಾದಂಬರಿ 'ಎಲಿಜಬೆತ್ ಆಂಡ್ ಹರ್ ಜರ್ಮನ್ ಗಾರ್ಡನ್' ಅನ್ನು ಬರೆದರು.  ಇದನ್ನು 1898 ರಲ್ಲಿ ಮ್ಯಾಕ್‌ಮಿಲನ್ ಸಂಸ್ಥೆಯಿಂದ ಪ್ರಕಟಿಸಿತು. ಮತ್ತು  ಆಕಾಲದಲ್ಲಿ ಅತ್ಯಂತ ವೇಗವಾಗಿ ಮಾರಾಟಗೊಂಡ  ಬೆಸ್ಟ್ ಸೆಲ್ಲರ್ ಪುಸ್ತಕವಾಗಿತ್ತು. ಈ ಪುಸ್ತಕ ಅವರ ಅದೃಷ್ಟದ ಬಾಗಿಲನ್ನು ತೆರೆಯಿತು. 
ಇದು  ಅವರ ಕುಟುಂಬದ ಎಸ್ಟೇಟ್‌ನಲ್ಲಿ ಉದ್ಯಾನವನ್ನು ರಚಿಸಲು ನಾಯಕಿ ಎಲಿಜಬೆತ್‌ನ ಹೋರಾಟಗಳು ಮತ್ತು ಜರ್ಮನ್ ನ ಶ್ರೀಮಂತ ಜಂಕರ್ ಸಮಾಜದಲ್ಲಿ ಅದು ವಿಫಲಗೊಳ್ಳುವುದನ್ನು ವಿವರಿಸುತ್ತದೆ. ಈ ಕಾದಂಬರಿಯಲ್ಲಿ ಅವರು ತನ್ನ ಗಂಡನನ್ನು "ದಿ ಮ್ಯಾನ್ ಆಫ್ ಕ್ರೋತ್" ಎಂಬ ಕಾಲ್ಪನಿಕ ಪಾತ್ರಕ್ಕೆ ಹೋಲಿಸಿದರು. 1899 ರ ಹೊತ್ತಿಗೆ ಆ ಕಾದಂಬರಿ ಇಪ್ಪತ್ತಕ್ಕೂ ಹೆಚ್ಚುಸಲ ಮರು ಮುದ್ರಣಗೊಂಡಿತು. 
ದಿ ಸೋಲಿಟರಿ ಸಮ್ಮರ್ (1899). ದಿ ಬೆನೆಫಾಕ್ಟ್ರೆಸ್ (1902), ದಿ ಅಡ್ವೆಂಚರ್ಸ್ ಆಫ್ ಎಲಿಜಬೆತ್ ಆನ್ ರುಗೆನ್ (1904), ವೆರಾ (1921), ಮತ್ತು ಲವ್ (1925) ನಂತಹ ಇತರ ಕೃತಿಗಳು ಸಹ ಅವರ ಅರೆ-ಆತ್ಮಚರಿತ್ರೆಯವುಗಳಾಗಿವೆ.

ನಂತರದ  ವರ್ಷಗಳಲ್ಲಿ  ಹೆಚ್ಚು ಹೆಚ್ಚು ಯಶಸ್ವಿ ಕಾದಂಬರಿಗಳನ್ನು ಬರೆದ ಮೇರಿ 'ಎಲಿಜಬೆತ್' ಆಗಿ, ಅವರು ಅಂತರರಾಷ್ಟ್ರೀಯ ಸಾಹಿತ್ಯಿಕ ಖ್ಯಾತಿಯನ್ನು ಗಳಿಸಿದರು. ಯಾಕೆಂದರೆ  ಅವರ ಕೃತಿಗಳಲ್ಲಿ ಸಾಮಾನ್ಯವಾಗಿ 'ಎಲಿಜಬೆತ್ ಮತ್ತು ಅವರ ಜರ್ಮನ್ ಗಾರ್ಡನ್  ಬರೆದ ಲೇಖಕರು' ಎಂದು ಉಲ್ಲೇಖಿಸುತ್ತಿದ್ದುದರಿಂದ ಎಲಿಜಬೆತ್‌ ಎಂಬುದು ಅವರ ಓದುಗರ ವಲಯವಷ್ಟೇ ಅಲ್ಲ ಅವಳ ಸ್ನೇಹಿತರು ಹಾಗೂ ಕುಟುಂಬದಲ್ಲಿಯೂ ಪ್ರಚಲಿತಗೊಂಡ ಹೆಸರಾಯಿತು. ನಂತರ ಕ್ರಿಸ್ಟಿನ್ ಎಂಬ ಕಾದಂಬರಿಗಾಗಿ 'ಆಲಿಸ್ ಚೋಲ್ಮಾಂಡೆಲಿ' ಎಂಬ ಗುಪ್ತನಾಮವನ್ನು ಬಳಸಿದರೂ  'ಎಲಿಜಬೆತ್' ಹೆಚ್ಚಿನವರಿಗೆ ತಿಳಿದಿರುವ ಹೆಸರಾಯಿತು.  ಹೀಗಾಗಿ ಮೇರಿ ಎಂಬ ಹೆಸರು ಹಿನ್ನಲೆಗೆ ಸರಿದು ಎಲಿಜಬೆತ್ ಆಗಿ  ಪ್ರಸಿದ್ದಿ ಪಡೆದರು. 


 ಅವರ ಅತ್ಯಂತ ಜನಪ್ರಿಯವಾದ ಕಾದಂಬರಿ  'ದಿ ಎನ್‌ಚ್ಯಾಂಟೆಡ್ ಏಪ್ರಿಲ್ (1922)', ಇದನ್ನು 1935 ರಲ್ಲಿ ಹ್ಯಾರಿ ಬ್ಯೂಮಾಂಟ್ ಮತ್ತು 1992ರಲ್ಲಿ ಮೈಕ್ ನೆವೆಲ್ ಚಲನಚಿತ್ರ ಮಾಡಿದರು. ಅವರ ಇತರ ಕಾದಂಬರಿಗಳನ್ನು ಸಹ ನಾಟಕಕ್ಕೆ ಅಥವಾ ಚಲನಚಿತ್ರಕ್ಕೆ ಬಳಸಿಕೊಳ್ಳಲಾಗಿದೆ;  ಎಲ್ಲವೂ ಗಮನಾರ್ಹ ಕೃತಿಗಳೇ ಆಗಿದ್ದರೂ ವೆರಾ (1921) ಮತ್ತು ಶ್ರೀ ಸ್ಕೆಫಿಂಗ್ಟನ್ (1940). ಹೆಚ್ಚು ಪ್ರಸಿದ್ದಿ ಪಡೆದಿವೆ. 
1910 ರಲ್ಲಿ ಅವರ ಪತಿ ಕೌಂಟ್ ವಾನ್ ಅರ್ನಿಮ್ ಅವರ ಮರಣದ ನಂತರ, ಅವರು ಮತ್ತು ಅವರ ಐದು ಮಕ್ಕಳು ಪ್ರಶ್ಯವನ್ನು ತೊರೆದರು. ಪದೇಪದೇ ಬೇರೆಬೇರೆ ದೇಶಗಳಿಗೆ ಹೋಗಿ ಉಳಿಯುತ್ತಿದ್ದ ಎಲಿಜಬೆತ್ ಗೆ ಸ್ವಾಭಾವಿಕವಾಗಿಯೇ  ಅನೇಕ ಸಾಹಿತ್ಯಿಕ ಮತ್ತು ಬೌದ್ಧಿಕ ವ್ಯಕ್ತಿಗಳ ಸ್ನೇಹವಿತ್ತು.  ಒಂದನೆ ವರ್ಡ್ ವಾರ್ ಗಿಂತ ಮೊದಲು ಎಚ್ ಜಿ ವೆಲ್ಸ್ ರವರೊಂದಿಗೆ ಸಂಬಂಧ ಪ್ರಾರಂಭವಾಗಿ ಅವರೊಂದಿಗೆ ಅವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರಾದರೂ ಆ ಸಂಬಂಧಕ್ಕೆ ಮದುವೆಯ ಯೋಗವಿರಲಿಲ್ಲ.  ಆದರೂ ಅವರಿಬ್ಬರೂ ಆಜೀವ ಸ್ನೇಹಿತರಾಗಿ ಉಳಿದರು.   

 1914 ರಲ್ಲಿ ಯುದ್ಧ ಪ್ರಾರಂಭವಾದ ನಂತರ, ಮೇರಿ ಆನೆಟ್ (ಎಲಿಜಬೆತ್) ವಾನ್ ಅರ್ನಿಮ್  ಬ್ರಿಟಿಷ್ ಪ್ರಜೆಯಾಗಬೇಕಾಯಿತು.  1916 ರಲ್ಲಿ, ಅವರು ಬರ್ಟ್ರಾಂಡ್ ರಸ್ಸೆಲ್ ಅವರ ಹಿರಿಯ ಸಹೋದರ ಅರ್ಲ್ ಫ್ರಾನ್ಸಿಸ್ ರಸ್ಸೆಲ್ ಅವರನ್ನು ವಿವಾಹವಾಗಿ  ಕೌಂಟೆಸ್ ರಸ್ಸೆಲ್ ಆದರು. ಆದರೆ ಅದೊಂದು  ದುರಂತದ ಮದುವೆ. ದಂಪತಿಗಳು ಮೂರು ವರ್ಷಗಳ ನಂತರ ಬೇರ್ಪಟ್ಟರು.  ಆದಾಗ್ಯೂ ಅವರು ಎಂದಿಗೂ ವಿಚ್ಛೇದನ ಪಡೆಯಲಿಲ್ಲ ಹೀಗಾಗಿ ಎಲಿಜಬೆತ್ ರನ್ನು ಎಲಿಜಬೆತ್ ಕೌಂಟೆಸ್ ರಸ್ಸೆಲ್ ಎಂದೂ ಕರೆಯಲಾಗುತ್ತಿತ್ತು.  ಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ತನ್ನ 16 ನೇ ವಯಸ್ಸಿನ ಕಿರಿಯ ಮಗಳು ಫೆಲಿಸಿಟಾಸ್ ಸೇರಿದಂತೆ ಹಲವಾರು ಸ್ನೇಹಿತರನ್ನು ಮತ್ತು ಕುಟುಂಬ ಸದಸ್ಯರನ್ನು ಕಳೆದುಕೊಳ್ಳಬೇಕಾಯಿತು. 

 1920 ರಲ್ಲಿ 'ಎಲಿಜಬೆತ್' ತನ್ನ ಮನೆಗೆ ಮರಳಿದರು. ಆಗಲೇ ಅವರಿಗೆ  ಆರೋಗ್ಯದ ಕಾರಣಗಳಿಗಾಗಿ ಮೊಂಟಾನಾದಲ್ಲಿ ತಂಗಿದ್ದ ತನ್ನ ಕಿರಿಯ ಸೋದರಸಂಬಂಧಿ  ಇಂಗ್ಲೀಷ್ ನ ಖ್ಯಾತ ಬರಹಗಾರ್ತಿ ಕ್ಯಾಥರೀನ್ ಮ್ಯಾನ್ಸ್‌ಫೀಲ್ಡ್ (1888 - 1923) ಜೊತೆ ಕಾಲ ಕಳೆಯಲು ಅವಕಾಶ ದೊರಕಿತು.

ಅದೇ ಸಂದರ್ಭದಲ್ಲಿ ಎಲಿಜಬೆತ್ ನ ಮನೆಯೊಳಗಿರುವ ವಿಶಾಲವಾದ ಪುಸ್ತಕ ಸಂಗ್ರಹ ನೋಡಲು ಪದೇ ಪದೇ ಬರುತ್ತಿದ್ದ  ಚಾಲೆಟ್ ಸೊಲೈಲ್ ನ ಯುವಕ  ಅಲೆಕ್ಸಾಂಡರ್ ಸ್ಟುವರ್ಟ್ ಫ್ರೆರೆ-ರೀವ್ಸ್ ರವರ ಪರಿಚಯ ಪ್ರಣಯಕ್ಕೆ ತಿರುಗಿತು. ಚಿಕ್ಕ ವಯಸ್ಸಿನ ಯುವಕನೊಂದಿಗಿನ ಸಂಬಂಧದ ಕುರಿತು ತೀವ್ರವಾದ ಚರ್ಚೆ ಕೂಡ ಆಗ ನಡೆದಿತ್ತು.  ನಂತರದ ದಿನಗಳಲ್ಲಿ ಫ್ರೆರೆ-ರೀವ್ಸ್ ಹೈನ್‌ಮನ್‌ನ ಅಧ್ಯಕ್ಷರಾದರು.



 1930 ರಲ್ಲಿ, ಬೆಚ್ಚಗಿನ ವಾತಾವರಣವನ್ನು ಬಯಸಿ,  ಫ್ರಾನ್ಸ್‌ನ ಮೌಗಿನ್ಸ್‌ನಲ್ಲಿರುವ ಮಾಸ್ ಡೆಸ್ ರೋಸಸ್‌ನಲ್ಲಿ ಮನೆ ಮಾಡಿಕೊಂಡ ಎಲಿಜಬೆತ್  ಒಂಬತ್ತು ವರ್ಷಗಳ ಕಾಲ ಅಲ್ಲಿ ಸುಂದರವಾದ ಹೂದೋಟ ಮಾಡಿಕೊಂಡು ನಾಯಿಗಳನ್ನು ಸಾಕಿಕೊಂಡು ಉಳಿದರು.  ಅವರ ಪುಸ್ತಕಗಳ ಸಂಗ್ರಹವನ್ನು ಕೂಡ ಮಾಸ್ ಡೆಸ್ ರೋಸಸ್‌ಗೆ ವರ್ಗಾಯಿಸಲಾಯಿತು.

  1939 ರಲ್ಲಿ ಯುದ್ಧದ ಬೆದರಿಕೆಯ ಕಾರಣದಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ಪಲಾಯನ ಮಾಡುವಂತೆ ಸರಕಾರ ಒತ್ತಾಯಿಸಿತು, ಅಲ್ಲಿ ಅವಳ ಇಬ್ಬರು ಪುತ್ರಿಯರು ಮತ್ತು ಮಗ ವಾಸಿಸುತ್ತಿದ್ದರು. ಆದರೆ ಅವಳ ಮೂರನೇ ಮಗಳು ಜರ್ಮನಿಯಲ್ಲಿ ಉಳಿಯಬೇಕಾಗಿತ್ತು.


ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದಾಗ ಅವರ  ಕೊನೆಯ ಕಾದಂಬರಿ, 'ಮಿಸ್ಟರ್ ಸ್ಕೆಫಿಂಗ್‌ಟನ್‌'  ಪ್ರಕಟಗೊಂಡಿತು. ಇದು ಅವರನ್ನು ಅಮೇರಿಕನ್ ಸಾಹಿತ್ಯ ಪ್ರಿಯರಲ್ಲಿ  ಜನಪ್ರಿಯಗೊಳಿಸಿತು.  

 ಅವರು 1941 ರಲ್ಲಿ ದಕ್ಷಿಣ ಕೆರೊಲಿನಾದಲ್ಲಿ ಮರಣಹೊಂದಿದರು. ಎರಡನೆಯ ಮಹಾಯುದ್ಧದ ಅಂತ್ಯದ ನಂತರ ಅವರ ಚಿತಾಭಸ್ಮವನ್ನು ಅವರ ಇಚ್ಛೆಗೆ ಅನುಗುಣವಾಗಿ ಅವರ ಸಹೋದರ ಸರ್ ಸಿಡ್ನಿ ಬ್ಯೂಚಾಂಪ್‌ ಚಿತಾಭಸ್ಮದ ಜೊತೆ  ಇಂಗ್ಲೆಂಡಿನ ಬಂಕಿಂಗ್ ಹ್ಯಾಮ್ ಶೈರ್ ನಲ್ಲಿರುವ  ಟೈಲರ್ ಗ್ರೀನ್ ನ ಸೇಂಟ್ ಮಾರ್ಗರೇಟ್ ಚರ್ಚ್ ನ ಚರ್ಚ್ ಯಾರ್ಡ್‌ನಲ್ಲಿ ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂಡು ಹೋದರು.  


  ಈಗ  ಕ್ಯಾಲಿಪೋರ್ನಿಯಾದ ಸಾನ್ ಮರಿನೋದ ಹಂಟಿಂಗ್ಟನ್ ಲೈಬ್ರರಿಯಲ್ಲಿ ಅವರ ಪುಸ್ತಕಗಳ ಕೆಲವು ಪ್ರತಿಗಳನ್ನು ಹಾಗೂ ಇನ್ನೂ ಕೆಲವು ಪುಸ್ತಕಗಳನ್ನು ಫ್ರಾನ್ಸ್ ನ ಟೌಲನ್ ವಿಶ್ವವಿದ್ಯಾನಿಲಯದ ಲೈಬ್ರರಿ ಸಂಗ್ರಹಗಳಲ್ಲಿ ಇರಿಸಲಾಗಿದೆ,

 
 1921 ರಲ್ಲಿ ಬರೆದ ಕಾದಂಬರಿ ವೆರಾ, ಅರ್ಲ್ ರಸ್ಸೆಲ್‌ನೊಂದಿಗಿನ ಅವಳ ವೈಪರಿತ್ಯ ವಿವಾಹ ಸಂಬಂಧದ ಮೇಲೆ ಚಿತ್ರಿಸಿದ ಡಾರ್ಕ್ ಟ್ರಾಜಿ-ಕಾಮಿಡಿ ವಿಮರ್ಶಾತ್ಮಕವಾಗಿ  ಅತಿ ಹೆಚ್ಚು ಮೆಚ್ಚುಗೆ ಪಡೆದ ಕೃತಿಯಾಗಿದೆ, ಇದನ್ನು ಜಾನ್ ಮಿಡಲ್‌ಟನ್ ಮರ್ರಿ "ಜೇನ್ ಆಸ್ಟೆನ್‌ನ ವುಥರಿಂಗ್ ಹೈಟ್ಸ್" ಗೆ ಹೋಲಿಸಿದ್ದಾರೆ.

  1922 ರಲ್ಲಿ ಬರೆದ  ದಿ ಎನ್‌ಚ್ಯಾಂಟೆಡ್ ಏಪ್ರಿಲ್,  ಅವರ ಕಾದಂಬರಿಗಳಲ್ಲಿ ಅತ್ಯಂತ ಉಲ್ಲಾಸದಾಯಕ ಕೃತಿ.  ಇದನ್ನು ಪದೇ ಪದೇ ನಾಟಕಗಳಿಗೆ ಮತ್ತು ಸಿನೆಮಾಕ್ಕೆ ಅಳವಡಿಸಿಕೊಳ್ಳಲಾಗಿದೆ: 1925 ರಲ್ಲಿ ಬ್ರಾಡ್‌ವೇ ನಾಟಕವಾಗಿ, 1935 ರ ಅಮೇರಿಕನ್ ಚಲನಚಿತ್ರ, 1992 ರಲ್ಲಿ ಅಕಾಡೆಮಿ ಪ್ರಶಸ್ತಿ-ನಾಮನಿರ್ದೇಶಿತ ಚಲನಚಿತ್ರ, ಟೋನಿ ಪ್ರಶಸ್ತಿ  2003 ರಲ್ಲಿ ನಾಮನಿರ್ದೇಶನಗೊಂಡ ರಂಗ ನಾಟಕ, 2010 ರಲ್ಲಿ ಸಂಗೀತ ನಾಟಕ, ಮತ್ತು 2015 ರಲ್ಲಿ BBC ರೇಡಿಯೋ 4 ನಲ್ಲಿ ಧಾರಾವಾಹಿ ಹೀಗೆ ಬಹಳಷ್ಟು ಪ್ರಸಿದ್ದಿ ಪಡೆದ ಹಾಗೂ ಪ್ರಶಸ್ತಿಗಳನ್ನು ಬಾಚಿಕೊಂಡ ಕಾದಂಬರಿ ಇದು. 

1940 ರಲ್ಲಿ ಬರೆದ ಮಿಸ್ಟರ್ ಸ್ಕೆಫಿಂಗ್ಟನ್ ಹಾಗೂ 1944 ರಲ್ಲಿ ಬರೆದ ವಾರ್ನರ್ ಬ್ರದರ್ಸ್ ಕಾದಂಬರಿಗಳು ಅಕಾಡೆಮಿ ಪ್ರಶಸ್ತಿಪಡೆದು ಚಲನಚಿತ್ರಗಳಾಗಿವೆ.  ತನ್ನ ಕಾದಂಬರಿಗಳಷ್ಟೇ ಪ್ರಣಯ ಹಾಗೂ ವಿವಾಹದ ವಿಷಯದಲ್ಲಿ ಚರ್ಚೆಗೆ ಒಳಪಡುತ್ತಿದ್ದ ಎಲಿಜಬೆತ್ ಸಾಹಿತ್ಯಪ್ರಿಯರ ಹಾಗೂ ಮಹಿಳಾ ಸ್ವಾತಂತ್ರ್ಯಪ್ರಿಯರ ಅಚ್ಚುಮೆಚ್ಚಿನ ಲೇಖಕಿ. 

 







   
 

Friday 17 June 2022

ಇಪ್ಪತ್ತನೆ ಶತಮಾನದ ಮೊದಲ ಸ್ತ್ರೀವಾದಿ ಲೇಖಕಿ- ಕೇಟ್ ಚಾಪಿನ್


ಇಪ್ಪತ್ತನೆ ಶತಮಾನದ ಮೊದಲ ಸ್ತ್ರೀವಾದಿ  ಲೇಖಕಿ- ಕೇಟ್  ಚಾಪಿನ್


ಅಮೇರಿಕಾನ್ ಆಂಗ್ಲ ಸಾಹಿತ್ಯದ ಅತ್ಯುತ್ತಮ ಸಣ್ಣ ಕಥೆಗಳ ಬರೆಹಗಾರ್ತಿ ಹಾಗೂ ಕಾದಂಬರಿಕಾರ್ತಿ ಎಂದು ಹೆಸರು ಮಾಡಿದ ಕೇಟ್ ಚಾಪಿನ್ ಇಪ್ಪತ್ತನೇ ಶತಮಾನದ ಕಾಥೋಲಿಕ್‌ನ ಸ್ರ್ತೀವಾದಿ ಲೇಖಕಿಯರಲ್ಲಿ ಅಗ್ರಮಾನ್ಯೆ ಎಂದು ವಿಮರ್ಶಕರಿಂದ ಗುರುತಿಸಿಕೊಂಡವಳು. 20ನೇ ಶತಮಾನದ  ಅಮೇರಿಕಾದ ಇಂಗ್ಲೀಷ್ ಸಾಹಿತ್ಯದಲ್ಲಿ ಇವಳ ಹೆಸರು ಮುಂಚೂಣಿಯಲ್ಲಿದೆ.
   ಅಮೇರಿಕಾದ ಮಿಸೋರಿಯ ಸೇಂಟ್ ಲೂಯಿಸ್‌ನಲ್ಲಿ 1851 ಫೆಬ್ರುವರಿ 8ರಂದು ಜನಿಸಿದ ಕೇಟ್ ಚಾಪಿನ್ ರವರ ಕೇಟ್ ತಂದೆ ಐರ್ಲೆಂಡ್‌ನ ಗಾಲ್ವೇಯಿಂದ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದ ಯಶಸ್ವಿ ಉದ್ಯಮಿಯಾಗಿದ್ದ ಥಾಮಸ್ ಓ'ಫ್ಲಾಹೆರ್ಟಿ ತಾಯಿ ಫ್ರೆಂಚ್ ಕೆನಡಾ ಮೂಲದ ಲೂಸಿಯಾನಾ ಕ್ರಿಯೋಲ್ ಅಥೆನೈಸ್ ಚಾರ್ಲೆವಿಲ್ಲೆ ಅವರ ಮಗಳಾದ ಎಲಿಜಾ ಫಾರಿಸ್. ಇವರು ಥಾಮಸ್ ರವರ ಎರಡನೇ ಪತ್ನಿ.  ಕೇಟ್ ತನ್ನ ತಂದೆ ಹಾಗೂ ತಾಯಿ ಐವರು ಮಕ್ಕಳಲ್ಲಿ ಮೂರನೆಯವಳಾಗಿದ್ದರೂ ಅವಳ ಸಹೋದರ ಸಹೋದರಿಯರು ಬಹಳ ಬೇಗನೆ ತೀರಿಕೊಂಡಿದ್ದರು. ಅಪ್ಪಟ ರೋಮನ್ ಕ್ಯಾಥೋಲಿಕ್ ಸಂಪ್ರದಾಯದಲ್ಲಿ ಬೆಳೆದ ಕೇಟ್ ಗೆ ಕಾಲ್ಪನಿಕ ಕಥೆಗಳೆಂದರೆ ಎಲ್ಲಿಲ್ಲದ ಆಸಕ್ತಿ. ಅದರಲ್ಲೂ ಧಾರ್ಮಿಕ ಕಥೆಗಳೆಂದರೆ ಹೆಚ್ಚು ಖುಷಿ.ಜೀಸಸ್ ನ  ಪವಾಡಗಳನ್ನು ಅತಿಯಾಗಿ ನಂಬುತ್ತಿದ್ದ ಕೇಟ್ ಆ ಕಾರಣಗಳಿಂದಲೇ ಈ ತರಹದ ರೋಚಕ ಕಥೆಗಳನ್ನು ಇಷ್ಟಪಡುತ್ತಿರಬಹುದು. ಇದರ ಜೊತೆಗೆ ಯಕ್ಷಿಣಿ ಕಾದಂಬರಿಗಳ ಆರಾಧಕಿಯಾಗಿದ್ದಳು.  ಐದನೇ ವಯಸ್ಸಿಗೇ ಆಕೆಯನ್ನು ಸೇಂಟ್ ಲೂಯಿಸ್ ನಲ್ಲಿರುವ ಸೇಕ್ರೆಡ್ ಹಾರ್ಟ್ ಅಕಾಡೆಮಿಗೆ ಕಳಿಸಲಾಯಿತು. ಸನ್ಯಾಸಿನಿಯಾಗುವ ಮೊದಲ ಹಂತದ ಶಿಕ್ಷಣವನ್ನು ಅಲ್ಲಿ ಪಡೆಯುತ್ತಿರುವಾಗಲೇ  ಅವಳ ತಂದೆ ಥಾಮಸ್ ಆಕಸ್ಮಿಕವಾಗಿ ನಿಧನ ಹೊಂದಿದರು. ಈ ಕಾರಣದಿಂದ ಅವಳನ್ನು ಮನೆಗೆ ವಾಪಸ್ ಕರೆಸಲಾಯಿತು . ಅಲ್ಲಿ ಆಕೆ ತನ್ನ ತಾಯಿ ಅಜ್ಜಿ ಹಾಗೂ ಮುತ್ತಜ್ಜಿ ಹೀಗೆ ಮೂರು ತಲೆಮಾರುಗಳ ಮರುಮದುವೆಯಾಗಲೊಪ್ಪದೆ ಆಧ್ಯಾತ್ಮಿಕ‌ ಜೀವನ ನಡೆಸುತ್ತಿರುವ ವಿಧವೆಯರೊಡನೆ ವಾಸಿಸತೊಡಗಿದಳು.  ಇದು ಕೇಟ್ ಇನ್ನಷ್ಟು ಈ ಪ್ರಪಂಚದ ಕುರಿತು ಯೋಚಿಸಲು  ಪ್ರೇರೇಪಿಸಿತು. ಇದೇ ಸಮಯದಲ್ಲಿ ಅವಳ ಮುತ್ತಜ್ಜಿ ವಿಕ್ಟೋರಿಯಾ ಚಾರ್ಲೆವಿಲ್ಲೆ ಸಮಾಜವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿದರು. ಗಾಸಿಪ್ ಗಳನ್ನು ಹೇಗೆ ಎದುರಿಸಬೇಕು ಹಾಗೂ ಈ ಸಮಾಜದ ಕಟ್ಟುಪಾಡುಗಳನ್ನು ಪಾಲಿಸುವುದನ್ನು ಹೇಳಿಕೊಟ್ಟಳು. ಇದರ ಜೊತೆಗೇ ಫ್ರೆಂಚ್ ಭಾಷೆ, ಸಂಗೀತ, ಇತಿಹಾಸ ಹೀಗೆ ಹಲವಾರು ವಿಷಯಗಳನ್ನು ಕಲಿತಳು. 
  ಎರಡು ವರ್ಷಗಳ ನಂತರ ಅಕಾಡೆಮಿಗೆ ಹಿಂದುರಿಗಿದ ಕೇಟ್ ಗೆ ಪದ್ಯ ಮತ್ತು ಗದ್ಯ ಎರಡರಲ್ಲೂ ಪ್ರಬುದ್ಧವಾಗಿ ಬರೆಯುತ್ತಿದ್ದ  ಪ್ರತಿಭಾನ್ವಿತ ಬರಹಗಾರ, ಓ'ಮಿಯಾರಾ ಗುರುವಾಗಿ ದೊರೆತರು. ತನ್ನ ವಿದ್ಯಾರ್ಥಿಗೆ ನಿಯಮಿತವಾಗಿ ಬರೆಯಲು, ತನ್ನ ಬರಹಗಳನ್ನು  ವಿಮರ್ಶಿಸಲು ಮತ್ತು ತನ್ನನ್ನು ತಾನು ಧೈರ್ಯದಿಂದ ನಡೆಸಿಕೊಳ್ಳಲು ಮಾರ್ಗದರ್ಶನ ನೀಡಿದರು.

