Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Thursday 25 August 2022

ವೈಯಕ್ತಿಕ ಸಂಬಂಧಗಳ ಜೊತೆ ಸಾಹಿತ್ಯಿಕ ಬದುಕನ್ನು ಜತನದಿಂದ ನಿಭಾಯಿಸಿದ ಮೊದಲ ವೈಜ್ಞಾನಿಕ ಕಾದಂಬರಿಕಾರ್ತಿ ಮೇರಿ ಶೆಲ್ಲಿ


ವೈಯಕ್ತಿಕ ಸಂಬಂಧಗಳ ಜೊತೆ ಸಾಹಿತ್ಯಿಕ ಬದುಕನ್ನು ಜತನದಿಂದ ನಿಭಾಯಿಸಿದ ಮೊದಲ ವೈಜ್ಞಾನಿಕ ಕಾದಂಬರಿಕಾರ್ತಿ ಮೇರಿ ಶೆಲ್ಲಿ



       ರಾಜಕೀಯ ತತ್ವಜ್ಞಾನಿ  ವಿಲಿಯಂ ಗಾಡ್ವಿನ್ ಮತ್ತು  ದಾರ್ಶನಿಕ ಹಾಗೂ ಸ್ತ್ರೀವಾದಿ ಕಾರ್ಯಕರ್ತೆಯಾಗಿದ್ದ ಮೇರಿ ವೋಲ್‌ಸ್ಟೋನ್‌ಕ್ರಾಪ್ಟ್ ಅವರ ಮಗಳಾಗಿ ೩೦ ಆಗಸ್ಟ್ ೧೭೯೭ರಂದು ಲಂಡನ್‌ನ್ನಿನ ಸೋಮರ್ಸ್ ಟೌನ್‌ನಲ್ಲಿ ಜನಿಸಿದ ಮೇರಿ ಶೆಲ್ಲಿ ವೈಜ್ಞಾನಿಕ ಕಾದಂಬರಿಯನ್ನು ಮೊಟ್ಟಮೊದಲ ಬಾರಿಗೆ ಬರೆಯಲು ಪ್ರಾರಂಭಿಸಿದ ಕೀರ್ತಿಗೆ ಭಾಜನರಾದವರು. ಇವರ ಗೋಥಿಕ್ ಕಾದಂಬರಿ ಫ್ರಾಂಕೆನ್ಸ್‌ಸ್ಟೈನ್  ಅಥವಾ, ದಿ ಮಾಡರ್ನ್ ಪ್ರಮೀಥಿಯಸ್ (೧೮೧೮)  ಆರಂಭಿಕ ವೈಜ್ಞಾನಿಕ ಕಾದಂಬರಿ ಎಂದು ಸಾಹಿತ್ಯಲೋಕದಲ್ಲಿ ಪರಿಗಣಿತವಾಗಿದೆ.

ಶೆಲ್ಲಿಯ ತಾಯಿ ಅವರಿಗೆ ಜನ್ಮ ನೀಡಿದ ಹದಿನೈದು ದಿನಗಳೊಳಗೆ ಹೆರಿಗೆಯ ನಂತರ ಬರುವ ಜ್ವರದಿಂದಾಗಿ ನಿಧನರಾದರು. ತಾಯಿ ಮೇರಿ ವೋಲ್‌ಸ್ಟೋನ್‌ಕ್ರಾಪ್ಟ್‌ರವರಿಗೆ ಈಗಾಗಲೆ ಗಿಲ್ಬರ್ಟ್ ಇಮ್ಲೆಯವರಿಂದ ಜನಿಸಿದ ಫ್ಯಾನ್ಸಿ ಇಮ್ಲೆ ಎಂಬ ಮಗಳಿದ್ದಳು. ಆದರೆ ತಂದೆ ವಿಲಿಯಂ ಗಾಡ್ವಿನ್‌ರಿಗೆ ಮೇರಿ ಮೊದಲ ಮಗಳು. ತಾಯಿಯ ಅಕಾಲಿಕ ಮರಣದಿಂದಾಗಿ ಅವರ ತಂದೆ ವಿಲಿಯಂ ಗಾಡ್ವಿನ್ ಪತ್ನಿಯ ಹಿರಿಯ ಮಗಳು ಫ್ಯಾನ್ಸಿ ಇಮ್ಲೆಯನ್ನೂ ಮೇರಿಯವರ ಜೊತೆ ಸಾಕಬೇಕಿತ್ತು. ಹೀಗಾಗಿ ಮೇರಿಯವರಿಗೆ ದೊರಕಿದ್ದು ಬಹುತೇಕ ಅನೌಪಚಾರಿಕ ಶಿಕ್ಷಣ. ವೋಲ್‌ಸ್ಟೋನ್‌ಕ್ರಾಪ್ಟ್ ಮರಣದ ಒಂದು ವರ್ಷದ ನಂತರ ವಿಲಿಯಂ ಗಾಡ್ವಿನ್ ತನ್ನ 'ಮೆಮೋಯಿರ್ಸ್ ಆಫ್ ದಿ ಆಥರ್ ಆಫ್ ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್' ಅನ್ನು ಪ್ರಕಟಿಸಿದರು.(೧೭೯೮), ಪತ್ನಿಯ ಕುರಿತಾಗಿ ಅತೀವ ಪ್ರೀತಿ, ಗೌರವ ಹೊಂದಿದ್ದ ವಿಲಿಯಂ ಗಾಡ್ವಿನ್ ಪ್ರಾಮಾಣಿಕವಾಗಿ ಮತ್ತು ಸಹಾನುಭೂತಿಯಿಂದ ಈ ಪುಸ್ತಕವನ್ನು ಪ್ರಕಟಿಸಿದರಾದರೂ ಮೆಮೊಯಿರ್ಸ್ ವೋಲ್‌ಸ್ಟೋನ್‌ಕ್ರಾಪ್ಟ್‌ರವರ ವಿವಾಹೇತರ ಸಂಬಂಧಗಳನ್ನು ಹಾಗೂ ನ್ಯಾಯಸಮ್ಮತವಲ್ಲದ ಮಗುವನ್ನು ಹೊಂದಿರುವ ವಿಷಯವನ್ನು ಬಹಿರಂಗಪಡಿಸಿದ್ದಕ್ಕಾಗಿ ವೋಲ್‌ಸ್ಟೋನ್‌ಕ್ರಾಪ್ಟ್ ಪಾಲಿಗೆ ಹಿತಶತ್ರುವಾಗಬೇಕಾಯಿತು. ತಂದೆಯ ಅಚಾತುರ್ಯದಿಂದಾಗಿ ತಾಯಿ ನೈಪಥ್ಯಕ್ಕೆ ತಳ್ಳಲ್ಪಟ್ಟಿದ್ದರ ಕುರಿತು ವಿಷಾದವಿದ್ದರೂ ಮೇರಿ ಗಾಡ್ವಿನ್ ತಾಯಿಯ ಆತ್ಮಚರಿತ್ರೆಯನ್ನು ಮತ್ತು ಅವರ ತಾಯಿಯ ಪುಸ್ತಕಗಳನ್ನು ಓದಿದರಲ್ಲದೆ ಅವರ ತಾಯಿಯ ಸ್ತ್ರೀವಾದಿ ಧೋರಣೆಯನ್ನು  ಪಾಲಿಸುತ್ತ ಬೆಳೆದರು. ಅಲ್ಲದೆ ಇವರ ತಂದೆ ತನ್ನದೇ ಆದ ಅರಾಜಕತಾವಾದಿ ರಾಜಕೀಯ ಸಿದ್ಧಾಂತಗಳಿಗೆ ಬದ್ಧವಾಗಿರಲು ಅವರನ್ನು ಪ್ರೋತ್ಸಾಹಿಸಿದರು. ಅವರು ನಾಲ್ಕು ವರ್ಷದವರಿದ್ದಾಗ ಮೇರಿಯ ತಂದೆ ನೆರೆಯವರಾದ ಮೇರಿ ಜೇನ್ ಕ್ಲೇರ್ಮಾಂಟ್ ಅವರನ್ನು ವಿವಾಹವಾದರು. ಆದರೆ ಮೇರಿಯವರಿಗೆ ಅವರೊಂದಿಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಗಿತ್ತು.
       ಮೇರಿ ಗಾಡ್ವಿನ್ ಸ್ವಲ್ಪ ಮಟ್ಟಿಗೆ ಔಪಚಾರಿಕ ಶಿಕ್ಷಣವನ್ನು ಪಡೆದಿದ್ದರೂ, ಅವರ ತಂದೆ ಅವರಿಗೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಕಲಿಸಿದರು. ಅವರು ಆಗಾಗ್ಗೆ ಮಕ್ಕಳನ್ನು ಶೈಕ್ಷಣಿಕ ಪ್ರವಾಸಗಳಿಗೆ ಮತ್ತು ತಮ್ಮ ಗ್ರಂಥಾಲಯಕ್ಕೆ ಕರೆದೊಯ್ಯುತ್ತಿದ್ದುದಲ್ಲದೆ ಅವರನ್ನು ಭೇಟಿ ಮಾಡಿದ ಅನೇಕ ಬುದ್ಧಿಜೀವಿಗಳಾದ  ರೊಮ್ಯಾಂಟಿಕ್ ಕವಿ ಸ್ಯಾಮ್ಯುಯೆಲ್ ಟೇಲರ್ ಕೋಲ್ರಿಡ್ಜ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಮಾಜಿ ಉಪಾಧ್ಯಕ್ಷ ಆರನ್ ಬರ್ ಮುಂತಾದ ಬುದ್ಧಿಜೀವಿಗಳನ್ನು  ಪರಿಚಯಿಸಿದರು.  ತಮ್ಮ ಪತ್ನಿ ವೋಲ್‌ಸ್ಟೋನ್‌ಕ್ರಾಪ್ಟ್ 'ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್' (೧೭೯೨) ಕೃತಿಗಳಲ್ಲಿ ವಿವರಿಸಿರುವ ತತ್ವಶಾಸ್ತ್ರದ ಪ್ರಕಾರ ತಾನು ಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲ ಎಂಬುದು ಗಾಡ್ವಿನ್‌ರವರಿಗೆ ಸಣ್ಣ ಬೇಸರವನ್ನು ಹುಟ್ಟಿಸಿತ್ತು. ಆದರೆ ಮೇರಿ ಗಾಡ್ವಿನ್ ಆ ಕಾಲದ ಹುಡುಗಿಯರಿಗೆ ಸಾಧ್ಯವಿಲ್ಲದ ಒಂದು ಅತ್ಯುತ್ತಮ ಅವಕಾಶವನ್ನು ಪಡೆದಿದ್ದರು. ೧೮೧೧ರಲ್ಲಿ ಆರು ತಿಂಗಳು ರಾಮ್ಸ್‌ಗೇಟ್‌ನಲ್ಲಿರುವ ಬೋರ್ಡಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡುವುದು ಸಾಮಾನ್ಯ ವಿಷಯವಾಗಿರಲಿಲ್ಲ.

ಮೇರಿ ಶೆಲ್ಲಿ  ಬಾಲ್ಯದಲ್ಲಿಯೆ ಬರೆಯಲು ಪ್ರಾರಂಭಿಸಿದರು. ಅವಳ ನೆಚ್ಚಿನ ಕೆಲಸವೆಂದರೆ ಕಥೆಗಳನ್ನು ಬರೆಯುವುದು. ದುರದೃಷ್ಟವಶಾತ್ ಅವರ ಎಲ್ಲಾ ಬರಹಗಳು ಪರ್ಸಿಯೊಂದಿಗೆ ಓಡಿಹೋದಾಗ ಕಳೆದುಹೋದವು. ಹೀಗಾಗಿ ಉಳಿದಿರುವ ಯಾವುದೇ ಹಸ್ತಪ್ರತಿಗಳು ಯಾವಾಗ ಬರೆದದ್ದೆಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಅವರ ಮೊದಲ ಪ್ರಕಟಿತ ಕೃತಿಯು ಮೌನ್ಸೀರ್ ನೊಂಗ್ಟಾಂಗ್ಪಾ ಅವರು ಹತ್ತೂವರೆ ವರ್ಷದವಳಿದ್ದಾಗ ಗಾಡ್ವಿನ್ನ ಜುವೆನೈಲ್ ಲೈಬ್ರರಿಗಾಗಿ ಬರೆದ ಕಾಮಿಕ್ ಪದ್ಯಗಳು ಎಂದು ಭಾವಿಸಲಾಗಿದೆ.
      ೧೫ನೇ ವಯಸ್ಸಿನಲ್ಲಿ 'ಧೈರ್ಯಶಾಲಿ, ಶಕ್ತಿಯುತ ಮತ್ತು ಕ್ರಿಯಾಶೀಲ ಮನಸ್ಸಿನ ಹುಡುಗಿ. ಅವಳ ಜ್ಞಾನದ ಬಯಕೆ ಅದ್ಭುತವಾಗಿದೆ ಮತ್ತು ಕೈಗೊಳ್ಳುವ ಎಲ್ಲದರಲ್ಲೂ ಅವಳ ಪರಿಶ್ರಮ ಎದ್ದು ಕಾಣುತ್ತದೆ.' ಎಂದು ತಂದೆಯಿಂದ ಹೊಗಳಿಸಿಕೊಂಡಿದ್ದರು.

ಜೂನ್ ೧೮೧೨ರಲ್ಲಿ ಅವರ ತಂದೆ ಅವರನ್ನು  ಸ್ಕಾಟ್ಲೆಂಡ್‌ನ ಡುಂಡೀ ಬಳಿಯ ತೀವ್ರಗಾಮಿ ವಿಲಿಯಂ ಬ್ಯಾಕ್ಸ್‌ಟರ್ ಕುಟುಂಬದೊಂದಿಗೆ ಇರಲು ಕಳುಹಿಸಿದರು. ಅವರ ತಂದೆ  "ಅವಳನ್ನು ಒಬ್ಬ ದಾರ್ಶನಿಕನಂತೆ, ಸಿನಿಕನಂತೆ ಬೆಳೆಸಬೇಕೆಂದು ನಾನು ಉತ್ಸುಕನಾಗಿದ್ದೇನೆ" ಎಂದು ಬ್ಯಾಕ್ಸ್‌ಟರ್‌ಗೆ ಬರೆದ ಪತ್ರದಲ್ಲಿ  ಹೇಳಿದ್ದಾರೆ. ಮೇರಿ ಗಾಡ್ವಿನ್ ಬ್ಯಾಕ್ಸ್‌ಟರ್ ಮನೆಯ ವಿಶಾಲವಾದ ಪರಿಸರದಲ್ಲಿ ಅವರ ನಾಲ್ಕು ಹೆಣ್ಣುಮಕ್ಕಳ ಒಡನಾಟದಲ್ಲಿ ಖುಷಿಯಾಗಿದ್ದರು. ಹಾಗೂ ತನ್ನ ಸಾಹಿತ್ಯ ರಚನೆಗೆ ಬೇಕಾದ ಮೂಲದೃವ್ಯ ದೊರಕಿದ್ದು ಅಲ್ಲಿಯೇ ಎಂದು ಕೆಲವೆಡೆ ಮೇರಿ ಶೆಲ್ಲಿ ಹೇಳಿಕೊಂಡಿದ್ದಾರೆ.  

           ೧೮೧೪ರಲ್ಲಿ ಮೇರಿ ತನ್ನ ತಂದೆಯ ರಾಜಕೀಯ ಅನುಯಾಯಿಗಳಲ್ಲಿ ಒಬ್ಬರಾದ ಪರ್ಸಿ ಬೈಶೆ ಶೆಲ್ಲಿಯನ್ನು ಪ್ರೀತಿಸಲಾರಂಭಿಸಿದರು. ಆದರೆ ಪಿ ಬಿ ಶೆಲ್ಲಿಯವರಿಗೆ ಆಗಲೇ ಮದುವೆಯಾಗಿತ್ತು. ಮಲಸಹೋದರಿ ಕ್ಲೇರ್ ಕ್ಲೇರ್ಮಾಂಟ್ ಜೊತೆಗೂಡಿ ಪರ್ಸಿ ಶೆಲ್ಲಿಯೊಂದಿಗೆ ಮೇರಿ ಫ್ರಾನ್ಸ್‌ಗೆ ಓಡಿ ಹೋದರು. ಅಲ್ಲಿಂದ ಯುರೋಪಿನಾದ್ಯಂತ ಪ್ರಯಾಣ ಬೆಳೆಸಿದರು. ವೈಚಿತ್ರ್ಯವೆಂದರೆ ಈ ಪಯಣದ ಸಂದರ್ಭದಲ್ಲಿ ಶೆಲ್ಲಿ ಮತ್ತು ಕ್ಲೇರ್ಮಾಂಟ್ ಬಹುತೇಕ ಪ್ರೇಮಿಗಳಾಗಿ ಬಿಟ್ಟಿದ್ದರು. ಇದು ಮೇರಿ ಗಾಡ್ವಿನ್‌ರಲ್ಲಿ  ಅಸೂಯೆಯನ್ನುಂಟುಮಾಡಿತು. ಶೆಲ್ಲಿಯ ಈ ನಡವಳಿಕೆ ಒಂದು ಹಂತದಲ್ಲಿ ಮೇರಿ ಗಾಡ್ವಿನ್‌ರನ್ನು ತೀವ್ರ ಅಸಮಾಧಾನಗೊಳಿಸಿದರು, ಫ್ರಾನ್ಸ್‌ನ ಹಳ್ಳಿಗಳಲ್ಲಿ ನಡೆದಾಡುವಾಗ ಇಬ್ಬರೂ ಬೆತ್ತಲೆಯಾಗಿ ಸ್ಟ್ರೀಮ್‌ಗೆ ಧುಮುಕುವಂತೆ ಮೇರಿ ಅವರಿಬ್ಬರಿಗೂವಸಲಹೆ ನೀಡುವಷ್ಟು ಆ ಸಂಬಂಧದಿಂದ ರೋಸಿಹೋಗಿದ್ದರು.  ಏಕೆಂದರೆ ಅವರಿಬ್ಬರೂ  ತತ್ವಗಳನ್ನು, ನಂಬಿಕೆಗಳನ್ನು ಮುರಿದು ಹಾಕಿದ್ದರು.  ಆದರೆ ಅದೆ ಸಮಯದಲ್ಲಿ ಮೇರಿ ಪರ್ಸಿ ಶೆಲ್ಲಿಯ ಸ್ನೇಹಿತನಾಗಿದ್ದ  ಬ್ಯಾರಿಸ್ಟರ್  ಥಾಮಸ್ ಜೇಫರ್ ಸನ್ ಹಾಗ್‌ರನ್ನು ಭೇಟಿಯಾದರು. ಶಾಂತ ಹಾಗೂ ಸಮಾಧಾನದ ಸ್ವಭಾವದ ಹಾಗ್‌ನ ಭೇಟಿಗಳಿಂದ ಅವರು ತಮ್ಮ ನೋವನ್ನು ಮರೆತರು. ತಮ್ಮ ತಪ್ಪನ್ನು ಮರೆಮಾಚಲು ಮೇರಿ ಗಾಡ್ವಿನ್ ಮತ್ತು ಹಾಗ್ ಪ್ರೇಮಿಗಳಾಗಬೇಕೆಂದು ಪರ್ಸಿ ಶೆಲ್ಲಿ ಬಯಸಿದ್ದರು. ಮೇರಿ ಈ ಕಲ್ಪನೆಯನ್ನು ತಳ್ಳಿಹಾಕಲಿಲ್ಲ. ತಾತ್ವಿಕವಾಗಿ ಅವರು ಪ್ರೀತಿಯನ್ನು ನಂಬಿದ್ದರು. ಆದಾಗ್ಯೂ ನಿಜವಾದ ಆಚರಣೆಯಲ್ಲಿ ಅವರು ಪರ್ಸಿ ಶೆಲ್ಲಿಯನ್ನು ಮಾತ್ರ ಪ್ರೀತಿಸುತ್ತಿದ್ದರು. ಹೀಗಾಗಿ ಹಾಗ್‌ನೊಂದಿಗಿನ ಸಂಬಂಧ ಫ್ಲರ್ಟಿಂಗ್ ಮಾಡುವುದಕ್ಕಿಂತ ಹೆಚ್ಚು ಮುಂದುವರಿಯಲಿಲ್ಲ.
(ಥಾಮಸ್ ಜಾಫರ್ ಸನ್ ಹಾಗ್ ಮತ್ತು ಅವನ ಪುಸ್ತಕ)

      ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ ಮೇರಿ ಪರ್ಸಿಯ ಮಗುವಿಗೆ ಗರ್ಭಿಣಿಯಾದರು. ಮುಂದಿನ ಎರಡು ವರ್ಷಗಳಲ್ಲಿ ಮೇರಿ ಮತ್ತು ಪರ್ಸಿ ಶೆಲ್ಲಿ ಬಹಿಷ್ಕಾರ, ನಿರಂತರ ಸಾಲ ಮತ್ತು ಅಕಾಲಿಕವಾಗಿ ಜನಿಸಿದ ಮಗಳ ಮರಣವನ್ನು ಎದುರಿಸಬೇಕಾಯಿತು. ಮೇ ೧೮೧೬ರಲ್ಲಿ, ಮೇರಿ ಗಾಡ್ವಿನ್, ಪರ್ಸಿ ಶೆಲ್ಲಿ, ಅವರ ಮಗ ಮತ್ತು ಕ್ಲೇರ್ ಕ್ಲೇರ್ಮಾಂಟ್ ಅವರೊಂದಿಗೆ ಜಿನೀವಾಕ್ಕೆ ಪ್ರಯಾಣಿಸಿದರು. ಅವರು ಬೇಸಿಗೆಯನ್ನು ಕವಿ ಲಾರ್ಡ್ ಬೈರನ್ ಅವರೊಂದಿಗೆ ಕಳೆಯಲು ಯೋಜಿಸಿದರು. ಈ ಸಮಯದಲ್ಲಿ ಬೈರನ್ ರವರು ಕ್ಲೇರ್ ಅವರೊಂದಿಗೆ ಸಂಬಂಧ ಹೊಂದಿದ್ದುದು ಮೇರಿ ಗಾಡ್ವಿನ್‌ರ ಸಮಾಧಾನಕ್ಕೆ ಕಾರಣವಾಗಿತ್ತು.

ಅದೇ ಸಮಯದಲ್ಲಿ  ಮೇರಿ ಗಾಡ್ವಿನ್ ರವರ ಮಲ-ಸಹೋದರಿ ಅಂದರೆ ತಾಯಿ ಮೇರಿ ವೋಲ್ ಸ್ಟೋನ್ ಕ್ರಾಪ್ಟ್  ಮತ್ತು ಇಮ್ಲೆಯ ಮಗಳಾದ ಫ್ಯಾನಿ ಇಮ್ಲೆ ಮೇರಿಗೆ ಎರಡು ಪತ್ರಗಳನ್ನು ಬರೆದು ತನ್ನ ಅಸಂಬದ್ಧ ಜೀವನದ ಕುರಿತು ತಿಳಿಸಿದಳು. ಅಕ್ಟೋಬರ್ 9 ರಂದು ಬ್ರಿಸ್ಟಲ್‌ನಿಂದ ತಲುಪಿದ ಆ "ಆತಂಕಕಾರಿ ಪತ್ರ"ವನ್ನು ಕಂಡು  ಪರ್ಸಿ ಶೆಲ್ಲಿ ಅವಳನ್ನು ಹುಡುಕಲು ಓಡಿಹೋದರೂ ಅದು ಯಶಸ್ವಿಯಾಗಲಿಲ್ಲ. ಅಕ್ಟೋಬರ್ 10 ರ ಬೆಳಿಗ್ಗೆ ಫ್ಯಾನಿ ಇಮ್ಲೇ ಸ್ವಾನ್ಸೀ ಇನ್‌ನ ಕೋಣೆಯಲ್ಲಿ ಆತ್ಮಹತ್ಯೆ ಟಿಪ್ಪಣಿ ಬರೆದು ಲೌಡನಮ್ ಬಾಟಲಿಯೊಂದಿಗೆ ಶವವಾಗಿ ಪತ್ತೆಯಾದಳು. ಅದೇ ವರ್ಷ ಡಿಸೆಂಬರ್ 10 ರಂದು ಪರ್ಸಿ ಶೆಲ್ಲಿಯವರ ಪತ್ನಿ ಹ್ಯಾರಿಯೆಟ್ ಲಂಡನ್ ನ ಹೈಡ್ ಪಾರ್ಕ್ ನಲ್ಲಿರುವ  ಸರ್ಪೆಂಟೈನ್ ಎಂಬ ಸರೋವರದಲ್ಲಿ ಮುಳುಗಿಹೋದರು. ಈ ಎರಡೂ ಆತ್ಮಹತ್ಯೆಗಳು ಮುಚ್ಚಿಹೋಗಿವೆ. ಹ್ಯಾರಿಯೆಟ್‌ ಕುಟುಂಬವು ಪರ್ಸಿ ಶೆಲ್ಲಿಯನ್ನು ಅಪರಾಧಿ ಎಂದು ನಿರೂಪಿಸಲು ಪ್ರಯತ್ನಿಸಿತಾದರೂ ಅದು ಸಫಲವಾಗಲಿಲ್ಲ.ಹ್ಯಾರಿಯೆಟ್ ನಿಂದ ಜನಿಸಿದ ತನ್ನ ಇಬ್ಬರು ಮಕ್ಕಳನ್ನು ಪಾಲನೆ ಮಾಡಲು ಮದುವೆಯಾಗುವ ಮೂಲಕ ಪ್ರಕರಣವನ್ನು ಸುಧಾರಿಸಲು ಅವರ ವಕೀಲರು ಸಲಹೆ ನೀಡಿದರು; ಆದ್ದರಿಂದ ಪರ್ಸಿ ಶೆಲ್ಲಿ  ಗರ್ಭಿಣಿಯಾಗಿದ್ದ ಮೇರಿ ಗಾಡ್ವಿನ್ ರನ್ನು  30 ಡಿಸೆಂಬರ್ 1816ರಂದು  ಲಂಡನ್ ನ್ನಿನ   ಬ್ರೆಡ್ ಸ್ಟ್ರೀಟ್ ನಲ್ಲಿರುವ ಸೇಂಟ್ ಮಿಲ್ಡ್ರೆಡ್ಸ್ ಚರ್ಚ್ ನಲ್ಲಿ ವಿವಾಹವಾಗಿ ಮೇರಿ ಗಾಡ್ವಿನ್ ಮೇರಿ ಶೆಲ್ಲಿಯಾದರು.
                 1816ರಲ್ಲಿ ಶೆಲ್ಲಿ ದಂಪತಿಗಳು ಮತ್ತು ಮೇರಿಯ ಮಲಸಹೋದರಿ ಜೊತೆಗೂಡಿ ಲಾರ್ಡ್ ಬೈರಾನ್ ಮತ್ತು ಜಾನ್ ವಿಲಿಯಂ ಪೊಲಿಡೋರಿ ಅವರೊಂದಿಗೆ ಸ್ವಿಟ್ಜರ್ಲೆಂಡ್‌ನ ಜಿನೀವಾ ಬಳಿ ಬೇಸಿಗೆಯನ್ನು ಕಳೆದರು.    ಅಲ್ಲಿ ಬೈರನ್, ಜಾನ್ ವಿಲಿಯಂ ಪೊಲಿಡೋರಿ, ಪರ್ಸಿ ಹಾಗೂ ಮೇರಿ ಒಂದೊಂದು ದೆವ್ವದ ಅಥವಾ ಅತಿಮಾನುಷ ಕಥೆಗಳನ್ನು ಬರೆಯಲು ನಿರ್ಧರಿಸಿದರು. ಉಳಿದವರು ಬರೆಯಲು ತೊಡಗಿದರೂ ಮೇರಿ ಕಥೆಯನ್ನು ಬರೆಯಲು ಪ್ರಾರಂಭಿಸದಿದ್ದುದರಿಂದ ಪ್ರತಿ ದಿನದ ಬೆಳಿಗ್ಗೆ ಅವರನ್ನು ಕಥೆ ಬರೆದಾಗಿಲ್ಲವೆಂಬಂತೆ ಛೇಡಿಸಿದ್ದರಿಂದ ಹೊಸದಾದ ವಿಷಯವೊಂದನ್ನು ಮೇರಿ ಯೋಚಿಸಿದರು. ಸಣ್ಣ ಕಥೆ ಎಂದು ಬರೆಯಲು ಆರಂಭಿಸಿದ ವಸ್ತುವಿನ ವಿಸ್ತಾರತೆಯನ್ನು ಕಂಡು ಪರ್ಸಿ ಅದನ್ನು ಕಾದಂಬರಿ ಮಾಡುವಂತೆ ಸೂಚಿಸಿದರು.‌ ಹೀಗೆ ಮೇರಿ  ಶೆಲ್ಲಿ ತನ್ನ ಮೊದಲ ಕಾದಂಬರಿ ಫ್ರಾಂಕೆನ್ ಸ್ಟೈನ್‌ಗೆ ರೂಪರೇಷೆಯನ್ನು ಕಲ್ಪಿಸಿಕೊಂಡರು. 

ಶೆಲ್ಲಿ ದಂಪತಿಗಳು ೧೮೧೮ರಲ್ಲಿ ಬ್ರಿಟನ್ನಿಂದ ಇಟಲಿಗೆ ತೆರಳಿದರು. ೧೮೧೮ರಲ್ಲಿ ಹಾಗೂ ೧೮೧೯ರಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೆಯ ಮಕ್ಕಳನ್ನು ಕಳೆದುಕೊಂಡ ಮೇರಿ ಶೆಲ್ಲಿ ಈ ಆಘಾತದಿಂದ ಚೇತರಿಸಿಕೊಳ್ಳಲು ಬಹಳಷ್ಟು ಸಮಯವನ್ನು ತೆಗೆದುಕೊಂಡರು. ಆದಾಗ್ಯೂ ಈ ಮಕ್ಕಳ ಮರಣದ ನೋವನ್ನು ಅವರು ಕೊನೆಯವರೆಗೂ ಅನುಭವಿಸಿದರು. ಮಕ್ಕಳ ಮರಣದಿಂದ ಉಂಟಾದ ಖಿನ್ನತೆಯಿಂದ ಪರ್ಸಿ ಶೆಲ್ಲಿಯಿಂದ ಕೆಲಕಾಲ ದೂರ ಇರಲು ನಿರ್ಧರಿಸಿದ ಮೇರಿಯ ಕುರಿತು ಪರ್ಸಿ ಶೆಲ್ಲಿ ತಮ್ಮ ನೋಟ್‌ಬುಕ್‌ನಲ್ಲಿ ಬರೆದುಕೊಂಡ ವಿರಹದ ಸಾಲುಗಳು ಅತ್ಯಾಕರ್ಷಕವಾಗಿವೆ.
ನನ್ನ ಪ್ರೀತಿಯ ಮೇರಿ,
ನೀನು
ಈ ಮಂಕುಕವಿದ ಜಗತ್ತಿನಲ್ಲಿ
ಏಕಾಂಗಿಯಾಗಿ ನನ್ನನ್ನು ಬಿಟ್ಟು ಯಾಕೆ ಹೋದೆ?
ನಿನ್ನ ರೂಪವು ನಿಜವಾಗಿಯೂ ಇಲ್ಲಿದೆ
ನನ್ನ ಎದೆಯೊಳಗೆ ಮನೋಹರವಾಗಿ ಉಳಿದುಕೊಂಡಿದೆ
ಆದರೆ ನೀನು ನನ್ನನ್ನು ಬಿಟ್ಟು ಓಡಿಹೋದೆ,
ದುಃಖದ  ಅಸ್ಪಷ್ಟವಾದ ವಾಸಸ್ಥಾನಕ್ಕೆ
ದಾರಿ ಮಾಡಿಕೊಡುವ ಮಂಕುಕವಿದ ಹಾದಿಯಲ್ಲಿ ಹೋಗಿರುವೆ.
ನಾನು ನಿನ್ನನ್ನು ಹಿಂಬಾಲಿಸಲು ಅಶಕ್ತ
ನೀನು ನನ್ನವಳಾಗಿ ಹಿಂತಿರುಗಿ ಬಾ
ಎಂದು ವಿರಹ ತುಂಬಿ ಬರೆದುಕೊಂಡಿರುವುದನ್ನು ಕಾಣುತ್ತೇವೆ.
ನಂತರ ಹಿಂದಿರುಗಿದ ಮೇರಿ ೧೮೧೯ರಲ್ಲಿಯೇ ತಮ್ಮ ನಾಲ್ಕನೆಯ ಆದರೆ ಏಕೈಕ ಬದುಕುಳಿದ ಮಗು ಪರ್ಸಿ ಫ್ಲಾರೆನ್ಸ್ ಶೆಲ್ಲಿಗೆ ಜನ್ಮ ನೀಡಿದರು.
      ರಾಜಕೀಯ ಅರಾಜಕತೆಯಿಂದಾಗಿ ಶೆಲ್ಲಿ ದಂಪತಿಗಳು ಹಾಗೂ ಲಾರ್ಡ ಬೈರನ್ ಇಟಲಿಗೆ ಪಲಾಯನಗೈದರು. ಇಟಲಿಯು ಈ ಬರಹಗಾರರಿಗೆ ಅತ್ಯಗತ್ಯವಾಗಿದ್ದ ರಾಜಕೀಯ ಸ್ವಾತಂತ್ರ್ಯವನ್ನು ನೀಡಿತು. ಇಲ್ಲಿಯೇ ತಮ್ಮ ಹಲವಾರು ಕಾದಂಬರಿಗಳನ್ನು ಬರೆದರು. 

ಮಟಿಲ್ಡಾ, ಐತಿಹಾಸಿಕ ಕಾದಂಬರಿ ವಾಲ್ಪೆರ್ಗಾ ಮತ್ತು ನಾಟಕಗಳಾದ ಪ್ರೊಸರ್ಪೈನ್ ಮತ್ತು ಮಿಡಾಸ್ ಬರೆದರು. 

ತನ್ನ ತಂದೆಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ವಾಲ್ಬೆರ್ಗಾ ಕಾದಂಬರಿ ಬರೆದು ತಂದೆಗೆ ಸಹಾಯ ಮಾಡಿದರು. ಆದರೆ ಪರ್ಸಿ ಶೆಲ್ಲಿ ಇದಕ್ಕಿಂತ ಹೆಚ್ಚು ಸಹಾಯ ಮಾಡಲು ನಿರಾಕರಿಸಿದಾಗ ಅಸಹಾಯಕತೆಯಿಂದ ಪುನಃ ಖಿನ್ನತೆಗೆ ಜಾರಿದರು. 


ಆದರೆ ಈ ಸಮಯದಲ್ಲಿ ಪರ್ಸಿ ಶೆಲ್ಲಿಗೆ ಸೋಫಿಯಾ ಸ್ಟೇಸಿ, ಎಮಿಲಿಯಾ ವಿವಿಯಾನಿ ಮತ್ತು ಜೇನ್ ವಿಲಿಯಮ್ಸ್ ಅವರಂತಹ ಅನೇಕ ಮಹಿಳೆಯರೊಂದಿಗೆ ಸಂಬಂಧವಿತ್ತು. ಅದನ್ನು ನಿಭಾಯಿಸಿ ಪರ್ಸಿಯನ್ನು ತನ್ನವನನ್ನಾಗಿಯೇ ಉಳಿಸಿಕೊಳ್ಳಲು ಮೇರಿ ಹರಸಾಹಸ ಪಡಬೇಕಾಗಿತ್ತು. ಇದು ಅವರನ್ನು ಇನ್ನಷ್ಟು ಘಾಸಿಗೊಳಿಸಿ ಮತ್ತಷ್ಟು ಖಿನ್ನತೆಗೆ ದೂಡಿತು. ಈ ಸಮಯದಲ್ಲಿ ಮೇರಿ ಶೆಲ್ಲಿ ಪದೆ ಪದೇ ಅನಾರೋಗ್ಯದಿಂದ ನರಳಲಾರಂಭಿಸಿದರು.

ಗಂಡನ ಈ ರೀತಿಯ ಹೊರ ಸಂಬಂಧಗಳಿಂದ ರೋಸಿಹೋದ ಮೇರಿಶೆಲ್ಲಿ ತಮ್ಮ ವಲಯದ ಪುರುಷರು ಮತ್ತು ಮಹಿಳೆಯರೊಡನೆ ತಮ್ಮದೇ ಆದ ಭಾವನಾತ್ಮಕ ಸಂಬಂಧಗಳನ್ನು ರೂಪಿಸಿಕೊಂಡರು. ಅದರಲ್ಲೂ ವಿಶೇಷವಾಗಿ ಗ್ರೀಕ್ ಕ್ರಾಂತಿಕಾರಿ ರಾಜಕುಮಾರ ಅಲೆಕ್ಸಾಂಡ್ರೊಸ್ ಮಾವ್ರೊಕೊರ್ಡಾಟೋಸ್, ಜೇನ್ ಮತ್ತು ಎಡ್ವರ್ಡ್ ವಿಲಿಯಮ್ಸ್ ಮುಂತಾದವರ ಜೊತೆ ಸ್ನೇಹಕ್ಕಿಂತ ಮಿಗಿಲಾದ ಭಾವವಿತ್ತು.  ಅದನ್ನು ಪ್ರೇಮ ಎಂದು ಮೇರಿ ಸ್ವತಃ ಒಪ್ಪಿಕೊಂಡಿದ್ದಾಗಿಯೂ ಮೇರಿಯ ಮನಸ್ಸಿನಲ್ಲಿ ಕೊನೆಯವರೆಗೂ ಉಳಿದುಕೊಂಡಿದ್ದು ಕೇವಲ ಪರ್ಸಿ ಶೆಲ್ಲಿ ಮಾತ್ರ ಎಂಬುದನ್ನೂ ಅವರು ಹೇಳಿದ್ದಾರೆ.

                         (ಪರ್ಸಿ ಬೈಶೆ ಶೆಲ್ಲಿ)
    ನಂತರ ನೇಪಲ್ಸ್‌ನ ದಕ್ಷಿಣ ಭಾಗಕ್ಕೆ ಪ್ರಯಾಣ ಬೆಳೆಸಿದ ಶೆಲ್ಲಿ ದಂಪತಿಗಳು ಅಲ್ಲಿ ಶೆಲ್ಲಿ ವಜಾಗೊಳಿಸಿದ ಮಾಜಿ ಸೇವಕರಾದ ಪಾವೊಲೊ ಮತ್ತು ಎಲಿಸ್ ಫೊಗಿಯವರಿಂದ ಬೆದರಿಕೆಗಳನ್ನೆದುರಿಸಬೇಕಾಯಿತು.  ೨೭ ಫೆಬ್ರವರಿ ೧೮೧೯ ರಂದು ನೇಪಲ್ಸ್‌ನಲ್ಲಿ, ಪರ್ಸಿ ಶೆಲ್ಲಿಯು ಎಲೆನಾ ಅಡಿಲೇಡ್ ಶೆಲ್ಲಿ ಎಂಬ ಎರಡು ತಿಂಗಳ ಹೆಣ್ಣು ಮಗುವನ್ನು ಮೇರಿ ಶೆಲ್ಲಿಯಿಂದ ತನ್ನ ಮಗುವಾಗಿ ನೋಂದಾಯಿಸಿಕೊಂಡಿದ್ದಾನೆ ಎಂದು ಈ ಜೋಡಿಯು  ಬಹಿರಂಗಪಡಿಸಿತು. ಶೆಲ್ಲಿಯ ಮಲಸಹೋದರಿ ಕ್ಲೇರ್ ಕ್ಲೇರ್ಮಾಂಟ್ ಮಗುವಿನ ತಾಯಿ ಎಂದು ಫೋಗ್ಗಿಸ್ ಹೇಳಿದರೂ ಇವರ ಜೀವನಚರಿತ್ರೆಕಾರರು ಈ ಘಟನೆಗಳ ಕುರಿತು ವಿವಿಧ ವ್ಯಾಖ್ಯಾನಗಳನ್ನು ನೀಡಿದ್ದಾರೆ: ಪರ್ಸಿ ಶೆಲ್ಲಿ ಸ್ಥಳೀಯ ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿರಬಹುದು. ಅಥವಾ ಆ ಮಗು ಎಲಿಸ್, ಕ್ಲೇರ್ ಅಥವಾ ಅಪರಿಚಿತ ಮಹಿಳೆಯಿಂದ ಪಡೆದ  ಅವನದ್ದೇ ಮಗುವಾಗಿರಬಹುದು ಎಂದು ನಮೂದಿಸಿದ್ದಾರೆ. ಆದರೆ ದತ್ತು ತೆಗೆದುಕೊಂಡ ಆ ಮಗು, ಎಲೆನಾ ಅಡಿಲೇಡ್ ಶೆಲ್ಲಿ ೯ ಜೂನ್ ೧೮೨೦ ರಂದು ನೇಪಲ್ಸ್‌ನಲ್ಲಿ ಮರಣ ಹೊಂದಿತು.
ನೇಪಲ್ಸ್ ಅನ್ನು ತೊರೆದ ನಂತರ ಶೆಲ್ಲಿ ದಂಪತಿಗಳು ರೋಮ್ ನಗರದಲ್ಲಿ ನೆಲೆಸಿದರು,  ರೋಮ್‌ನಲ್ಲಿ ಮೇರಿ ಶೆಲ್ಲಿ ತಮ್ಮ ಅಪೂರ್ಣವಾದ ಕಾದಂಬರಿ ವ್ಯಾಲೆರಿಯಸ್, ದಿ ರೀನಿಮೇಟೆಡ್ ರೋಮನ್ ಬರೆಯಲು ಪ್ರಾರಂಭಿಸಿದರು. ಈ ಕಾದಂಬರಿಯಲ್ಲಿ ನಾಯಕ ರೋಮ್‌ನ ಅವನತಿ ಮತ್ತು ಕ್ಯಾಥೋಲಿಕ್ ಧರ್ಮದ ಕುತಂತ್ರಗಳನ್ನು ಹಾಗೂ ಮೂಢನಂಬಿಕೆಗಳನ್ನು ವಿರೋಧಿಸುತ್ತಾನೆ. ಆದರೆ ಆ ಸಮಯದಲ್ಲಿ ಅವರ ಮಗ ವಿಲಿಯಂ ಮಲೇರಿಯಾದಿಂದ ಮರಣಹೊಂದುತ್ತಾರೆ. ಹೀಗಾಗಿ ಮೇರಿ ಕಾದಂಬರಿಯ ಬರವಣಿಗೆಯನ್ನು ನಿಲ್ಲಿಸಿದರು. 'ನನ್ನ ಗಂಡನ ಆರೋಗ್ಯವನ್ನು ಸುಧಾರಿಸಲು ಇಟಲಿಗೆ ಬಂದಿದ್ದೇನೆ. ಬದಲಿಗೆ ಇಟಾಲಿಯನ್ ಹವಾಮಾನವು ತನ್ನ ಇಬ್ಬರು ಮಕ್ಕಳನ್ನು ಕೊಂದಿದೆ' ಎಂದು ಕಟುವಾಗಿ ಪ್ರತಿಕ್ರಿಯಿಸಿದರು. 

ತಮ್ಮ ದುಃಖವನ್ನು ಮರೆಯಲು 'ದಿ ಫೀಲ್ಡ್ಸ್ ಆಫ್ ಫ್ಯಾನ್ಸಿ' ಎಂಬ ಕಾದಂಬರಿಯನ್ನು ಬರೆದರು. ಮುಂದೆ ಅದಕ್ಕೆ ಮಟಿಲ್ಡಾ ಎಂದು ಮರುನಾಮಕರಣ ಮಾಡಲಾಯಿತು. 
ಇದರಲ್ಲಿ ಒಬ್ಬ ಯುವತಿಯ ಸೌಂದರ್ಯವು ಅವಳ ತಂದೆಯಲ್ಲಿ ಕಾಮಪೂರಿತವಾದ ಪ್ರೀತಿಯನ್ನು ಪ್ರೇರೇಪಿಸಿ ಮಗಳೊಂದಿಗೆ ಅನುಚಿತವಾಗಿ ವ್ಯವಹರಿಸುವ ಕಥಾವಸ್ತುವಿದೆ. ತಂದೆ ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮಗಳು, "ತಾನು ಸ್ಫೂರ್ತಿ ಪಡೆದ ಅಸ್ವಾಭಾವಿಕ ಪ್ರೀತಿಯ" ಬಗ್ಗೆ ಕೊರಗುತ್ತಾ ತನ್ನ ಉಳಿದ ಜೀವನವನ್ನು ಹತಾಶೆಯಿಂದ ಕಳೆಯುತ್ತಾಳೆ. ಆ ಯುವತಿ ಮಟಿಲ್ಡಾ ತನ್ನ ತಂದೆಯ ಭಾವನೆಗಳನ್ನು ಪ್ರೋತ್ಸಾಹಿಸಲು ಏನನ್ನೂ ಮಾಡದಿದ್ದರೂ ಅವರ ಮರಣಾನಂತರದ ಜೀವನದಲ್ಲಿ ಶಿಕ್ಷಿಸಲ್ಪಟ್ಟಂತೆ ಚಿತ್ರಿಸಲಾಗಿದೆ. ಕಾದಂಬರಿಯು ಪಿತೃಪ್ರಧಾನ ಸಮಾಜದ ಸ್ತ್ರೀಯ ತಲ್ಲಣಗಳನ್ನು ಬಿಂಬಿಸುತ್ತದೆ.




೧೮೨೨ರ ಬೇಸಿಗೆಯಲ್ಲಿ ಪುನಃ ಗರ್ಭಿಣಿಯಾದ ಮೇರಿ ಪರ್ಸಿ, ಕ್ಲೇರ್, ಎಡ್ವರ್ಡ್ ಮತ್ತು ಜೇನ್ ವಿಲಿಯಮ್ಸ್ ಅವರೊಂದಿಗೆ ಲೆರಿಸಿ ಕೊಲ್ಲಿಯಲ್ಲಿರುವ ಸ್ಯಾನ್ ಟೆರೆಂಜೊ ಎಂಬ ಕುಗ್ರಾಮದ ಬಳಿ ಸಮುದ್ರದ ಅಂಚಿನಲ್ಲಿರುವ ಪ್ರತ್ಯೇಕವಾದ ವಿಲ್ಲಾ ಮ್ಯಾಗ್ನಿಗೆ ತೆರಳಿದರು.  ಇಕ್ಕಟ್ಟಾದ ಮತ್ತು ಜನಸಂಪರ್ಕದಿಂದ ದೂರವಿರುವ ವಿಲ್ಲಾ ಮ್ಯಾಗ್ನಿಯನ್ನು ಬಂದೀಖಾನೆ ಎಂದು ಪರಿಗಣಿಸಿದ ಮೇರಿ ಸದಾ ಅತೃಪ್ತರಾಗಿದ್ದು ವಿಚಲಿತಳಾಗಿದ್ದಂತೆ ಕಾಣಿತ್ತಿದ್ದರು. ಜೂನ್ ೧೬ರಂದು ಗರ್ಭಪಾತವಾಗಿ ತುಂಬಾ ರಕ್ತವನ್ನು ಕಳೆದುಕೊಳ್ಳಬೇಕಾಯಿತು. ಬಹುತೇಕ ಸತ್ತು ಹೋದಮತಿದ್ದ ಅವರನ್ನು ಪರ್ಸಿ ಶೆಲ್ಲಿ  ವೈದ್ಯರಿಗಾಗಿ ಕಾಯುವಾಗ ರಕ್ತಸ್ರಾವವನ್ನು ತಡೆಯಲು ಅವರನ್ನು ಮಂಜುಗಡ್ಡೆಯ ಸ್ನಾನದ ಬುಟ್ಟಿಯಲ್ಲಿ ಕೂರಿಸಿದನು. ನಂತರ ವೈದ್ಯರ ಸತತ ಪ್ರಯತ್ನದಿಂದ ಪುನರ್ಜನ್ಮ ಪಡೆದ ಮೇರಿ ಆ ಸಮಯದಲ್ಲಿ ತೀರಾ ಖಿನ್ನತೆಗೆ ಒಳಗಾಗಿದ್ದರು.  ಆ ಬೇಸಿಗೆಯಲ್ಲಿ ದಂಪತಿಗಳ ಸಂಬಂಧ ಹದಗೆಟ್ಟಿತ್ತು. ಖಿನ್ನತೆಗೆ ಒಳಗಾದ ಮತ್ತು ದುರ್ಬಲಗೊಂಡ ಹೆಂಡತಿಯೊಂದಿಗೆ ಹೆಚ್ಚು ಸಮಯ ಕಲೆಯಬೇಕಾಗಿದ್ದ ಪರ್ಸಿ ಶೆಲ್ಲಿ ಅದರ ಬದಲು ಜೇನ್ ವಿಲಿಯಮ್ಸ್ ಜೊತೆ ಸಮಯ ಕಳೆಯ ತೊಡಗಿದರು ಸ್ಯಾನ್ ಟೆರೆಂಜೊದಲ್ಲಿರುವಾಗ ಪರ್ಸಿ ಶೆಲ್ಲಿ ಬರೆದ ಹೆಚ್ಚಿನ ಕವನಗಳು ಮೇರಿಯ ಬದಲಾಗಿ ಜೇನ್ ಅನ್ನು ಒಳಗೊಂಡಿವೆ.
.              (ಜೇನ್ ವಿಲಿಯಮ್ಸ್)    

೧ ಜುಲೈ ೧೮೨೨ರಂದು, ಪರ್ಸಿ ಶೆಲ್ಲಿ, ಎಡ್ವರ್ಡ್ ಎಲ್ಲೆರ್ಕರ್ ವಿಲಿಯಮ್ಸ್ ಮತ್ತು ಕ್ಯಾಪ್ಟನ್ ಡೇನಿಯಲ್ ರಾಬರ್ಟ್ಸ್  ಮುಂತಾದವರೊಂದಿಗೆ ಪರ್ಸಿ ಶೆಲ್ಲಿ, ಲಾರ್ಡ್ ಬೈರಾನ್ ಮತ್ತು ಲೀ ಹಂಟ್ ಮುಂತಾದವರು ಡೇನಿಯಲ್ ರಾಬರ್ಟ್ಸ್ ಮತ್ತು ಎಡ್ವರ್ಡ್ ಟ್ರೆಲಾನಿ ವಿನ್ಯಾಸಗೊಳಿಸಿದ ದೋಣಿಯಲ್ಲಿ ದಕ್ಷಿಣಕ್ಕೆ ಲಿವೊರ್ನೊಗೆ ಸಮುದ್ರಯಾನ ಮಾಡಿದರು.  
.                  (ಎಡ್ವರ್ಡ್ ವಿಲಿಯಮ್ಸ್)

ಅಲ್ಲಿ ಪರ್ಸಿ ಶೆಲ್ಲಿ, ಬೈರಾನ್ ಮತ್ತು ಲೀ ಹಂಟ್ ಅವರೊಂದಿಗೆ ದಿ ಲಿಬರಲ್ ಎಂಬ ಮೂಲಭೂತ ನಿಯತಕಾಲಿಕವನ್ನು ಪ್ರಾರಂಭಿಸುವ ಕುರಿತು ಚರ್ಚೆ ನಡೆಸಿದರು.  ಜುಲೈ ೮ರಂದು, ತಮ್ಮ ಹದಿನೆಂಟು ವರ್ಷದ ದೋಣಿ ಹುಡುಗ ಚಾರ್ಲ್ಸ್ ವಿವಿಯನ್ ಅವರೊಂದಿಗೆ ಲೆರಿಸಿಗೆ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸಿದರು. ಆದರ  ಅವರು ತಮ್ಮ ಗಮ್ಯಸ್ಥಾನವನ್ನು ತಲುಪಲೇ ಇಲ್ಲ. ಮೇರಿ ಶೆಲ್ಲಿ ಮತ್ತು ಜೇನ್ ವಿಲಿಯಮ್ಸ್ ತಮ್ಮ ಗಂಡಂದಿರು ಇನ್ನೂ ಜೀವಂತವಾಗಿದ್ದಾರೆ ಎಂಬ ಭರವಸೆಯಿಂದ ಲಿವೊರ್ನೊಗೆ ನಂತರ ಪಿಸಾಗೆ ಹತಾಶವಾಗಿ ಧಾವಿಸಿದರು.  ಮೂರು ದೇಹಗಳು ವಿಯಾರೆಗಿಯೊ ಬಳಿಯ ಕರಾವಳಿಯಲ್ಲಿ, ಲಿವೊರ್ನೊ ಮತ್ತು ಲೆರಿಸಿ ನಡುವಿನ ಮಧ್ಯದಲ್ಲಿ ಕೊಚ್ಚಿಹೋದವು. ಚಂಡಮಾರುತ ನಡೆದ ಹತ್ತು ದಿನಗಳ ನಂತರ,  ಟ್ರೆಲಾನಿ, ಬೈರಾನ್ ಮತ್ತು ಹಂಟ್ ಪರ್ಸಿ ಶೆಲ್ಲಿಯ ಶವವನ್ನು ವಿಯಾರೆಗ್ಗಿಯೊ ಸಮುದ್ರತೀರದಲ್ಲಿ ಸುಟ್ಟುಹಾಕಲಾಯಿತು.
.                (ಲಾರ್ಡ್ ಬೈರನ್)
ತನ್ನ ಗಂಡನ ಮರಣದ ನಂತರ, ಮೇರಿ ಶೆಲ್ಲಿ ಜಿನೋವಾದಲ್ಲಿ ಲೇ ಹಂಟ್‌ನ ಅವನ ಕುಟುಂಬದೊಂದಿಗೆ ಒಂದು ವರ್ಷ ವಾಸಿಸಿದರು. ಬರವಣಿಗೆಯ ಮೂಲಕವೇ ತನ್ನ ಮಗನಿಗಾಗಿ ಬದುಕಲು ನಿರ್ಧರಿಸಿದರು. ಆದರೆ ಆರ್ಥಿಕ ಪರಿಸ್ಥಿತಿಯು ಅನಿಶ್ಚಿತವಾಗಿತ್ತು. ೨೩ ಜುಲೈ ೧೮೨೩ರಂದು ಜಿನೋವಾವನ್ನು ಬಿಟ್ಟು ಇಂಗ್ಲೆಂಡ್‌ಗೆ ತೆರಳಿದರು. ಅವರ ಮಾವ ಪರ್ಸಿ ಶೆಲ್ಲಿಯ ತಂದೆಯಿಂದ ಸ್ವಲ್ಪ ಮುಂಗಡ ಹಣವನ್ನು ಪಡೆಯುವವರೆಗೆ ತನ್ನ ತಂದೆ ಮತ್ತು ಮಲತಾಯಿಯೊಂದಿಗೆ ಸ್ಟ್ರಾಂಡ್‌ನಲ್ಲಿಯೇ ವಾಸಿಸುತ್ತಿದ್ದರು. ಪರ್ಸಿ ಶೆಲ್ಲಿಯ ತಂದೆ ಸರ್ ತಿಮೋತಿ ಶೆಲ್ಲಿ ತಮ್ಮ ಮೊಮ್ಮಗ ಪರ್ಸಿ ಫ್ಲಾರೆನ್ಸ್‌ಗೆ ಬೆಂಬಲ ನೀಡಲು ಒಪ್ಪಿಗೆ ನೀಡಿದ್ದರೂ, ತಾನು ನೇಮಿಸಿದ ಪಾಲಕನಿಗೆ ಹಸ್ತಾಂತರಿಸಿದರೆ ಮಾತ್ರ ಹಣ ಕೊಡುವುದಾಗಿ ನಿರ್ಬಂಧ ಹೇರಿದಾಗ ಮೇರಿ ಶೆಲ್ಲಿ ಈ ಕಲ್ಪನೆಯನ್ನು ತಕ್ಷಣವೇ ತಿರಸ್ಕರಿಸಿದರು. ಆದರೆ ನ್ಯಾಯಾಲಯದ ಮುಖಾಂತರ ಸರ್ ತಿಮೋತಿಯಿಂದ ಸೀಮಿತ ವಾರ್ಷಿಕ ಭತ್ಯೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ಅರ ದಿನಗಳ ಅಂತ್ಯದವರೆಗೆ ಮೇರಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಲು ನಿರಾಕರಿಸಿ ವಕೀಲರ ಮೂಲಕ ಮಾತ್ರ ಮೇರಿಯೊಂದಿಗೆ ವ್ಯವಹರಿಸಿದರಲ್ಲದೆ ಯಾವುದೇ ಕಾರಣಕ್ಕೂ ಪರ್ಸಿ ಶೆಲ್ಲಿಯ ಜೀವನ ಚರಿತ್ರೆ ಬರೆದು ಅವನ ಸಂಬಂಧಗಳ ಬಗ್ಗೆ ಹೇಳದಿರುವಂತೆ ದಿಗ್ಭಂಧನ ವಿಧಿಸಿ ಹಾಗೇನಾದರೂ ಚರಿತ್ರೆಯನ್ನು ಪ್ರಕಟಿಸಿದರೆ ಭತ್ಯೆಯನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದರು.


 ಮೇರಿ ಶೆಲ್ಲಿ ತನ್ನ ಇತರ ಸಾಹಿತ್ಯಿಕ ಪ್ರಯತ್ನಗಳ ನಡುವೆ ತನ್ನ ಪತಿಯ ಕವಿತೆಗಳನ್ನು ಸಂಪಾದಿಸುವುದರಲ್ಲಿ ನಿರತರಾಗಿದ್ದರು. ೧೮೨೬ರಲ್ಲಿ, ಪರ್ಸಿ ಫ್ಲಾರೆನ್ಸ್ ತನ್ನ ಮಲಸಹೋದರ ಚಾರ್ಲ್ಸ್ ಶೆಲ್ಲಿಯ ಮರಣದ ನಂತರ ಶೆಲ್ಲಿ ಎಸ್ಟೇಟ್‌ನ ಕಾನೂನುಬದ್ಧ ಉತ್ತರಾಧಿಕಾರಿಯಾದ ನಂತರ ಸರ್ ತಿಮೋತಿ ಮೇರಿಯ ಭತ್ಯೆಯನ್ನು ವರ್ಷಕ್ಕೆ ೧೦೦ರಿಂದ ೨೫೦ಕ್ಕೆ ಏರಿಸಿದರೂ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಮಾವ ಸರ್ ತಿಮೋತಿ ಹಾಗೂ ಅಪ್ಪ ವಿಲಿಯಂ ಗಾಡ್ವಿನ್ ಪರ್ಸಿ ಬೈಸ್ಶೆ ಶೆಲ್ಲಿ ಅವರೊಂದಿಗಿನ ಸಂಬಂಧವನ್ನು ಇನ್ನೂ ಒಪ್ಪದಿದ್ದುದರಿಂದ ಬಹಿಷ್ಕಾರ ಹಾಗೆಯೇ ಮುಂದುವರೆದಿತ್ತು.