ಜೂನ್ 8, 1870 ರಂದು ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಆಸ್ಕರ್ ಚಾಪಿನ್ ಅವರನ್ನು ವಿವಾಹವಾದರು. ಆಸ್ಕರ್ ತನ್ನ ಸ್ವಂತ ವ್ಯವಹಾರ, ಉದ್ದಿಮೆ ನಡೆಸುತ್ತಿದ್ದರು. ಇವರಿಬ್ಬರ ದಾಂಪತ್ಯಕ್ಕೆ ಆರು ಮಕ್ಕಳು. ಆಸ್ಕರ್ ವ್ಯವಹಾರದಲ್ಲಿ ದಿವಾಳಿಯೆದ್ದು ಊರು ಬಿಡುವ ಸ್ಥಿತಿ ನಿರ್ಮಾಣವಾಗಿ ದಕ್ಷಿಣ ನಾಚಿಟೋಚೆಸ್ ಪ್ಯಾರಿಷ್‌ನಲ್ಲಿರುವ ಕ್ಲೌಟಿಯರ್‌ವಿಲ್ಲೆಗೆ ತಮ್ಮ ವಾಸವನ್ನು ಬದಲಾಯಿಸಬೇಕಾಯಿತು. ಆದರೆ ಕೌಂಟರ್ ವಿಲ್ಲೆಯ ವಾತಾವರಣ ಕೇಟ್ ನ ಬರವಣಿಗೆಗೆ ಹತ್ತು ಹಲವು ವಿಷಯಗಳನ್ನು ಒದಗಿಸಿತು. ಆದರೆ 1881ರಲ್ಲಿ ಆಸ್ಕರ್ ಮರಣ ಹೊಂದಿದಾಗ ಅವಳ ತಲೆಯ ಮೇಲೆ ಅಪಾರವಾದ ಸಾಲವಿತ್ತು.  ನಂತರ ಕೇಟ್ ತನ್ನೂರಿನ ಹಲವಾರು ಯುವಕರೊಂದಿಗೆ ಅದರಲ್ಲೂ ಒಬ್ಬ ವಿವಾಹಿತ ರೈತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಕುರಿತು ರೋಚಕ ಕಥೆಗಳಿವೆ. 

ಕೇಟ್ ನ ತಾಯಿ ತನ್ನ ಮಗಳಿಗೆ ಸೇಂಟ್ ಲೂಯಿಸ್ ಗೆ ಹಿಂದಿರುಗಲು ಹೇಳಿದಳು . ಆದರೆ ಇವಳ ದೊಡ್ಡ ಕುಟುಂಬದ ನಿರ್ವಹಣೆ ನೋಡಿಕೊಳ್ಳುತ್ತಿದ್ದ ತಾಯಿ ಎರಡೇ ವರ್ಷಗಳಲ್ಲಿ ನಿಧನರಾದರು. ಪತಿಯ ಮರಣ, ವ್ಯಾಪಾರದ ನಷ್ಟ, ಮಕ್ಕಳ ಸ್ವೇಚ್ಛಾಚಾರ ಹಾಗೂ ತಾಯಿಯ ಮರಣಗಳ ಆಘಾತದಿಂದ ಕೇಟ್ ಖಿನ್ನತೆಗೆ ಜಾರಿದಳು. 

          ಕೇಟ್ ನ ಕುಟುಂಬದ ಸ್ನೇಹಿತ, ಹಾಗೂ ವೃತ್ತಿಯಲ್ಲಿ ವೈದ್ಯನಾಗಿದ್ದ ಡಾ. ಫ್ರೆಡೆರಿಕ್ ಕೊಲ್ಬೆನ್ಹೇಯರ್ ಕೇಟ್ ಗೆ ಬರವಣಿಗೆಯನ್ನು ಪುನರಾರಂಭಿಸಲು ಸಲಹೆ ನೀಡಿದರು, ಇದು ಅವಳ ಖಿನ್ನತೆಗೆ ಚಿಕಿತ್ಸೆಯಾಗಬಹುದು ಎಂದು ನಂಬಿದ್ದರು. ಬರವಣಿಗೆಯು ಅವಳ ಅಸಾಧಾರಣ ಶಕ್ತಿಯ ಕೇಂದ್ರಬಿಂದು ಮತ್ತು ಆದಾಯದ ಮೂಲವಾಗಬಹುದು ಎಂದು ಅವರು ಆಶಿಸಿದ್ದರು.


1890 ರ ದಶಕದ ಆರಂಭದ ವೇಳೆಗೆ, ಕೇಟ್ ಅವರ ಸಣ್ಣ ಕಥೆಗಳು, ಲೇಖನಗಳು ಮತ್ತು ಅನುವಾದಗಳು ಸೇಂಟ್ ಲೂಯಿಸ್ ಪೋಸ್ಟ್-ಡಿಸ್ಪ್ಯಾಚ್ ಪತ್ರಿಕೆ ಸೇರಿದಂತೆ ನಿಯತಕಾಲಿಕಗಳಲ್ಲಿ ಮತ್ತು ವಿವಿಧ ಸಾಹಿತ್ಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು. ಜಾನಪದ ಕಥೆಗಳನ್ನು ಒಳಗೊಂಡ ಬರವಣಿಗೆಯ ಶೈಲಿ ಎಲ್ಲರನ್ನೂ ಆಕರ್ಷಿಸಿತು. ಆಡುಭಾಷೆಯಲ್ಲಿರುವ ಅವರ ಕೃತಿಗಳು ಮತ್ತು ದಕ್ಷಿಣ ಭಾಗದ ಜನರ ಜಾನಪದ ಶೈಲಿಯ ಜೀವನದ ನಿರೂಪಣೆಗಳು ಮತ್ತು ಇತರ ಅಂಶಗಳು ಅವರ ಬರವಣಿಗೆಯ ತಾಕತ್ತು. ಆದರೆ ಅವರು ಸ್ಥಳೀಯ ವಿಷಯವನ್ನು ತಮ್ಮ ಬರವಣಿಗೆಯಲ್ಲಿ ಗಣನೀಯವಾಗಿ ಬಳಸಿದ್ದರಿಂದ ಕೆಲವು ವಿಮರ್ಶಕರು ಪ್ರಾದೇಶಿಕ ಬರಹಗಾರರೆಂದು ಟೀಕಿಸಿದ್ದೂ ಇದೆ.  

1899 ರಲ್ಲಿ, ಅವರ ಬಹು ಚರ್ಚಿತ  ಎರಡನೇ ಕಾದಂಬರಿ, ದಿ ಅವೇಕನಿಂಗ್  ಪ್ರಕಟಗೊಂಡಿತು. ವಿಮರ್ಶಕರು ಕಾದಂಬರಿಯನ್ನು ಅಷ್ಟಾಗಿ ಇಷ್ಟಪಡಲಿಲ್ಲ. ಮೊದಮೊದಲ ವಿಮರ್ಶೆ ಹೆಚ್ಚಾಗಿ ನಕಾರಾತ್ಮಕವಾಗಿತ್ತು. ಈ ಕಾದಂಬರಿಯ ಪಾತ್ರಗಳ ನಡವಳಿಕೆ ಅದರಲ್ಲೂ  ವಿಶೇಷವಾಗಿ ಮಹಿಳೆಯರ ವರ್ತನೆ ಅಂದಿನ ಸಾಂಪ್ರದಾಯಿಕ ಸಮಾಜದ ವಿರೋಧವನ್ನು ಎದುರಿಸಬೇಕಾಯಿತು.  ಹೆಣ್ಣು ಮತ್ತು ಲೈಂಗಿಕತೆ, ಮಾತೃತ್ವ ಮತ್ತು ದಾಂಪತ್ಯ ದ್ರೋಹದ ಪಾತ್ರಗಳು ಕೇಟ್ ನ ವ್ಯಕ್ತಿತ್ವದ ದ್ಯೋತಕ ಎಂದು ವಿಮರ್ಶಕರು ವ್ಯಂಗ್ಯವಾಡಿದರು.  

ಆದರೆ ನಂತರ ಈ ಕಾದಂಬರಿ, ಅವರ ಜೀವಮಾನದ ಅತ್ಯುತ್ತಮ ಕೃತಿ ಎಂದು ಕರೆಯಿಸಿಕೊಂಡಿದ್ದೂ ಒಂದು ವಿಸ್ಮಯ.  ದಬ್ಬಾಳಿಕೆಯ ಸಮಾಜದಲ್ಲಿ ಸಿಕ್ಕಿಬಿದ್ದ ಮಹಿಳೆಯ ಕಥೆಯಾಗಿದೆ. ಹಲವಾರು ದಶಕಗಳ ಕಾಲ ಈ ಕಾದಂಬರಿಯ ಮರು ಮುದ್ರಣಕ್ಕೆ ವಿರೋಧವಿದ್ದಾಗಲೂ1970 ರ ದಶಕದಲ್ಲಿ ಪ್ರಾರಂಭವಾದ ಸಾಮಾಜಿಕ ಹೊಸ ಅಧ್ಯಯನಗಳು ಮತ್ತು ಮಹಿಳಾ ಬರಹಗಳ ಕುರಿತು  ಮೆಚ್ಚುಗೆಯ ಅಲೆ ಇರುವಾಗ ಈ ಕಾದಂವರಿಯನ್ನು ಮರು ಓದಿಗೆ ಒಳಪಡಿಸಿದಾಗ ಇದರ ಮಹತ್ವದ ಅರಿವಾಯಿತು. ಸ್ತ್ರೀ ಸ್ವಾತಂತ್ರ್ಯ ಹಾಗೂ ಮಹಿಳೆಯರ ಮನೋ ಇಚ್ಛೆಗೆ ಬೆಲೆ ನೀಡಬೇಕಾದ ಹಿನ್ನಲೆಯನ್ನಿಟ್ಟುಕೊಂಡು ಓದಿದಾಗ ಈ ಕಾದಂಬರಿಯ ಮಹತ್ತಿನ ಅರಿವಾಯಿತು. ನಂತರದ ದಿನಗಳಲ್ಲಿ ಈ ಕಾದಂಬರಿಯು ಹಲವಾರು ಸಲ  ಮರುಮುದ್ರಣಗೊಂಡು ಎಲ್ಲ ಕಡೆಗಳಲ್ಲೂ ಲಭ್ಯವಿರುವ ಕಾದಂಬರಿ ಎನ್ನುವ ಹೆಗ್ಗಳ೮ಕೆ ಪಡೆಯಿತು.  ಅಮೇರಿಕಾದ ಆರಂಭಿಕ ಸ್ತ್ರೀವಾದಿ ಕೃತಿಯಾಗಿ ಹಾಗೂ ಅದರ ಬರವಣಿಗೆಯ ಶೈಲಿ ಮತ್ತು ಗುಣಮಟ್ಟದ ಪ್ರಾಮುಖ್ಯತೆಗಾಗಿ ಇದು ಇಂದಿಗೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ.
ದಿ ಅವೇಕನಿಂಗ್‌  ಹುಟ್ಟುಹಾಕಿದ ಹಗರಣಗಳಿಂದ ಮತ್ತು ಹಾಗೂ ಅದು ಜನರ ಮನ್ನಣೆ ಗಳಿಸಿಲ್ಲವೆಂದು  ಕೇಟ್ ತೀವ್ರವಾಗಿ ನಿರುತ್ಸಾಹಗೊಂಡರು, ಆದರೂ ತನ್ನ ಬರವಣಿಗೆಯನ್ನು ಮುಂದುವರೆಸಿ ತನ್ನ ಆಸಕ್ತಿಯನ್ನು ಸಣ್ಣ ಕಥೆಯ ಕಡೆಗೆ ತಿರುಗಿಸಿದರು. 

1900 ರಲ್ಲಿ, "ದಿ ಜಂಟಲ್‌ಮ್ಯಾನ್ ಫ್ರಮ್ ನ್ಯೂ ಓರ್ಲಿಯನ್ಸ್" ಪ್ರಕಟಗೊಂಡಿತು. . ಅದೇ ವರ್ಷ  ಮಾರ್ಕ್ವಿಸ್ ಹೂಸ್ ಹೂ ನ ಮೊದಲ ಆವೃತ್ತಿಯಲ್ಲಿ  ಕೇಟ್ ಹೆಸರು ಸೇರ್ಪಡೆಗೊಂಡಿತು.   ಇಷ್ಟಾದರೂ ಅವಳು ತನ್ನ ಬರವಣಿಗೆಯಿಂದ ಎಂದಿಗೂ ಹೆಚ್ಚು ಹಣವನ್ನು ಗಳಿಸಲಿಲ್ಲ. 

ಆಗಸ್ಟ್ 20, 1904 ರಂದು ಸೇಂಟ್ ಲೂಯಿಸ್ ವರ್ಲ್ಡ್ ಫೇರ್ ಗೆ ಭೇಟಿ ನೀಡಿದಾಗ, ಕೇಟ್ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದರು. ಅವರು ಎರಡು ದಿನಗಳ ನಂತರ  ಅಂದರೆ ಅಗಷ್ಟ್ 22 ರಂದು ತಮ್ನ 54 ನೇ ವಯಸ್ಸಿನಲ್ಲಿ ನಿಧನರಾದರು. ಸೇಂಟ್ ಲೂಯಿಸ್‌ನಲ್ಲಿರುವ ಕ್ಯಾಲ್ವರಿ ಸ್ಮಶಾನದಲ್ಲಿ ಅವರ ಸಮಾಧಿಯನ್ನು ಕಾಣಬಹುದು. 