೧೮೨೪ರ ಬೇಸಿಗೆಯಲ್ಲಿ, ಮೇರಿ ಶೆಲ್ಲಿ ಉತ್ತರ ಲಂಡನ್‌ನ ಕೆಂಟಿಶ್ ಟೌನ್‌ಗೆ ಜೇನ್ ವಿಲಿಯಮ್ಸ್ ಬಳಿಗೆ ತೆರಳಿದರು. ಆಕೆಯ ಜೀವನಚರಿತ್ರೆಕಾರ ಮುರಿಯಲ್ ಸ್ಪಾರ್ಕ್ ಹೇಳುವಂತೆ ಜೇನ್ ಅವರೊಂದಿಗೆ "ಸ್ವಲ್ಪ ಪ್ರೀತಿಯಲ್ಲಿ" ಇದ್ದರಾದರೂ ಪತ್ನಿಯಾಗಿ ಮೇರಿಯ ಅಸಮರ್ಪಕತೆಯಿಂದಾಗಿ ಪರ್ಸಿಯು ಮೇರಿಗಿಂತ ತನಗೆ ಆದ್ಯತೆ ನೀಡಿದ್ದಾನೆ ಎಂದು ಜೇನ್ ನಂತರ ಗಾಸಿಪ್ ಮಾಡುವ ಮೂಲಕ ಮೇರಿಯನ್ನು ಭ್ರಮನಿರಸನಗೊಳಿಸಿದಳು. ಆದರೆ ಕೊನೆಗೆ ಜೇನ್ ಮೇರಿಯ ಸ್ನೇಹಿತನಾಗಿದ್ದ ಥಾಮಸ್ ಜೆಫರ್ ಸನ್ ಹಾಗ್ ನನ್ನು ಮದುವೆಯಾದಳು. ಈ ಸಮಯದಲ್ಲಿ ಮೇರಿ ಶೆಲ್ಲಿ ತನ್ನ ಕಾದಂಬರಿ 'ದಿ ಲಾಸ್ಟ್ ಮ್ಯಾನ್' (೧೮೨೬)ನ ಬರವಣಿಗೆಯಲ್ಲಿ ತೊಡಗಿದ್ದರು.

 ಬೈರಾನ್ ಮತ್ತು ಪರ್ಸಿ ಶೆಲ್ಲಿಯ ಆತ್ಮಚರಿತ್ರೆಗಳನ್ನು ಬರೆಯುವ ಸ್ನೇಹಿತರ ಸರಣಿಗೆ ಸಹಾಯ ಮಾಡಿ ತನ್ನ ಪತಿಯನ್ನು ಅಮರಗೊಳಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದರು. ಸುಮಾರು ಆ ಸಮಯದಲ್ಲೇ ಅಮೇರಿಕನ್ ನಟ ಜಾನ್ ಹೋವರ್ಡ್ ಪೇನ್ ಮತ್ತು ಅಮೇರಿಕನ್ ಬರಹಗಾರ ವಾಷಿಂಗ್ಟನ್ ಇರ್ವಿಂಗ್ ಅವರನ್ನು ಭೇಟಿಯಾದರು. ಪೇನ್ ಮೇರಿಯವರನ್ನು ಪ್ರೀತಿಸಲು ಪ್ರಾರಂಭಿಸಿದರು. ೧೮೨೬ರಲ್ಲಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಾಗ ಒಬ್ಬ ಪ್ರತಿಭಾವಂತನನ್ನು ಮದುವೆಯಾದ ನಂತರ ಇನ್ನೊಬ್ಬ ಪ್ರತಿಭಾವಂತನನ್ನು ಮಾತ್ರ ಮದುವೆಯಾಗಬಹುದು ಎಂದು ನಿರಾಕರಿಸಿದರು.  ಪೇನ್ ಮೊದಲು ನಿರಾಕರಣೆಯನ್ನು ಒಪ್ಪಿಕೊಂಡರು ಸಹ ತನ್ನ ಸ್ನೇಹಿತ ಇರ್ವಿಂಗ್‌ರನ್ನು  ತನ್ನ ಸಲುವಾಗಿ ತನ್ನ ಪ್ರೇಮವನ್ನು ಪ್ರಸ್ತಾಪಿಸುವಂತೆ ಮೇರಿಯವರ ಬಳಿ ಕಳುಹಿಸಿದರು. ಮೇರಿ ಶೆಲ್ಲಿಯವರಿಗೆ ಪೇನ್‌ರವರ ಈ ಯೋಜನೆಯ ಬಗ್ಗೆ ತಿಳಿದಿತ್ತು, ಮತ್ತು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಅವರ ಜೀವನಚರಿತ್ರೆಕಾರರು ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಗಂಡನ ಕೃತಿಗಳನ್ನು ಪ್ರಕಟಿಸಲು ಹೆಚ್ಚು ಆಸಕ್ತಿ ತೋರಿದ್ದ ಮೇರಿ ಶೆಲ್ಲಿಯವರ ಕೃತಿ ಫ್ರಾಂಕೆನ್‌ಸ್ಟೈನ್ ಮಹತ್ವದ ಕಾದಂಬರಿ ಎಂದು ಹೆಸರುವಾಸಿಯಾಗಿದೆ.

 ಮೊದಲು ಅನಾಮಧೇಯವಾಗಿ ಪ್ರಕಟವಾಗಿದ್ದ ಈ ಕೃತಿಯನ್ನು ಪಿ. ಬಿ ಶೆಲ್ಲಿಯ ಮುನ್ನುಡಿಯಿದ್ದರೂ ಅದನ್ನು ಅವನೇ ಬರೆದಿರಬಹುದೆಂದು ಹೆಚ್ಚಿನವರು ತಿಳಿದಿದ್ದರು. ಯಾಕೆಂದರೆ ಅದನ್ನು ಪರ್ಸಿ ಶೆಲ್ಲಿಯ ಗುರುವಾದ ವಿಲಿಯಂಗಾಡ್ವಿನ್‌ಗೆ ಅರ್ಪಿಸಲಾಗಿತ್ತು. ಕೊನೆಗೆ ಮೇರಿ ಕೂಡ ಗಾಡ್ವಿನ್ ಪುತ್ರಿ ಎಂಬ ಅಂಶ ಬೆಳಕಿಗೆ ಬಂತು.


       ಇದೊಂದು ಗೋಥಿಕ್ ಶೈಲಿಯ ಕಾದಂಬರಿ. ಲುಯಿಗಿ ಗಾಲ್ವಾನಿಯವರ ಪ್ರಯೋಗಗಳಿಂದ ಪ್ರಭಾವಿತವಾಗಿ ಬರೆದಿರುವಂತಹದ್ದು. ಡಾಕ್ಟರ್ ವಿಕ್ಟರ್ ಪ್ರಾಂಕೆನ್‌ಸ್ಟೈನ್ ಎಂಬ  ವಿಜ್ಞಾನಿಯೊಬ್ಬರು ಸಂಪ್ರದಾಯಕವಾಗಿ ಪ್ರಯೋಗಾಲಯದಲ್ಲಿ ಕೃತಕವಾಗಿ ನಿರ್ಮಿಸಿದ ಮನುಷ್ಯ ಸೃಷ್ಟಿಸುವ ಭೀಕರ ಅವಾಂತರಗಳನ್ನು ಹೇಳುವ ಈ ಕಾದಂಬರಿ ಅನೇಕ ನಾಟಕೀಯ ಮತ್ತು ಚಲನಚಿತ್ರಗಳಿಗೆ ಸ್ಫೂರ್ತಿ ನೀಡಿದೆ. ಅಮೇರಿಕನ್ ದೈತ್ಯ ಮಾನವರನ್ನು ಸೃಷ್ಟಿಸುವ ಚಲನಚಿತ್ರಗಳು ಈ ಕಾದಂಬರಿಯಿಂದ ಪ್ರೇರಣೆಗೊಂಡಿವೆ. ಇತ್ತೀಚೆಗೆ ಮೇರಿ ಶೆಲ್ಲಿಯವರ ಸಾಧನೆಗಳ ಬಗ್ಗೆ ಹೆಚ್ಚು ಸಮಗ್ರವಾಗಿ ಅಧ್ಯಯನ ನಡೆಸಲಾಗುತ್ತಿದ್ದು ಸ್ಕಾಲರ್ ಶಿಪ್ ಕೂಡ ಲಭ್ಯವಾಗುತ್ತಿದೆ.  ವಿದ್ವಾಂಸರು ಅವರ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ, ವಿಶೇಷವಾಗಿ ಅವರ ಐತಿಹಾಸಿಕ ಕಾದಂಬರಿಗಳಾದ ವಾಲ್ಪೆರ್ಗಾ (೧೮೨೩) ಮತ್ತು ದಿ ಫಾರ್ಚೂನ್ಸ್ ಆಫ್ ಪರ್ಕಿನ್ ವಾರ್ಬೆಕ್ (೧೮೩೦) ಮುಂತಾದ ಅವರ ಹೆಚ್ಚು ಪ್ರಸಿದ್ಧಿ ಹೊಂದಿದ ಕಾದಂಬರಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲಾಗುತ್ತಿದೆ.

             ಅಪೋಕ್ಯಾಲಿಪ್ಸ್ ಕಾದಂಬರಿ  'ದಿ ಲಾಸ್ಟ್ ಮ್ಯಾನ್' (೧೮೨೬) ಪ್ಲೇಗ್‌ನಿಂದ ಮಾನವ ಜನಾಂಗ ವಿನಾಶದ ಅಂಚಿಗೆ ಬಂದು ನಿಲ್ಲುವ ವಿಷಯವನ್ನು ಇಟ್ಟುಕೊಂಡು ಬರೆಯಲಾದ ಕಾದಂಬರಿ. ಇದು ಅವರ ಅತ್ಯುತ್ತಮ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. 

ಮತ್ತು ಅವರ ಕೊನೆಯ ಎರಡು ಕಾದಂಬರಿಗಳಾದ 'ಲೋಡೋರ್' (೧೮೩೫) ಮತ್ತು 'ಫಾಕ್ನರ್' (೧೮೩೭) ಕೂಡ ಹೆಚ್ಚು ಜನರನ್ನು ಆಕರ್ಷಿಸಿವೆ.

 ಜರ್ಮನಿ ಮತ್ತು ಇಟಲಿಯಲ್ಲಿ ಪ್ರಯಾಣದ ಕುರಿತಾದ ಪುಸ್ತಕ ರಾಂಬಲ್ಸ್‌ನಂತಹ ಅವರ ಪ್ರಸಿದ್ಧಿ ಪಡೆಯದ ಕೃತಿಗಳ ಅಧ್ಯಯನ ಕೂಡ ಮಾಡಲಾಗುತ್ತಿದೆ. ಡಿಯೋನೈಸಿಯಸ್ ಲಾರ್ಡನರ್ ಅವರ ಕ್ಯಾಬಿನೆಟ್ ಸೈಕ್ಲೋಪೀಡಿಯಾ (೧೮೨೯-೧೮೪೬)ಗಾಗಿ ಒಟ್ಟಾಗಿಸಿದ ಜೀವನಚರಿತ್ರೆಯ ಲೇಖನಗಳಲ್ಲಿ ಶೆಲ್ಲಿ ತನ್ನ ಜೀವನದುದ್ದಕ್ಕೂ ರಾಜಕೀಯ ತೀವ್ರಗಾಮಿಯಾಗಿ ಉಳಿದುಕೊಂಡಿರುವ ದೃಷ್ಟಿಕೋನವನ್ನು ತಿಳಿಸುತ್ತದೆ. ಶೆಲ್ಲಿಯವರ ಕೃತಿಗಳು ಕುಟುಂಬದಲ್ಲಿ ಮಹಿಳೆಯರಿಗೆ ದೊರಕಬಹುದಾದ ಸಹಕಾರ ಮತ್ತು ಸಹಾನುಭೂತಿಯ ಕುರಿತಾಗಿದ್ದು ಅವು ನಾಗರಿಕ ಸಮಾಜವನ್ನು ಸುಧಾರಿಸುವ ಮಾರ್ಗಗಳಾಗಿವೆ ಎಂದು ವಿಮರ್ಶಕರು ಅರ್ಥೈಸುತ್ತಾರೆ. ಈ ದೃಷ್ಟಿಕೋನವು ಅವರ ತಂದೆ ವಿಲಿಯಂ ಗಾಡ್ವಿನ್‌ರ ರಾಜಕೀಯ ಸಿದ್ಧಾಂತಗಳಿಂದ ಪ್ರತಿಪಾದಿಸಲ್ಪಟ್ಟಿದ್ದೇ ಹೊರತು ಪತಿ ಪರ್ಸಿ ಶೆಲ್ಲಿಯವರ  ರೋಮ್ಯಾಂಟಿಸಿಸಮ್ ಸಾಹಿತ್ಯದ ಪ್ರಭಾವವಾಗಿರಲಿಲ್ಲ ಎಂಬುದನ್ನು ಗುರುತಿಸಲಾಗಿದೆ.

ಅವರು ಇಟಾಲಿಯನ್, ಸ್ಪ್ಯಾನಿಷ್, ಪೋರ್ಚುಗೀಸ್ ಮತ್ತು ಫ್ರೆಂಚ್ ಲೇಖಕರ ಐದು ಸಂಪುಟಗಳನ್ನು ಲಾರ್ಡ್ನರ್ ಕ್ಯಾಬಿನೆಟ್ ಸೈಕ್ಲೋಪೀಡಿಯಾಕ್ಕೆ ಕೊಡುಗೆ ನೀಡಿದರು. ಮಹಿಳಾ ನಿಯತಕಾಲಿಕೆಗಳಿಗೆ ಕಥೆಗಳನ್ನು ಬರೆದಿದ್ದಾರೆ. ೧೮೩೬ರಲ್ಲಿ ಅವರ ತಂದೆಯವರು ಎಂಬತ್ತನೆ ವಯಸ್ಸಿನಲ್ಲಿ ಮರಣ ಹೊಂದಿದ ನಂತರ ಅವರು ತಮ್ಮ ಇಚ್ಛೆಯಲ್ಲಿ ವಿನಂತಿಸಿದಂತೆ ಅವರ ಪತ್ರಗಳ ಪ್ರಕಟಣೆಗಾಗಿ ಜೋಡಿಸಲು ಪ್ರಾರಂಭಿಸಿದರು; ಆದರೆ ಎರಡು ವರ್ಷಗಳ ಕೆಲಸದ ನಂತರ, ಅವರು ಈ ಯೋಜನೆಯನ್ನು ಕೈಬಿಟ್ಟರು. ಈ ಅವಧಿಯಲ್ಲೂ ತಮ್ಮ ಪತಿ ಪರ್ಸಿ ಶೆಲ್ಲಿಯವರ ಕಾವ್ಯವನ್ನು ಜೋಡಿಸಿ ಪ್ರಕಟಿಸುವ ಕೆಲಸವನ್ನೂ ಮಾಡುತ್ತಿದ್ದರು. ೧೮೩೭ ರ ಹೊತ್ತಿಗೆ, ಪರ್ಸಿಯ ಕೃತಿಗಳು ಪ್ರಸಿದ್ಧವಾದವು ಮತ್ತು ಹೆಚ್ಚು ಮೆಚ್ಚುಗೆ ಪಡೆದವು. ೧೮೩೮ರ ಬೇಸಿಗೆಯಲ್ಲಿ ಟೆನ್ನಿಸನ್‌ನ ಪ್ರಕಾಶಕ ಮತ್ತು ಚಾರ್ಲ್ಸ್ ಲ್ಯಾಂಬ್‌ರವರ ಅಳಿಯ ಎಡ್ವರ್ಡ್ ಮೊಕ್ಸನ್, ಪರ್ಸಿ ಶೆಲ್ಲಿಯವರ ಸಂಗ್ರಹಿಸಿದ ಕೃತಿಗಳನ್ನು ಪ್ರಕಟಿಸಲು ಪ್ರಸ್ತಾಪಿಸಿದರು. ಅವರ ಪೊಯೆಟಿಕಲ್ ವರ್ಕ್ಸ್‌ನ್ನು ಸಂಪಾದಿಸಲು ಮೇರಿಗೆ ೫೦೦ ಡಾಲರ್‌ನ್ನು ೧೮೩೮ರಲ್ಲಿ ಪಾವತಿಸಲಾಯಿತು. ಆಗಲೂ ಕೂಡ ಪರ್ಸಿ ಶೆಲ್ಲಿಯವರ ತಂದೆ  ಸರ್ ತಿಮೋತಿ ಅವರು ಪರ್ಸಿಯವರ ಕವನ ಸಂಕಲನಗಳ ಜೊತೆ ಜೀವನ ಚರಿತ್ರೆಯನ್ನು ಸೇರಿಸಬಾರದು ಎಂದು ಒತ್ತಾಯಿಸಿದರು. ಆದರೆ ಮೇರಿ ಪರ್ಸಿಯ ಜೀವನದ ಕಥೆಯನ್ನು ಹೇಳಲು ಒಂದು ಮಾರ್ಗವನ್ನು ಕಂಡುಕೊಂಡರು. ಕವಿತೆಗಳ ಬಗ್ಗೆ ವ್ಯಾಪಕವಾದ ಜೀವನಚರಿತ್ರೆಯ ಟಿಪ್ಪಣಿಗಳನ್ನು ಸೇರಿಸಿದರು.

ಶೆಲ್ಲಿ ಯಾವಾಗಲೂ ತನ್ನ ತಾಯಿಯ ಸ್ತ್ರೀವಾದಿ ತತ್ವಗಳನ್ನು ಕಾರ್‍ಯರೂಪಕ್ಕೆ ತರುವ ಮಾಡುತ್ತಿದ್ದರು. ಸಮಾಜವು ಒಪ್ಪದ ಮಹಿಳೆಯರಿಗೆ ಸಹಾಯ ಮಾಡುವುದು ಅವರಿಗೆ ಬಹಳ ಇಷ್ಟವಾದ ಕೆಲಸವಾಗಿತ್ತು.  ಉದಾಹರಣೆಗೆ ಮೇರಿ  ಒಂಟಿ ತಾಯಿ ಮತ್ತು ಸಲಿಂಗಕಾಮಿಯಾಗಿ ಕಾನೂನುಬಾಹಿರವಾದ  ಕೆಲಸ ಮಾಡುತ್ತಿದ್ದ ಡಯಾನಾ ಡಾಡ್‌ಗೆ  ಆರ್ಥಿಕ ಸಹಾಯವನ್ನು ನೀಡಿದರು. ವ್ಯಭಿಚಾರದ ಆರೋಪದ ಮೇಲೆ ಪತಿಯಿಂದ ನಿರಾಕರಿಸಲ್ಪಟ್ಟ ಮಹಿಳೆ ಜಾರ್ಜಿಯಾನಾ ಪೌಲ್ಗೆ ಸಹಾಯ ಮಾಡಿದರು. ಆದರೆ ತನ್ನ ಡೈರಿಯಲ್ಲಿ ತನ್ನ ಸಹಾಯದ ಬಗ್ಗೆ: "ನಾನು ಹೆಗ್ಗಳಿಕೆಗೆ ಒಳಗಾಗುವುದಿಲ್ಲ-ನಾನು ಗಟ್ಟಿಯಾಗಿ ಹೇಳುವುದಿಲ್ಲ-ಇಗೋ ನನ್ನ ಔದಾರ್ಯ ಮತ್ತು ಮನಸ್ಸಿನ ಶ್ರೇಷ್ಠತೆ-ಸತ್ಯವಾಗಿದೆ. ಇದು ಸರಳವಾದ ನ್ಯಾಯವಾಗಿದೆ-ಹಾಗಾಗಿ ನಾನು ಲೌಕಿಕವಾಗಿದ್ದಕ್ಕಾಗಿ ನನ್ನನ್ನು ಇನ್ನೂ ನಿಂದಿಸಲಾಗುತ್ತಿದೆ". ಎಂದು ಬರೆದುಕೊಂಡಿದ್ದಾರೆ.
        ಮೇರಿ ಶೆಲ್ಲಿ ತನ್ನೊಡನೆ ಸಂಭವಿಸಬಹುದಾದ  ಪ್ರಣಯವನ್ನು ಎಚ್ಚರಿಕೆಯಿಂದ ನಿಭಾಯಿಸುವುದನ್ನು ಕಲಿತುಕೊಂಡಿದ್ದರು. ೧೮೨೮ರಲ್ಲಿ ಫ್ರೆಂಚ್ ಬರಹಗಾರ ಪ್ರಾಸ್ಪರ್ ಮೆರಿಮಿಯನ್ನು ಭೇಟಿಯಾದರು. ಒಂದಿಷ್ಟುಕಾಲ ಅವರೊಂದಿಗೆ ಸಂಬಂಧವನ್ನಿಟ್ಟುಕೊಂಡ ಕುರಿತುಅವರದ್ದೇ ಒಂದು ಪತ್ರ ದಾಖಲೆಯಾಗಿ ಉಳಿದುಕೊಂಡಿದೆ. ಇಟಲಿಯ ತನ್ನ ಹಳೆಯ ಸ್ನೇಹಿತ ಎಡ್ವರ್ಡ್ ಟ್ರೆಲಾನಿ ಇಂಗ್ಲೆಂಡ್‌ಗೆ ಹಿಂದಿರುಗಿದಾಗ ಸಂತೋಷದಿಂದ ಅವನ ಜೊತೆ ಪತ್ರ ವ್ಯವಹಾರ ಮಾಡಿದರು. ಆದರೆ ಎಡ್ವರ್ಡ್ ಟ್ರೆಲಾನಿ ಪರ್ಸಿ ಶೆಲ್ಲಿ ಅವರ ಉದ್ದೇಶಿತ ಜೀವನಚರಿತ್ರೆಯೊಂದಿಗೆ ಸಹಕರಿಸಲು ಅವರು ನಿರಾಕರಿಸಿದ ನಂತರ ಅವರಿಬ್ಬರ ಸ್ನೇಹ ಬದಲಾಯಿತು. ತನ್ನ ಜೀವನದಲ್ಲಿ ಯಾರೆ ಬಂದರೂ ಪರ್ಸಿ ಶೆಲ್ಲಿ ಮಾತ್ರ ಬಹು ಮುಖ್ಯ ಎಂದು ಅವರು ಪರಿಗಣಿಸಿದ್ದಕ್ಕೆ ದ್ಯೋತಕ ಇದು. ೧೮೩೦ರ ದಶಕದ ಆರಂಭದಿಂದ ೧೮೪೦ರ ದಶಕದ ಆರಂಭದವರೆಗೆ ಅವರು ನಿಯತಕಾಲಿಕಗಳಲ್ಲಿ ಬರೆz ಉಲ್ಲೇಖಗಳ ಆಧಾರದ ಮೇಲೆ ರಾಜಕಾರಣಿ ಆಬ್ರೆ ಬ್ಯೂಕ್ಲರ್ಕ್ ಬಗ್ಗೆ ಪ್ರೇಮದ ಭಾವನೆಗಳನ್ನು ಹೊಂದಿದ್ದರು ಎಂದು ಅವರ ಜೀವನಚರಿತ್ರೆಕಾರರು ನಮೂದಿಸಿದ್ದಾರೆ. ಆದರೆ ಎಡ್ವರ್ಡ್ ಟ್ರೆಲಾನಿ ಎರಡು ಬಾರಿ ಬೇರೆ ಬೇರೆ ಯುವತಿಯರನ್ನು ಮದುವೆಯಾಗುವ ಮೂಲಕ ಮೇರಿ ಶೆಲ್ಲಿಯವರನ್ನು ನಿರಾಶೆಗೊಳಿಸಿರಬಹುದು ಎನ್ನಲಾಗಿದೆ.
.          (ಪರ್ಸಿ ಫ್ಲಾರೆನ್ಸ್)
     ಏನೇ ಆದರೂ ಮೇರಿ ಶೆಲ್ಲಿಯವರ ಮೊದಲ ಕಾಳಜಿ ಪರ್ಸಿ ಫ್ಲಾರೆನ್ಸ್ ಅವರ ಉನ್ನತಿಯಾಗಿತ್ತು. ಆದರೆ ಅವನು ತನ್ನ ಹೆತ್ತವರ ಯಾವುದೇ ಪ್ರಸಿದ್ಧ ಲಕ್ಷಣವನ್ನು ತೋರಿಸಲಿಲ್ಲ. ತಾಯಿಯ ಕುರಿತು ಅಪಾರ ಪ್ರೀತಿ ಹೊಂದಿದ್ದ ಆತ ೧೮೪೧ರಲ್ಲಿ ವಿಶ್ವವಿದ್ಯಾನಿಲಯವನ್ನು ತೊರೆದ ನಂತರ ತಾಯಿಯೊಂದಿಗೆ ವಾಸಿಸತೊಡಗಿದನು. ೧೮೪೦ ಮತ್ತು ೧೮೪೨ರಲ್ಲಿ ತಾಯಿ ಮತ್ತು ಮಗ ಜರ್ಮನಿ, ಇಟಲಿ ಮುಂತಾದ ದೇಶಗಳಿಗೆ ಪ್ರವಾಸವನ್ನು ಪ್ರಾರಂಭಿಸಿದರು. ೧೮೪೪ರಲ್ಲಿ, ಸರ್ ತಿಮೋತಿ ಶೆಲ್ಲಿ ತೊಂಬತ್ತನೇ ವಯಸ್ಸಿನಲ್ಲಿ ಮೇರಿ ಹೇಳಿದಂತೆ "ಕಾಂಡದಿಂದ ಅತಿಯಾಗಿ ಅರಳಿದ ಹೂವಿನಂತೆ ಬಿದ್ದು" ನಿಧನರಾದರು, ಮೊದಲ ಬಾರಿಗೆ ಮೇರಿ ಮತ್ತು ಅವರ ಮಗ ಆರ್ಥಿಕವಾಗಿ ಸ್ವತಂತ್ರರಾಗಿದ್ದರು. ಎಸ್ಟೇಟ್ ಅವರು ನಿರೀಕ್ಷಿಸಿದಷ್ಟು ಮೌಲ್ಯಯುತವಾಗಿಲ್ಲ ಎಂಬುದು ಸರ್ ತಿಮೋತಿಯವರ ನಿಧನದ ನಂತರ ತಿಳಿದು ಬಂದಿತು.

೧೮೪೦ ರ ದಶಕದ ಮಧ್ಯಭಾಗದಲ್ಲಿ, ಮೇರಿ ಶೆಲ್ಲಿ ಮೂರು ಪ್ರತ್ಯೇಕ ಬ್ಲ್ಯಾಕ್‌ಮೇಲರ್‌ಗಳನ್ನು ಎದುರಿಸಬೇಕಾಯಿತು.  ೧೮೪೫ರಲ್ಲಿ, ಪ್ಯಾರಿಸ್ನಲ್ಲಿ ಭೇಟಿಯಾದ ಗಟ್ಟೆಸ್ಚಿ ಎಂಬ ಇಟಾಲಿಯನ್ ರಾಜಕೀಯವಾಗಿ ಗಡಿಪಾರಾಗಿದ್ದ ವ್ಯಕ್ತಿಯೋರ್ವ ಅವಳು ಬರೆದ ಪತ್ರಗಳನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕಿದನು.ಮೇರಿಯ ಮಗನ ಸ್ನೇಹಿತರೊಬ್ಬರು ಪೊಲೀಸ್ ಮುಖ್ಯಸ್ಥರಿಗೆ ಲಂಚ ನೀಡಿ ಗಟ್ಟೆಸ್ಚಿಯ ಪತ್ರಗಳನ್ನು ವಶಪಡಿಸಿಕೊಂಡರು, ಪತ್ರಗಳನ್ನು ನಂತರ ನಾಶಪಡಿಸಲಾಯಿತು. ಸ್ವಲ್ಪ ಸಮಯದ ನಂತರ ಜಿ. ಬೈರನ್ ಎಂದು ತನ್ನನ್ನು ತಾನು ಕರೆದುಕೊಳ್ಳುವ, ದಿವಂಗತ ಲಾರ್ಡ್ ಬೈರನ್ ಅವರ ನ್ಯಾಯಸಮ್ಮತವಲ್ಲದ ಮಗನಂತೆ ನಟಿಸುವ ವ್ಯಕ್ತಿಯಿಂದ ತಾನು ಮತ್ತು ಪರ್ಸಿ ಬೈಸ್ಶೆ ಶೆಲ್ಲಿ ಬರೆದ ಕೆಲವು ಪತ್ರಗಳನ್ನು ಖರೀದಿಸಿದರು.  ೧೮೪೫ರಲ್ಲಿ, ಪರ್ಸಿ ಬೈಸ್ಶೆ ಶೆಲ್ಲಿಯ ಸೋದರಸಂಬಂಧಿ ಥಾಮಸ್ ಮೆಡ್ವಿನ್ಪರ್ಸಿ ಎಂಬಾತನು ಪರ್ಸಿ ಶೆಲ್ಲಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಜೀವನಚರಿತ್ರೆಯನ್ನು ಬರೆದಿದ್ದೇನೆ ಎಂದು ಹೇಳಿಕೊಂಡು ಮೇರಿಯವರನ್ನು ಸಂಪರ್ಕಿಸಿದನು. ೨೫೦ ಡಾಲರ್ ನೀಡಿದರೆ ಅದನ್ನು ಪ್ರಕಟಿಸುವುದಿಲ್ಲವೆಂದು ಹೇಳಿದಾಗ ಮೇರಿ ಶೆಲ್ಲಿ ಹಣ ಕೊಡಲು ನಿರಾಕರಿಸಿದರು.

೧೮೪೮ರಲ್ಲಿ ಅವರ ಮಗ ಪರ್ಸಿ ಫ್ಲಾರೆನ್ಸ್, ಜೇನ್ ಗಿಬ್ಸನ್ ಸೇಂಟ್ ಜಾನ್ ಅವರನ್ನು ವಿವಾಹವಾದರು. ಮದುವೆಯ ನಂತರದ ಜೀವನ  ಸಂತೋಷಕರವಾಗಿತ್ತು. ಮೇರಿ ಶೆಲ್ಲಿ ಮತ್ತು ಜೇನ್ ಪರಸ್ಪರ ಇಷ್ಟಪಟ್ಟರು. ಮೇರಿ ತನ್ನ ಮಗ ಮತ್ತು ಸೊಸೆಯೊಂದಿಗೆ ಫೀಲ್ಡ್ ಪ್ಲೇಸ್, ಸಸೆಕ್ಸ್‌ಗಳಲ್ಲಿ ಓಡಾಡಿ ಕೊನೆಗೆ ಶೆಲ್ಲಿಯ ಪೂರ್ವಜರ ಮನೆ ಮತ್ತು ಲಂಡನ್‌ನ ಚೆಸ್ಟರ್ ಸ್ಕ್ವೇರ್ನ್‌ನಲ್ಲಿ ವಾಸಿಸಲಾರಂಭಿಸಿದರು. ವಿದೇಶ ಪ್ರವಾಸಗಳಲ್ಲಿ ಮಗ-ಸೊಸೆಯೊಂದಿಗೆ ಜೊತೆಯಾದ ಮೇರಿ ಶೆಲ್ಲಿಯ ಕೊನೆಯ ವರ್ಷಗಳು ಅನಾರೋಗ್ಯಕರವಾಗಿದ್ದವು. ೧೮೩೯ರಿಂದ ತಲೆನೋವು ಮತ್ತು ದೇಹದ ಬೇರೆಬೇರೆ ಭಾಗಗಳಲ್ಲಿ ಪಾರ್ಶ್ವವಾಯುವಿನಿಂದ ನರಳಲಾರಂಭಿಸಿದರು. ೧ ಫೆಬ್ರವರಿ ೧೮೫೧ ರಂದು, ಚೆಸ್ಟರ್ ಸ್ಕ್ವೇರ್ನ್‌ನಲ್ಲಿ ವೈದ್ಯರು ಬ್ರೈನ್ ಟ್ಯೂಮರ್ ಎಂದು ಶಂಕಿಸಿದರು. ತನ್ನ ಐವತ್ತಮೂರನೇ ವಯಸ್ಸಿನಲ್ಲಿ ನಿಧನರಾದ ಮೇರಿ ಶೆಲ್ಲಿ ತನ್ನ ತಾಯಿ ಮತ್ತು ತಂದೆಯೊಂದಿಗೆ ಸಮಾಧಿ ಮಾಡಲು ಕೇಳಿಕೊಂಡಿದ್ದಾರೆ ಎಂದು ಸೊಸೆ ಜೇನ್ ಶೆಲ್ಲಿ ಹೇಳಿದರಾದರೂ  ಪರ್ಸಿ ಮತ್ತು ಜೇನ್, ಸೇಂಟ್ ಪ್ಯಾನ್ಕ್ರಾಸ್‌ನಲ್ಲಿರುವ ಸ್ಮಶಾನವನ್ನು "ಭಯಾನಕ" ಎಂದು ನಿರ್ಣಯಿಸಿ ಬೋರ್ನ್ಮೌತ್‌ನ ಸೇಂಟ್ ಪೀಟರ್ಸ್ ಚರ್ಚ್‌ನ ಬೋಸ್ಕೊಂಬ್‌ನಲ್ಲಿರುವ ಅವರ ಹೊಸ ಮನೆಯ ಬಳಿ ಹೂಳಲು ನಿರ್ಧರಿಸಿದರು. ಮೇರಿ ಶೆಲ್ಲಿಯವರ ಮರಣದ ಮೊದಲ ವಾರ್ಷಿಕೋತ್ಸವದಂದು ಅವರ ಬಾಕ್ಸ್-ಡೆಸ್ಕ್ ಅನ್ನು ತೆರೆದಾಗ ಒಳಗೆ ತಮ್ಮ ತೀರಿಹೋದ ಮಕ್ಕಳ ಕೂದಲು, ಪರ್ಸಿ ಬೈಶೆ ಶೆಲ್ಲಿಯೊಂದಿಗೆ ಹಂಚಿಕೊಂಡ ಒಂದು ನೋಟ್ ಬುಕ್ ಮತ್ತು ಗಂಡನ ಪದ್ಯದ ಒಂದು ಪುಟ, ಗಂಡನ ಚಿತಾಭಸ್ಮವನ್ನು ಪ್ರೀತಿಯಿಂದ ಹೊಂದಿರುವ ರೇಷ್ಮೆ ಬಟ್ಟೆಯಿಂದ ಸುತ್ತಿಟ್ಟು ಬೀಗ ಹಾಕಿದ್ದು ಕಾಣಿಸಿತು.  

"ನನ್ನ ಪತಿ ಮೊದಲಿನಿಂದಲೂ, ನಾನು ನನ್ನ ಪೋಷಕರಿಗೆ ಅರ್ಹಳೆಂದು ಸಾಬೀತುಪಡಿಸಬೇಕು ಮತ್ತು ನನ್ನನ್ನು ಖ್ಯಾತಿಯ ಪುಟಕ್ಕೆ ಸೇರಿಸಬೇಕು ಎಂದು ಬಹಳ ಆಸಕ್ತಿ ಹೊಂದಿದ್ದರು. ಸಾಹಿತ್ಯಿಕ ಖ್ಯಾತಿಯನ್ನು ಪಡೆಯಲು ನನ್ನನ್ನು  ಪ್ರಚೋದಿಸುತ್ತಿದ್ದರು." ಎಂದು ಮೇರಿ ಪರ್ಸಿ ಶೆಲ್ಲಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

         ತಾಯಿ ವೋಲ್‌ಸ್ಟೋನ್‌ಕ್ರಾಪ್ಟ್‌ರಂತೆಯೇ ವೈಯಕ್ತಿಕ ಜೀವನದಲ್ಲಿಯೂ ಹಲವಾರು ಪ್ರಯೋಗಗಳನ್ನು ಮಾಡಿದ ಮೇರಿ ಶೆಲ್ಲಿ ಅವುಗಳನ್ನು ಜಾಗರೂಕತೆಯಿಂದ ನಿಭಾಯಿಸಿದರು. ಆದರೆ ಅವರು ನಿಜವಾಗಿ ಪ್ರೇಮಿಸಿದ್ದು ಮಾತ್ರ ಪರ್ಸಿ ಶೆಲ್ಲಿಯವರನ್ನು. ಹೀಗಾಗಿ ಅವರ ವಿವಾಹೇತರ ಪ್ರಯೋಗಗಳು ಅಂತಹ ಪ್ರಾಮುಖ್ಯತೆ ಪಡೆಯಲಿಲ್ಲ.  ಆದರೆ ವೈಜ್ಞಾನಿಕ ಕಾದಂಬರಿಗಳಿಗೆ ಅವರು ಹಾಕಿಕೊಟ್ಟ ಬುನಾದಿ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. 
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220826_4_7


Tuesday 16 August 2022

ಮೌನದಿಂದಲೆ_ಅಂತರಾತ್ಮವನ್ನು_ಕಾಡುವ_ಕವಿತೆಯ_ರೂಪಕಗಳು

ಮೌನದಿಂದಲೆ ಅಂತರಾತ್ಮವನ್ನು ಕಾಡುವ ಕವಿತೆಯ ರೂಪಕಗಳು

 ಕೃತಿ:  ಮೌನದ ಮಹಾ ಕೋಟೆಯೊಳಗೆ (ಕವನಸಂಕಲನ )

ಲೇಖಕರು:  ಶ್ರೀಮತಿ ಶ್ರೀದೇವಿ ಕೆರಮನೆ 

ಪ್ರಕಾಶಕರು:  ಶ್ರೀ ರಾಘವೇಂದ್ರ ಪ್ರಕಾಶನ ಅಂಕೋಲಾ

 ಬೆಲೆ:  ನೂರ ಇಪ್ಪತ್ತು ರೂಪಾಯಿಗಳು 

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹಾಗೆಯೇ  ಹೆಣ್ಣು ಬರೆಯಲು ಕುಳಿತರೆ ಇಡೀ ಬದುಕನ್ನೇ ಕಾವ್ಯವಾಗಿಸಬಲ್ಲಳು, ಕವಿತೆಯನ್ನಾಗಿಸಿ ಪದಕಟ್ಟಿ ಹಾಡಬಲ್ಲಳು ಕೂಡ, ತನ್ನ ಮನದ ಮಾತುಗಳಿಂದ ವೇದನೆಯ ಬರಹಗಳಿಂದ, ವಿರಹದ ಬೇಗೆಯ ಪದಗಳಿಂದ ಆತ್ಮೀಯ ಮಾತುಗಳಿಂದ ಹಲವಾರು ಹೃದಯಗಳನ್ನು ಗೆಲ್ಲಲೂಬಹುದು ಕಾಡಬಹುದು ಕೂಡ, ಇಂತಹ ಕಾಡುವ ಬರಹಗಳಿಂದಲೇ ಕನ್ನಡ ಸಾಹಿತ್ಯಲೋಕದಲ್ಲಿ ಅಜರಾಮರವಾಗಿ ಉಳಿಯುವಂತಹ ಹಲವಾರು ವಿಶಿಷ್ಟವಾದ ಪ್ರತಿಭೆಗಳ ಸಾಲಿನಲ್ಲಿ ಬಹುಮುಖ ಪ್ರತಿಭೆಯಾಗಿ  ಮುಂಚೂಣಿಯ ಸ್ಥ‍ಾನದಲ್ಲಿ ನಿಲ್ಲುವಂತಹ ಕವಿಯತ್ರಿ ಶ್ರೀಮತಿ ಶ್ರೀದೇವಿ ಕೆರಮನೆಯವರು.
 ಲೇಖಕಿಯಾಗಿ, ಕಥೆಗಾರ್ತಿಯಾಗಿ, ಗಜಲ್ ಗಾರ್ತಿಯಾಗಿ ಅಂಕಣಕಾರ್ತಿಯಾಗಿ, ಭಾಷಣಕಾರ್ತಿಯಾಗಿ ಬಹುಮುಖ್ಯವಾಗಿ ಅಸಮಾನತೆಯ ವಿರುದ್ಧ ಮಹಿಳೆಯರ ಶೋಷಣೆಯ ವಿರುದ್ಧ ಮೌಡ್ಯದ ಸಂಕೋಲೆಗಳ ವಿರುದ್ಧ ತನ್ನ ಬರಹಗಳಿಂದಲೇ ಸಣ್ಣದಾಗಿ ಹೋರಾಟದ ಧ್ವನಿ ಎತ್ತುತ್ತಿರುವ ಹೋರಾಟಗಾರ್ತಿಯಾಗಿಯೂ ನೆಲೆ ಕಂಡುಕೊಳ್ಳುತ್ತಿರುವ ಕವಿಯತ್ರಿ ಶ್ರೀಮತಿ ಶ್ರೀದೇವಿ ಕೆರಮನೆ.

ತನ್ನ ಪ್ರಬುದ್ಧ ಬರಹಗಳಿಂದಲೇ ಹೆಸರು ಗಳಿಸಿ, ರಾಜ್ಯದ ವಿವಿಧ ಮೂಲೆಗಳಿಂದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗುತ್ತಿರುವುದು ಸಂತೋಷದಾಯಕ ವಿಷಯ  ಮತ್ತು ಇತ್ತೀಚೆಗೆ ಅವರು ಪ್ರಾರಂಭಿಸಿರುವ ವಿದೇಶದ ಕವಿಯತ್ರಿ ಮಹಿಳಾ ಹೋರಾಟಗಾರರ ಪರಿಚಯ ಮಾಲಿಕೆಯು, ಹಲವಾರು ಓದುಗರ ಜ್ಞಾನಾರ್ಜನೆಗೆ ಸಹಾಯಕವಾಗಿದೆ.

 ಶ್ರೀದೇವಿ ಕೆರೆಮನೆಯವರು ಮುಖಪುಟದಲ್ಲಿ ನನಗೆ ಪರಿಚಯವಾದವರು. ಗಜಲ್ ಕಾವ್ಯ ಏನೆಂಬುದೇ ಗೊತ್ತಿಲ್ಲದ ಸಮಯದಲ್ಲಿ ಮೊದಲ ಬಾರಿಗೆ ನನ್ನ ದನಿಗೆ ನಿನ್ನ ದನಿಯು   ಎಂಬ ಅವರ ಗಜಲ್ ಜುಗಲ್ ಬಂದಿ ಗಜಲ್ ಕೃತಿಯನ್ನು  ಓದಿದವನು ನಾನು. ಅವರ ಬರಹಗಳು ಮುಖಪುಟದಲ್ಲಿ ಓದಲು ಸಿಗದೇ ಹೋದರೂ ಕೂಡ, ಅವರ ಬರಹಗಳನ್ನು ಗಜಲ್ ಗಳನ್ನು  ಓದಲೇ ಬೇಕೆಂಬ ಆಸೆಯಿಂದ ಬಹಳಷ್ಟು ಪುಸ್ತಕದ ಅಂಗಡಿಗಳಲ್ಲಿ ಅವರ ಪುಸ್ತಕಗಳನು ತಡಕಾಡಿ ಸಿಗದೇ ಬೇಸರ ಪಟ್ಟವನು. ನಾನು ಅವರ ಕೆಲವು ಗಜಲ್ ಗಳನ್ನು  ಓದಿದ್ದೆ, ಅವರ ಕವಿತೆಯನ್ನು ಓದುವ, ಅವರು ಬರೆಯುವ ಶೈಲಿಯಲನ್ನು ಕಾಣಬೇಕು ಎಂಬುದು ನನ್ನ ತುಡಿತವಾಗಿತ್ತು.

ಶ್ರೀದೇವಿ ಕೆರೆಮನೆಯವರು ಕವಿತೆಗಳನ್ನು, ಗಜಲ್ ಗಳನ್ನು ಬರೆಯುತ್ತಾ ಕುಳಿತುಕೊಳ್ಳದೆ ರಾಜ್ಯದ ವಿವಿಧ ಮೂಲೆ ಮೂಲೆಗಳಿಗೂ ಸಂಚರಿಸಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇತ್ತೀಚೆಗೆ ಸಾಹಿತ್ಯಲೋಕವನ್ನು ಪ್ರವೇಶ ಮಾಡುತ್ತಿರುವಂತಹ ಹೊಸ ಕವಿಗಳಿಗೆ ಕವಿತೆ ಬರೆಯುವ ರೀತಿ, ಕವಿತೆಯನ್ನು ಓದುವ ರೀತಿ, ಸದ್ಯದ ಪರಿಸ್ಥಿತಿಗೆ ತಕ್ಕಂತೆ ಕವಿತೆಯನ್ನು ಹೇಗೆ ರಚನೆ ಮಾಡಬೇಕು. ಬರಹಗಾರರು ಹೇಗೆ ಬರಹದಲ್ಲಿ  ತನ್ನನ್ನು ತಾನು ತೊಡಗಿಸಿಕೊಂಡು ತನ್ಮಯರಾಗಬೇಕು ಎಂಬೆಲ್ಲ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಾ ಕಲಿಸುತ್ತಾ, ಕಲಿಯುತ್ತಾ ತನ್ನ ಬದುಕಿನ ಬಹಳಷ್ಟು ಸಮಯವನ್ನು ಸಾಹಿತ್ಯದ ಬೆಳವಣಿಗೆಗಾಗಿ ಮೀಸಲಿಟ್ಟಿದ್ದಾರೆ.

  ಅವರ ಮತ್ತೊಂದು ಇಷ್ಟವಾಗುವ ಗುಣ ಎಂದರೆ ಎಲ್ಲರೊಂದಿಗೂ ಯಾವುದೇ ಭೇದ ಭಾವ ತೋರದೆ  ಬೆರೆಯುವ ಗುಣ. ನವ್ಯಸಾಹಿತ್ಯದ ಬಹುಮುಖ ಪ್ರತಿಭೆಯಾಗಿ ರೂಪಗೊಳ್ಳುತ್ತಿರುವ, ಹಲವಾರು ಪುಸ್ತಕಗಳನ್ನು ಹೊರತಂದು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರೂ ಕೂಡ, ಅವರ ಸರಳತೆ ಹಮ್ಮು ಬಿಮ್ಮು ಇಲ್ಲದ ಅವರ ಆತ್ಮೀಯ ಮಾತುಗಾರಿಕೆ, ಯುವ ಬರಹಗಾರರಿಗೆ ಅವರು ಕೊಡುವ ಪ್ರೋತ್ಸಾಹ ಪ್ರತಿಯೊಬ್ಬರನ್ನು ಕೂಡ ಬೆರಗುಗೊಳಿಸುತ್ತದೆ.

ಕೋಲಾರದ ಆದಿಮಾ ಕೇಂದ್ರದಲ್ಲಿ ಕಳೆದ ತಿಂಗಳು ಕಾವ್ಯಯಾನವೆಂಬ ಕಾರ್ಯಕ್ರಮ ಆಯೋಜನೆಗೊಂಡಿತ್ತು ಆಹ್ವಾನ ಪತ್ರಿಕೆಯಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಕವಿಗೋಷ್ಠಿಯ ಅನುಸಂಧಾನಕಾರರಾಗಿ ಬರುವುದನ್ನು ನೋಡಿ, ನಾನು ಅವರಿಗೆ ಮೆಸೇಜ್ ಮಾಡಿದ್ದೆ. ಮೇಡಂ ನಿಮ್ಮ ಕವಿತೆಗಳ ಕವನಸಂಕಲನ ಪುಸ್ತಕ ಬೇಕಾಗಿತ್ತು. ಕೋಲಾರಕ್ಕೆ ಬಂದಾಗ ದಯವಿಟ್ಟು ತನ್ನಿ ಅಂತ. ಅದಕ್ಕೆ ಅವರು ಖಂಡಿತವಾಗಿಯೂ ತರುವೆ ಅಂತ ಮರು ಉತ್ತರವನ್ನು ಕೂಡ ಮಾಡಿದ್ದರು. ನಾನು ಅವರು ದೊಡ್ಡ ಕವಿಗಳು ಎಲ್ಲೋ ಮರೆತು ಹೋಗುತ್ತಾರೆ ಅಂತ ಸುಮ್ಮನಾಗಿದ್ದೆ, ಆದರೆ ಕಾರ್ಯಕ್ರಮದಲ್ಲಿ ಅವರನ್ನ ಭೇಟಿ ಮಾಡಿ, ಮಾತನಾಡಿಸಿದಾಗ ಅವರ ಎರಡು ಪುಸ್ತಕಗಳನ್ನು ನನಗೆ ಬಳುವಳಿಯಾಗಿ ಕೊಟ್ಟರು. ಒಂದು ಗಜಲ್ ಸಂಕಲನ ಮತ್ತೊಂದು ಕವನ ಸಂಕಲನ. ಗಜಲ್ ಪುಸ್ತಕವನ್ನು ಪಕ್ಕಕ್ಕೆ ಇಟ್ಟು, ಅವರ ಕವನ ಸಂಕಲನ ಓದಲು ಪ್ರಾರಂಭಿಸೋಣ ಅಂತ ಓದಲಾರಂಭಿಸಿದೆ. ಕವನಸಂಕಲನ ಓದಲು ನನಗೆ ದಿನಗಳು ಬೇಕಾಗಲಿಲ್ಲ. ಏಕೆಂದರೆ ಆ ಕವನಸಂಕಲನದ ಕವಿತೆಗಳು ಒಂದು ಕ್ಷಣವೂ ನನ್ನನ್ನು ಎಲ್ಲಿಯೂ ಕೂಡ ನಿಲ್ಲಿಸದೇ ತಡವರಿಸದೇ ಓದಿಸಿಕೊಂಡವು. ಕೆಲವು ಪದ್ಯಗಳನ್ನು ಓದಿದಾಗ ಭಾವುಕನಾದೆ ಕೂಡ, ಕೆಲವು ಕವಿತೆಗಳನ್ನು ಜೋರಾಗಿ ಓದಿ ಪತ್ನಿಗೆ ಕೂಡ ಅವುಗಳ ಅಥ೯ವನ್ನು ತಿಳಿಸಿದಾಗ, ಸಾಹಿತ್ಯದ ಗಂಧ ಗಾಳಿಯೂ ಗೊತ್ತಿಲ್ಲದೆ ಹಿಂದಿ ಧಾರಾವಾಹಿಗಳಲ್ಲಿ ಮುಳುಗಿ ಹೋಗುತ್ತಿದ್ದ ಅವಳು ಈಗ ಮೌನದ ಮಹಾ ಕೋಟೆಯನ್ನು ಓದಲು ಪ್ರಾರಂಭಿಸಿದ್ದಾಳೆ. ಈ ಕವನ ಸಂಕಲನದ ಪ್ರತಿಯೊಂದು ಕವಿತೆಯೂ ಕೂಡ ಕಾಡುತ್ತದೆ, ಎಚ್ಚರಿಸುತ್ತದೆ, ಭಾವನಾತ್ಮಕ ಸಂಬಂಧವನ್ನು ಬೆಳೆಸುವ ಮತ್ತು ಶೋಷಣೆಯ ವಿರುದ್ಧ ಮಾತಾಡುತ್ತದೆ.

 ನಾನು ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಶ್ರೀಮತಿ ಶ್ರೀದೇವಿ ಕೆರೆಮನೆಯವರ ಕವನ ಸಂಕಲನವಾದ ಮೌನದ ಮಹಾ ಕೋಟೆಯೊಳಗೆ ಎಂಬ ಕವನ ಸಂಕಲನವನ್ನು ಪರಿಚಯ  ಮಾಡಲಿಕ್ಕಾಗಿಯೇ. ಈ ಕವನಸಂಕಲನದ ವಿಮರ್ಶೆ ಮಾಡಲು ನಾನು ಅರ್ಹನಾಗಿಲ್ಲದಿದ್ದರೂ ಕೂಡ, ನನ್ನನ್ನು ಬಹಳಷ್ಟು ಕಾಡಿದ ಆ ಕವಿತೆಗಳ ಬಗ್ಗೆ ನಾನು ಹೇಳಲೇಬೇಕು.

ಮೌನದ ಮಾಹಾ ಕೋಟೆಯೊಳಗಿನ ಕವಿತೆಗಳನ್ನು ಪರಿಚಯಿಸುವುದಕ್ಕಿಂತ ಮುಂಚೆ ಶ್ರೀಮತಿ ಶ್ರೀದೇವಿ ಕೆರೆಮನೆಯವರ ಪರಿಚಯವನ್ನ ಮಾಡಲು ಇಚ್ಚಿಸುವೆ. ಅವರ ಹೆಸರು ಪರಿಚಯ ಬರಹಗಳು ಬಹಳಷ್ಟು ಓದುಗರಿಗೆ ಗೊತ್ತಿದ್ದರು ಕೂಡ, ಅವರ ಪರಿಚಯ ಇನ್ನೊಮ್ಮೆ ತಿಳಿಸಲು ಪ್ರಯತ್ನ ಪಡುವೆ.

ಶ್ರೀದೇವಿ ಕೆರೆಮನೆಯವರು ಅಂಕೋಲಾದವರು, ಪ್ರಸ್ತುತ ಕಾರವಾರದ ನಿವಾಸಿ. ವೃತ್ತಿಯಲ್ಲಿ ಇಂಗ್ಲಿಷ್ ಅಧ್ಯಾಪಕಿ, ಪ್ರಸ್ತುತ ಕಾರವಾರದ ಸರ್ಕಾರಿ ಪ್ರೌಢಶಾಲೆ ಚಿತ್ತಾಕುಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂವೇದನಾಶೀಲ ಬರಹಗಾರ್ತಿಯಾದ ಶ್ರೀಮತಿ ಶ್ರೀದೇವಿ ಕೆರೆಮನೆಯವರು ಕಥೆ, ಕವನ, ಅಂಕಣ ಹಲವಾರು ಚಿಂತನ ಬರಹಗಳನ್ನು ನಾಡಿನ ಎಲ್ಲಾ ನಿಯತ ಕಾಲಿಕೆಗಳಲ್ಲಿ ನಿರಂತರವಾಗಿ ಬರೆಯುತ್ತಲೇ ಬಂದಿದ್ದಾರೆ.

 ಶ್ರೀದೇವಿ ಕೆರೆಮನೆಯವರು ಪ್ರಕಟಿತ ಕವನ ಸಂಕಲನಗಳು ನಾನು ಗೆಲ್ಲುತ್ತೇನೆ, ಮೌನದ ಮಹಾ ಕೋಟೆಯೊಳಗೆ, ಗೆಜ್ಜೆ ಕಟ್ಟಿದ ಕಾಲಲ್ಲಿ, ನಗುವಿಗೊಂದು ಧನ್ಯವಾದ, ಮೈಮುಚ್ಚಲೊಂದು ತುಂಡು ಬಟ್ಟೆ. ಅಂಕಣ ಬರಹಗಳು ಪ್ರೀತಿಯೆಂದರೆ ಇದೇನಾ, ಹೆಣ್ತನದ ಆಚೆ ಈಚೆ, ಉರಿವ ಉಡಿ, ಮನದಾಳದ ಮಾತು, ವರ್ತಮಾನದ ಉಯ್ಯಾಲೆ, ಅಲೆಯೊಳಗಿನ ಮೌನ ಗಜಲ್ ಸಂಕಲನ, ನನ್ನ ಧ್ವನಿಗೆ ನಿನ್ನ ಧ್ವನಿಯು ಗಝಲ್ ಜುಗಲ್ ಬಂಧಿ ಸಂಕಲನ, ತೀರದ ಧ್ಯಾನ ಗಜಲ್ ವಿಶ್ಲೇಷಣೆ, ಬಿಕ್ಕೆ ಹಣ್ಣು ಮತ್ತು ಚಿತ್ತ ಚಿತ್ತಾರ  ಕಥಾಸಂಕಲನ, ಗೂಡುಕಟ್ಟುವ ಸಂಭ್ರಮದಲಿ ಮತ್ತು ಕಾಡುವ ಗರ್ಭ ಪ್ರಬಂಧ ಸಂಕಲನಗಳು, ಕಡಲು ಕಾನನದ ನಡುವೆ, ಸಮಕಾಲೀನ ಬರಹಗಳ ಸಂಕಲನ ಮುಂತಾದವು.

ಶ್ರೀಮತಿ ಶ್ರೀದೇವಿ ಕೆರೆಮನೆಯವರು ಪಡೆದ ಪ್ರಶಸ್ತಿಗಳು ಶ್ರೀವಿಜಯಲಕ್ಷ್ಮೀ ಪ್ರಶಸ್ತಿ, ಸಾರಾ ಅಬೂಬ್ಕರ್ ಪ್ರಶಸ್ತಿ, ಸುಮನಾ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ,
ವಾಂಗನ ಶಾಸ್ತ್ರೀ ಕಥಾಪ್ರಶಸ್ತಿ, ಅಮ್ಮ ಪ್ರಶಸ್ತಿ , ಎಂ ಕೆ ಇಂದಿರಾ ಪ್ರಶಸ್ತಿ,  ಅಂತಾರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ, ಹೇಮರಾಜ್ ದತ್ತಿ ಪ್ರಶಸ್ತಿ, ಅಡ್ವೈಸರ್ ಪತ್ರಿಕಾ ಪ್ರಶಸ್ತಿ, ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರಶಸ್ತಿ, ಬೇಂದ್ರೆಯವರ ಗ್ರಂಥ ಪುರಸ್ಕಾರ, ಶ್ರೀಗಂಧದ ಹಾರ ಪ್ರಶಸ್ತಿ, ಜನ್ನ ಕಾವ್ಯ ಪ್ರಶಸ್ತಿ, ಬಿ ಎಂ ಶ್ರೀಯವರ ಕಾವ್ಯ ಪ್ರಶಸ್ತಿ, ಅವ್ವ ಪ್ರಶಸ್ತಿ, ಸಿಂಗಪುರ ಕಥಾ ಪ್ರಶಸ್ತಿ, ಮೊದಲಾದವು.

ಮೌನದ ಮಹಾ ಗೋಡೆಯೊಳಗಿನ ಕವನಸಂಕಲನದ ಒಳ ಪುಟಗಳನ್ನು ತೆರೆಯುತ್ತಾ ಹೋದಂತೆ, ಇಲ್ಲಿನ ಕವಿತೆಯ ಸಾಲುಗಳಲ್ಲಿ ಮಾನವೀಯತೆಯ ಕಳಕಳಿಯಿದೆ. ಶೋಷಣೆಯ ವಿರುದ್ಧದ ಧ್ವನಿ ಇದೆ, ತಾಯೊಡಲ ಮಮತೆಯಿದೆ, ಆರಾಧನೆಯಿದೆ, ಆಲಾಪನೆ ಇದೆ, ಅನುರಾಗವಿದೆ ಮುಖ್ಯವಾಗಿ ಓದುಗರನ್ನು ಸೆಳೆಯುವ ಅಪರೂಪದ ಪದ ಮಾಲಿಕೆಯಿದೆ. 

ಈ ಕವನ ಸಂಕಲನವನ್ನು ಕವಿಯತ್ರಿ ತನ್ನ ಪ್ರೀತಿಯ ಅಕ್ಕನಿಗೆ ಅರ್ಪಿಸಿದ್ದಾರೆ. ಈ ಕವನಸಂಕಲನಕ್ಕೆ ಮುನ್ನುಡಿ ಬರೆದವರು ಕೆ ಪಿ ಬಸವರಾಜು.ತಮ್ಮ ಸುಧೀರ್ಘವಾದ ಮಾತುಗಳಲ್ಲಿ  ಈ ಕವನಸಂಕಲನದ ಕವಿತೆಗಳ ಅರ್ಥ ಮತ್ತು  ಕವನಸಂಕಲನದ ಒಳ ಅಂತರಂಗವನ್ನೆ ತೆರೆದಿಟ್ಟಿದ್ದಾರೆ. ಮತ್ತು ಶ್ಯಾಮಸುಂದರ ಬಿದರಕುಂದಿ ಅವರು ಬೆನ್ನುಡಿಯನ್ನ ಬರೆದು ಹಾರೈಸಿದ್ದಾರೆ.