ಕೇಟ್ ರವರ ಪ್ರಮುಖ ಕೃತಿಗಳು ಬೇಯು ಫೋಕ್ (1894) ಮತ್ತು ಎ ನೈಟ್ ಇನ್ ಅಕಾಡಿ (1897) ಎಂಬ ಎರಡು ಸಣ್ಣ ಕಥಾ ಸಂಕಲನಗಳು ಮತ್ತು   ಅಟ್ ಫಾಲ್ಟ್ (1890) ಮತ್ತು ದಿ ಅವೇಕನಿಂಗ್ (1899) ಎಂಬ ಎರಡು ಕಾದಂಬರಿಗಳು ಪ್ರಮುಖವಾದವು. ಆಕೆಯ ಪ್ರಮುಖ ಸಣ್ಣ ಕಥೆಗಳಲ್ಲಿ "ದೇಸಿರೀಸ್ ಬೇಬಿ" (1893), "ದಿ ಸ್ಟೋರಿ ಆಫ್ ಆನ್ ಅವರ್" (1894) ಮತ್ತು "ದಿ ಸ್ಟಾರ್ಮ್" (1898) ಪ್ರಮುಖವಾದವು. 

1899 ರಲ್ಲಿ ಪ್ರಕಟವಾದ ಆಕೆಯ ಕಾದಂಬರಿ ದಿ ಅವೇಕನಿಂಗ್ ತನ್ನ ಕಾಲಕ್ಕಿಂತಲೂ ಮುಂದಿನ ವಸ್ತುವನ್ನು ಒಳಗೊಂಡಿದೆ.  ಸಮಕಾಲೀನ  ಸಾಹಿತ್ಯ ಪ್ರಪಂಚ ಕೇಟ್ ಬರೆದ ಈ ವಸ್ತು ವಿಷಯವನ್ನು ಒಪ್ಪಿಕೊಳ್ಳುವ ಹಂತವನ್ನಿನ್ನೂ ತಲುಪಿರಲಿಲ್ಲ. ಹೀಗಾಗಿ ಈ ಕಾದಂಬರಿ ನಕಾರಾತ್ಮಕ ವಿಮರ್ಶೆಗಳನ್ನು ಎದುರಿಸಬೇಕಾಯಿತು. ದಿ ಅವೇಕನಿಂಗ್‌ನಲ್ಲಿರುವ  ಸ್ತ್ರೀ ಪಾತ್ರಗಳು ಆ ಕಾಲದ ಸಾಮಾಜಿಕ  ಮಾನದಂಡಗಳನ್ನೆಲ್ಲ ಮೀರಿ ವರ್ತಿಸುತ್ತವೆ. ನಾಯಕ ತನ್ನ ಲೈಂಗಿಕ ಬಯಕೆಗಳನ್ನೂ ಮೀರಿ  ತಾಯ್ತನದ ಪಾವಿತ್ರ್ಯವನ್ನು ಪ್ರಶ್ನಿಸುತ್ತ ಹೆಣ್ಣಿನ ಮನದಾಳದ ಭಾವನೆಗಳಿಗೆ ಹೊಸ ಆಯಾಮ ಕೊಡುತ್ತಾನೆ.  

  ವಿವಾಹದಾಚಿಗಿನ ಸಂಬಂಧವನ್ನು ಈ ಕಾದಂಬರಿಯು ಹೆಣ್ಣಿನ ದೃಷ್ಟಿಕೋನದಿಂದ ಹೇಳುತ್ತ ಹೋಗುತ್ತದೆ.  ಮಹಿಳೆಯರ  ಆಯ್ಕೆಯ ಸ್ವಾತಂತ್ರ್ಯವನ್ನೂ ಇದು ಪ್ರತಿಪಾದಿಸುತ್ತದೆ.  
ಮಾರ್ಥಾ ಕಟ್ಟರ್ ಅವರ ಲೇಖನ, "ದಿ ಸರ್ಚ್ ಫಾರ್ ಎ ಫೆಮಿನೈನ್ ವಾಯ್ಸ್ ಇನ್ ದಿ ವರ್ಕ್ಸ್ ಆಫ್ ಕೇಟ್ ಚಾಪಿನ್",  ಕೇಟ್ ರವರ ಅನೇಕ ಕಥೆಗಳಲ್ಲಿನ ಸ್ತ್ರೀ ಪಾತ್ರಗಳನ್ನು ವಿಶ್ಲೇಷಿಸುತ್ತದೆ. ಮಹಿಳೆಯರ " ಗುಪ್ತವಾದ ಮತ್ತು ಇಲ್ಲಿಯವರೆಗೆ  ಕೇಳಿರದ ಲೈಂಗಿಕತೆ" ಎಂದು  ದಿ ಅವೇಕನಿಂಗ್‌ ನ ಎಡ್ನಾ ಪಾತ್ರವನ್ನು ಉಲ್ಲೇಖಿಸಿ ಹೇಳಲಾಗಿದೆ. ಕೇಟ್ ಅವರ ಬರವಣಿಗೆಯು ಅದರ ಲೈಂಗಿಕ ಗುರುತುಗಳು ಮತ್ತು ಸ್ತ್ರೀಯರ ಬಯಕೆಗಳ ಅಭಿವ್ಯಕ್ತಿ ಈ ಕಾದಂಬರಿಯಲ್ಲಿ ಆಘಾತ ಹುಟ್ಟಿಸುವಂತೆ ಚಿತ್ರಿಸಲಾಗಿದೆ 

ಆದರೆ ಇಂದಿಗೂ, ದಿ ಅವೇಕನಿಂಗ್  ಅಮೆರಿಕಾದಾದ್ಯಂತ ಇರುವ  ಸಾಹಿತ್ಯ ಕೋರ್ಸ್‌ಗಳಲ್ಲಿನ ಐದು ಪ್ರಮುಖ ಕಾದಂಬರಿಗಳಲ್ಲಿ ಒಂದಾಗಿದೆ ಎಂಬುದನ್ನು ಮರೆಯುವಂತಿಲ್ಲ

Friday 10 June 2022

ಕವಿತೆಯ ಮೂಲಕ ಬಾಲಕಾರ್ಮಿಕ ನಿಷೇಧದ ಕಾನೂನಿಗೆ ಸಹಕರಿಸಿದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್




 ಕವಿತೆಯ ಮೂಲಕ ಬಾಲಕಾರ್ಮಿಕ ನಿಷೇಧದ ಕಾನೂನಿಗೆ ಸಹಕರಿಸಿದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್

 

        ವಿಕ್ಟೋರಿಯನ್ ಯುಗದ ಪ್ರಸಿದ್ಧ ಕವಿಯತ್ರಿಯಾದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ತನ್ನ ಹನ್ನೊಂದನೆ ವಯಸ್ಸಿನಲ್ಲಿಯೇ ಕವನ ಬರೆಯಲು ಪ್ರಾರಂಭಿಸಿ ಬ್ರಿಟನ್ ಹಾಗೂ ಅಮೇರಿಕಾಗಳಲ್ಲಿ ಪ್ರಸಿದ್ಧಿ ಹೊಂದಿದ್ದರು. ಎಡ್ವರ್ಡ್ ಬ್ಯಾರೆಟ್ ಮೌಲ್ಟನ್ ಹಾಗೂ ಮೇರಿ ಗ್ರಹಾಂ ಕ್ಲರ್ಕ್‌ನ ಹನ್ನೆರಡು ಜನ ಮಕ್ಕಳಲ್ಲಿ ಹಿರಿಯವಳಾಗಿ ೧೮೦೬ ಮಾರ್ಚ ೬ರಂದು ಇಂಗ್ಲೆಂಡಿನ ಕೌಂಟಿ ಡರ್ಹಾಮ್‌ನ ಕೆಲ್ಲೋ ಗ್ರಾಮದ ಕಾಕ್ಸ್‌ಹೋ ಹಾಲ್‌ನಲ್ಲಿ ಜನಿಸಿದರು. ಹನ್ನೆರಡೂ ಮಕ್ಕಳಿಗೆ ಒಂದೊಂದು ಅಡ್ಡಹೆಸರಿನಿಂದ ತಂದೆ ತಾಯಿ ಕರೆಯುತ್ತಿದ್ದರು. ಎಲಿಜಬೆತ್ ತಂದೆ ತಾಯಿಯರ ಪಾಲಿಗೆ ಮುದ್ದಿನ 'ಬಾ' ಆಗಿದ್ದರು. ಬಾಲ್ಯದಿಂದಲೇ ವಿಶಿಷ್ಟ ಮಗುವಾಗಿದ್ದ ಎಲಿಜಬೆತ್ ನಾಲ್ಕನೆ ವಯಸ್ಸಿಗೇ ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಆರನೆ ವಯಸ್ಸಿನಲ್ಲಿ ದೊಡ್ಡದೊಡ್ಡ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಎಂಟನೆ ವಯಸ್ಸಿನಲ್ಲಿಯೇ ಅಲೆಕ್ಸಾಂಡರ್ ಪೋಪ್ ಇಂಗ್ಲೀಷ್‌ಗೆ ಭಾಷಾಂತರಿಸಿದ ಹೊಮೆರಿಕ್ ಪೋಯೆಮ್‌ಗಳನ್ನು ಇಷ್ಟಪಟ್ಟು ಓದುತ್ತಿದ್ದರು. ಹತ್ತನೆ ವಯಸ್ಸಿನಲ್ಲಿ ಗ್ರೀಕ್ ಭಾಷೆಯನ್ನು ಕಲಿತರು. ಹನ್ನೊಂದನೆ ವಯಸ್ಸಿಗೆ ತನ್ನನ್ನು ತುಂಬ ಪ್ರಭಾವಿಸಿದ ಹೋಮೆರಿಕ್ ಕವಿತೆಗಳ ರೀತಿಯಲ್ಲಿ ಎಪಿಕ್‌ಗಳನ್ನು ಬರೆಯಲಾರಂಭಿಸಿದರು. ಹದಿನೈದನೆ ವಯಸ್ಸಿನಿಂದ ಜೀವನಪರ್ಯಂತ ತಲೆನೋವು ಹಾಗೂ ಬೆನ್ನು ಮೂಳೆಯ ನೋವನ್ನು ಅನುಭವಿಸಿದ ಎಲಿಜಬೆತ್‌ಗೆ ಸದಾ ಆರೋಗ್ಯ ಕೈ ಕೊಡುತ್ತಲೇ ಇತ್ತು. ಹೀಗಾಗಿ ಸದಾ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಲಿಜಬೆತ್ ನೋವು ನಿವಾರಕ ಔಷಧವನ್ನು ಅತಿಯಾಗಿ ಸೇವಿಸಿದ್ದರಿಂದಾಗಿ ಅದರ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಯಿತು. ನಂತರದ ದಿನಗಳಲ್ಲಿ ಶ್ವಾಸಕೋಶದ ತೊಂದರೆಗೆ ಒಳಗಾದಳು. ಬಹುಶಃ ಅದು ಕ್ಷಯರೋಗವಿದ್ದರೂ ಇರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರೂ ನಿಖರವಾಗಿ ಹೇಳಿರಲಿಲ್ಲ.

          ಅನಾರೋಗ್ಯದ ಕಾರಣದಿಂದಾಗಿ ಎಲಿಜಬೆತ್ ಮನೆಯಲ್ಲಿಯೇ ಶಿಕ್ಷಣವನ್ನು ಪಡೆಯಬೇಕಾಯಿತು. ಮನೆಯ ಪಾಠಶಾಲೆಯಲ್ಲಿಯೇ ಹಲವಾರು ಭಾಷೆಗಳನ್ನು ಅಭ್ಯಸಿಸಿದರು. ಹನ್ನೊಂದನೆ ವಯಸ್ಸಿನಲ್ಲಿ ಹೊಮೆರಿಕ್ ಎಪಿಕ್ ಶೈಲಿಯಲ್ಲಿ 'ದಿ ಬ್ಯಾಟಲ್ ಆಫ್ ಮ್ಯಾರಾಥಾನ್- ಎ ಪೋಯೆಮ್' ಕೃತಿಯನ್ನು ಬರೆದಳಾದರೂ ಅದು ಪ್ರಕಟವಾಗಿದ್ದು ೧೮೨೦ರಲ್ಲಿ. ಅವಳ ತಾಯಿಎಲಿಜಬೆತ್ ಬಿ ಬ್ಯಾರೆಟ್ ಎಂಬ ಹೆಸರಿನಿಂದ ಪ್ರಕಟಿಸಿದರು. ತನ್ನ ಮಗಳು ಕವನ ಬರೆಯುವುದನ್ನು ತುಂಬ ಹೆಮ್ಮೆಯಿಂದ ಹೇಲಿಕೊಳ್ಳುತ್ತಿದ್ದ ತಂದೆ ಅವರನ್ನು 'ಪೋಯೆಟ್ ಲಾರೆಟ್ ಆಫ್ ಹೋಪ್ ಎಂಡ್' ಎಂದೇ ಕರೆಯುತ್ತಿದ್ದರು. 