 ಈ ಮೌನದ ಮಹಾ ಕೋಟೆಯೊಳಗೆ ಕವನ ಸಂಕಲನದಲ್ಲಿ ನಲವತ್ತು ಕವಿತೆಗಳಿವೆ. ಪ್ರತಿಯೊಂದು ಕವಿತೆಯೂ ಕೂಡ ಒಂದೊಂದು ಆಶಯವನ್ನು ಹೊಂದಿದೆ ಆ ಕವಿತೆಯ  ಪದಗಳು ಸಾಲುಗಳು ಓದುಗನ ಮನಸ್ಸನ್ನು ಹಿಡಿದು ಒಂದೆಡೆ ನಿಲ್ಲಿಸುತ್ತವೆ. ನಾನು ಇಲ್ಲಿ ನನ್ನ ಗಮನವನ್ನು ಒಂದು ಕ್ಷಣಕಾಲ ಸೆಳೆದ ಹಲವು ಕವಿತೆಗಳನ್ನು ಪರಿಚಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. 

ಹುಟ್ಟು ಸಾವು ಎಲ್ಲದಕು
ಈ ಜಗತ್ತು ಸಾಕ್ಷಿ ಕೇಳುತ್ತಿರುವಾಗ
ನಾನು ಪ್ರೀತಿಸಿದ್ದಕ್ಕೆ ಸಾಕ್ಷಿ ಕೇಳಿದ್ದರಲ್ಲಿ
 ನಿನ್ನ ತಪ್ಪೇನೂ ಇಲ್ಲ ಬಿಡು... 

ಈ ಕವಿತೆಯಲ್ಲಿ ಕವಿಯತ್ರಿ ಒಬ್ಬ ದೇವದಾಸಿಯ ಮಹಿಳೆಯ ಪ್ರೀತಿಯ ಒಳಾಂತರಂಗ ಹೊಕ್ಕಿ ಅವಳು ಪ್ರೀತಿಸಿದ ಬಗೆಯನ್ನ ಅವಳು ಅನುಭವಿಸಿದ ನೋವಿನ ಸಂಕಟವನ್ನ ಮತ್ತು ಒಬ್ಬ ಗಂಡಸು ಆಕೆಯನ್ನು ಪ್ರೀತಿಸಿ ಉಪಯೋಗಿಸಿಕೊಂಡು ಯಾವುದೇ ಸಾಕ್ಷ್ಯಗಳು ಸಿಗದ ಹಾಗೇ ಮಾಡುವ ರೀತಿಯನ್ನು ಬಹು ಮಾರ್ಮಿಕವಾಗಿ ಈ ಸಾಲುಗಳಲ್ಲಿ ರೂಪಿಸಿದ್ದಾರೆ.

ಅಷ್ಟಕ್ಕೂ ನಿನ್ನಲ್ಲಿ ಸಾಕ್ಷಿ ಕೊಟ್ಟೆ ನನಗೆ?
ಒಂದು ಹನಿಯೂ ಮೈಗೆ ತಾಕದಂತೆ 
ನಾಜೂಕಾಗಿ ಒರೆಸಿ ಎಸೆವಾಗ
 ವೀರ್ಯವು ಸಾಕ್ಷಿಯಾಗಬಹುದೆಂಬ 
ಗುಮಾನಿಯಿತ್ತೆ ನಿನಗೆ?
 ನಾನದನ್ನು ರಸಿಕತೆ ಎಂದುಕೊಂಡಿದ್ದೆ....

 ಎಂತಹ ಅದ್ಭುತ ಸಾಲುಗಳು ಈ ಸಾಲುಗಳನ್ನು  ಓದುತ್ತಿದ್ದರೆ ಮೈ ರೋಮಾಂಚನವಾಗುವುದು ಹಾಗೆಯೇ ಒಂದು ಹೆಣ್ಣನ್ನು ತನ್ನ ಬಯಕೆಗಳ ಈಡೇರಿಕೆಗಾಗಿ ಬಳಸಿಕೊಂಡು ಅವಳಿಗೆ  ಯಾವುದೇ ಸಾಕ್ಷ್ಯಗಳು ಸಿಗದಂತೆ ಮಾಡುವ ಗಂಡಸಿನ ಹುನ್ನಾರದ ಮನಸ್ಥಿತಿಯನ್ನ ಕುರಿತು ಕೂಡ ಒಮ್ಮೆ ಬೇಸರ ತರಿಸುತ್ತದೆ. 

ಆಗದೇ ಆಗದು ಎನ್ನುವುದಾದರೆ
 ಅದನ್ನಾದರೂ ಬಾಯಿಬಿಟ್ಟು ಹೇಳಿಬಿಡು
 ನೀನೇ ಕಟ್ಟಿದ ಗೆಜ್ಜೆಯ ಬಿಚ್ಚಿ 
ಮಾರುತ್ತೇನೆ, ಎರಡು ಹೊತ್ತಿನ ತುತ್ತಿಗೆ ದಾರಿಯಾದೀತು..

 ನಿನಗೆ ಹುಟ್ಟಿದ ಮಗು ಒಂದು ತುತ್ತು ಗುಟುಕಿಗಾಗಿ ಬಾಯ್ತೆರೆದು ಚಿತ್ಕಾರ ಮಾಡುತ್ತಿದೆ. ನೀನು ಕೈಗಿಷ್ಟು ದುಡ್ಡು ಕೊಟ್ಟರೆ ಅದರ ಹೊಟ್ಟೆಯ ಹಸಿವನ್ನಾದರೂ ತೀರಿಸುತ್ತೇನೆ ಅದು ಕೂಡ ಆಗುವುದಿಲ್ಲಾ ಅಂತಾ ನೀನು ಬಾಯಿ ಬಿಟ್ಟಾದರೂ ಹೇಳು, ನೀನು ಕಾಲಿಗೆ ಕಟ್ಟಿದ ಗಜ್ಜೆಯನ್ನು ಬಿಚ್ಚಿ ಮಾರುತ್ತೇನೆ. ಅದರಿಂದ ಬರುವ ಹಣವು ಒಂದೆರಡು ದಿನ ಹಸಿವನ್ನಾದರೂ ತಣಿಸಬಹುದು ಎಂದು ಸಾರುವ ಈ ಸಾಲುಗಳನ್ನು ಓದಿದ ಮನುಷ್ಯತ್ವ ಇರುವ ಮನುಜನನ್ನು ಖಂಡಿತವಾಗಿಯೂ ಒಮ್ಮೆ ಭಾವುಕನಾಗುತ್ತಾನೆ.

ಬದುಕಿನಲ್ಲಿ ಎಲ್ಲವೂ ಇದೆ 
ಆದರೂ ನೀನು
 ಬೇಕೆಂಬ ಹಳಹಳಿಕೆ, ನಿನ್ನ ನೆನಪಾದಾಗಲೆಲ್ಲಾ
 ಕೃಷ್ಣನು ನೆನಪಾಗುತ್ತಾನೆ ...

ಈ ಕವಿತೆಯಲ್ಲಿ ತನ್ನಂತರಂಗದ ಒಡೆಯನಾಗಿ ಪ್ರೀತಿಸಿದ ಜೀವವನ್ನು ಕೃಷ್ಣನಿಗೆ ಹೋಲಿಸಿ, ನಿನ್ನ ನೆನಪಾದಾಗಲೆಲ್ಲ ಕೃಷ್ಣನ ನೆನಪಾಗುತ್ತಾನೆ. ಕೃಷ್ಣ ನೆನಪಾಗುವುದು ನೂರಾರ ಹೆಣ್ಣುಗಳೊಂದಿಗೆ ಸುಖಿಸಿದ್ದಕ್ಕಲ್ಲ, ಬೇರೊಬ್ಬನ ಹೆಂಡತಿ ಎಂಬ ವಾಸ್ತವದ ಅರಿವಿದ್ದರೂ ಕೂಡ ರಾಧೆಯನ್ನು ಪ್ರೀತಿಸಿದ್ದಕ್ಕಾಗಿ, ಆದರೆ ನೀನು ನೆನಪಾಗುತ್ತೀಯ ನಿಜ ಆದರೆ ನಾನು ಪ್ರಸ್ತುತ ಪರಿಸ್ಥಿತಿಯಲ್ಲಿ ರಾಧೆಯಾಗಲಾರೆ  ಈ ಬಂಧನವನು ಕಳಚಿ ನಿನ್ನೆಡೆಗೆ ನಾನು ಬರಲಾರೆ ಎಂದು ಬದುಕಿನ ಅನಿವಾರ್ಯತೆಯನ್ನು ಕವಿಯತ್ರಿ ಬಹಳಷ್ಟು ಸೊಗಸಾಗಿ ಈ ಕವಿತೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

 ಈ ಮಾಯಾಲೋಕ ಅಂದರೆ ಮೊಬೈಲ್ ಯುಗ, ಮೊಬೈಲ್ನ ತಾಂತ್ರಿಕತೆಯು ಬದಲಾವಣೆಗೆ 3ಜಿ ಮೊಬೈಲ್ ಸಂಪರ್ಕ ಬಂದ ಮೇಲೆ ಸ್ನೇಹ ಪ್ರೀತಿಗಳು ಹೇಗೆ ಅಂಕುರವಾಗುತ್ತದೆ. ಈ ಮೊಬೈಲ್ ಮೋಹದಿಂದ, ಮನುಷ್ಯ ತನ್ನೊಳಗಿನ ಅಂತಃಕರಣವನ್ನ ಕಳೆದುಕೊಂಡು, ನಿದ್ದೆ ಆಹಾರ ಇಲ್ಲದೆ ಹೇಗೆ ಹಲುಬುತ್ತಾನೆ. ಎಂಬುದನ್ನು ಕವಿಯತ್ರಿ ಒಂದು ವಾಟ್ಸಪ್ ಸಂದೇಶವನ್ನೇ/ಚಿತ್ರಪಟನ್ನೆ ಕವಿತೆಯನ್ನಾಗಿ ಕಟ್ಟುತ್ತಾರೆ.  ಒಂದು ಗಂಡು ಹೆಣ್ಣು 3ಜಿ ತರಂಗಗಳ ಮೂಲಕ ಹರಿದುಬರುವ ಚಿತ್ರಗಳನ್ನ ನೋಡಿ ಹೇಗೆ ತನ್ನ ಮನದಾಳದ ತಾಪವನ್ನು ಇಂಗಿಸಿಕೊಳ್ಳುತ್ತಾರೆ ಎಂಬುದನ್ನು  ಚಿತ್ರಿಸುತ್ತಾ ಸಾಗುತ್ತಾರೆ.

ಕೆಲವೇ ನಿಮಿಷಗಳ ಹಿಂದೆ 
ವ್ಯಾಟ್ಸ್ ಆಪ್ ನಲ್ಲಿ 
ಆಕೆಯ ಅರೆನಗ್ನತೆಯನ್ನು ಆಸ್ವಾದಿಸಿದ್ದಾನೆ 
ಅದೇ ವ್ಯಾಟ್ಸ್ ಆಪ್ ನಲ್ಲಿ 
ಆತ ಕಳುಹಿಸಿದ 
 ಆತನ ಬೆತ್ತಲೆಯ ಫೋಟೋಕ್ಕೆ ಮುತ್ತಿಟ್ಟ 
ಆಕೆಗೆ, ಅದು ನಿದ್ದೆಯಿಲ್ಲದ
 ಸುಧೀರ್ಘ ರಾತ್ರಿ .....

ಹೀಗೆ ಪ್ರತಿಯೊಂದು ಕವಿತೆಯೂ ಕೂಡ ವಾಸ್ತವ ಜಗತ್ತನ್ನು ಅರಿತು ಇಲ್ಲಿ ನಡೆಯುವ ನೈಜ ಘಟನೆಗಳನ್ನೇ ತನ್ನ ಕವಿತೆಯ ಸಾಲುಗಳಲ್ಲಿ  ರೂಪಕವನ್ನಾಗಿ ಬಳಸಿದ್ದಾರೆ ಕವಿಯತ್ರಿ. ಆದರೆ ಇಲ್ಲಿನ ಯಾವುದೇ ಕವಿತೆಯಲ್ಲೂ  ಕೂಡ ಕಲ್ಪನೆಗೆ ಅವಕಾಶ ಕೊಡದೆ ಕವಿತೆಯನ್ನು ಬರೆದಿರುವುದು ಬಹಳಷ್ಟು ವಿಶಿಷ್ಟವಾಗಿದೆ. ಇಂತಹ ಬರಹವನ್ನು ಓದುಗ ಓದಲೇಬೇಕಾಗಿದೆ.

ನೀನು ಇಷ್ಟಪಟ್ಟೆ ಎಂದು 
ಕಹಿಬೇವು ಲೇಪಿಸಿ 
ಮಗುವಿನ ಹಾಲು ಬಿಡಿಸಿದೆ
ಹಾಲು ಕಟ್ಟಿದ ಮೊಲೆಗೀಗ
 ಬಾಪು ಬಂದಿದೆ.... 

ಎದೆಯ ಭಾವಗಳೆಲ್ಲಾ ಬತ್ತಿ ಹೋಗಿದೆ ಗೆಳೆಯ 
ಬಿಳಿ ಗುಲಾಬಿ ಗಿಡದ ಮುಳ್ಳಿಗೆ 
ರಾತ್ರಿ ಹಿಡಿ ಎದೆಗೊತ್ತಿ 
ನಿಂತು, ವಿರಹ ಗೀತೆ ಹಾಡಿದ ಪಾರಿವಾಳ
 ಗಿಡದ ಬುಡದಲ್ಲಿ ಸತ್ತು ಬಿದ್ದಿವೆ .....

ಆ ಬುದ್ಧ ಅದೆಷ್ಟು ಸ್ಥಿತಿಪ್ರಜ್ಞ 
ಗೊತ್ತಿದ್ದು ಗೊತ್ತಿದ್ದು ಮನೆಬಿಟ್ಟ 
ಪ್ರೀತಿಯ ಹೆಂಡತಿ ಮುದ್ದಿನ ಮಗ 
ಎಲ್ಲವನ್ನೂ ಬಿಟ್ಟು ಮಧ್ಯರಾತ್ರಿಯೇ 
ಕಾಡಿಗೆ ನಡೆದ: ಪಡೆದ ನಿರ್ವಾಣ ....

ಹೀಗೆ ಸಾಗುವ ಕವಿತೆಗಳ ರೂಪಕಗಳನ್ನು ಓದುಗನ ಮನವನ್ನು ಕಾಡಿ ತಲ್ಲಣಿಸುತ್ತದೆ. ಈ ಎಲ್ಲಾ  ಕವಿತೆಗಳಲ್ಲು ತನ್ನೊಳಗಿನ ಬದುಕು ಭಾವನೆಗಳನ್ನು ತುಂಬಿ ಬರೆದಿದ್ದಾರೆ.
ಕವಿತೆಗಳಲ್ಲಿ ನೆಲ್ಸನ್ ಮಂಡೆಲ ಬಂದು ಹೋಗಿದ್ದಾರೆ. ಅಂಬೇಡ್ಕರ್  ಅವರನ್ನು ನೆನೆಯುತ್ತಾರೆ, ಕದವಿಲ್ಲದ ಮನೆಯ ನಿಷೇಧಗಳಿವೆ, ಮೌನದ ಮಾಹಾ ಕೋಟೆಯೊಳಗೆ ಮೌನವಿದೆ. ಕಣ್ಣೀರು ಕೂಡ ಮಾರಲ್ಪಡುತ್ತದೆ, ಬಿಕರಿಯಾಗದ ಕನಸುಗಳಿಗಿವೆ
ಈ ಕವನಸಂಕಲನದ ಕವಿತೆಗಳನ್ನು ಅಸ್ವಾದಿಸಲು ಮೌನದ ಮಾಹಾಕೋಟೆಯೊಳಗೆ ನಾವು ಪ್ರವೇಶ ಮಾಡಲೇ ಬೇಕಾಗಿದೆ.
 
ಇತ್ತೀಚೆಗೆ ಕಥೆ ಕವನ ಬರೆಯುತ್ತಿರುವಂತಹ ನವ್ಯ ಕವಿಗಳು ಬರಹಗಾರರು ಇಂತಹ ಒಂದು ಕೃತಿಯನ್ನು ಓದಲೇಬೇಕಾಗಿದೆ.  ಬರಹವನ್ನು ಪ್ರೀತಿಸುವ ಆರಾಧಿಸುವ ಮನಸ್ಸುಗಳು ಒಮ್ಮೆಯಾದರೂ ಈ ಪುಸ್ತಕದ ಸಾಲುಗಳನ್ನು ತಡಕಾಡಲೇ ಬೇಕಾಗಿದೆ.

ಬಹಳಷ್ಟು ಉತ್ತಮವಾದ ಕೃತಿಗಳನ್ನು  ಕನ್ನಡದ ಸಾಹಿತ್ಯ  ಲೋಕಕ್ಕೆ ಅರ್ಪಿಸುತ್ತಿರುವ ಶ್ರೀಮತಿ ಶ್ರೀದೇವಿ ಕೆರೆಮನೆ ಮೇಡಮ್ ರವರನ್ನು ಅಭಿನಂದಿಸುತ್ತಾ, ಇಂತಹ ಹಲವಾರು ಕೃತಿಗಳು ಕನ್ನಡ ಸಾಹಿತ್ಯ ಲೋಕವನ್ನು ಸೇರಲಿ, ನಿಮಗೆ ಗೌರವ ಪುರಸ್ಕಾರಗಳು ಇನ್ನಷ್ಟು  ನಿಮಗೆ ಲಭಿಸಲಿ ಎಂದು ಆಶಿಸುವೆ    
ನಾರಾಯಣಸ್ವಾಮಿ ಮಾಸ್ತಿ

Thursday 11 August 2022

ಸಾಹಿತ್ಯ ಮತ್ತು ವೈಯಕ್ತಿಕ ಬದುಕನ್ನು ರೋಚಕವಾಗಿಸಿದ ಮೊದಲ ಸ್ತ್ರೀವಾದಿ- ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್

ಸಾಹಿತ್ಯ ಮತ್ತು ವೈಯಕ್ತಿಕ ಬದುಕನ್ನು ರೋಚಕವಾಗಿಸಿದ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್

                 ಎಲಿಜಬೆತ್ ಡಿಕ್ಸನ್ ಮತ್ತು ಎಡ್ವರ್ಡ್ ಜಾನ್ ವೋಲ್ಸ್‌ಟೋನ್‌ಕ್ರಾಫ್ಟ್‌ರ ಏಳು ಮಕ್ಕಳಲ್ಲಿ  ಎರಡನೆಯವಳಾಗಿ ಲಂಡನ್‌ನ ಸ್ಪಿಟಲ್‌ಫೀಲ್ಡ್ಸ್‌ನಲ್ಲಿ ೨೭ ಏಪ್ರಿಲ್ ೧೭೫೯ ರಂದು ಜನಿಸಿದ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್ ಇಂಗ್ಲಿಷ್ ಲೇಖಕಿ, ತತ್ವಜ್ಞಾನಿ ಮತ್ತು ಮಹಿಳಾ ಹಕ್ಕುಗಳ ವಕೀಲರಾಗಿದ್ದರು.  ೨೦ ನೇ ಶತಮಾನದ ಅಂತ್ಯದವರೆಗೆ, ಆ ಸಮಯದಲ್ಲಿ ಅಸಾಂಪ್ರದಾಯಿಕ ಎನ್ನಿಸುವಂತಹ ಹಲವಾರು ವೈಯಕ್ತಿಕ ಸಂಬಂಧಗಳನ್ನು ಹೊಂದಿದ್ದ  ವೋಲ್‌ಸ್ಟೋನ್‌ಕ್ರಾಫ್ಟ್  ಜೀವನವು ಅವರ ಬರವಣಿಗೆಗಿಂತ ಹೆಚ್ಚಿನ ಗಮನ ಪಡೆದಿತ್ತು.  ಅವರು ಮಗುವಾಗಿದ್ದಾಗ ಕುಟುಂಬವು ನಿಶ್ಚಿತ ಆದಾಯವನ್ನು ಹೊಂದಿದ್ದರೂ ಅವರ ತಂದೆ ಅನವಶ್ಯಕ ಯೋಜನೆಗಳಲ್ಲಿ ತೊಡಗಿ ದುಂದುವೆಚ್ಛ ಮಾಡಿದುದರ ಪರಿಣಾಮವಾಗಿ, ಕುಟುಂಬವು ಆರ್ಥಿಕವಾಗಿ ಅಸ್ಥಿರವಾಯಿತು. ಹೀಗಾಗಿ ವೋಲ್‌ಸ್ಟೋನ್‌ಕ್ರಾಫ್ಟ್ ಯೌವನದಲ್ಲಿ ಬೇರೆಬೇರೆ ಕಡೆಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದರು. ಕುಟುಂಬದ ಆರ್ಥಿಕ ಪರಿಸ್ಥಿತಿಯು ಅಂತಿಮವಾಗಿ ಎಷ್ಟು ಘೋರವಾಯಿತೆಂದರೆ ವೋಲ್‌ಸ್ಟೋನ್‌ಕ್ರಾಫ್ಟ್‌ನ ತಂದೆ ಆಕೆ ಪ್ರೌಢಾವಸ್ಥೆಯಲ್ಲಿ ಆನುವಂಶಿಕವಾಗಿ ಪಡೆಯಬಹುದಾದ ಹಣವನ್ನು ತಿರುಗಿಸುವಂತೆ ಒತ್ತಾಯಿಸಿದರು.  ಇದಲ್ಲದೆ, ಅವರು ಕ್ರೂರವಾಗಿ ಹಾಗೂ ಹಿಂಸಾತ್ಮಕ ನಡೆದುಕೊಳ್ಳುವ ವ್ಯಕ್ತಿಯಾಗಿದ್ದು, ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಹೊಡೆಯುತ್ತಿದ್ದರಿಂದ ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ  ತಾಯಿ ಮಲಗುವ ಕೋಣೆಯ ಬಾಗಿಲಿನ ಹೊರಗೆ ಅವಳನ್ನು ರಕ್ಷಿಸಲು ಮಲಗುತ್ತಿದ್ದರು. ಮುಂದೆ ಕೂಡ ವೋಲ್‌ಸ್ಟೋನ್‌ಕ್ರಾಫ್ಟ್ ತನ್ನ ಜೀವನದುದ್ದಕ್ಕೂ ಸಹೋದರಿಯರಾದ ಎವೆರಿನಾ ಮತ್ತು ಎಲಿಜಾಗೆ ಇದೇ ರೀತಿ ತಾಯಿಯ ಪಾತ್ರವನ್ನು ನಿರ್ವಹಿಸಬೇಕಾಯಿತು. ೧೭೮೪ರಲ್ಲಿ ತನ್ನ ಅಕ್ಕ ಎಲಿಜಾ ಹೆರಿಗೆಯ ಸಮಯದಲ್ಲಿ ಖಿನ್ನತೆಯಿಂದ ಬಳಲುತ್ತಿದ್ದಾಗ ಅವಳನ್ನು ಗಂಡ ಹಾಗು ಮಗುವನ್ನು ಬಿಟ್ಟು ಬರವಂತೆ ಧೈರ್‍ಯ ತುಂಬಿದ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್ ಆಗಿನಿಂದಲೇ ಮಹಿಳಾ ಸಮಾನತೆ ಮತ್ತು ಹಕ್ಕುಗಳಿಗಾಗಿ ಹೋರಾಡುವ ಗುಣವನ್ನು ಬೆಳೆಸಿಕೊಂಡಿದ್ದನ್ನು ಕಾಣಬಹುದು. ಆದರೆ ದುರದೃಷ್ಟವಶಾತ್ ಅಕ್ಕ ಎಲಿಜಾ ಜೀವನಪರ್‍ಯಂತ ನೋವನ್ನನುಭವಿಸುವಂತಾಯಿತು.
    ಎರಡು ಅತಿಮುಖ್ಯವಾದ ಸ್ನೇಹ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್‌ರವರ ಜೀವನವನ್ನು ರೂಪಿಸಿತ್ತು. ಮೊದಲನೆಯದ್ದು ಬೆವರ್ಲಿಯಲ್ಲಿ ಜೇನ್ ಆರ್ಡೆನ್ ಜೊತೆಗಿನ ಸ್ನೇಹ.  ಇಬ್ಬರೂ ಆಗಾಗ್ಗೆ ಒಟ್ಟಿಗೆ ಪುಸ್ತಕಗಳನ್ನು ಓದುತ್ತಿದ್ದರು. ಆರ್ಡೆನ್ ಅವರ ತಂದೆ ವಿಜ್ಞಾನಿ ಹಾಗೂ ತತ್ವಜ್ಞಾನಿಯಾಗಿದ್ದರು. ಆರ್ಡೆನ್ ಮನೆಯ ಬೌದ್ಧಿಕ ವಾತಾವರಣ ಇವರಿಗೆ ತುಂಬ ಇಷ್ಟವಾಗಿತ್ತು. ಆರ್ಡೆನ್ ಅವರೊಂದಿಗಿನ ಸ್ನೇಹವನ್ನು ಬಹಳವಾಗಿ ಗೌರವಿಸಿದರು. ಎರಡನೆಯ  ಮುಖ್ಯವಾದ ಸ್ನೇಹಿತೆಯೆಂದರೆ ಫ್ಯಾನಿ (ಫ್ರಾನ್ಸ್) ಬ್ಲಡ್. ತನ್ನ ಮನಸ್ಸನ್ನು ತೆರೆದಿಡಲು ಸಹಾಯಮಾಡಿದ ವ್ಯಕ್ತಿ ಎಂಬ ಶ್ರೇಯಸ್ಸನ್ನು ವೊಲ್‌ಸ್ಟೋನ್‌ಕ್ರಾಫ್ಟ್ ಬ್ಲಡ್‌ರವರಿಗೆ ನೀಡಿದ್ದಾರೆ.