          ೧೬೫೫ರಿಂದಲೂ ಜಮೈಕಾದಲ್ಲಿ ಆಫ್ರಿಕನ್ ಗುಲಾಮರನ್ನು ಹೊಂದಿದ್ದ ಭೂಮಾಲಿಕರಾಗಿದ್ದ ಬ್ಯಾರೆಟ್ ಕುಟುಂಬ ಬಹುದೊಡ್ಡ ಆಸ್ತಿಯನ್ನು ಹೊಂದಿತ್ತು. ಎಲಿಜಬೆತ್ ತಂದೆ ಎಡ್ವರ್ಡ್ ಬ್ಯಾರೆಟ್ ಹತ್ತು ಸಾವಿರ ಎಕರೆಗಳಷ್ಟು ಭೂಮಿಯನ್ನು ಹೊಂದಿದ್ದ. ಎಲಿಜಬೆತ್ ತಾಯಿಯ ಅಜ್ಜ ಕೂಡ ಸಕ್ಕರೆ ಕಂಪನಿ, ಗಿರಣಿ ಹಾಗೂ ಮುಖ್ಯವಾಗಿ ಜಮೈಕಾ ಹಾಗೂ ನ್ಯೂಕ್ಯಾಸಲ್ ನಡುವೆ ಗಾಜಿನ ಸಾಮಾನುಗಳ ಮಾರಾಟಕ್ಕಾಗಿ ಹಡಗುಗಳನ್ನು ಹೊಂದಿದ ಶ್ರೀಮಂತನಾಗಿದ್ದ. ತಾಯಿ ಮೇರಿ ಗ್ರಹಂ ಕ್ಲರ್ಕ್ ಕೂಡ ವೆಸ್ಟ್ ಇಂಡಿಸ್‌ನಲ್ಲಿ ಹಲವಾರು ತೋಟಗಳನ್ನು ಹೊಂದಿದ್ದರು. ಆದರೆ ಎಲಿಜಬೆತ್ ತಂದೆ ಎಡ್ವರ್ಡ್ ತಮ್ಮ ಮಕ್ಕಳನ್ನು ಇಂಗ್ಲೆಂಡಿನಲ್ಲಿ ಬೆಳೆಸಲು ಆಶಿಸಿದ್ದರಿಂದ ಅವರೆಲ್ಲರೂ ಅಲ್ಲಿಗೆ ಸ್ಥಳಾಂತರಗೊಂಡರು. ಅತ್ಯಂತ ಶ್ರೀಮಂತ ಮನೆತನದಲ್ಲಿ ಜನಿಸಿದ್ದರೂ ಎಲಿಜಬೆತ್ ತನ್ನ ಕುಟುಂಬದ ಸದಸ್ಯರ ಹಾಗೂ ಸಹೋದರ ಸಹೋದರಿಯರ ದರ್ಪ ಅಹಂಕಾರಗಳಿಂದ ಹೊರತಾಗಿ ಯಾವತ್ತೂ ಪುಸ್ತಕದಲ್ಲಿ ಮುಳುಗಿರುತ್ತಿದ್ದರು. ಕುಟುಂಬವು ಪಾಲಿಸುತ್ತಿದ್ದ ಗುಲಾಮಿ ಪದ್ದತಿ ಹಾಗೂ ಮಕ್ಕಳನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವ ರೀತಿ ಅವರಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಕುಟುಂಬವು ದೌಲತ್ತಿನಲ್ಲಿ ಮೆರೆಯುತ್ತಿದ್ದಾಗ ಇವರ ಮಹತ್ವಾಕಾಂಕ್ಷೆಯ ಹಾಗೂ ೧೯೦೦ರಲ್ಲಿ ಇಪ್ಪತ್ತೂ ಹೆಚ್ಚು ಸಲ ಪುನರ್‌ಮುದ್ರಣವನ್ನು ಕಂಡ ಆಕೆಯ ಕೃತಿ ಅರೋರಾ ಲೀ ೧೮೫೬ರಲ್ಲಿ ಪ್ರಕಟಗೊಂಡಿದ್ದು ಆಕೆಯ ಸೂಕ್ಷ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ.

   ಸ್ವತಃ ಭೂಮಾಲಿಕ ಕುಟುಂಬದ ಎಲಿಜಬೆತ್  ಗುಲಾಮಿ ಪದ್ದತಿಯನ್ನು ತೀವ್ರವಾಗಿ ವಿರೋಧಿಸುತ್ತ ಗುಲಾಮಿಗಿರಿಯ ವಿರುದ್ಧ ವ್ಯಾಪಕ ಪ್ರಚಾರ ಮಾಡಿದರು. ಬಾಲಕಾರ್ಮಿಕ ಪದ್ದತಿಯನ್ನು ತೀಕ್ಷ್ಣವಾಗಿ ವಿರೋಧಿಸುತ್ತ ಬಾಲಕಾರ್ಮಿಕ ಶಾಸನದ ಸುಧಾರಣೆಗಾಗಿ ಹಲವಾರು ಕೆಲಸಗಳನ್ನು ಹಮ್ಮಿಕೊಂಡರು. ೧೮೪೨ರಲ್ಲಿ ಪ್ರಕಟವಾದ 'ದಿ ಕ್ರೈಂ ಆಫ್ ದಿ ಚಿಲ್ಡ್ರನ್' ಎಂಬ ಕವಿತೆಯಲ್ಲಿ ಬಾಲಕಾರ್ಮಿಕರ ಸ್ಥಿತಿಯನ್ನು ಮನಮುಟ್ಟುವಂತೆ ವಿವರಿಸಿ ಅದನ್ನು ವಿರೋಧಿಸಿದರು. ಈ ಕವಿತೆಯು ಲಾರ್ಡ್ ಶಾಫ್ಟ್ಸ್‌ಬರಿಯ ಹತ್ತು ಗಂಟೆಗಳ ಕಾಲ ಚರ್ಚಿತಗೊಂಡ ಮಸೂದೆಗೆ ಬೆಂಬಲ ಹೆಚ್ಚಾಗುವಂತೆ ಮಾಡಿತಲ್ಲದೆ ಬಾಲ ಕಾರ್ಮಿಕ ನೀತಿಗೆ ಸುಧಾರಣೆಯನ್ನು ತರಲು ಸಹಕಾರಿಯಾಯಿತು.  'ದಿ ಕ್ರೈ ಆಫ್ ದಿ ಚಿಲ್ಡ್ರನ್' ಎಂಬ ಚಲನಚಿತ್ರ ಕೂಡ ಇವರ ಕೃತಿ ಆಧರಿಸಿ ಹೊರಬಂದಿದೆ.

       ೧೮೩೮ರಲ್ಲಿ ತನ್ನ ಮೊದಲ ಪ್ರೌಢಕವನಗಳ ಸಂಕಲನವನ್ನು ಪ್ರಕಟಿಸಿದ ಎಲಿಜಬೆತ್‌ರನ್ನು ೧೮೪೦ ರಲ್ಲಿ ಜಾನ್ ಕೆನ್ಯಾನ್ ಎಂಬ ಅವರ ಸಂಬಂಧಿಯೋರ್ವ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ. ೧೮೪೧ರಿಂದ ೧೮೪೪ರವರೆಗೆ ಅವರ ಸಾಹಿತ್ಯದ ಉತ್ಕೃಷ್ಟ ಕಾಲ. ಈ ಸಮಯದಲ್ಲಿ ಅವರು ತಮ್ಮ ಜೀವಿತಾವಧಿಯ ಅತ್ಯುತ್ತಮ ಕವಿತೆಗಳನ್ನು, ಗಧ್ಯಗಳನ್ನು ಹಾಗೂ ಅನುವಾದಗಳನ್ನು ಬರೆದರು. ೧೮೪೪ರಲ್ಲಿ ಅವರಿಗೆ ಹೆಸರು ತಂದುಕೊಟ್ಟ ಕವನಗಳ ಸಂಪುಟ ಪ್ರಕಟಗೊಂಡಿತು. ಈ ಸಂಕಲನವು ರಾಬರ್ಟ ಬ್ರೌನಿಂಗ್‌ರನ್ನು ಬಹುವಾಗಿ ಆಕರ್ಷಿಸಿತು. 'ಹೃದಯಾಂತರಾಳದಿಂದ ನಾನು ನಿಮ್ಮನ್ನು ಹಾಗೂ ನಿಮ್ಮ ಕವನಗಳನ್ನು ಪ್ರೀತಿಸುತ್ತೇನೆ' ಎಂಬ ಬ್ರೌನಿಂಗ್‌ರ ಪ್ರೇಮ ನಿವೇದನೆಯನ್ನು ಎಲಿಜಬೆತ್ ಒಪ್ಪಿಕೊಂಡರು.

          ಶ್ರೀಮಂತ ತಂದೆಗೆ ತಾನು ರಾಬರ್ಟ್ ಬ್ರೌನಿಂಗ್‌ರನ್ನು ಪ್ರೀತಿಸಿದ್ದು ಹಾಗೂ ಮದುವೆಯಾಗಲು ಬಯಸಿದ್ದು ಇಷ್ಟವಾಗುವುದಿಲ್ಲವೆಂಬುದು ಎಲಿಜಬೆತ್‌ರಿಗೆ ತಿಳಿದಿತ್ತು. ಹೀಗಾಗಿ ರಹಸ್ಯವಾಗಿ ರಾಬರ್ಟ್ ಬ್ರೌನಿಂಗ್‌ರನ್ನು ವಿವಾಹವಾದರು. ವಿವಾಹದ ನಂತರವೂ ಎಲಿಜಬೆತ್‌ರ ತಂದೆ ತಮ್ಮ ಮಗಳ ಪ್ರೀತಿಯನ್ನು ಹಾಗೂ ಮದುವೆಯನ್ನು ಒಪ್ಪಿಕೊಳ್ಳಲಿಲ್ಲ. ೧೮೪೬ರಲ್ಲಿ ಎಲಿಜಬೆತ್ ಹಾಗೂ ರಾಬರ್ಟ್ ಇಟಲಿಗೆ ತೆರಳಿ ಕೊನೆಯವರೆಗೂ ಅಲ್ಲಿಯೇ ಉಳಿದುಬಿಟ್ಟರು. ಇವರ ದಾಂಪತ್ಯದ ಕುರುಹಾಗಿ 'ಪೆನ್' ಎಂದು ಮುದ್ದಿನಿಂದ ಕರೆಯಿಸಿಕೊಳ್ಳುವ  ರಾಬರ್ಟ ವೈಡ್‌ಮನ್ ಬ್ಯಾರೆಟ್ ಬ್ರೌನಿಂಗ್ ಎಂಬ ಅದ್ಭುತ ಚಿತ್ರಕಾರನಾದ ಮಗನಿದ್ದನು. ಆಮ್‌ಸ್ಟ್ರಾಂಗ್ ಬ್ರೌನಿಂಗ್ ಲೈಬ್ರರಿಯಲ್ಲಿ ಇಂದಿಗೂ ಅವರ ಚಿತ್ರಗಳ ಅತಿದೊಡ್ಡ ಸಂಗ್ರಹವಿದೆ.

      ಮದುವೆಯ ನಂತರ ಎಲಿಜಬೆತ್ ಹಾಗೂ ರಾಬರ್ಟ್‌ರ ಬರವಣಿಗೆಗಳಲ್ಲಿ ಅಗಾಧ ಬದಲಾವಣೆಗಳನ್ನು ಕಾಣಬಹುದೆಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಪರಸ್ಪರ ಪೂರಕವಾಗಿ ತಮ್ಮ ಜೀವಮಾನದ ಶ್ರೇಷ್ಠ ಕೃತಿಗಳನ್ನು ಇವರಿಬ್ಬರೂ ರಚಿಸಿದರು. ಪತಿಯ ಒತ್ತಾಸೆಯ ಮೇರೆಗೆ ತಾನು ತುಂಬ ಇಷ್ಟಪಡುವ ಸಾನೆಟ್‌ಗಳನ್ನೊಳಗೊಂಡ ಎರಡನೆ ಸಂಕಲನವನ್ನು ಎಲಿಜಬೆತ್ ಪ್ರಕಟಿಸಿದರು.

೧೮೬೧ ಜೂನ್ ೨೯ರಂದು ಪ್ಲಾರೆನ್ಸಸನಲ್ಲಿ ಎಲಿಜಬೆತ್

       ವಿಕ್ಟೋರಿಯನ್ ಯುಗದಲ್ಲಿ ವರ್ಡ್‌ವರ್ತ್‌ನ ನಿಧನದ ನಂತರ ಟೆನ್ನಿಸನ್‌ಗೆ ಪ್ರತಿಸ್ಪರ್ಧಿಯಂತೆ ಬರವಣಿಗೆಯಲ್ಲಿ ತೊಡಗಿಸಿಕೊಂಡ ಎಲಿಜಬೆತ್ ಅಮೇರಿಕಾದ ಖ್ಯಾತ ಕವಿಗಳಾದ ಎಡ್ಗರ್ ಅಲೆನ್ ಪೋ ಹಾಗೂ ಎಮಿಲಿ ಡಿಕನ್‌ಸನ್ ಮುಂತಾದ ಹಲವಾರು ಯುವ ಬರಹಗಾರರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. 'ನಾನು ನಿನ್ನನ್ನು ಹೇಗೆ ಪ್ರೀತಿಸುತ್ತೇನೆ' ಎಂಬ ಕವಿತೆಯ ಮೂಲಕ ಇಂದಿಗೂ ಸಾಹಿತ್ಯ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಜಾಗವನ್ನು ಪಡೆದಿದ್ದಾರೆ 


ನಾನು ನಿನ್ನನ್ನು ಹೇಗೆ ಪ್ರೀತಿಸುತ್ತೇನೆ?

ನನಗೆ ಆ ದಾರಿಗಳನ್ನು ಎಣಿಸಲು ಬಿಡು

ನಾನು ನಿನ್ನನ್ನು ಅತೀವ ಆಳದಿಂದ

ಅಷ್ಟೇ ವಿಸ್ತಾರವಾಗಿ ಮಹೋನ್ನತವಾಗಿ ಪ್ರೀತಿಸುತ್ತೇನೆ

ನನ್ನ ಅಸ್ತಿತ್ವದ ಕೊನೆಯವರೆಗೆ,

ಆದರ್ಶದ ಅನುಗ್ರಹ ಇರುವವರೆಗೆ

ನನ್ನ ಭಾವನೆಗಳು ನಿನ್ನನ್ನು ತಲುಪುವಂತೆ

ಆತ್ಮದ ಸಾಂಗತ್ಯವಿರುವಂತೆ

ಸೂರ್‍ಯನ ಪ್ರಖರತೆ ಹಾಗೂ ಮೋಂಬತ್ತಿಯ ಪ್ರಶಾಂತತೆಯಂತೆ

ಪ್ರತಿದಿನವೂ ಗಾಢವಾಗಿ ನಿನ್ನನ್ನು ಪ್ರೀತಿಸುತ್ತೇನೆ

 

ಲೋಕಧ್ವನಿ-ಕೆರೆದಂಡೆ-೬  ಶ್ರೀದೇವಿ ಕೆರೆಮನೆ 

Wednesday 8 June 2022

ನಮ್ಮೊಳಗಿನ ಮಗುತನವ ಮತ್ತೆ ತುಂಬಿಸಿಕೊಳ್ಳಲು

ನಮ್ಮೊಳಗಿನ ಮಗುತನವ ಮತ್ತೆ ತುಂಬಿಸಿಕೊಳ್ಳಲು
ಅಂಕಣ ಸಿರಿಸಂಪತ್ತು- ಈ ನಗರವಾಣಿ ಪತ್ರಿಕೆ

ಪುಸ್ತಕ- ನಾವು ಭಾರತೀಯರು
ಲೇ- ಮೌಲಾಲಿ ಕೆ. ಅಲಗೂರ


 ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಹಿರಿಯರ ಸಾಹಿತ್ಯವನ್ನು ಬರೆದಂತೆ ಕ್ಲಿಷ್ಟ ಪದಗಳನ್ನು ಬರೆದು ಸಾಹಿತ್ಯ ರಚನೆ ಮಾಡಿದೆವು ಎನ್ನುವಂತಿಲ್ಲ. ಇಲ್ಲಿ ಮಕ್ಕಳೇ ಮೊದಲ ಓದುಗರಾದ್ದರಿಂದ ಅವರ ಮಟ್ಟಕ್ಕೆ ಇಳಿದು ಸಾಹಿತ್ಯವನ್ನು ರಚಿಸಬೇಕಾಗುತ್ತದೆ. ಆದರೆ ಮಕ್ಕಳ ಮಟ್ಟಕ್ಕೆ ಇಳಿದು ಬರೆಯುವುದು ಓದುವುದು, ವ್ಯವಹರಿಸುವುದು ಸುಲಭದ ಮಾತಲ್ಲ. ಬೆಳೆಯುತ್ತ ಹೋದಂತೆ ನಾವು ನಮ್ಮ ಎಳೆತನವನ್ನೆಲ್ಲ ಕಳೆದುಕೊಂಡು ಬಿಡುತ್ತೇವೆ. ಮನದೊಳಗಿನ ಮುಗ್ಧತೆ ಮಾಯವಾಗಿ ಯಾವ ವಿಷಯದ ಬಗೆಗೂ ಕುತೂಹಲ ತೋರದೆ ಮುಗುಂ ಆಗಿ ಇದ್ದು ಬಿಡುವುದನ್ನೆ ಪ್ರೌಢತೆ ಎಂದು ತಿಳಿದುಕೊಂಡು ಮುಖವನ್ನು ಬಿಮ್ಮಿಸಿಕೊಳ್ಳುವ ಈ ಕಾಲದಲ್ಲಿ ಮಕ್ಕಳ ಸಾಹಿತ್ಯದ ಓದು ಅತಿ ಅವಶ್ಯಕ. ಅಂತಹುದ್ದೊಂದು ಆಸಕ್ತಿಕರವಾದ ಓದಿಗೆ ನಿಲುಕುವುದು ಮೌಲಾಲಿ ಕೆ ಅಲಗೂರರವರು ಬರೆದಿರುವ 'ನಾವು ಭಾರತೀಯರು' ಎನ್ನುವ ಶಿಶುಗೀತೆಗಳ ಸಂಕಲನ.
     ಮಕ್ಕಳ ಸಾಹಿತ್ಯವನ್ನು ರಚಿಸುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯಿದೆ. ಅದಕ್ಕೆ ಕಾರಣವೇನೆಂದರೆ ಬೆಳೆದಂತೆಲ್ಲ ನಾವು ನಮ್ಮ ಮಗುತನವನ್ನು ಕಳೆದುಕೊಳ್ಳುವುದು. ಆದರೆ ಮಕ್ಕಳ ಕವಿತೆಗಳನ್ನು ಓದುವುದು ಅಥವಾ ಬರೆಯುವುದರಿಂದ ನಾವು ಮತ್ತೆ ಬಾಲ್ಯದ ನೆನಪುಗಳಿಗೆ ಜಾರಬಹುದು. ಅಷ್ಟೇ ಅಲ್ಲ, ನಮ್ಮೊಳಗಿರುವ ಮಗುವನ್ನು ಪುನಃ ಮುನ್ನಲೆಗೆ ತಂದುಕೊಳ್ಳಬಹುದು. ನಮ್ಮೊಳಗೆ ಇರುವ ಮಗುತನವನ್ನು ಎಚ್ಚರಿಸುವುದೆಂದರೆ ನಾವು ನಮ್ಮೆಲ್ಲ ಕೆಡಕುಗಳನ್ನು ಮರೆತು ಸರ್ವರನ್ನೂ ನಮ್ಮವರನ್ನಾಗಿಸಿಕೊಳ್ಳುವುದು. ಮಕ್ಕಳಿರುವಾಗ ಯಾರಿಗೂ ಇವರು ಅನ್ಯರು, ಪರರು ಎನ್ನುವ ಬೇಧಭಾವ ಬರುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಒಳ್ಳೆಯ ಗುಣವಿರುತ್ತದೆ.  ಆದರೆ ಮಗು ಬೆಳೆದಂತೆ ಈ ಸಮಾಜ ಅದರೊಳಗೆ ಕೆಡಕುಗಳನ್ನು ತುಂಬಲು ಪ್ರೇರೇಪಿಸತೊಡಗುತ್ತದೆ. ಹೀಗಾಗಿಯೆ ಮಗುವಾಗಿಯೆ ಉಳಿಯಲು ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ.

ಶ್ರೇಷ್ಠ ಜೀವಿ ಮಾನವ ನಿನಗೇಕೆ
ಅಸಮಾನತೆಯ ಬೇರು
ದೀನ ಹೀನ ಹಂಗು ತೊರೆದು
ಒಗ್ಗಟ್ಟು ಸಾರು

ಎನ್ನುತ್ತ ಎಲ್ಲರನ್ನು ಒಂದಾಗಿಸಿಕೊಳ್ಳುತ್ತಾರೆ. ಮಾನವ ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಠ ಎನ್ನಿಸಿಕೊಂಡಿದ್ದಾನೆ. ಬುದ್ಧಿಯನ್ನು ಬಳಸಬಲ್ಲ, ಅವಕಾಶಗಳನ್ನು ತನ್ನೆಡೆಗೆ ತಿರುಗಿಸಿಕೊಳ್ಳ ಬಲ್ಲ, ಪ್ರಕೃತಿಯನ್ನೇ ತನಗೆ ಬೇಕಾದಂತೆ ರೂಢಿಸಿಕೊಳ್ಳಬಲ್ಲ ಛಾತಿಯುಳ್ಳ ಪ್ರಾಣಿ. ಆದರೆ ತಮ್ಮ ತಮ್ಮೊಳಗೆ ಅಸಮಾನತೆಯನ್ನು ಹುಟ್ಟು ಹಾಕಿಕೊಂಡು ಎಲ್ಲರನ್ನು ದ್ವೇಷಿಸುತ್ತ ಬದುಕುತ್ತಿದ್ದಾನೆ. ಬಡವರನ್ನು ದೀನರನ್ನು ಕಂಡರೆ ಹೀಯಾಳಿಸಿ ಅವರನ್ನು ಮುಟ್ಟಿಸಿಕೊಳ್ಳದವರು ಎಂಬಂತೆ ಕಾಣುತ್ತಾನೆ. ಆದರೆ ಇದೆಲ್ಲವನ್ನು ತೊರೆದು ಒಗ್ಗಟ್ಟು ಸಾರಬೇಕಾದ ಅಗತ್ಯವನ್ನು ಕವಿ ಒತ್ತಿ ಹೇಳುತ್ತಾರೆ.
    ಇಂದಿನ ಭಾರತದ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ. ಎಲ್ಲೆಲ್ಲೂ ನಿರುದ್ಯೋಗ. ಕೋಮುವಾದ, ಜಾತಿ ಜಾತಿಗಳ ನಡುವೆ ವೈಷಮ್ಯ, ತಮ್ಮ ತಮ್ಮ ಧರ್ಮಗಳ ಶ್ರೇಷ್ಠತೆಯನ್ನು ಹೇಳುತ್ತ ಉಳಿದ ಧರ್ಮಗಳು ಕೀಳು ಎಂದು ಬಿಂಬಿಸುತ್ತ, ಬೇರೆ ಧರ್ಮದವರು ಕಂಡರೆ ಕತ್ತಿ ಮಸೆಯುವುದನ್ನು ಕಂಡಾಗ ಮಕ್ಕಳು ಮುಂದೆ ಇರಬೇಕಾದ ಈ ನೆಲದ ಕಲುಷಿತತೆಯ ಬಗ್ಗೆ ಆತಂಕವಾಗುತ್ತದೆ. ಹೀಗಾಗಿಯೇ
ಭವ್ಯ ಭಾರತ ಇದುವೇ
ಧರೆಯ ಮುತ್ತಿನ ಮುಕುಟ
ಎಲ್ಲಾ ಜನಾಂಗಿಯರನ್ನು  ಹೊತ್ತ
ಸಹಬಾಳ್ವೆಯ ತೋಟ
ಎನ್ನುತ್ತ ಕವಿ ಭಾರತ ಹೇಗಿರಬೇಕು ಎಂಬುದನ್ನು ಸೂಚಿಸುತ್ತಾರೆ. ಸಂಕಲನದ ಮೊದಲಿನ ಕವಿತೆಗಳು ಸೌಹಾರ್ದತೆ, ಸಹಬಾಳ್ವೆಯ ಕುರಿತಾಗಿದೆ.ಕೋಮುದ್ವೇಷವನ್ನು ಬಿಟ್ಟು ಎಲ್ಲರೂ ಸಹೋದರರಂತೆ ಬಾಳುವ ಕವಿಯ ಕನಸು ಈ ಕವನಗಳಲ್ಲಿ ಪ್ರತಿಫಲಿತವಾಗುತ್ತದೆ.  


ಮತ ಪಥಗಳು ಬೇಡ ನಮಗೆ
ನಾವೆಲ್ಲ ಭಾರತೀಯರು
ಹಿಂದು ಮುಸ್ಲಿಂ ಕ್ರೈಸ್ತ ಬೌದ್ಧ
ಇಲ್ಲಿ ಸಕಲರೂ ಸಮಾನರು

ಮಕ್ಕಳಿರುವಾಗ ಎಲ್ಲರನ್ನು ಸಮಾನವಾಗಿ ನೋಡುವುದನ್ನು ಕಲಿಸದೆ ಹೋದರೆ ಮುಂದೆ ಆ ಮಗು ಮನುಷ್ಯನಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ತಾನೇ ಶ್ರೇಷ್ಠ ಎಂದು ಮೆರೆದವರ್‍ಯಾರೂ ಜನಮಾನಸದಲ್ಲಿ ಉಳಿಯುವುದಿಲ್ಲ. ಎಲ್ಲರೊಂದಿಗೆ ಹೊಂದಿಕೊಂಡು ಪ್ರೀತಿಯಿಂದ ಬದುಕಿದರೆ ಮಾತ್ರ ಒಂದಿಷ್ಟಾದರೂ ಗೌರವ ದೊರೆಯುತ್ತದೆ ಎಂಬುಯದನ್ನು ಮಗುವಿಗೆ ಚಿಕ್ಕಂದಿನಿಂದಲೇ ಹೇಳಿಕೊಡಬೇಕಾಗಿದೆ.  ದ್ವೇಷಿಸುವ ಮನಸ್ಸು ಸದಾ ಯಾರನ್ನಾದರೂ ದ್ವೇಷಿಸುತ್ತಲೇ ಇರುತ್ತದೆ. ಕೊನೆಗೆ ದ್ವೇಷಿಸಲು ಯಾರೂ ಸಿಗದಿರುವಾಗ ತನ್ನನ್ನೇ ತಾನು ದ್ವೇಷಿಸಿಕೊಳ್ಳುತ್ತದೆ. ಜನರನ್ನು ಪೀಡಿಸಿ ತಾವು ಮಾತ್ರ ಶ್ರೇಷ್ಠ ಎಂದು ಮೆರೆದವರ ಅಂತ್ಯವನ್ನು ನಾವೆಲ್ಲ ಕಂಡಿದ್ದೇವೆ. ಹಿಟ್ಲರ್‌ನಂತಹ ಹಿಟ್ಲರ್‌ನೇ ಕೊನೆಗೆ ಬದುಕು ನಿಭಾಯಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ನಿದಶ್ನ ಇತಿಹಾಸದ ಪುಟಗಳಲ್ಲಿದೆ. ಇತಿಹಾಸವನ್ನು ಎಷ್ಟೇ ತಿರುಚಿದರೂ, ಬದಲಾಯಿಸಲು ಪ್ರಯತ್ನಿಸಿದರೂ ಅದು ಪುನರಾವರ್ತನೆಯಾಗುತ್ತ ಮತ್ತೆ ಮತ್ತೆ ನಮಗೆ ಪಾಠ ಕಲಿಸುತ್ತದೆ. ಹೀಗಾಗಿಯೆ ಮಕ್ಕಳಿಗೆ ಒಳ್ಳೆಯದನ್ನೇ ಹೇಳಿಕೊಡಬೇಕಾಗಿದೆ. ಪ್ರೀತಿಯನ್ನು ಹಂಚಿ ಪ್ರೀತಿಯಿಂದ ಬಾಳುವುದನ್ನು ಕಲಿಸಬೇಕಿದೆ. ಇಲ್ಲಿ ಮಗು

ಮನುಜ ಮತದ ಮಂತ್ರ ಬಿತ್ತೋಣ
ಜಾತಿಯ ಗೂಡನು ಕಿತ್ತೆಸೆಯೋಣ
ದೇವನೊಬ್ಬನೇ ಎನ್ನೋಣ
ಕೂಡಿ ನಲಿಯುತ ಬಾಳೋಣ

ಎನ್ನುತ್ತದೆ. ಭವ್ಯಭಾರತದ ಕನಸು ಒಡೆದು ದೂರವಾಗುವುದರಲ್ಲಿಲ್ಲ. ಒಗ್ಗಟ್ಟಿನಲ್ಲಿದೆ ಎಂಬ ಸತ್ಯದ ಅರಿವು ಎಲ್ಲ ಮಕ್ಕಳಿಗೂ ಆಗಬೇಕಿದೆ.
   ಸೈನಿಕರನ್ನು ನೆನಪಿಸಿಕೊಳ್ಳುವ ಸೈನಿಕರಿಗೆ ಸಲಾಂ, ಸ್ನೇಹದ ಮಹತ್ವ ಹೇಳುವ ಸ್ನೇಹಿತರು ಮುಂತಾದ ಕವನಗಳು ತಮ್ಮ ಸರಳತೆಯಿಂದಲೇ ಗಮನ ಸೆಳೆಯುತ್ತವೆ. ಹೋಳಿ, ದೀಪಾವಳಿ, ಸಂಕ್ರಾಂತಿ, ಯುಗಾದಿ, ಜಾತ್ರೆ ಮುಂತಾದ ಹಬ್ಬಗಳ ಕುರಿತು ಬರೆದಿರುವ ಕವನಗಳು ತುಂಬ ಆಸಕ್ತಿದಾಯಕವಾಗಿದ್ದು ಮಕ್ಕಳನ್ನು ಸೆಳೆಯುವುದರಲ್ಲಿ ಅಚ್ಚರಿಯೇನಿಲ್ಲ.