ನಿಂತ ನೀರಂತೆ ಸ್ಥಬ್ಧವಾಗಿರುವ ತಮ್ಮ ಮನೆಯ ವಾತಾವರಣದಿಂದ ಅತೃಪ್ತಿ ಹೊಂದಿದ್ದ ವೊಲ್‌ಸ್ಟೋನ್‌ಕ್ರಾಫ್ಟ್ ೧೭೭೮ರಲ್ಲಿ ಬಾತ್‌ನಲ್ಲಿನ ಸಾರಾ ಡಾಸನ್ ಎಂಬ ಸಿಡುಕಿನ ವಿಧವೆಗೆ ಸಹಾಯಕಿಯಾಗಿ ಕೆಲಸ ಮಾಡಲು ಹೋದರಾದರೂ ಹೊಂದಿಕೊಳ್ಳಲು ಬಹಳ ಕಷ್ಟಪಟ್ಟರು.  ೧೭೮೦ರಲ್ಲಿ ಮರಣಶಯ್ಯೆಯಲ್ಲಿರುವ ತನ್ನ ತಾಯಿಯನ್ನು ನೋಡಿಕೊಳ್ಳಲು ಮನೆಗೆ ಹಿಂದಿರುಗಿದರು. ತಾಯಿಯ ಮರಣದ ನಂತರ ಡಾಸನ್‌ನ ಮನೆಗೆ ಹಿಂದಿರುಗುವ ಬದಲು, ಬ್ಲಡ್‌ಳೊಂದಿಗೆ ವಾಸಿಸಲು ಪ್ರಾರಂಭಿಸಿದರು. ವೊಲ್‌ಸ್ಟೋನ್‌ಕ್ರಾಫ್ಟ್‌ಗಿಂತ ಸ್ತ್ರೀಯರ ಕುರಿತಾದ ಸಾಂಪ್ರದಾಯಿಕ ಮೌಲ್ಯಗಳಲ್ಲಿ ಹೆಚ್ಚು ನಂಬಿಕೆಯಿರುವ ಬ್ಲಡ್ ಜೀವಮಾನದುದ್ದಕ್ಕೂ ಅವರ ಆತ್ಮೀಯ ಸ್ನೇಹಿತೆಯರಾಗಿದ್ದರು.
     ಜೀವನೋಪಾಯಕ್ಕಾಗಿ, ವೋಲ್‌ಸ್ಟೋನ್‌ಕ್ರಾಫ್ಟ್, ಆಕೆಯ ಸಹೋದರಿಯರು ಮತ್ತು ಬ್ಲಡ್ ನ್ಯೂವಿಂಗ್‌ಟನ್ ಗ್ರೀನ್‌ನಲ್ಲಿ ಶಾಲೆಯನ್ನು ಸ್ಥಾಪಿಸಿದರು, ಆದರೆ ಅಷ್ಟರಲ್ಲೇ ಬ್ಲಡ್ ಮದುವೆಯಾಗಿ ಸದಾ ರೋಗಗ್ರಸ್ತವಾಗಿದ್ದ ತನ್ನ ಆರೋಗ್ಯ ಸುಧಾರಿಸಬಹುದೆಂಬ  ಆಶಾಭಾವನೆಯಿಂದ ಪತಿ ಹಗ್ ಸ್ಕೈಸ್‌ನೊಂದಿಗೆ ಲಿಸ್ಬನ್ ಪೋರ್ಚುಗಲ್‌ಗೆ ತೆರಳಿದಳು, ಗರ್ಭಿಣಿಯಾದಾಗ ಫ್ಯಾನ್ಸಿ ಬ್ಲಡ್ ಆರೋಗ್ಯವು ಮತ್ತಷ್ಟು ಹದಗೆಟ್ಟಿತು. ೧೭೮೫ರಲ್ಲಿ ವೋಲ್‌ಸ್ಟೋನ್‌ಕ್ರಾಫ್ಟ್ ಶಾಲೆಯನ್ನು ಬಿಟ್ಟು ಅವಳನ್ನು ಶುಶ್ರೂಷೆ ಮಾಡಲು ಹೋದರಾದರೂ ಯಾವ ಪ್ರಯೋಜನವೂ ಆಗಲಿಲ್ಲ. ಜೊತೆಗೆ ಶಾಲೆಯನ್ನು ತ್ಯಜಿಸಿದ್ದರಿಂದ ಅದೂ ವಿಫಲಗೊಂಡಿತು.  ಆತ್ಮೀಯ ಗೆಳತಿ ಬ್ಲಡ್‌ರವರ ಸಾವು ವೋಲ್ಸ್ಟೋನ್ಕ್ರಾಫ್ಟ್‌ರನ್ನು ಖಿನ್ನತೆಗೆ ದೂಡಿತು. ಅವರ ಮೊದಲ ಕಾದಂಬರಿ, 'ಮೇರಿ: ಎ ಫಿಕ್ಷನ್' (೧೭೮೮)ಗೆ ಬ್ಲಡ್‌ರವರ ಜೀವನವೇ ಸ್ಫೂರ್ತಿ
ಬ್ಲಡ್ ಮರಣದ ನಂತರ ೧೭೮೫ರಲ್ಲಿ ವೊಲ್ಸ್‌ಟೋನ್‌ಕ್ರಾಫ್ಟ್‌ನ ಸ್ನೇಹಿತರು ಐರ್ಲೆಂಡ್‌ನಲ್ಲಿನ ಆಂಗ್ಲೋ-ಐರಿಶ್ ಕಿಂಗ್ಸ್‌ಬರೋ ಕುಟುಂಬದ ಹೆಣ್ಣುಮಕ್ಕಳನ್ನು ನೋಡಿಕೊಳ್ಳುವ ಕೆಲಸ ಪಡೆಯಲು ಸಹಾಯ ಮಾಡಿದರು.  ಲೇಡಿ ಕಿಂಗ್ಸ್‌ಬರೋ ಜೊತೆಗೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದರೂ ಮಕ್ಕಳು ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಸ್ಪೂರ್ತಿದಾಯಕ ಶಿಕ್ಕಕಿ ಎಂದು ಒಪ್ಪಿಕೊಂಡಿದ್ದರು. ಮಾರ್ಗರೆಟ್ ಕಿಂಗ್ ಎನ್ನುವ ಆ ಮನೆಯ ಹುಡುಗಿಯೊಬ್ಬಳು 'ತಾನು ಎಲ್ಲ ಮೂಢನಂಬಿಕೆಗಳಿಂದ ತನ್ನ ಮನಸ್ಸನ್ನು ಮುಕ್ತಗೊಳಿಸಿಕೊಳ್ಳಲು ವೋಲ್‌ಸ್ಟೋನ್‌ಕ್ರಾಫ್ಟ್ ಸಹಾಯ ಅಗಾಧವಾದದ್ದು' ಎಂದು ನಂತರ ಸ್ಮರಿಸಿಕೊಂಡಿದ್ದನ್ನು ಗಮನಿಸಬಹುದು. ಇಲ್ಲಿನ ಅನುಭವಗಳು ಅವರ ಏಕೈಕ ಮಕ್ಕಳ ಪುಸ್ತಕ, 'ಒರಿಜಿನಲ್ ಸ್ಟೋರೀಸ್ ಫ್ರಂ ರಿಯಲ್ ಲೈಫ್' (೧೭೮೮) ಪ್ರಕಟಗೊಳ್ಳಲು ಪ್ರೇರಣೆಯಾಯಿತು.                  
                            ಒಂದು ವರ್ಷ ಗವರ್ನೆಸ್ ಆಗಿದ್ದು ಲೇಖಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ವೋಲ್‌ಸ್ಟೋನ್‌ಕ್ರಾಫ್ಟ್‌ರವರಿಗೆ ಇದು ಆಮೂಲಾಗ್ರ ಆಯ್ಕೆಯಾಗಿತ್ತು, ಏಕೆಂದರೆ ಆ ಸಮಯದಲ್ಲಿ ಕೆಲವು ಮಹಿಳೆಯರು ಬರೆಯುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.  ೧೭೮೭ರಲ್ಲಿ ಸಹೋದರಿ ಎವೆರಿನಾಗೆ ಬರೆದಂತೆ ತಮ್ಮನ್ನು 'ಹೊಸ ಕುಲದ ಮೊದಲನೆಯವಳು' ಎಂದು ಬಿಂಬಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಮಾಡಿದರು. ಲಂಡನ್‌ಗೆ ತೆರಳಿ ಪ್ರಕಾಶಕ ಜೋಸೆಫ್ ಜಾನ್ಸನ್‌ರ ಸಹಾಯ ಪಡೆದು ಕೆಲಸ ದೊರಕಿಸಿಕೊಂಡರು. ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಕಲಿತು ಭಾಷಾಂತರಿಸುವ ಕೆಲಸ ಮಾಡಿದರು. ಮುಖ್ಯವಾಗಿ ಜಾಕ್ವೆಸ್ ನೆಕರ್‌ರವರ ಧಾರ್ಮಿಕ ಅಭಿಪ್ರಾಯಗಳು ಮತ್ತು ಅಲೌಕಿಕತೆಗಳ ಬಗ್ಗೆ ಮಕ್ಕಳಿಗಾಗಿ ಕ್ರಿಶ್ಚಿಯನ್ ಗಾಥಿಲ್ಫ್ ಸಾಲ್ಜ್‌ಮನ್ ಅವರು ಬರೆದದ್ದನ್ನು ಭಾಷಾಂತರಿಸಿದರು. ಜಾನ್ಸನ್ ಅವರ ನಿಯತಕಾಲಿಕೆಗೆ ವಿಶ್ಲೇಷಣಾತ್ಮಕ ವಿಮರ್ಶೆಗಳನ್ನು, ಕಾದಂಬರಿಗಳ ಮೇಲೆ ಪ್ರಾಥಮಿಕವಾಗಿ ಅಭಿಪ್ರಾಯಗಳನ್ನು ಬರೆದಿದ್ದಾರೆ.  ವೋಲ್‌ಸ್ಟೋನ್‌ಕ್ರಾಫ್ಟ್‌ರ ಬೌದ್ಧಿಕಲೋಕವು ಈ ಸಮಯದಲ್ಲಿ ಅವರು ತನ್ನ ವಿಮರ್ಶೆಗಳಿಗಾಗಿ ಮಾಡಿದ ಓದುವಿಕೆಯಿಂದ ಮಾತ್ರವಲ್ಲದೆ ಅವರ ಸ್ನೇಹಿತರ ಬಳಗದಿಂದಲೂ ವಿಸ್ತರಿಸಿತು. ಜಾನ್ಸನ್‌ರವರ ಪ್ರಸಿದ್ಧ ಔತಣಕೂಟಗಳಲ್ಲಿ ಭಾಗವಹಿಸಿದರು. ಅಲ್ಲಿ ಮೂಲಭೂತವಾದ ಕರಪತ್ರಕಾರ ಥಾಮಸ್ ಪೈನ್ ಮತ್ತು ತತ್ವಜ್ಞಾನಿ ವಿಲಿಯಂ ಗಾಡ್ವಿನ್‌ರನ್ನು ಭೇಟಿಯಾದರು.  
     
     ಮೊದಲ ಬಾರಿಗೆ ಗಾಡ್ವಿನ್ ಮತ್ತು ವೋಲ್ಸ್ಟೋನ್ಕ್ರಾಫ್ಟ್ ಭೇಟಿಯಾದಾಗ, ಅವರು ಪರಸ್ಪರರ ಬಗ್ಗೆ ಅತೀವವಾಗಿ ನಿರಾಶೆಗೊಂಡರು.  ಗಾಡ್ವಿನ್‌ರವರು ಪೈನ್‌ರವರ ಭಾಷಣವನ್ನು ಕೇಳಲು ಬಂದಿದ್ದಾಗ ವೋಲ್‌ಸ್ಟೋನ್‌ಕ್ರಾಫ್ಟ್ ರಾತ್ರಿಯಿಡೀ ಅವರು ಹೇಳಿದ ಎಲ್ಲಾ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತ ವಾಗ್ಧಾಳಿ ನಡೆಸಿದರು.  ಆದರೆ ಜಾನ್ಸನ್‌ರನ್ನು ಸ್ನೇಹಿತನಿಗಿಂತ ಹೆಚ್ಚಾಗಿ ಪರಿಭಾವಿಸುತ್ತಿದ್ದ ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ ಪತ್ರಗಳಲ್ಲಿ ಜಾನ್ಸನ್‌ರನ್ನು ತಂದೆ ಮತ್ತು ಸಹೋದರ ಎಂದು ವಿವರಿಸಿದ್ದಾರೆ.
              ಲಂಡನ್‌ನಲ್ಲಿ, ಸೌತ್‌ವಾರ್ಕ್‌ನಲ್ಲಿರುವ ಡಾಲ್ಬೆನ್ ಸ್ಟ್ರೀಟ್‌ನಲ್ಲಿ ವೋಲ್ಸ್‌ಟೋನ್‌ಕ್ರಾಫ್ಟ್ ವಾಸಿಸುತ್ತಿದ್ದ ವೋಲ್‌ಸ್ಟೋನ್‌ಕ್ರಾಫ್ಟ್  ಈಗಾಗಲೇ ಮದುವೆಯಾಗಿದ್ದ ಕಲಾವಿದ ಹೆನ್ರಿ ಫುಸೆಲಿಯೊಂದಿಗೆ ಸಂಬಂಧ ಬೆಳೆಸಿದರು.
 'ಅವನ ಪ್ರತಿಭೆ, ಅವನ ಆತ್ಮದ ಭವ್ಯತೆ, ಗ್ರಹಿಕೆಯ ತ್ವರಿತತೆ ಮತ್ತು ಸುಂದರ ಸಹಾನುಭೂತಿ'ಯಿಂದ ಪುಳಕಿತಳಾಗಿದ್ದೆ' ಎಂದು ಬರೆದುಕೊಂಡಿದ್ದಾರೆ. ಫುಸೆಲಿ ಮತ್ತು ಅವನ ಹೆಂಡತಿಯೊಂದಿಗೆ ಪ್ಲ್ಯಾಟೋನಿಕ್ ಜೀವನ ವ್ಯವಸ್ಥೆಯನ್ನು ಪ್ರಸ್ತಾಪಿಸಿದಳು. (ಕಾಮ ರಹಿತವಾದ ಪ್ರೇಮದ ಜೀವನ) ಆದರೆ ಫುಸೆಲಿಯ ಹೆಂಡತಿ ಗಾಬರಿಗೊಂಡಳು ಮತ್ತು ಪುಸೆಲಿ ವೋಲ್ಸ್‌ಟೋನ್‌ಕ್ರಾಫ್ಟ್‌ರೊಂದಿಗಿನ ಸಂಬಂಧವನ್ನು ಮುರಿದುಕೊಂಡನು.  ಫುಸೆಲಿಯ ನಿರಾಕರಣೆಯಿಂದಾದ ಅವಮಾನದಿಂದ ತಪ್ಪಿಸಿಕೊಳ್ಳಲು ವೊಲ್‌ಸ್ಟೋನ್‌ಕ್ರಾಫ್ಟ್ ಆಗಷ್ಟೇ ಬರೆದು ಮುಗಿಸಿದ 'ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ಮೆನ್' (೧೭೯೦)ನಲ್ಲಿ ತಾವೇ ಉತ್ಪ್ರೇಕ್ಷಿಸಿದ ಕ್ರಾಂತಿಕಾರಿ ಘಟನೆಗಳಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ತೆರಳಲು ನಿರ್ಧರಿಸಿದರು. 
 ವಿಗ್ ಎಂಪಿ ಎಡ್ಮಂಡ್ ಬರ್ಕ್ ಅವರ 'ದಿ ರೆವಲ್ಯೂಷನ್ ಇನ್ ಫ್ರಾನ್ಸ್' (೧೭೯೦) ಪುಸ್ತಕದ ರಾಜಕೀಯ ಹಾಗೂ ಸಂಪ್ರದಾಯವಾದಿ ಟೀಕೆಗೆ ಪ್ರತಿಕ್ರಿಯೆಯಾಗಿ 'ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ಮೆನ್' ಪುಸ್ತಕವನ್ನು ಬರೆದಿದ್ದಾರೆ. ಅದು ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ರಾತ್ರೋರಾತ್ರಿ ಪ್ರಸಿದ್ಧಿಗೊಳಿಸಿತು.  'ರಿಫ್ಲೆಕ್ಷನ್ಸ್ ಆನ್ ದಿ ರೆವಲ್ಯೂಷನ್ ಇನ್ ಫ್ರಾನ್ಸ್' ೧ ನವೆಂಬರ್ ೧೭೯೦ರಂದು ಪ್ರಕಟಿಸವಾಗಿದ್ದು 'ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ಮೆನ್, ಇನ್ ಎ ಲೆಟರ್ ಟು ದಿ ರೈಟ್ ಆನರೆಬಲ್ ಎಡ್ಮಂಡ್ ಬರ್ಕ್' ಅನಾಮಧೇಯವಾಗಿ ೨೯ ನವೆಂಬರ್ ೧೭೯೦ ರಂದು ಪ್ರಕಟವಾಯಿತು. ಆದರೆ 'ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ಮೆನ್'ನ ಎರಡನೇ ಆವೃತ್ತಿಯನ್ನು ಡಿಸೆಂಬರ್ ೧೮ ರಂದು ಪ್ರಕಟಿಸಿದಾಗ  ಪ್ರಕಾಶಕರು ವೋಲ್‌ಸ್ಟೋನ್‌ಕ್ರಾಫ್ಟ್ ಇದರ ಲೇಖಕಿ ಎಂದು ಬಹಿರಂಗಪಡಿಸಿದರು.


                 ಇದರಲ್ಲಿ ಮಹಿಳೆಯರು ಸ್ವಾಭಾವಿಕವಾಗಿ ಪುರುಷರಿಗಿಂತ ಕೀಳಲ್ಲ, ಆದರೆ ಅವರು ಶಿಕ್ಷಣದ ಕೊರತೆಯಿಂದಾಗಿ ಮಾತ್ರ ಹಾಗೆ ಕಾಣಿಸಿಕೊಳ್ಳುತ್ತಾರೆ ಎಂದು ವಾದಿಸುತ್ತಾರೆ.  ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ತರ್ಕಬದ್ಧ ಜೀವಿಗಳಾಗಿ ಪರಿಗಣಿಸಬೇಕು. ಹಾಗೂ ಕಾರ್‍ಯಕಾರಣದ ಆಧಾರದ ಮೇಲೆ ಸ್ಥಾಪಿತವಾದ ಸಾಮಾಜಿಕ ಕ್ರಮವನ್ನು ಕಲ್ಪಿಸಿಕೊಳ್ಳಬೇಕೆಂದು ಅವರು ಸೂಚಿಸುತ್ತಾರೆ. ಮಹಿಳೆಯರ ಕೊರತೆಯ ಶಿಕ್ಷಣವು ಅವರ ಮೇಲೆ ಇರಿಸಿರುವ ಮಿತಿಗಳಿಂದಾಗಿದೆ. ಸೌಂದರ್ಯವು ಹೆಣ್ಣಿನ ರಾಜದಂಡ ಎಂದು ಅವರ ಶೈಶವಾವಸ್ಥೆಯಿಂದಲೇ ಕಲಿಸಲ್ಪಟ್ಟಿದೆ, ಮನಸ್ಸು ದೇಹಕ್ಕೆ ತನ್ನನ್ನು ತಾನೇ ರೂಪಿಸಿಕೊಳ್ಳುತ್ತದೆ ಮತ್ತು ಅದೇ ಪಂಜರದ ಸುತ್ತಲೂ ತಿರುಗುತ್ತದೆ, ಅದರ ಸೆರೆಮನೆಯನ್ನು ಅಲಂಕರಿಸಲು ಮಾತ್ರ ಪ್ರಯತ್ನಿಸುತ್ತದೆ.' ಎಂದಿದ್ದಾರೆ.  'ಸೌಂದರ್ಯ ಮತ್ತು ಬಾಹ್ಯ ಸಾಧನೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ಬಿಟ್ಟರೆ ಮಹಿಳೆಯರು ಹೆಚ್ಚಿನದನ್ನು ಸಾಧಿಸಬಹುದು ಎಂದು ಈ ಪುಸ್ತಕದಲ್ಲಿ ಪ್ರತಿಪಾದಿಸುತ್ತಾರೆ. ಹನ್ನೆರಡನೇ ಅಧ್ಯಾಯದಲ್ಲಿ, "ರಾಷ್ಟ್ರೀಯ ಶಿಕ್ಷಣದಲ್ಲಿ", ಎಲ್ಲಾ ಮಕ್ಕಳನ್ನು "ದೇಶದ ಶಾಲೆಗೆ" ಕಳುಹಿಸಬೇಕು ಮತ್ತು ಮನೆಯಲ್ಲಿ ಸ್ವಲ್ಪ ಶಿಕ್ಷಣವನ್ನು ನೀಡಬೇಕು ಎಂದು ವಾದಿಸುತ್ತಾರೆ ಪುರುಷರು ಮತ್ತು ಮಹಿಳೆಯರು "ಒಂದೇ ಮಾದರಿಯ ಶಿಕ್ಷಣ ಪಡೆಯಬೇಕು" ಎಂದು ವಾದಿಸುತ್ತಾರೆ.
       ವೋಲ್‌ಸ್ಟೋನ್‌ಕ್ರಾಫ್ಟ್ ಫ್ರೆಂಚ್ ಕ್ರಾಂತಿಯನ್ನು 'ಇದುವರೆಗೆ ನಮ್ಮ ಭೂಮಂಡಲವನ್ನು  ಪಡೆದಿರುವುದಕ್ಕಿಂತ ಹೆಚ್ಚಿನ ಸದ್ಗುಣ ಮತ್ತು ಸಂತೋಷವನ್ನು ಪಡೆಯಲು ಅದ್ಭುತವಾದ ಅವಕಾಶ' ಎಂದು ಕರೆದರು. ಥರ್ಡ್ ಎಸ್ಟೇಟ್ ಅನ್ನು ಯಾವುದೇ ಖಾತೆಯಿಲ್ಲದ ವ್ಯಕ್ತಿಗಳೆಂದು ಬರ್ಕ್ ವಜಾಗೊಳಿಸುವುದರ ವಿರುದ್ಧ, 'ಈ ವಿಳಾಸವಿಲ್ಲದ ಜನಸಮೂಹವು ಮಾನವನ ಹೃದಯ ಮತ್ತು ಶಾಸನದ ಬಗ್ಗೆ ಹೆಚ್ಚು ತಿಳಿದಿದೆ.' ಎಂದು ವೋಲ್‌ಸ್ಟೋನ್‌ಕ್ರಾಫ್ಟ್ ಬರೆದರು. ೫-೬ ಅಕ್ಟೋಬರ್ ೧೭೮೯ರ ಘಟನೆಗಳ ಬಗ್ಗೆ, ಕೋಪಗೊಂಡ ಗೃಹಿಣಿಯರು ವರ್ಸೈಲ್ಸ್‌ನಿಂದ ಪ್ಯಾರಿಸ್‌ಗೆ ಮೆರವಣಿಗೆ ನಡೆಸಿ ರಾಜಮನೆತನಕ್ಕೆ ಮುತ್ತಿಗೆ ಹಾಕಿದಾಗ ಬರ್ಕ್ 'ರಾಣಿ ಮೇರಿ ಆಂಟೊನೆಟ್ ನರಕದಂತಹ ನೀಚ ಹಾಗೂ ಉಗ್ರರಾದ ಸ್ತ್ರೀಯರಿಂದ ಸುತ್ತುವರೆಯಲ್ಪಟ್ಟ ಪ್ರಾಚೀನ ಆಡಳಿತದ ಸಂಸ್ಕರಿಸಿದ ಸೊಬಗಿನ ಸಂಕೇತ' ಎಂದು ಹೊಗಳಿದರು, ಅದರೆ ವೋಲ್‌ಸ್ಟೋನ್‌ಕ್ರಾಫ್ಟ್ ವ್ಯತಿರಿಕ್ತವಾಗಿ ಅದೇ ಘಟನೆಯನ್ನು  'ಬಹುಶಃ ನೀವು [ಬರ್ಕ್] ಸ್ತ್ರೀಯರು ಎಂದರೆ ತರಕಾರಿ ಅಥವಾ ಮೀನುಗಳನ್ನು ಮಾರಾಟ ಮಾಡುವ ಮೂಲಕ ಜೀವನೋಪಾಯವನ್ನು ಗಳಿಸಿದ ಮಹಿಳೆಯರು, ಅವರು ಎಂದಿಗೂ ಶಿಕ್ಷಣದ ಪ್ರಯೋಜನಗಳನ್ನು ಹೊಂದಿಲ್ಲದವರು ಎಂದು ಭಾವಿಸಿರಬಹುದು.' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
               ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ದೇವತಾಶಾಸ್ತ್ರಜ್ಞ ಮತ್ತು ವಿವಾದಾತ್ಮಕ ಜೋಸೆಫ್ ಪ್ರೀಸ್ಟ್ಲಿ ಮತ್ತು ಪೈನ್‌ನಂತಹ ಪ್ರಮುಖರೊಂದಿಗೆ ಹೋಲಿಸಲಾಯಿತು, ಅವರ 'ರೈಟ್ಸ್ ಆಫ್ ಮ್ಯಾನ್' (೧೭೯೧) ಬರ್ಕ್‌ಗೆ ನೀಡಿದ ಪ್ರತಿಕ್ರಿಯೆಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ.  ಆವರ ಅತ್ಯಂತ ಪ್ರಸಿದ್ಧವಾದ ಮತ್ತು ಪ್ರಭಾವಶಾಲಿ ಕೃತಿ 'ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್' (೧೭೯೨)ನಲ್ಲಿ ರೈಟ್ಸ್ ಆಫ್ ಮ್ಯಾನ್‌ನಲ್ಲಿ ಅವರು ವಿವರಿಸಿದ ವಿಚಾರಗಳನ್ನು ಮುಂದುವರಿಸಿದರು.  ವೊಲ್‌ಸ್ಟೋನ್‌ಕ್ರಾಫ್ಟ್‌ನ ಖ್ಯಾತಿಯು 'ಇಂಗ್ಲಿಷ್ ಕಡ್ಗಾಲುವೆ' ತುಂಬ ಹರಡಿತು, ಫ್ರೆಂಚ್ ರಾಜನೀತಿಜ್ಞ ಚಾರ್ಲ್ಸ್ ಮೌರಿಸ್ ಡೆ ಟ್ಯಾಲಿರಾಂಡ್-ಪೆರಿಗೋರ್ಡ್ ೧೭೯೨ರಲ್ಲಿ ಲಂಡನ್‌ಗೆ ಭೇಟಿ ನೀಡಿದಾಗ ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಭೇಟಿ ಮಾಡಿದರು, ಆ ಸಮಯದಲ್ಲಿ ಅವರು ಫ್ರೆಂಚ್ ಹುಡುಗರಿಗೆ ನೀಡುತ್ತಿರುವ ಶಿಕ್ಷಣದ ಹಕ್ಕನ್ನು ಫ್ರೆಂಚ್ ಹುಡುಗಿಯರಿಗೂ ನೀಡಬೇಕೆಂದು ಕೇಳಿಕೊಂಡರು.
            ವೋಲ್‌ಸ್ಟೋನ್‌ಕ್ರಾಫ್ಟ್ ಡಿಸೆಂಬರ್ ೧೭೯೨ರಲ್ಲಿ ಹದಿನಾರನೆ ಲೂಯಿಸ್ ಗಿಲ್ಲೋಟಿನ್‌ಗೆ (ಒಂದೇ ಸಲಕ್ಕೆ ಇಪ್ಪತ್ತು-ಇಪ್ಪತ್ತೈದು ಜನರ ತಲೆಗಳನ್ನು ಕತ್ತರಿಸುವ ಹರಿತವಾದ ಯಂತ್ರ) ಬಲಿಯಾಗುವ ಸುಮಾರು ಒಂದು ತಿಂಗಳ ಮೊದಲು ಪ್ಯಾರಿಸ್‌ಗೆ ಹೊರಟರು.  ಅವರು ಪ್ಯಾರಿಸ್‌ಗೆ ಹೊರಟಾಗ ಬ್ರಿಟನ್ ಮತ್ತು ಫ್ರಾನ್ಸ್ ಯುದ್ಧದ ಅಂಚಿನಲ್ಲಿದ್ದರಿಂದ ಅನೇಕರು ಹೋಗದಂತೆ ಸಲಹೆ ನೀಡಿದರು. ಫ್ರಾನ್ಸ್ ಗೊಂದಲದಲ್ಲಿತ್ತು.  ಅವರು ಹೆಲೆನ್ ಮರಿಯಾ ವಿಲಿಯಮ್ಸ್ ಅವರಂತಹ ಇತರ ಬ್ರಿಟಿಷ್‌ರನ್ನು ಹುಡುಕಿದರು. ನಂತರ ನಗರದಲ್ಲಿದ್ದ ವಲಸಿಗರ ಜೊತೆ ಸೇರಿಕೊಂಡರು.  ಪ್ಯಾರಿಸ್‌ನಲ್ಲಿದ್ದ ಸಮಯದಲ್ಲಿ, ವೋಲ್‌ಸ್ಟೋನ್‌ಕ್ರಾಫ್ಟ್ ಉಗ್ರ ಮೂಲಭೂತವಾದಿಗಳಾಗಿದ್ದ ಜಾಕೋಬಿನ್‌ಗಳಿಗಿಂತ ಹೆಚ್ಚಾಗಿ ಮಧ್ಯಮ ಗಿರೊಂಡಿನ್‌ಗಳೊಂದಿಗೆ ಸಂಬಂಧ ಹೊಂದಿದ್ದರು.  
 
              ಫೆಬ್ರವರಿ ೧೭೯೩ರಲ್ಲಿ ಫ್ರಾನ್ಸ್ ಬ್ರಿಟನ್ ಮೇಲೆ ಯುದ್ಧ ಘೋಷಿಸಿತು. ವೋಲ್ಸ್ಟೋನ್ಕ್ರಾಫ್ಟ್ ಫ್ರಾನ್ಸ್ ತೊರೆದು ಸ್ವಿಟ್ಜರ್ಲೆಂಡ್ ಹೋಗಲು ಪ್ರಯತ್ನಿಸಿದರಾದರೂ ಅನುಮತಿ ನಿರಾಕರಿಸಲಾಯಿತು. ಮಾರ್ಚ್‌ನಲ್ಲಿ, ಜಾಕೋಬಿನ್ ಪ್ರಾಬಲ್ಯದ ಸಾರ್ವಜನಿಕ ಸುರಕ್ಷತಾ ಸಮಿತಿಯು ಅಧಿಕಾರಕ್ಕೆ ಬಂದಿತು, 'ಸಂಪೂರ್ಣ ಯುದ್ಧ'ಕ್ಕೆ ಫ್ರಾನ್ಸ್ ಅನ್ನು ಸಜ್ಜುಗೊಳಿಸುವ ಉದ್ದೇಶದಿಂದ ನಿರಂಕುಶ ಆಡಳಿತವನ್ನು ಸ್ಥಾಪಿಸಿತು.

ಫ್ರಾನ್ಸ್‌ನಲ್ಲಿ ವಿದೇಶಿಯರಿಗೆ ಜೀವನವು ತುಂಬಾ ಕಷ್ಟಕರವಾಗಿತ್ತು. ಅವರನ್ನು ಪೋಲೀಸ್ ಕಣ್ಗಾವಲಿನಲ್ಲಿ ಇರಿಸಲಾಯಿತು. ವಾಸಿಸಲು ಪರವಾನಗಿಯನ್ನು ಪಡೆಯಲು ಗಣರಾಜ್ಯದ ಕುರಿತು ಅವರ ನಿಷ್ಠೆಗೆ ಸಾಕ್ಷಿಯಾಗುವ ಆರು ಲಿಖಿತ ಹೇಳಿಕೆಗಳನ್ನು ಫ್ರೆಂಚ್‌ನಲ್ಲಿ ನೀಡಬೇಕಾಗಿತ್ತು.  ನಂತರ, ೧೨ ಏಪ್ರಿಲ್ ೧೭೯೩ರಂದು, ಎಲ್ಲಾ ವಿದೇಶಿಯರು ಫ್ರಾನ್ಸ್‌ನಿಂದ ಹೊರಹೋಗುವುದನ್ನು ನಿಷೇಧಿಸಲಾಯಿತು. ಕ್ರಾಂತಿಯ ಬಗ್ಗೆ ಅವರ ಸಹಾನುಭೂತಿಯ ಹೊರತಾಗಿಯೂ, ವೋಲ್‌ಸ್ಟೋನ್‌ಕ್ರಾಫ್ಟ್‌ನ ಜೀವನವು ಕಷ್ಟಕರವಾಗಿ ಪರಿಣಮಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಗಿರೊಂಡಿನ್ಸ್ ಜಾಕೋಬಿನ್ಸ್‌ಗೆ ಸೋತಿದ್ದರು. ವೋಲ್‌ಸ್ಟೋನ್‌ಕ್ರಾಫ್ಟ್‌ರ ಕೆಲವು ಫ್ರೆಂಚ್ ಸ್ನೇಹಿತರು ಗಿಲ್ಲೊಟಿನ್‌ನಲ್ಲಿ ತಮ್ಮ ತಲೆಯನ್ನು ಕಳೆದುಕೊಂಡರು.

             ಮಹಿಳೆಯ ಹಕ್ಕುಗಳನ್ನು ಬರೆದ ನಂತರ, ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ ಆಲೋಚನೆಗಳನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದರು ಮತ್ತು ಫ್ರೆಂಚ್ ಕ್ರಾಂತಿಯ ಬೌದ್ಧಿಕ ವಾತಾವರಣದಲ್ಲಿ ಪ್ರಾಯೋಗಿಕ ರೋಮ್ಯಾಂಟಿಕ್ ಬಾಂಧವ್ಯವನ್ನು ಹೊಂದಲು ಪ್ರಯತ್ನಿಸಿದರು. ಅದೇ ಸಮಯಕ್ಕೆ ಗಿಲ್ಬರ್ಟ್ ಇಮ್ಲೇ ಎಂಬ ಅಮೇರಿಕನ್ ಸಾಹಸಿಯನ್ನು ಭೇಟಿಯಾಗಿ ಪ್ರೇಮಿಸತೊಡಗಿದರು. 