ಅಪ್ಪ ಅಮ್ಮನನ್ನು ಪ್ರತ್ಯಕ್ಷ ದೇವರು ಎನ್ನುತ್ತೇವೆ. ನಮ್ಮ ಜೀವನದಲ್ಲಿ ಇವರಿಬ್ಬರ ಪಾತ್ರ ಹಿರಿದು. ತಮ್ಮೆಲ್ಲ ಶಕ್ತಿಯನ್ನು ಮಕ್ಕಳ ಏಳಿಗೆಗಾಗಿ ಮೀಸಲಿಡುವ ಅಪ್ಪ-ಅಮ್ಮ ಮಕ್ಕಳ ಉನ್ನತಿಯಲ್ಲಿಯೇ ಸಮತೋಷ ಕಾಣುತ್ತಾರೆ. ಮಕ್ಕಳ ಏಳಿಗೆಗಾಗಿ ತಾವು ಮೇಲೇರುವ ಅವಕಾಶ ತಪ್ಪಿಸಿಕೊಂಡವರು ಇದ್ದಾರೆ. ಮಕ್ಕಳ ಬದುಕು ಹಸನಾದರೆ ಸಾಕು ಎನ್ನುವ ತಂದೆತಾಯಿಗಳು ನಿಜಕ್ಕೂ ಸಮಾಜದ ದೊಡ್ಡ ಆಸ್ತಿ. ಯಾಕೆಂದರೆ ಅವರು ಈ ಸಮಾಜಕ್ಕೆ, ದೇಶಕ್ಕೆ ಒಂದು ಭವ್ಯ ಭವಿಷತ್‌ನನು ನಿರ್ಮಿಸಿ ಕೊಟ್ಟವರು.  ಸಂಕಲನದಲ್ಲಿ ಅಪ್ಪ ಅಮ್ಮ ಹಾಗೂ ಶಿಕ್ಷಕರ ಕುರಿತಾಗಿ ಇರುವ ಕವನಗಳು ಮನಸ್ಸನ್ನು ಸೆಳೆಯುತ್ತವೆ.
   ಅಮ್ಮನ ಪ್ರೀತಿಯಲ್ಲಿ ಅಪ್ಪನ ಬಲವನ್ನು ಎಷ್ಟೋ ಮಕ್ಕಳು ಮರೆತು ಬಿಡುತ್ತಾರೆ. ಅಮ್ಮ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಜೋಪಾನವಾಗಿಟ್ಟುಕೊಂಡು, ಅಪಾರವಾದ ಹೆರಿಗೆ ಬೇನೆಯನ್ನು ಎದುರಿಸಿ ಮಗುವಿಗೆ ಜನ್ಮ ನೀಡುತ್ತಾಲೆ. ತನ್ನ ರಕ್ತ ಮಾಂಸವನ್ನು ಹಂಚಿಕೊಂಡು ಹುಟ್ಟಿದ ಮಗುವಿಗೆ ತನ್ನ ಎದೆಹಾಲೆಂಬ ಅಮೃತ ನೀಡುತ್ತಾಳೆ. ಆದರೆ ಅಪ್ಪ ಅಮ್ಮನ ಪ್ರೀತಿಯ ಎದುರು ಮಂಕಾದಂತೆ ಕಂಡರೂ ಅವನ ಹೊಣೆಗಾರಿಕೆ ಕಡಿಮೆಯದ್ದೇನಲ್ಲ. ಮಕ್ಕಳ ಭವಿಷ್ಯ ಅಪ್ಪನ ಹೆಗಲೇರಿದ ಜವಬ್ಧಾರಿ. ಹೀಗಾಗಿ ಮಕ್ಕಳನ್ನು ಹೆಗಲಮೇಲೆ ಕುಳ್ಳಿರಿಸಿಕೊಳ್ಳುವುದಷ್ಟೇ ಅಲ್ಲ ಅವರ ಜೀವನವನ್ನು ನೇರ್ಪುಗೊಳಿಸುತ್ತಾನೆ. ಹೀಗಾಗಿ ಕವಿ ಅಪ್ಪನನ್ನು ಕುರಿತು,

ಬದುಕಿಗೆ ನೂರಾರು ತೊಂದರೆ
ಬಂದರು, ಆಗಲಿಲ್ಲ ಬೇಜಾರು
ಹಾಕಲಿಲ್ಲ ಕಣ್ಣೀರು, ಅಪ್ಪನಿಗಿಂತ
ಬೇರಿಲ್ಲ ಮತ್ತೊಬ್ಬ ಆಪ್ತರು

ಎನ್ನುತ್ತಾರೆ. ಮಕ್ಕಳ ಬದುಕಿಗಾಗಿ ನೂರಾರು ಕಷ್ಟಗಳನ್ನು ಸಹಿಸಿಕೊಳ್ಳುವ ಅಪ್ಪ, ಅಮ್ಮನಷ್ಟೇ ಆಪ್ತರು. ಆದರೆ ಅಮ್ಮ ಎಂದಿದ್ದರೂ ಅಮ್ಮನೆ.ಅಮ್ಮನ ಸ್ಥಾನ ಯಾರಿಂದಲೂ ತುಂಬಲಾಗದು. ತನ್ನ ನೋವು, ದುಃಖ, ಅನಾರೋಗ್ಯಗಳನ್ನು ಬದಿಗೊತ್ತಿ ಮಗುವಿನ ಬದುಕು ತನ್ನ ಬದುಕು ಎಂಬ ತಾದ್ಯಾತ್ಮದಿಂದ ಜೀವಿಸುತ್ತಾಳೆ. 

ನಮ್ಮ ಏಳಿಗೆಗೆ ಮುಂದೆ ನಿಂತು ಸೌಖ್ಯ ಅಸೌಖ್ಯದಲಿ ಬೆರೆತು
ಮಗು ಅಳಲು ತಾನತ್ತು, ನಕ್ಕಾಗ
ವ್ಯಥೆಯನ್ನು ಮರೆತಳು

ಮಕ್ಕಳ ಜೀವನದಲ್ಲಿ ತಂದೆ ತಾಯಿಗಳ ನಂತರದ ಸ್ಥಾನ ಏನಿದ್ದರು ಗುರುವಿನದ್ದು. ಕೆಲವೊಮ್ಮೆ ತಂದೆತಾಯಿಗಳಿಗಿಂತ ಶಿಕ್ಷಕರೇ ನಿರ್ಣಾಯಕ ಸ್ಥಾನ ವಹಿಸಿದ್ದೂ ಇದೆ. ಸಂವಿಧಾನ ಶಿಲ್ಪಿ ಅಂಬೇಡ್ಕರರ ಜೀವನವನ್ನು ನೋಡಿದರೆ ಗುರುವಿನ ಹಿರಿಮೆಯ ಅರಿವಾಗುತ್ತದೆ. ಹೀಗಾಗಿ ಕವಿ ಗುರುವನ್ನು ಅವರ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ.

ಪಾಠ ಮಾಡುತ, ಆಟವ ಆಡಿಸುತ
ನಕ್ಕು ನಗಿಸುವ ಹಸನ್ಮುಖ
ತಪ್ಪನ್ನು ಮನ್ನಿಸಿ, ಪ್ರೀತಿಯ ಹಂಚಿ
ಮಕ್ಕಳ ಬದುಕಿನ ಪ್ರೇರಕ

ಎನ್ನುತ್ತ ಗುರುವಿನ ಪ್ರೇರಕ ಶಕ್ತಿಯನ್ನು ಹೊಗಳಿದ್ದಾರೆ.
         ಗಾಂಧಿತಾತ ರಾಷ್ಟ್ರಪಿತ,ಸಂಗೊಳ್ಳಿ ರಾಯಣ್ಣ, ಸಾವಿತ್ರಿಭಾಯಿ ಫುಲೆ, ಡಾ. ಎ.ಪಿ.ಜೆ ಅಬ್ಧುಲ್ ಕಲಾಂಭಾವೈಕ್ಯತೆಯಜ್ಜ ಸುತಾರ ಮುಂತಾದವರ ಜೀವನ ಚರಿತ್ರೆಗಳನ್ನು ಸರಳವಾಗಿ ಹೇಳಿ ಮಕ್ಕಳಿಗೆ ಈ ವ್ಯಕ್ತಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರೇರಣೆ ನೀಡಿದ್ದಾರಲ್ಲದೆ ಇವರ ಮಾನವತಾ ಸಮದೇಶಗಳನ್ನು ತಿಳಿದುಕೊಳ್ಳಲು ಉತ್ತೇಜಿಸಿದ್ದಾರೆ.

ಮತದಾನ ಜಾಗ್ರತಿ, ಸ್ವಾತಂತ್ರ್ಯೋತ್ಸವ, ಗಣರಾಜ್ಯ ದಿನಾಚರಣೆಯ ಕುರಿತೂ ಸುಂದರವಾಗಿ ಮನಮುಟ್ಟುವಂತೆ ಬರೆದಿದ್ದಾರೆ.
ಕನ್ನಡ ಉಳಿಸು,  ಸುಂದರ ಕರುನಾಡು ಕವನಗಳಿವೆ
ಕನ್ನಡಕ್ಕಾಗಿ ಬದುಕೋಣ ಕವನದಲ್ಲಿ

ಕುವೆಂಪು ಸಾಹಿತ್ಯ ಅರಿಯೋಣ
ಕನ್ನಡ ಡಿಂಡಿಮ ಬಾರಿಸೋಣ
ನಿತ್ಯೋತ್ಸವ ಗೀತೆ ಹಾಡೋಣ
ಸವಿಗನ್ನಡ ಉತ್ಸವ ಆಚರಿಸೋಣ

 ಎನ್ನುತ್ತ ಕನ್ನಡ ನುಡಿಯ ಕುರಿತು ಮಕ್ಕಳು ಸದಾ ಗೌರವ ಭಾವ ಹೊಂದಿರಬೇಕೆಂದು ಆಶಿಸುತ್ತಾರೆ. ರಾಷ್ಟ್ರಕವಿ ಕುವೆಂಪುರವರ ಆದರ್ಶ ಹಾಗೂ ಕನ್ನಡಪ್ರೇಮ, ನಿಸಾರ ಅಹಮದ್‌ರ ನಿತ್ಯೋತ್ಸವದ ಕುರಿತು ಸೂಕ್ಷ್ಮವಾಗಿ ಹೇಳುತ್ತ ಇನ್ನೂ ಹೆಚ್ಚು ಅರಿತುಕೊಳ್ಳಲು ದಾರಿತೋರಿದ್ದಾರೆ.
   ಮಕ್ಕಳ ಕವಿತೆಗಳನ್ನು ಬರೆಯುವಾಗ ನಾವು ನೆನಪಿಟ್ಟುಕೊಳ್ಳಬೇಕಾದ ಇನ್ನೊಂದು ಪ್ರಮುಖವಾದ ಅಂಶವೆಂದರೆ ಕೇವಲ ಮಕ್ಕಳ ಮಟ್ಟಕ್ಕೆ ಇಳಿದು, ಸರಳ ಪದಪ್ರಯೋಗದಿಂದ ಬರೆಯುವುದಷ್ಟೇ ಅಲ್ಲ, ಅದರಲ್ಲಿ ಗೇಯತೆಯೂ ಇರಬೇಕು. ಇಲ್ಲಿನ ಕೆಲವು ಕವಿತೆಗಳನ್ನು ಹಾಡುಗಬ್ಬದಂತೆ ಬರೆದಿದ್ದರೂ ಹೆಚ್ಚಿನ ಕವಿತೆಗಳು ಹಾಡಿಗೆ ಒಗ್ಗುವಂತಿದ್ದರೆ ಎಷ್ಟು ಚೆನ್ನ. ವೃತ್ತಿಯಿಂದ ಪೋಲಿಸ್ ಆಗಿರುವ ಮೌಲಾಲಿಯವರ ಲೇಖನಿಯಿಂದ ಇನ್ನಷ್ಟು ಹಾಡುಗಬ್ಬ ಮಕ್ಕಳ ಕವಿತೆಗಳು ಮೂಡಿ ಬರಲಿ.

Thursday 2 June 2022

ಗೋಥಿಕ್ ಸಾಹಿತ್ಯದ ಪ್ರವರ್ತಕಿ- ಕ್ಲಾರಾ ರೀವ್


ಗೋಥಿಕ್ ಸಾಹಿತ್ಯದ ಪ್ರವರ್ತಕಿ- ಕ್ಲಾರಾ ರೀವ್
೧೭೨೯ರ ಜನವರಿ ೨೩ರಂದು ಇಂಗ್ಲೆಂಡಿನ ಇಫ್ಸ್ವಿಚ್ ಎಂಬಲ್ಲಿ ರೆವರೆಂಡ್ ವಿಲಿಯಂ ರೀವ್ ಹಾಗೂ ಹೆನ್ನಾ ಸ್ಮಿತೀಸ್‌ರವರ ಎಂಟು ಜನ ಮಕ್ಕಳಲ್ಲಿ ಹಿರಿಯ ಮಗಳಾಗಿ ಜನಿಸಿದ ಕ್ಲಾರಾ ರೀವ್‌ರವರ ತಂದೆ ಸೆಂಟ್ ನಿಕೋಲಸ್-೧ ರವರ ಆಪ್ತಬರಹಗಾರರ ವಲಯದಲ್ಲಿದ್ದರು. ಇವರ ತಾಯಿ ರಾಜ ಜಾರ್ಜ-೧ ರವರ ಆಸ್ಥಾನದಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ವಿಲಿಯಂ ಸ್ಮಿತಿಸ್‌ರವರ ಮಗಳು. ಹೀಗಾಗಿ ನೀಲಿ ರಕ್ತದ ನಂಟು ತೀರಾ ಹತ್ತಿರದಲ್ಲಿತ್ತು. ತಾನು ಏನೆಲ್ಲವನ್ನು ಕಲಿತಿದ್ದೇನೋ ಅದೆಲ್ಲವೂ ನನ್ನ ತಂದೆಯ ಕೊಡುಗೆ ಎಂದು ಸದಾ ತನ್ನ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದ ಕ್ಲಾರಾ ಚಿಕ್ಕ ವಯಸ್ಸಿನಲ್ಲಿಯೇ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಗಳು, ರಾಪಿನ್‌ರವರು ಬರೆದ ಇಂಗ್ಲೆಂಡಿನ ಇತಿಹಾಸ ,ಜಾನ್ ಟ್ರೆಂಚಾರ್ಡ ಹಾಗೂ ಥಾಮಸ್ ಗೊರ್ಡಾನ ಬರೆದಂತಹ ಕ್ಯಾಟೋಸ್ ಲೆಟರ್ಸ್, ಗ್ರೀಕ್ ಹಾಗೂ ರೋಮನ್‌ನ ಇತಿಹಾಸ, ಪ್ಲೂಟಾರ್ಕ್‌ನ ತತ್ವಶಾಸ್ತ್ರ ಮುಂತಾದವುಗಳ ಬಗ್ಗೆ ಓದಿ ತಿಳಿದುಕೊಂಡರು. ಇವು ಅವರ ಬರಹಕ್ಕೆ ಅತ್ಯುತ್ತಮ ತಳಹದಿಯನ್ನು ಒದಗಿಸಿತು. ಅಪ್ಪ ತನ್ನ ಎಲ್ಲ ಶಕ್ತಿಗಳ ಹಿಂದಿನ ಪ್ರೇರಣೆ ಎಂದು ಅವರು ನಂಬಿದ್ದರು. ತನ್ನ ನಿಲುವುಗಳನ್ನು ರೂಪಿಸಲು ಚಿಕ್ಕಂದಿನಲ್ಲಿ ತನ್ನ ತಂದೆ ತೆಗೆದುಕೊಂಡ ಮಾರ್ಗದ ಬಗ್ಗೆ ಆಕೆಗೆ ಒಂದಿಷ್ಟು ಹೆಮ್ಮೆ ಒಂದಿಷ್ಟು ಅಸಮಧಾನಗಳಿದ್ದವು. ತನ್ನ ವಯಸ್ಸಿನ ಮಕ್ಕಳು ಸಾಹಿತ್ಯದ ಬಗ್ಗೆ ತಿಳಿಯುವ ಮುನ್ನವೇ  ತಾನು ಇವುಗಳನ್ನೆಲ್ಲ ಓದಿ ಅರಗಿಸಿಕೊಳ್ಳುವಂತೆ ಮಾಡಿದ್ದಕ್ಕಾಗಿ ಅಪ್ಪನಿಗೆ ಮನದಲ್ಲೇ ವಂದಿಸುತ್ತಿದ್ದರು.
  ೧೭೫೫ರಲ್ಲಿ ತಂದೆಯ ಸಾವಿನ ನಂತರ ಕ್ಲಾರಾ ಕೆಲಕಾಲ ತನ್ನ ಅಮ್ಮನೊಂದಿಗೆ ವಾಸಿಸುತ್ತಿದ್ದರು. ನಂತರ ಇಪ್ಸ್‌ವಿಚ್‌ನ ತಮ್ಮ ಸಂತದ ಮನೆಗೆ ಹೋಗಿ ಅಲ್ಲಿಯೇ ವಾಸಿಸಲಾರಂಭಿಸಿದರು. ಅವರ ನಂತರದ ಸಾಹಿತ್ಯ ಕೃಷಿ ಇಲ್ಲಿಂದಲೇ ಮುಂದುವರೆಯಿತು.
೧೭೬೯ರಲ್ಲಿ ಒರಿಜಿನಲ್ ಪೋಯೆಮ್ಸ್ ಎಂಬ ಪ್ರಥಮ ಸಂಕಲನವನ್ನು ಕ್ಲಾರಾ ಪ್ರಕಟಿಸಿದರಾದರೂ ಅದು ಅವರಿಗೆ ನಿರೀಕ್ಷಿಸಿದಷ್ಟು ಸಮಾಧಾನ ತಂದುಕೊಡಲಿಲ್ಲ. ೧೭೭೭ರಲ್ಲಿ ದಿ ಓಲ್ಡ್ ಇಂಗ್ಲೀಷ್ ಬ್ಯಾರನ್' ಎನ್ನುವ ಗೋಥಿಕ್ ಶೈಲಿಯ ಕಾದಂಬರಿಯನ್ನು ಬರೆದು ಪ್ರಕಟಿಸಿದರು.  ಇದು ಕ್ಲಾರಾ ರೀವ್‌ರವರ ಅತ್ಯುತ್ತಮ ಕೃತಿ ಎಂದು ಪರಿಗಣಿಸಲ್ಪಟ್ಟಿದೆ. ೧೭೮೦ರಲ್ಲಿ ದಿ ಟೂ ಮಾಂಟರ್ಸ್, ೧೭೮೫ರಲ್ಲಿ ದಿ ಪ್ರೊಗ್ರೆಸ್ ಆಫ್ ರೋಮಾನ್ಸ್ ೧೭೯೧ರಲ್ಲಿ ದಿ ಸ್ಕೂಲ್ ಫಾರ್ ವೀಡೋಸ್, ೧೭೯೨ರಲ್ಲಿ ಪ್ಲಾನ್ಸ್ ಫಾರ್ ಎಜುಕೇಶನ್, ೧೭೯೩ರಲ್ಲಿ ಮೆಮೊರಿಸ್ ಆಫ್ ಸರ್ ರೋಜರ್ ಡಿ ಕ್ಲಾರೆಂಡಾನ್ ೧೭೯೯ರಲ್ಲಿ ಡೆಸ್ಟಿನೇಶನ್ ಎಂಬ ಕೃತಿಗಳು ಪ್ರಕಟಗೊಂಡು ಸಾಹಿತ್ಯಾಸಕ್ತರ ಗಮನವನ್ನು ಸೆಳೆಯಿತು. ಇವೆಲ್ಲದರ ನಡುವೆ ೧೭೭೨ರಲ್ಲಿ ಲ್ಯಾಟಿನ್ ಭಾಷೆಯಿಂದ ದಿ ಫಿನೋಲೆಕ್ಸ್ ಎಂಬ ಕಾದಂಬರಿಯನ್ನು ಇಂಗ್ಲೀಷ್‌ಗೆ ಭಾಷಾಂತರ ಕೂಡ ಮಾಡಿದ್ದರು. ಆದರೆ ಓದುಗರು ಈ ಪುಸ್ತಕಕ್ಕೆ ಅಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಸಾಹಿತಿಯಾಗಿ ತಾನು ಸೋಲೊಪ್ಪಿಕೊಳ್ಳಬೇಕಾಗಿದೆ ಎಂದು ಕ್ಲಾರ ಬೇಸರಗೊಂಡಿದ್ದರು. 'ಒಂದು ಅತ್ಯುತ್ತಮ ಕ್ರತಿಯನ್ನು ನಾನು ಓದುಗರಿಗೆ ನೀಡಿದೆ. ಆದರೆ ಅದು ಸರಿಯಾಗಿ ಸ್ವೀಕರಿಸಲ್ಪಡಲಿಲ್ಲ.' ಎಂದು ಆ ಪುಸ್ತಕದ ಬಗ್ಗೆ ಸದಾ ಹೇಳುತ್ತಿದ್ದರು. ಆದರೆ ದಿ ಓಲ್ಡ್ ಇಂಗ್ಲಿಷ್ ಬ್ಯಾರನ್ ನೀಡಿದ ಅಭೂತಪೂರ್ವ ಯಶಸ್ಸು ಉಳಿದವುಗಳನ್ನು ಹಿಂದೆ ಸರಿಸಿತು.

  ದಿ ಓಲ್ಡ್ ಇಂಗ್ಲೀಷ್ ಬ್ಯಾರನ್ ಕಾದಂಬರಿಯನ್ನು ಮೊದಲು 'ದಿ ಚಾಂಪಿಯನ್ ಆಫ್ ವರ್ಚ್ಯು- ಎ ಗೋಥಿಕ್ ಸ್ಟೋರಿ' ಎಂದು ಹೆಸರಿಸಲಾಗಿತ್ತು. ಆದರೆ ಎರಡನೆ ಮುದ್ರಣದ ಸಮಯದಲ್ಲಿ ಹಾಗೂ ಅದರ ನಂತರದ ಮುದ್ರಣದಲ್ಲಿ ಈ ಕಾದಂಬರಿಯನ್ನು ದಿ ಓಲ್ಡ್ ಇಂಗ್ಲೀಷ್ ಬ್ಯಾರನ್ ಎಂದು ಹೊಸದಾಗಿ ಹೆಸರಿಡಲಾಯಿತು. ಅತ್ಯಂತ ಆಪ್ತತೆಯನ್ನು ನೀಡುವ ಹೆಸರದು. ಈ ಕಾದಂಬರಿ ನಂತರ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳಿಗೆ ಭಾಷಾಂತರಗೊಂಡಿತು. ಇವರ ಪ್ರೊಗ್ರೆಸ್ ಆಫ್ ರೋಮಾನ್ಸ್ ಕೃತಿ ಕೂಡ ಆ ದಿನಗಳಲ್ಲಿ ಬಹುವಾಗಿ ಚರ್ಚಿತವಾಗಿದ್ದಂತಹ ಪುಸ್ತಕ. ಪ್ರಣಯದ ಇತಿಹಾಸವನ್ನು ಹುಡುಕುತ್ತ ಸಾಗುವ ವಸ್ತುವಿಷಯವನ್ನು ಹೊಂದಿದ ಈ ಗ್ರಂಥವು ವ್ಯಕ್ತಿಗಳ ಸಂಭಾಷಣೆಯ ಮುಖಾಂತರ ಮಹಿಳಾ ಬರಹಗಾರರ ಅಭಿವ್ಯಕ್ತಿಯನ್ನು ವಿಶ್ಲೇಷಿಸಲ್ಪಡುವಂತೆ ಚಿತ್ರಿಸಲಾಗಿದೆ.
  ತನ್ನ ಮೂವತ್ಮೂರು ವರ್ಷಗಳ ಬರಹದ ಬದುಕಿನಲ್ಲಿ ಕ್ಲಾರಾ ರೀವ್ ಇಪ್ಪತ್ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದರು. ಆರಂಭದ ಕೆಲವು ಕೃತಿಗಳನ್ನು ಹೊರತುಪಡಿಸಿ ಅವರ ಬಹುತೇಕ ಕೃತಿಗಳು ಸಮಕಾಲೀನರಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದವು.
೧೮೦೭ರಲ್ಲಿ ಇಫ್ಸ್‌ವಿಚ್‌ನ ಮನೆಯಲ್ಲಿ ನಿಧನ ಹೊಂದಿದ ಕ್ಲಾರಾ ರೀವ್‌ರವರನ್ನು ಅವರ ಇಚ್ಛೆಯಂತೆ ಸೆಂಟ್ ಸ್ಟೀಫನ್ ಚರ್ಚಯಾರ್ಡ್‌ನಲ್ಲಿ ಆವರ ಸ್ನೇಹಿತ ರೆವರೆಂಡ್ ಡರ್ಬಿಯ ಪಕ್ಕದಲ್ಲಿ ಮಣ್ಣು ಮಾಡಲಾಯಿತು.
    ಇಂದಿಗೂ ಕ್ಲಾರಾ ರೀವ್ ತಮ್ಮ ದೀ ಓಲ್ಡ್ ಇಂಗ್ಲೀಷ್ ಬ್ಯಾರನ್ ಮುಖಾಂತರ ಜೀವಂತವಾಗಿದ್ದಾರೆ. ಒಂದು ಕಾಲದಲ್ಲಿ ಈ ಕಾದಂಬರಿಯನ್ನು ಗೋಥಿಕ್ ಸಾಹಿತ್ಯದ ಮೊದಲ ಮೆಟ್ಟಿಲು ಎಂದು ಗುರುತಿಸಲಾಗುತ್ತಿದೆ. ಹಲವಾರು ಯುವ ಹಾಗೂ ಕ್ಲಾರಾ ನಂತರದ ಸಾಹಿತಿಗಳು ಇವರ ಈ ಪುಸ್ತಕದಿಂದ ಪ್ರಭಾವಿತರಾಗಿದ್ದನ್ನು ಕಾಣಬಹುದು. ಈ ಪುಸ್ತಕವು ವಿದ್ವಾಂಸರ, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ನಡುವೆ ಹೇಗೆ ಬಹು ಚರ್ಚಿತ ವಿಷಯವಾಗಿ ಅಭಿಪ್ರಾಯಗಳನ್ನು ಹೊರಗೆಡವುವಂತೆ ಮಾಡುತ್ತಿತ್ತೋ ಅಷ್ಟೇ ಜನಸಾಮಾನ್ಯರ ನಡುವಣ ಚರ್ಚೆಗೂ ಕಾರಣವಾಗಿತ್ತು. ೧೮ನೇ ಶತಮಾನದ ಉತ್ತರಾರ್ಧದಲ್ಲಿ ಬರೆಯಲಾರಂಭಿಸಿದ ಬಹುತೇಕ ಮಹಿಳಾ ಸಾಹಿತಿಗಳ ಮೇಲೆ ಗಣನೀಯ ಪ್ರಭಾವ ಬೀರಿದ ಈ ಪುಸ್ತಕದ ಕುರಿತು ಹಲವಾರು ವಿಮರ್ಶೆಗಳು ಪ್ರಕಟಗೊಂಡಿವೆ. ಹೆನ್ರಿಟ್ಟಾ ಮೋಸ್ಸೆ ಹಾಗೂ ಇತರ ಸಮಕಾಲೀನ ಲೇಖಕಿಯರು ಈ ಪುಸ್ತಕ ತಮ್ಮ ಮೇಲೆ ಬೀರಿದ ಪ್ರಭಾವಗಳ ಕುರಿತು ಹೇಳಿಕೊಂಡಿದ್ದಾರೆ. ಗೋಥಿಕ್ ಶೈಲಿಯನ್ನು ಕ್ಲಾರಾ ರೀವ್‌ರವರಂತೆ ನಿರ್ದಿಷ್ಟ ಚೌಕಟ್ಟಿಗೆ ಒಳಪಡಿಸಿ ಬರೆಯುವುದನ್ನು ಇವರೆಲ್ಲ ರೂಢಿಸಿಕೊಂಡರು. ಹೀಗಾಗಿ ಗೋಥಿಕ್ ಶೈಲಿಯ ಪ್ರವರ್ತಕಿ ಎಂದೇ ಇವರನ್ನು ಈಗಲೂ ಗುರುತಿಸಲಾಗುತ್ತಿದೆ. 

ಗೋಥಿಕ್ ಸಾಹಿತ್ಯದ ಪ್ರವರ್ತಕಿಯಾಗಿ ಹಲವಾರು ಯುವ ಲೇಖಕರು ತನ್ನನ್ನು ಅನುಕರಿಸುವಂತೆ ಮಾಡಿದ್ದ ಕ್ಲಾರಾ ರೀವ್ ಪರಿಚಯ ಇಂದಿನ (03/06/2022) ಲೋಕಧ್ವನಿಯಲ್ಲಿ. 



lokadhwani - http://lokadhwani.com/ArticlePage/APpage.php?edn=Main&articleid=LOKWNI_MAI_20220603_4_6