ಆದರೆ ಅವರಲ್ಲಿ ಮದುವೆಯಾಗುವ ಉದ್ದೇಶ ಇರಲಿಲ್ಲ. ಇದು 'ಗೌರವಾನ್ವಿತ' ಬ್ರಿಟಿಷ್ ಮಹಿಳೆಯ ಸ್ವೀಕಾರಾರ್ಹವಲ್ಲದ ನಡವಳಿಕೆ ಎಂದು ಪರಿಗಣಿಸಲ್ಪಟ್ಟಿತು. ಪುರುಷನ ಆದರ್ಶೀಕರಣವನ್ನು ಪ್ರೀತಿಸುತ್ತಿದ್ದ ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ 'ದಿ ರೈಟ್ಸ್ ಆಫ್ ವುಮೆನ್'ನಲ್ಲಿ ಸಂಬಂಧಗಳಲ್ಲಿ ಲೈಂಗಿಕ ಅಂಶವನ್ನು ತಿರಸ್ಕರಿಸಿದ್ದರೂ  ಇಮ್ಲೇ ತಮ್ಮಲ್ಲಿ ಲೈಂಗಿಕ ಆಸಕ್ತಿಯನ್ನು ಉದ್ದೀಪನಗೊಳಿಸಿದ್ದಾನೆ ಎಂದು ವೊಲ್ಸ್ಟೋನ್ಕ್ರಾಫ್ಟ್ ಹೇಳಿದ್ದರು.
           ವೋಲ್‌ಸ್ಟೋನ್‌ಕ್ರಾಫ್ಟ್ ಫ್ರಾನ್ಸ್‌ನಲ್ಲಿ ತಾನು ನೋಡಿದ ಸಂಗತಿಯಿಂದ ಸ್ವಲ್ಪ ಮಟ್ಟಿಗೆ ಭ್ರಮನಿರಸನಗೊಂಡರು. ಜಾಕೋಬಿನ್ಸ್ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಹಾಗೂ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯಿಂದಾಗಿ ಮನನೊಂದಿದ್ದರು. ೧೬ ಅಕ್ಟೋಬರ್ ೧೭೯೩ರಂದು, ಮೇರಿ ಅಂಟೋನೆಟ್‌ರನ್ನು ತನ್ನ ಮಗನೊಂದಿಗೆ ಸಂಭೋಗದಲ್ಲಿ ತೊಡಗಿದ್ದ ಆರೋಪ ಹೊರೆಸಿ ಗಿಲ್ಲೊಟಿನ್ ಮಾಡಲಾಯಿತು. ವೋಲ್‌ಸ್ಟೋನ್‌ಕ್ರಾಫ್ಟ್ ಮಾಜಿ ರಾಣಿಯನ್ನು ಇಷ್ಟಪಡದಿದ್ದರೂ, ಜಾಕೋಬಿನ್‌ಗಳು ಮೇರಿ ಆಂಟೊನೆಟ್‌ಳ ಆಪಾದಿತ ವಿಕೃತ ಲೈಂಗಿಕ ಕ್ರಿಯೆಗಳನ್ನು ಫ್ರೆಂಚ್ ಜನರು ಅವಳನ್ನು ದ್ವೇಷಿಸಲು ಸೃಷ್ಟಿಸಲಾಗಿದೆ ಎಂದು ಚಿಂತೆಗೀಡಾದರು.
        ೩೧ ಅಕ್ಟೋಬರ್ ೧೭೯೩ ರಂದು ಹೆಚ್ಚಿನ ಗಿರೊಂಡಿನ್ ನಾಯಕರನ್ನು ಗಿಲ್ಲಟಿನ್ ಮಾಡಲಾಯಿತು;  ಇಮ್ಲೇ ವೋಲ್‌ಸ್ಟೋನ್‌ಕ್ರಾಫ್ಟ್‌ರಿಗೆ ಸುದ್ದಿ ಮುಟ್ಟಿಸಿದಾಗ, ಅವರು ಮೂರ್ಛೆ ಹೋದರು. ಈ ಹೊತ್ತಿಗೆ, ಇಮ್ಲೇ ಅವರು ಫ್ರಾನ್ಸ್‌ನ ಬ್ರಿಟಿಷರ ದಿಗ್ಬಂಧನದ ಲಾಭವನ್ನು ಪಡೆದರು, ನಿರಂತರವಾಗಿ ಬೆಳೆಯುತ್ತಿರುವ ಹಣದುಬ್ಬರದಿಂದಾಗಿ ಅಮೆರಿಕದಿಂದ ಆಹಾರ ಮತ್ತು ಸಾಬೂನು ತರಲು ಮತ್ತು ಬ್ರಿಟಿಷ್ ರಾಯಲ್ ನೇವಿ ಸರಕುಗಳನ್ನು ತರಲು ಹಡಗುಗಳನ್ನು ಬಾಡಿಗೆಗೆ ನೀಡುವ ಮೂಲಕ  ಹಣವನ್ನು ಹೊಂದಿರುವ ಫ್ರೆಂಚ್ ಜನರಿಗೆ ಪ್ರೀಮಿಯಂನಲ್ಲಿ ಮಾರಾಟ ಮಾಡಿ ಇಮ್ಲೇ ಜಾಕೋಬಿನ್‌ಗಳ ಗೌರವ ಮತ್ತು ಬೆಂಬಲವನ್ನು ಗಳಿಸಿದರು, ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಬಂಧನದಿಂದ ರಕ್ಷಿಸಲು, ಪ್ಯಾರಿಸ್‌ನಲ್ಲಿರುವ ರಾಯಭಾರ ಕಚೇರಿಗೆ ಇಮ್ಲೇ ತಾನು ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಮದುವೆಯಾದವನೆಂದು ಸುಳ್ಳು ಹೇಳಿಕೆಯನ್ನು ನೀಡಿದನು. ಆದರೆ ವೋಲ್‌ಸ್ಟೋನ್‌ಕ್ರಾಫ್ಟ್‌ರ  ಸ್ನೇಹಿತರಲ್ಲಿ ಕೆಲವರು ಅದೃಷ್ಟವಂತರಾಗಿರಲಿಲ್ಲ;  ಥಾಮಸ್ ಪೈನ್‌ನಂತಹ ಅನೇಕರನ್ನು ಬಂಧಿಸಲಾಯಿತು ಮತ್ತು ಕೆಲವರನ್ನು ಗಿಲ್ಲಟಿನ್‌ಗೆ ಒಳಪಡಿಸಲಾಯಿತು.  
               ಅದೇ ಸಮಯದಲ್ಲಿ ವೊಲ್‌ಸ್ಟೋನ್‌ಕ್ರಾಫ್ಟ್ ಇಮ್ಲೇಯಿಂದ ಗರ್ಭಿಣಿಯಾದರು, ಮತ್ತು ೧೪ ಮೇ ೧೭೯೪ರಂದು  ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು, ತನ್ನ ಅತ್ಯಂತ ಪ್ರೀತಿಯ ಗೆಳತಿ ಫ್ಯಾನಿ ಹೆಸರನ್ನು ಇಟ್ಟು ಸಮಾಧಾನಗೊಂಡ ವೊಲ್‌ಸ್ಟೋನ್‌ಕ್ರಾಫ್ಟ್ ಮಗಳನ್ನು ತಂದೆಯ ಪ್ರತಿರೂಪ ಎಂದು ಹೇಳಿದ್ದಾರೆ.  ಫ್ರೆಂಚ್ ಕ್ರಾಂತಿಯ ಹೆಚ್ಚುತ್ತಿರುವ ತುಮುಲಗಳ ಹೊರತಾಗಿಯೂ  ಉತ್ಸಾಹದಿಂದ ಬರೆಯುವುದನ್ನು ಮುಂದುವರೆಸಿದ ವೊಲ್‌ಸ್ಟೋನ್‌ಕ್ರಾಫ್ಟ್  ಉತ್ತರ ಫ್ರಾನ್ಸ್‌ನ ಲೆ ಹಾವ್ರೆಯಲ್ಲಿದ್ದಾಗ,  'ಎನ್ ಹಿಸ್ಟೋರಿಕಲ್ ಆಂಡ್ ಮಾರಲ್ ವ್ಯೂ ಆಫ್ ದಿ ಫ್ರೆಂಚ್ ರಿವಲ್ಯೂಷನ್' ಬರೆದು ಡಿಸೆಂಬರ್ ೧೭೯೪ರಲ್ಲಿ ಲಂಡನ್‌ನಲ್ಲಿ ಪ್ರಕಟಿಸಿದರು.   ಇಮ್ಲೇ ದೇಶೀಯ ಮನಸ್ಸಿನ ಮತ್ತು ತಾಯಿಯಾದ ವೊಲ್‌ಸ್ಟೋನ್‌ಕ್ರಾಫ್ಟ್  ಬಗ್ಗೆ ಅತೃಪ್ತಿ ತೋರಲಾರಂಭಿಸಿ ಬೇಗ ಹಿಂದಿರುಗುವ ಆಶ್ವಾಸನೆ ನೀಡಿ ಹೊರಟು ಹೋದನು. ಆತ ಬೇರೆ ಹೆಂಗಸಿನೊಂದಿಗೆ ಸಂಬಂಧ ಹೊಂದಿರಬಹುದೆಂಬ ಅರಿವಾದರೂ ವೊಲ್‌ಸ್ಟೋನ್‌ಕ್ರಾಫ್ಟ್ ಅವನಿಗಾಗಿ ಕಾಯುವುದನ್ನು ಮುಂದುವರಿಸಿದರು.  ತನ್ನ ಮಗುವಿಗೆ ನ್ಯಾಯಸಮ್ಮತತೆಯನ್ನು ಕೊಡಿಸುವ ಸಲುವಾಗಿ ತನ್ನ ಸಹೋದರಿಯರಿಗೂ ತನ್ನನ್ನು 'ಶ್ರೀಮತಿ ಇಮ್ಲೇ' ಎಂದು ಕರೆಯಲು ಹೇಳುತ್ತಿದ್ದರು.
ವೋಲ್‌ಸ್ಟೋನ್‌ಕ್ರಾಫ್ಟ್ ಇತಿಹಾಸಕಾರರಾಗಿ ತರಬೇತಿ ಪಡೆಯದಿದ್ದರೂ ಫ್ರಾನ್ಸ್‌ನಲ್ಲಿ ಸಾಮಾನ್ಯ ಜನರು ಕ್ರಾಂತಿಗೆ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ವಿವರಿಲು ಎಲ್ಲಾ ರೀತಿಯ ನಿಯತಕಾಲಿಕೆಗಳು, ಪತ್ರಗಳು ಮತ್ತು ದಾಖಲೆಗಳನ್ನು ಬಳಸಿದರು.  ಬ್ರಿಟನ್‌ನಲ್ಲಿ 'ಉನ್ಮಾದದ' ಕ್ರಾಂತಿ-ವಿರೋಧಿ ಮನಸ್ಥಿತಿ ಎಂದು ಫರ್ನಿಸ್ ಕರೆದದ್ದನ್ನು ಎದುರಿಸಲು ಅವರು ಪ್ರಯತ್ನಿಸುತ್ತಿದ್ದರು. ಇಡೀ ಫ್ರೆಂಚ್ ರಾಷ್ಟ್ರದ ಹುಚ್ಚು ಹಿಡಿದಿದೆ ಎಂದು ಕ್ರಾಂತಿಯನ್ನು ಚಿತ್ರಿಸುವುದನ್ನು ವಿರೋಧಿಸಿ  ವೋಲ್‌ಸ್ಟೋನ್‌ಕ್ರಾಫ್ಟ್  'ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳಿಂದ ಕ್ರಾಂತಿಯು ಹುಟ್ಟಿಕೊಂಡಿತು' ಎಂದು ವಾದಿಸಿದರು,
       ಇಮ್ಲೇಯನ್ನು ಹುಡುಕುತ್ತಾ, ವೊಲ್ಸ್ಟೋನ್ಕ್ರಾಫ್ಟ್ ಏಪ್ರಿಲ್ ೧೭೯೫ರಲ್ಲಿ ಲಂಡನ್‌ಗೆ ಮರಳಿದರು, ಆದರೆ ಅವನು ಅವರನ್ನು ತಿರಸ್ಕರಿಸಿದನು.  ಮೇ ೧೭೯೫ರಲ್ಲಿ  ಆತ್ಮಹತ್ಯೆಗೆ ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಇಮ್ಲೇಯನ್ನು ಮರಳಿ ಗೆಲ್ಲುವ ಕೊನೆಯ ಪ್ರಯತ್ನದಲ್ಲಿ ವೋಲ್‌ಸ್ಟೋನ್‌ಕ್ರಾಫ್ಟ್ ತನ್ನ ಪುಟ್ಟ ಮಗಳು ಮತ್ತು ಸೇವಕಿಯೊಂದಿಗೆ  ಅಪಾಯಕಾರಿ ಪ್ರವಾಸವನ್ನು ಕೈಗೊಂಡರು. ತಮ್ಮ ಪ್ರಯಾಣ ಮತ್ತು ಆಲೋಚನೆಗಳನ್ನು ಇಮ್ಲೇಗೆ ಬರೆದ ಪತ್ರಗಳಲ್ಲಿ ವಿವರಿಸಿದರು. ಅಂತಿಮವಾಗಿ ೧೭೯೬ರಲ್ಲಿ ಸ್ವೀಡನ್, ನಾರ್ವೆ ಮತ್ತು ಡೆನ್ಮಾರ್ಕ್‌ನಲ್ಲಿ ಸಣ್ಣ ನಿವಾಸದಲ್ಲಿ ಬರೆದ ಪತ್ರಗಳು ಎಂದು ಪ್ರಕಟಿಸಲ್ಪಟ್ಟವು. 
ಸ್ವೀಡನ್, ನಾರ್ವೆ ಮತ್ತು ಡೆನ್ಮಾರ್ಕ್‌ನಲ್ಲಿ ಬರೆದ ಪತ್ರಗಳು ಆ ದಶಕದಲ್ಲಿ ವೋಲ್ಸ್‌ಟೋನ್‌ಕ್ರಾಫ್ಟ್‌ರ ಅತ್ಯಂತ ಜನಪ್ರಿಯ ಪುಸ್ತಕವಾಗಿತ್ತು.  ಇದು ಉತ್ತಮವಾಗಿ ಮಾರಾಟವಾಯಿತಲ್ಲದೆ ಹೆಚ್ಚಿನ ವಿಮರ್ಶಕರಿಂದ ಧನಾತ್ಮಕವಾಗಿ ವಿಮರ್ಶಿಸಲ್ಪಟ್ಟಿತು.

 ಇಂಗ್ಲೆಂಡಿಗೆ ಹಿಂದಿರುಗಿದಾಗ ಇಮ್ಲೇಯೊಂದಿಗಿನ  ಸಂಬಂಧವು ಕೊನೆಗೊಂಡಿತು ಎಂಬುದು ಸಂಪೂರ್ಣ ಅರಿವಿಗೆ ಬಂದಾಗ ಎರಡನೇ ಬಾರಿಗೆ ಆತ್ಮಹತ್ಯೆಗೆ ಪ್ರಯತ್ನಿಸಿ ಇಮ್ಲೇಗೆ ಒಂದು ಟಿಪ್ಪಣಿಯನ್ನು ಬರೆದಿಟ್ಟರಾದರೂ ಆತ್ಮಹತ್ಯೆಯ ಪ್ರಯತ್ನವನ್ನು ಯಾರೋ ನೋಡಿದವರು ಇವರನ್ನು ಪುನಃ ರಕ್ಷಿಸಿದರು.
                ಕ್ರಮೇಣ ವೋಲ್‌ಸ್ಟೋನ್‌ಕ್ರಾಫ್ಟ್ ತನ್ನ ಸಾಹಿತ್ಯಿಕ ಜೀವನಕ್ಕೆ ಮರಳಿದಳು, ಜೋಸೆಫ್ ಜಾನ್ಸನ್‌ನ ವಲಯದೊಂದಿಗೆ ಮತ್ತೆ ತೊಡಗಿಸಿಕೊಂಡರು. ಮೇರಿ ಹೇಸ್, ಎಲಿಜಬೆತ್ ಇಂಚ್ಬಾಲ್ಡ್ ಮತ್ತು ವಿಲಿಯಂ ಗಾಡ್ವಿನ್ ಅವರೊಂದಿಗೆ ಕೆಲಸ ಪ್ರಾರಂಭಿಸಿದರು. ಗಾಡ್ವಿನ್ ಮತ್ತು ವೋಲ್‌ಸ್ಟೋನ್‌ಕ್ರಾಫ್ಟ್‌ರ  ಪ್ರಣಯವು ನಿಧಾನವಾಗಿ ಪ್ರಾರಂಭವಾಯಿತು, ಆದರೆ ಅದು ಅಂತಿಮವಾಗಿ ಉತ್ಕಟ ಪ್ರೇಮ ಸಂಬಂಧವಾಯಿತು. 

         ಗಾಡ್ವಿನ್ ಅವರು ಸ್ವೀಡನ್, ನಾರ್ವೆ ಮತ್ತು ಡೆನ್ಮಾರ್ಕ್‌ನಲ್ಲಿ ಬರೆದ ಪತ್ರಗಳನ್ನು ಓದಿದ್ದರು. "ಒಬ್ಬ ಮನುಷ್ಯನನ್ನು ಅದರ ಲೇಖಕರನ್ನು ಪ್ರೀತಿಸುವಂತೆ ಮಾಡಲು  ಪುಸ್ತಕವಿದ್ದರೆ, ಅದು ನನಗೆ ಈ ಪುಸ್ತಕವಾಗಿ ಕಾಣುತ್ತದೆ. ಅವಳು ತನ್ನ ದುಃಖದ ಬಗ್ಗೆ ಮಾತನಾಡುತ್ತಾಳೆ,  ನಮ್ಮಲ್ಲಿ ವಿಷಣ್ಣತೆಯನ್ನು ತುಂಬುವ ರೀತಿಯಲ್ಲಿ ಮತ್ತು ಮೃದುತ್ವದಲ್ಲಿ ನಮ್ಮನ್ನು ಕರಗಿಸುವ ರೀತಿಯಲ್ಲಿ, ಅದೇ ಸಮಯದಲ್ಲಿ ಅವಳು ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾದ ಪ್ರತಿಭೆಯನ್ನು ಪ್ರದರ್ಶಿಸುತ್ತಾಳೆ." ಎಂದಿದ್ದಾರೆ.  ವೋಲ್‌ಸ್ಟೋನ್‌ಕ್ರಾಫ್ಟ್ ಪುನಃ ಗರ್ಭಿಣಿಯಾದಾಗ, ತಮ್ಮ ಮಗು ನ್ಯಾಯಸಮ್ಮತವಾಗಲು ಅವರು ಮದುವೆಯಾಗಲು ನಿರ್ಧರಿಸಿದರು. ಆ ಮದುವೆಯು ವೋಲ್‌ಸ್ಟೋನ್‌ಕ್ರಾಫ್ಟ್ ಇಮ್ಲೇಯನ್ನು ಎಂದಿಗೂ ಮದುವೆಯಾಗಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿತು. ೨೯ ಮಾರ್ಚ್ ೧೭೯೭ರಂದು ಮದುವೆಯಾದ ನಂತರ, ಗಾಡ್ವಿನ್ ಮತ್ತು ವೋಲ್‌ಸ್ಟೋನ್‌ಕ್ರಾಫ್ಟ್ ೨೯ ದಿ ಪಾಲಿಗಾನ್, ಸೋಮರ್ಸ್ ಟೌನ್‌ಗೆ ತೆರಳಿದರು. ಗಾಡ್ವಿನ್ ಚಾಲ್ಟನ್ ಸ್ಟ್ರೀಟ್‌ನಲ್ಲಿರುವ ೧೭ ಎವೆಶ್ಯಾಮ್ ಕಟ್ಟಡಗಳಲ್ಲಿ ೨೦ ಬಾಗಿಲುಗಳ ದೂರದಲ್ಲಿರುವ ಅಪಾರ್ಟ್ಮೆಂಟ್‌ನ್ನು ಅಧ್ಯಯನಕ್ಕಾಗಿ ಬಾಡಿಗೆಗೆ ಪಡೆದರು, ಇದರಿಂದಾಗಿ ಅವರಿಬ್ಬರೂ ಇನ್ನೂ ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಆಗಾಗ್ಗೆ ಪತ್ರದ ಮೂಲಕ ಸಂವಹನ ನಡೆಸುತ್ತಿದ್ದರು. ಅವರ ಸಂಬಂಧವು ಸಂಕ್ಷಿಪ್ತವಾಗಿದ್ದರೂ ಸಂತೋಷ ಮತ್ತು ಸ್ಥಿರವಾಗಿತ್ತು.
           ೩೦ ಆಗಸ್ಟ್ ೧೭೯೭ರಂದು, ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ ಎರಡನೇ ಮಗಳು ಮೇರಿಗೆ ಜನ್ಮ ನೀಡಿದರು.  ಪ್ರಸವವು ಆರಂಭದಲ್ಲಿ ಸರಿಯಾಗಿದ್ದಂತೆ ತೋರಿದರೂ, ಜನನದ ಸಮಯದಲ್ಲಿ ಸೋಂಕಿಗೆ ಒಳಗಾಗಿ ಹಲವಾರು ದಿನಗಳ ಸಂಕಟದ ನಂತರ, ವೋಲ್‌ಸ್ಟೋನ್‌ಕ್ರಾಫ್ಟ್ ಸೆಪ್ಟೆಂಬರ್ ೧೦ ರಂದು ಸೆಪ್ಟಿಸೆಮಿಯಾನಿಂದ ಮರಣಹೊಂದಿದರು.
   ಈ ಘಟನೆಯಿಂದಾಗಿ ಗಾಡ್ವಿನ್ ಕುಸಿದು ಹೋದರು.  ಅವರು ತಮ್ಮ ಸ್ನೇಹಿತ ಥಾಮಸ್ ಹಾಲ್‌ಕ್ರಾಫ್ಟ್‌ಗೆ "ಪ್ರಪಂಚದಲ್ಲಿ ಅವಳಿಗೆ ಸಮಾನವಾಗಿ ಅಸ್ತಿತ್ವದಲ್ಲಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ. ಅನುಭವದಿಂದ ನಾವು ಒಬ್ಬರನ್ನೊಬ್ಬರು ಸಂತೋಷಪಡಿಸಲು ರೂಪುಗೊಂಡಿದ್ದೇವೆ ಎಂದು ನನಗೆ ತಿಳಿದಿದೆ. ನಾನು ಈಗ ಏನನ್ನಾದರೂ ಮಾಡಬಹುದೆಂಬ ಕನಿಷ್ಠ ನಿರೀಕ್ಷೆಯೂ ಇಲ್ಲ' ಎಂದು ಬರೆದರು.  ಅವರನ್ನು ಸೇಂಟ್ ಪ್ಯಾನ್‌ಕ್ರಾಸ್ ಓಲ್ಡ್ ಚರ್ಚ್‌ನ ಚರ್ಚ್‌ಯಾರ್ಡ್‌ನಲ್ಲಿ ಸಮಾಧಿ ಮಾಡಲಾಯಿತು, ಸಮಾಧಿಯಲ್ಲಿ "ಮೇರಿ ವೋಲ್ಸ್‌ಟೋನ್‌ಕ್ರಾಫ್ಟ್ ಗಾಡ್ವಿನ್, ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್‌ನ ಲೇಖಕಿ: ಜನನ ೨೭ ಏಪ್ರಿಲ್ ೧೭೫೯: ೧೦ ಸೆಪ್ಟೆಂಬರ್ ೧೭೯೭ ರಂದು ನಿಧನರಾದರು." ಎಂದು ಕೆತ್ತಲಾಗಿದೆ.  

ಜನವರಿ ೧೭೯೮ರಲ್ಲಿ ಗಾಡ್ವಿನ್ ತನ್ನ 'ಮೆಮೊಯಿರ್ಸ್ ಆಫ್ ದಿ ಆಥರ್ ಆಫ್ ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್' ಅನ್ನು ಪ್ರಕಟಿಸಿದರು. 
 ಗಾಡ್ವಿನ್ ತನ್ನ ಹೆಂಡತಿಯನ್ನು ಪ್ರೀತಿ, ಸಹಾನುಭೂತಿ ಮತ್ತು ಪ್ರಾಮಾಣಿಕತೆಯಿಂದ ಚಿತ್ರಿಸುತ್ತಿದ್ದಾನೆ ಎಂದು ಭಾವಿಸಿದರೂ, ವೋಲ್‌ಸ್ಟೋನ್‌ಕ್ರಾಫ್ಟ್‌ರ  ನ್ಯಾಯಸಮ್ಮತವಲ್ಲದ ಮಕ್ಕಳು, ಪ್ರೇಮ ವ್ಯವಹಾರಗಳು ಮತ್ತು ಆತ್ಮಹತ್ಯಾ ಪ್ರಯತ್ನಗಳನ್ನು ಬಹಿರಂಗಪಡಿಸುತ್ತಾನೆ ಎಂದು ಅನೇಕ ಓದುಗರು ಆಘಾತಕ್ಕೊಳಗಾಗಿದ್ದರು. ರೊಮ್ಯಾಂಟಿಕ್ ಕವಿ ರಾಬರ್ಟ್ ಸೌಥಿ ಅವನು "ತನ್ನ ಸತ್ತ ಹೆಂಡತಿಯನ್ನು ಬೆತ್ತಲೆಯಾಗಿ ತೋರಿಸಿದ್ದಾನೆ" ಎಂದು ಆರೋಪಿಸಿದ್ದಾರೆ ಮತ್ತು 'ದ ಅನ್‌ಸೆಕ್ಸ್‌ಡ್ ಫೀಮೇಲ್ಸ್'ನಂತಹ ಕೆಟ್ಟ ವಿಡಂಬನೆಗಳನ್ನು ಪ್ರಕಟಿಸಿದ್ದರಿಂದ ವೋಲ್‌ಸ್ಟೋನ್‌ಕ್ರಾಫ್ಟ್‌ರವರ ವ್ಯಕ್ತಿತ್ವವನ್ನು ಮಸುಕು ಮಾಡಲಾಯಿತು ಎಂಬುದು ಅಷ್ಟೇ ಸತ್ಯ.  ಬ್ರಿಟಿಷ್ ಕವಿ ರಾಬರ್ಟ್ ಬ್ರೌನಿಂಗ್ ಅವರ "ವೋಲ್ಸ್‌ಟೋನ್‌ಕ್ರಾಫ್ಟ್ ಮತ್ತು ಫುಸೆಲಿ" ಮತ್ತು ವಿಲಿಯಂ ರೋಸ್ಕೋ ಅವರ ಸಾಲುಗಳನ್ನು ಒಳಗೊಂಡಿರುವ ಕವಿತೆಗಳಿಗೆ ಕಾರಣವಾಯಿತು:
          ಗಾಡ್ವಿನ್‌ರ ಮೆಮೊಯಿರ್ಸ್‌ನ ಅಜಾಗರುಕತೆಯ ವಿನಾಶಕಾರಿ ಪರಿಣಾಮದ ನಂತರ, ವೊಲ್ಸ್‌ಟೋನ್‌ಕ್ರಾಫ್ಟ್ ಖ್ಯಾತಿಯು ಸುಮಾರು ಒಂದು ಶತಮಾನದವರೆಗೆ ಚಿಂದಿಯಾಯಿತು. ನಂತರ ಬೆಲಿಂಡಾದಲ್ಲಿ (೧೮೦೧) 'ಫ್ರೀಕಿಶ್' ಹ್ಯಾರಿಯೆಟ್ ಫ್ರೀಕ್ ಮಾದರಿಯನ್ನು ರೂಪಿಸಿದ ಮಾರಿಯಾ ಎಡ್ಜ್‌ವರ್ತ್‌ನಂತಹ ಬರಹಗಾರರು ಪುನಃ ಇವರನ್ನು ಇತಿಹಾಸದ ಪುಟಗಳಿಂದ ಹೊರತೆಗೆದರು.  

ವಿದ್ವಾಂಸ ವರ್ಜೀನಿಯಾ ಸಪಿರೊ ಹೇಳುವಂತೆ ಹತ್ತೊಂಬತ್ತನೇ ಶತಮಾನದಲ್ಲಿ ವೊಲ್ಸ್‌ಟೋನ್‌ಕ್ರಾಫ್ಟ್‌ನ ಕೃತಿಗಳನ್ನು ಓದಿದ ಕೆಲವರು 'ಆಕೆಯ ಆಕ್ರಮಣಕಾರರು ಯಾವುದೇ ಸ್ವಾಭಿಮಾನಿ ಮಹಿಳೆಯ ಬರಹವನ್ನು ಓದಿರಲಿಕ್ಕಿಲ್ಲ' ಎಂದು ಹೇಳಿದ್ದಾರೆ.  ವೊಲ್‌ಸ್ಟೋನ್‌ಕ್ರಾಫ್ಟ್‌ಡಿ ಮಕ್ಕಳ ಕಥೆಗಳನ್ನು ೧೮೭೦ ರಲ್ಲಿ ಚಾರ್ಲೆಟ್ ಮೇರಿ ಯೋಂಗ್ ಅವರು ಅಳವಡಿಸಿಕೊಂಡರು.
               ಮಹಿಳೆಯರಿಗೆ ರಾಜಕೀಯ ಧ್ವನಿಯನ್ನು ನೀಡುವ ಚಳುವಳಿಯ ಉದಯದೊಂದಿಗೆ ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಪುನಃ ಹೊರ ಜಗತ್ತಿಗೆ ಪರಿಚಯಿಸಲಾಯಿತು. ವಾಲ್ಸ್‌ಟೋನ್‌ಕ್ರಾಫ್ಟ್‌ರ 'ಲೆಟರ್ಸ್ ಟು ಇಮ್ಲೇ' ಪ್ರಕಟಣೆಯೊಂದಿಗೆ, ಚಾರ್ಲ್ಸ್ ಕೆಗನ್ ಪಾಲ್, ಆತ್ಮಚರಿತ್ರೆಯೊಂದಿಗೆ ಎಲಿಜಬೆತ್ ರಾಬಿನ್ಸ್ ಪೆನ್ನೆಲ್ ಅವರನ್ನು ತೆರೆದಿಟ್ಟರು.  ಇದು ೧೮೮೪ ರಲ್ಲಿ ರಾಬರ್ಟ್ಸ್ ಬ್ರದರ್ಸ್ ಪ್ರಸಿದ್ಧ ಮಹಿಳೆಯರ ಮೇಲೆ ಸರಣಿಯ ಭಾಗವಾಗಿ ಪ್ರಕಟಗೊಂಡಿತು
 ಆಧುನಿಕ ಸ್ತ್ರೀವಾದಿ ಚಳವಳಿಯ ಆಗಮನದೊಂದಿಗೆ, ವರ್ಜೀನಿಯಾ ವೂಲ್ಫ್ ಮತ್ತು ಎಮ್ಮಾ ಗೋಲ್ಡ್‌ಮನ್‌ರಂತೆ ರಾಜಕೀಯವಾಗಿ ಪರಸ್ಪರ ಭಿನ್ನವಾಗಿರುವ ಮಹಿಳೆಯರು  ಕೂಡ ವೊಲ್ಸ್‌ಟೋನ್‌ಕ್ರಾಫ್ಟ್‌ರ ಜೀವನ ಕಥೆಯನ್ನು ಸ್ವೀಕರಿಸಿದರು.  ೧೯೨೯ರ ಹೊತ್ತಿಗೆ ವೂಲ್ಫ್ ವೋಲ್‌ಸ್ಟೋನ್‌ಕ್ರಾಫ್ಟ್‌ರ ಬರವಣಿಗೆ, ವಾದಗಳು ಮತ್ತು 'ಜೀವನದಲ್ಲಿನ ಪ್ರಯೋಗಗಳು' ಅಮರ ಎಂದು ವಿವರಿಸಿದರು.  'ಅವಳು ಜೀವಂತವಾಗಿದ್ದಾಳೆ ಮತ್ತು ಕ್ರಿಯಾಶೀಲಳಾಗಿದ್ದಾಳೆ, ಅವಳು ವಾದಿಸುತ್ತಾಳೆ ಮತ್ತು ಪ್ರಯೋಗಗಳನ್ನು ಮಾಡುತ್ತಾಳೆ, ನಾವು ಅವಳ ಧ್ವನಿಯನ್ನು ಕೇಳುತ್ತೇವೆ ಮತ್ತು ಈಗ ಜೀವಂತವಾಗಿರುವವರ ನಡುವೆ ಅವಳ ಪ್ರಭಾವವನ್ನು ಗುರುತಿಸುತ್ತೇವೆ' ಎಂದು ಹೊಗಳಿದರು.  ಆದಾಗ್ಯೂ, ಇತರರು ವೋಲ್‌ಸ್ಟೋನ್‌ಕ್ರಾಫ್ಟ್‌ನ ಜೀವನಶೈಲಿಯನ್ನು ಟೀಕಿಸುವುದನ್ನು ಮುಂದುವರೆಸಿದರು
         ವೋಲ್‌ಸ್ಟೋನ್‌ಕ್ರಾಫ್ಟ್‌ನ ಕೆಲಸವು ಅಕಾಡೆಮಿಯ ಹೊರಗಿನ ಸ್ತ್ರೀವಾದದ ಮೇಲೂ ಪರಿಣಾಮ ಬೀರಿದೆ.  ಅಯಾನ್ ಹಿರ್ಸಿ ಅಲಿ, ರಾಜಕೀಯ ಬರಹಗಾರ ಮತ್ತು ಮಾಜಿ ಮುಸ್ಲಿಂ, ಇಸ್ಲಾಂ ಧರ್ಮ  ನಿರ್ದಿಷ್ಟವಾಗಿ ಮಹಿಳೆಯರಿಗೆ ಸಂಬಂಧಿಸಿದಂತೆ ಅದರ ನಿರ್ದೇಶನಗಳನ್ನು ಟೀಕಿಸುತ್ತಾರೆ, ತನ್ನ ಆತ್ಮಚರಿತ್ರೆ ಇನ್ಫಿಡೆಲ್‌ನಲ್ಲಿ ಮಹಿಳೆಯ ಹಕ್ಕುಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಅವರು ಪ್ರವರ್ತಕ ಸ್ತ್ರೀವಾದಿ ಚಿಂತಕಿ ಮೇರಿ ವೋಲ್ಸ್‌ಟೋನ್‌ಕ್ರಾಫ್ಟ್‌ರ 'ಪುರುಷರಂತೆ ತರ್ಕಿಸುವ ಸಾಮರ್ಥ್ಯ ಅವರಿಗೂ ಇದೆ ಮತ್ತು ಅದೇ ಹಕ್ಕುಗಳಿಗೆ ಅರ್ಹರು ಎಂದು ಮಹಿಳೆಯರಿಗೆ ಹೇಳಿದ ಮಾತುಗಳಿಂದಾಗಿ ಸ್ಫೂರ್ತಿ ಪಡೆದಿರುವುದಾಗಿ ಬರೆದಿದ್ದಾರೆ. ಬ್ರಿಟಿಷ್ ಬರಹಗಾರ್ತಿ ಕೈಟ್ಲಿನ್ ಮೊರನ್ ಪ್ರಸಿದ್ಧ ಕೃತಿಯಾದ 'ಹೌ ಟು ಬಿ ಎ ವುಮನ್'ದ ಲೇಖಕಿ, ನ್ಯೂಯಾರ್ಕ್‌ಗೆ ತನ್ನನ್ನು 'ಹಾಫ್ ವೋಲ್‌ಸ್ಟೋನ್‌ಕ್ರಾಫ್ಟ್' ಎಂದಿದ್ದಲ್ಲದೆ  'ಅವಳು ಹೆಚ್ಚು ಸ್ಫೂರ್ತಿ ನೀಡಿದ್ದಾಳೆ' ಎಂದಿದ್ದಾರೆ.  ನೊಬೆಲ್ ಪ್ರಶಸ್ತಿ ವಿಜೇತ, ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ಏಷ್ಯಾದ ಕಾಣೆಯಾದ ಮಹಿಳೆಯರನ್ನು ಮೊದಲು ಗುರುತಿಸಿದ ದಾರ್ಶನಿಕ ಅಮರ್ತ್ಯ ಸೇನ್ 'ದಿ ಐಡಿಯಾ ಆಫ್ ಜಸ್ಟಿಸ್'ನಲ್ಲಿ ರಾಜಕೀಯ ತತ್ವಜ್ಞಾನಿಯಾಗಿ ವೊಲ್ಸ್‌ಟೋನ್‌ಕ್ರಾಫ್ಟ್‌ರನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾರೆ.

 ವೋಲ್‌ಸ್ಟೋನ್‌ಕ್ರಾಫ್ಟ್ ಗೌರವಾರ್ಥವಾಗಿ ಹಲವಾರು ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಮ್ಯಾಗಿ ಹ್ಯಾಂಬ್ಲಿಂಗ್‌ನಿಂದ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್‌ಗಾಗಿ ಒಂದು ಸ್ಮರಣಾರ್ಥ ಶಿಲ್ಪವನ್ನು ೧೦ ನವೆಂಬರ್ ೨೦೨೦ರಂದು ಅನಾವರಣಗೊಳಿಸಲಾಯಿತು.  
 ನವೆಂಬರ್ ೨೦೨೦ ರಲ್ಲಿ, ಟ್ರಿನಿಟಿ ಕಾಲೇಜ್ ಡಬ್ಲಿನ್ ಗ್ರಂಥಾಲಯವು ಈ ಹಿಂದೆ ನಲವತ್ತು ಬಸ್ಟ್‌ಗಳನ್ನು ಹೊಂದಿತ್ತು, ಅವರೆಲ್ಲರೂ ಪುರುಷರಾಗಿದ್ದರು ನಂತರ ನಾಲ್ಕು ಹೊಸ ಮಹಿಳೆಯರ ಬಸ್ಟ್‌ಗಳನ್ನು ನಿಯೋಜಿಸಿದ್ದರಲ್ಲಿ ಅವರಲ್ಲಿ ಒಬ್ಬರು ವೋಲ್‌ಸ್ಟೋನ್‌ಕ್ರಾಫ್ಟ್  ಎಂಬುದು ಹೆಮ್ಮೆಯ ವಿಷಯ.
                ಇಂದು ಜಗತ್ತಿನಾದ್ಯಂತ ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಸ್ಥಾಪಕ ಸ್ತ್ರೀವಾದಿ ತತ್ವಜ್ಞಾನಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ, ಮತ್ತು ಸ್ತ್ರೀವಾದಿಗಳು ಆಗಾಗ್ಗೆ ಅವರ ಜೀವನ ಮತ್ತು ಅವರ ಕೃತಿಗಳೆರಡನ್ನೂ ಪ್ರಮುಖ ಪ್ರಭಾವಗಳಾಗಿ ಉಲ್ಲೇಖಿಸುತ್ತಾರೆ.

           ೧೮೫೧ ರಲ್ಲಿ, ವೋಲ್‌ಸ್ಟೋನ್‌ಕ್ರಾಫ್ಟ್‌ನ ಅವಶೇಷಗಳನ್ನು ಆಕೆಯ ಮೊಮ್ಮಗ ಪರ್ಸಿ ಫ್ಲಾರೆನ್ಸ್ ಶೆಲ್ಲಿ ಅವರು ಬೋರ್ನ್‌ಮೌತ್‌ನ ಸೇಂಟ್ ಪೀಟರ್ಸ್ ಚರ್ಚ್‌ನಲ್ಲಿರುವ ಅವರ ಕುಟುಂಬದ ಸಮಾಧಿಗೆ ಸ್ಥಳಾಂತರಿಸಿದರು.
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220812_4_4
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220819_4_2


Thursday 4 August 2022

ಮತ ಚಲಾಯಿಸಲು ನೊಂದಾಯಿಸಿದ ಮೊದಲ ಮಹಿಳೆ ಲೂಯಿಸಾ ಮೇ ಆಲ್ಕಾಟ್


ಮತ ಚಲಾಯಿಸಲು ನೊಂದಾಯಿಸಿದ ಮೊದಲ ಮಹಿಳೆ ಲೂಯಿಸಾ ಮೇ ಆಲ್ಕಾಟ್

        ನವೆಂಬರ್ ೨೯, ೧೮೩೨ರಂದು ಪೆನ್ಸಿಲ್ವೇನಿಯಾದ ಜರ್ಮನ್‌ಟೌನ್‌ನಲ್ಲಿ ಜನಿಸಿದ  ಲೂಯಿಸಾ ಮೇ ಆಲ್ಕಾಟ್ ಮಹಿಳಾ ಪಾತ್ರಗಳನ್ನು ಬಲಿಷ್ಠವಾಗಿ ಚಿತ್ರಿಸಿ ತನ್ಮೂಲಕ ಸಮಾಜದಲ್ಲಿ ಒಂದು ಬಲಿಷ್ಟ ಸ್ತ್ರೀವಾದಿ ಜನಾಂಗ ರೂಪಿಸಲು ಶ್ರಮಿಸಿದವರಲ್ಲಿ ಅಗ್ರಗಣ್ಯರು. ಇವರು ಮುಖ್ಯವಾಗಿ ಮಕ್ಕಳ ಬರಹಗಾರ್ತಿ ಎಂದು ಗುರುತಿಸಿಕೊಂಡಿದ್ದರೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದದ್ದು ಅವರ ಕಾದಂಬರಿಗಳಿಂದಾಗಿ.  ಆರರಿಂದ ಅರವತ್ತು ವರ್ಷಗಳವರೆಗೆ ಯಾರು ಬೇಕಾದರೂ ಓದಬಹುದಾದ ಪುಸ್ತಕಗಳು ಎಂದು ವಿಮರ್ಶಾವಲಯದಲ್ಲಿ ಮೆಚ್ಚುಗೆ ಗಳಿಸಿದ ಲಿಟ್ಲ ವುಮನ್ ಅವರನ್ನು ಸರ್ವಕಾಲಿಕ ಶ್ರೇಷ್ಠ ಬರಹಗಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿತು.
               ಆಲ್ಕಾಟ್ ಅವರ ಪೋಷಕರು ೧೯ ನೇ ಶತಮಾನದ ಅತೀಂದ್ರಿಯ ಚಳುವಳಿಯ ಒಂದು ಭಾಗವಾಗಿದ್ದರು, ಇದು ಆ ಕಾಲದ ಒಂದು ಜನಪ್ರಿಯ ಧಾರ್ಮಿಕ ಚಳುವಳಿಯಾಗಿದೆ.  ಅವರ ಧಾರ್ಮಿಕ ಮತ್ತು ರಾಜಕೀಯ ನಂಬಿಕೆಗಳು ಬಾಲ್ಯದಲ್ಲಿ ಆಲ್ಕಾಟ್‌ಗೆ ಆಳವಾದ ಸ್ಫೂರ್ತಿ ನೀಡಿತು.  ಅವರ ತಂದೆ ಬ್ರಾನ್ಸನ್ ಆಲ್ಕಾಟ್ ಜನಪ್ರಿಯ ಅತೀಂದ್ರಿಯವಾದಿಯಷ್ಟೇ ಅಲ್ಲ ಒಳ್ಳೆಯ ಶಿಕ್ಷಣತಜ್ಞರಾಗಿದ್ದರು, ಅವರು ಮಕ್ಕಳು ಕಲಿಯುವುದನ್ನು ಆನಂದಿಸಬೇಕು ಎಂದು ನಂಬಿದ್ದರು.  ಆದ್ದರಿಂದ, ಚಿಕ್ಕ ವಯಸ್ಸಿನಲ್ಲಿ, ಆಲ್ಕಾಟ್‌ರವರನ್ನು ಸ್ವಚ್ಛೆಯಿಂದ ಓದಲು ಮತ್ತು ಬರೆಯಲು ಪ್ರೇರೇಪಿಸಿದರು.  ಅಲ್ಕಾಟ್‌ರವರ ಶಿಕ್ಷಣವು ಹೆಚ್ಚಾಗಿ ಅವರ ತಂದೆಯ ನಿರ್ದೇಶನದಲ್ಲಿ, ಬೋಸ್ಟನ್‌ನಲ್ಲಿರುವ ಅವರ ಹೊಸದಾದ ಟೆಂಪಲ್ ಸ್ಕೂಲ್‌ನಲ್ಲಿ ಮತ್ತು ಮನೆಯಲ್ಲಿ ನಡೆದಿದ್ದರೂ ನಂತರ ಪ್ರಸಿದ್ಧ ತತ್ವಜ್ಞಾನಿ ಹೆನ್ರಿ ಡೇವಿಡ್ ಥೋರೋ ಮತ್ತು ಜನಪ್ರಿಯ ಲೇಖಕರಾದ ರಾಲ್ಫ್ ವಾಲ್ಡೋ ಎಮರ್ಸನ್ ಮತ್ತು ನಥಾನಿಯಲ್ ಹಾಥಾರ್ನ್ ಅವರ ಅಡಿಯಲ್ಲಿ ಅಧ್ಯಯನ ಮಾಡಿದರು.  
              ಅವರ ಲಿಟಲ್ ವುಮೆನ್ ಕಾದಂಬರಿಯಂತೆ ಆಲ್ಕಾಟ್‌ರವರು ನಾಲ್ಕು ಹೆಣ್ಣುಮಕ್ಕಳಲ್ಲಿ ಒಬ್ಬಳು ಮತ್ತು ಅವಳು ತನ್ನ ಜೀವನದುದ್ದಕ್ಕೂ ತನ್ನ ಸಹೋದರಿಯರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಹೆಚ್ಚಿನ ಜವಬ್ಧಾರಿ ವಹಿಸಿಕೊಳ್ಳದ ಆಲಸಿ ತಂದೆ ತನ್ನ ದುಡಿಮೆಯಿಂದ ತಮ್ಮನ್ನೆಲ್ಲ ಸಾಕಲು ಸಾಧ್ಯವಿಲ್ಲ ಎಂಬುದು ಅಲ್ಕಾಟ್‌ರವರಿಗೆ ಚಿಕ್ಕ ವಯಸ್ಸಿನಲ್ಲಿಯೆ ಅರಿವಾಗಿಬಿಟ್ಟಿತ್ತು. ಅನೇಕ ಅಲ ಆಲ್ಕಾಟ್ ಕುಟುಂಬವು ಹಣಕಾಸಿನ ತೊಂದರೆಗಳಿಂದ ಬಳಲುತ್ತಿದ್ದುದರಿಂದ ಅವರಿಗೆ ಅನಿಯಮಿತವಾಗಿ ಶಾಲೆಗೆ ಹೋಗುವುದು ಸಾಧ್ಯವಿರಲಿಲ್ಲ ಕುಟುಂಬದ ಹಣಕಾಸಿನ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡಲು ಚಿಕ್ಕ ವಯಸ್ಸಿನಿಂದಲೆ ಅನೇಕ ಉದ್ಯೋಗಗಳನ್ನು ಮಾಡಬೇಕಾಯಿತು. ಶಿಕ್ಷಕಿಯಾಗಿ, ಲಾಂಡ್ರಿಯಲ್ಲಿ ಬಟ್ಟೆ ತೊಳೆಯುವವರಾಗಿ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಕುಟುಂಬದ ಬೆನ್ನೆಲುಬಾಗಿ ನಿಂತರು. ತಮ್ಮ ಕುಟುಂಬದ ಬೆಂಬಲಕ್ಕಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಕೊನೆಯವರೆಗೂ ಕುಟುಂಬಕ್ಕಾಗಿ ಬಾಳಿದ ಅಪರೂಪದ ಬರಹಗಾರ್ತಿ ಇವರು.
1850 ರ ದಶಕವು ಆಲ್ಕಾಟ್ಸ್‌ಗೆ ಕಷ್ಟಕರ ಸಮಯವಾಗಿತ್ತು. 1854 ರಲ್ಲಿ ಲೂಯಿಸಾ ಬೋಸ್ಟನ್ ಥಿಯೇಟರ್‌ನ ಕೆಲಸದಲ್ಲಿ ಸಮಾಧಾನ ಪಡೆಯುತ್ತಿದ್ದರು.  ಅಲ್ಲಿ  'ದಿ ರೈವಲ್ ಪ್ರೈಮಾ ಡೊನ್ನಾಸ್' ಎಂಬ ನಾಟಕವನ್ನು ಬರೆದರು, ನಂತರ ಯಾರು ಪಾತ್ರವನ್ನು ನಿರ್ವಹಿಸಬೇಕು ಎಂಬ ಬಗ್ಗೆ ನಟಿಯರ ನಡುವೆ ಜಗಳ ಹುಟ್ಟಿಕೊಂಡಿದ್ದರಿಂದಾಗಿ ಅದನ್ನು ಸುಟ್ಟುಹಾಕಿದರು. 1857ರಲ್ಲಿ ಒಂದು ಹಂತದಲ್ಲಿ, ಕೆಲಸ ಹುಡುಕಲು ಸಾಧ್ಯವಾಗದೆ ಹತಾಶೆಯಿಂದ ಆಲ್ಕಾಟ್ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಸಹ ಆಲೋಚಿಸಿದ್ದರು.  ಆ ಸಮಯದಲ್ಲಿ ಅವರು ಎಲಿಜಬೆತ್ ಗ್ಯಾಸ್ಕೆಲ್ ಅವರ ಶಾರ್ಲೊಟ್ ಬ್ರಾಂಟೆ ಅವರ ಜೀವನ ಚರಿತ್ರೆಯನ್ನು ಓದಿ  ಅದರಿಂದ ಸ್ಪೂರ್ತಿ ಪಡೆದರು ಮತ್ತು ಜೀವನ ನಡೆಸಲು ಬೇಕಾದ ಅನೇಕ ಅವಕಾಶಗಳು ತೆರೆದುಕೊಂಡಿರುವುದನ್ನು ಅರಿತುಕೊಂಡು ಹೊಸ ಹುಮ್ಮಸ್ಸಿನಲ್ಲಿ ಜೀವಿಸಲು ಪ್ರಾರಂಭಿಸಿದರು. 

               ಆಲ್ಕಾಟ್ ಮೊದಲಿಗೆ ಪಾಟ್‌ಬಾಯ್ಲರ್ ಆಗಿ ಬರೆಯಲು ಪ್ರಾರಂಭಿಸಿದರು. ಪಾಟ್‌ಬಾಯ್ಲರ್ ಎಂದರೆ ತಕ್ಷಣ ಹಣವನ್ನು ಗಳಿಸುವುದಕ್ಕಾಗಿ ಬರೆಯುವ ಬರೆಹಗಳು. ಅವರ ಮೊದಲ ಕವಿತೆ, "ಸನ್ ಲೈಟ್" ಪತ್ರಿಕೆಯಲ್ಲಿ ಪ್ರಕಟವಾಯಿತು.  
ಅವರ ಮೊದಲ ಪುಸ್ತಕ, ಸಣ್ಣ ಕಥೆಗಳ ಸಂಕಲನ,'ಫ್ಲವರ್ ಪ್ಯಾಬಲ್ಸ್' ೧೮೫೪ ರಲ್ಲಿ ಪ್ರಕಟವಾಯಿತು. ಇದು ರಾಲ್ಫ ವಾಲ್ಡೋ ಎಮರ್‍ಸನ್‌ರವರ ಮಗಳಾದ ಎಲೆನ್ ಎಮರ್‍ಸನ್‌ಗೋಸ್ಕರ ಬರೆದ ಕಥೆಗಳಾಗಿದ್ದವು.  ಈ ಸಮಯದಲ್ಲಿ ಅವರು ಬರೆದ ಸಣ್ಣ ಕಥೆಗಳನ್ನು ಎ ಎಂ  ಬರ್ನಾರ್ಡ್ ಎನ್ನುವ ಹೆಸರಿನಿಂದ ಪ್ರಕಟಿಸಿದರು. ಇವು ರೋಮಾಂಚಕ ಕಲ್ಪನೆಯ ಹಿಂಸಾತ್ಮಕ ಕಥೆಗಳು. 

ಇವುಗಳ ನಂತರದ ಕೃತಿಗಳು ಮಹಿಳೆಯರನ್ನು ಶಕ್ತಿಶಾಲಿ, ಸ್ವಾವಲಂಬಿ ಮತ್ತು ಕಲ್ಪನಾಭರಿತವಾಗಿ ಚಿತ್ರಿಸಿವೆ.  ೧೮೬೧ರಲ್ಲಿ ಪ್ರಾರಂಭವಾದ ಅಮೇರಿಕನ್ ಸಿವಿಲ್ ವಾರ್‌ನಲ್ಲಿ ಸ್ವಯಂಸೇವಕ  ದಾದಿಯಾಗಿ ಸೇವೆ ಸಲ್ಲಿಸಿದರು, ಆದರೆ ಆಸ್ಪತ್ರೆಯ ಅನಾರೋಗ್ಯಕರ ವಾತಾವರಣದಿಂದಾಗಿ ಅವರಿಗೆ ಟೈಫಾಯಿಡ್ ಜ್ವರ ಬಂದಿದ್ದರಿಂದ ಮನೆಗೆ ಕಳುಹಿಸಲಾಯಿತು.  ಈ ಜ್ವರದ ಅಡ್ಡಪರಿಣಾಮವನ್ನು ಅವರು ಜೀವನದ ಕೊನೆಯವರೆಗೂ ಅನುಭವಿಸಬೇಕಾಯಿತು. ಈ ಸಮಯದಲ್ಲಿ ಬರೆದುಕೊಂಡ ಟಿಪ್ಪಣಿಗಳು ಮತ್ತು ಪತ್ರಗಳು  ಹಾಸ್ಪಿಟಲ್ ಸ್ಕೆಚ್ಸ್ (೧೮೬೩) ಎಂಬ ಪುಸ್ತಕ ರೂಪದಲ್ಲಿ ಪ್ರಕಟವಾಗಿ  ಖ್ಯಾತಿಯ ಮೊದಲ ರುಚಿಯನ್ನು ತೋರಿಸಿತು.

         ಆಲ್ಕಾಟ್‌ರವರ ಕಥೆಗಳು 'ದಿ ಅಟ್ಲಾಂಟಿಕ್' ಮಾಸಿಕದಲ್ಲಿ ಪ್ರಕಟವಾಗಲು ಪ್ರಾರಂಭಿಸಿದವು, ಆದರೆ ಕುಟುಂಬದ ಅಗತ್ಯಗಳು ಹೆಚ್ಚಾಗಿದ್ದವು. ಈ ಸಮಯದಲ್ಲಿ, ಆಲ್ಕಾಟ್‌ರ ಪ್ರಕಾಶಕರೊಬ್ಬರು ಯುವತಿಯರಿಗಾಗಿ ಕಾದಂಬರಿಯನ್ನು ಬರೆಯುವಂತೆ ಕೇಳಿಕೊಂಡರು.ಅದಕ್ಕಾಗಿ ಅವರು ತಮ್ಮ ಸಹೋದರಿಯರೊಂದಿಗೆ ತಮ್ಮ ಬಾಲ್ಯದ ಬಗ್ಗೆ ಬರೆಯಲಾರಂಭಿಸಿದರು.  ೧೮೬೮ರಲ್ಲಿ, ಆಲ್ಕಾಟ್ ತಮ್ಮ ಅತ್ಯಂತ ಜನಪ್ರಿಯ ಕೃತಿಯಾದ ಲಿಟಲ್ ವುಮೆನ್ ಅನ್ನು ಪ್ರಕಟಿಸಿದರು. 

 ಕಾದಂಬರಿಯನ್ನು ಸಣ್ಣ ಕಥೆಗಳ ರೂಪದಲ್ಲಿ ಸರಣಿಯಾಗಿ ಪ್ರಕಟಿಸಲಾಗಿತ್ತು, ಆದರೆ ಅಂತಿಮವಾಗಿ ಒಂದು ಪುಸ್ತಕವಾಗಿ ಸಂಕಲಿಸಲಾಯಿತು. ಬಾಲ್ಯದ ನೆನಪುಗಳ ಆಧಾರದ ಮೇಲೆ ಬರೆದ ಈ ಕೃತಿ ತಕ್ಷಣದಲ್ಲಿ ಜನಪ್ರಿಯಗೊಂಡು ಯಶಸ್ವಿಯಾಯಿತು. ಲಿಟಲ್ ವುಮೆನ್ ಸಾಧಾರಣ ಕುಟುಂಬದವರಾದರೂ ಆಶಾವಾದಿ ದೃಷ್ಟಿಕೋನ ಹೊಂದಿದ ನ್ಯೂ ಇಂಗ್ಲೆಂಡ್ ಕುಟುಂಬದ ಸಾಹಸಗಳನ್ನು ವಿವರಿಸುತ್ತದೆ.  ಪುಸ್ತಕವು ನಾಲ್ಕು ಸಹೋದರಿಯರ (ಮೆಗ್, ಜೋ, ಬೆತ್ ಮತ್ತು ಆಮಿ ಮಾರ್ಚ್) ವಿಭಿನ್ನ ವ್ಯಕ್ತಿತ್ವಗಳನ್ನು ಮತ್ತು ಅದೃಷ್ಟವನ್ನು ಗುರುತಿಸುತ್ತದೆ, ಅವರು ಬಾಲ್ಯದಿಂದ ಅನುಭವಿಸಿದ ನೋವು ಸಂಕಟಗಳನ್ನು,  ಅವರ ಉದ್ಯೋಗ, ಸಾಮಾಜಿಕ ಸಂಬಂಧಗಳನ್ನು ಮತ್ತು ಮದುವೆಯ ವಿಪತ್ತುಗಳನ್ನು ವಿವರಿಸುತ್ತದೆ. 
           ಚಿಕ್ಕ ವಯಸ್ಸಿನ ಮಹಿಳೆಯರ ಕುಟುಂಬ ಜೀವನದ ವಾಸ್ತವಿಕ ಚಿತ್ರಣ ಹಾಗೂ ಅವರ ಹೋರಾಟದ ಬದುಕಿನ ಕುರಿತು ಇರುವುದರಿಂದ ಯುವ ಓದುಗರು ಈ ಪುಸ್ತಕವನ್ನು ತಮ್ಮ ಸ್ಥಿತಿಗತಿಗಳಿಗೆ ಹೋಲಿಸಿಕೊಂಡು ಓದುತ್ತ ಆಪ್ತವಾಗಿಸಿಕೊಂಡಿದ್ದರಿಂದ ಬಹುಬೇಗ ಒಳ್ಳೆಯ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.  ೧೮೬೯ ರಲ್ಲಿ ಆಲ್ಕಾಟ್ ತನ್ನ ಜರ್ನಲ್‌ನಲ್ಲಿ  "ಎಲ್ಲಾ ಸಾಲಗಳನ್ನು ಪಾವತಿಸಿದೆ. ದೇವರಿಗೆ ಧನ್ಯವಾದಗಳು!" ಎಂದು ಬರೆದುಕೊಳ್ಳುವಷ್ಟು ಹಣವನ್ನು ಈ ಪುಸ್ತಕದಿಂದ ಪಡೆದುಕೊಂಡರು.
               ಲಿಟಲ್ ವುಮೆನ್ ಬಹುಬೇಗ ಯಶಸ್ಸನ್ನು ಕಂಡಿತು ಮತ್ತು  ಆಲ್ಕಾಟ್‌ರನ್ನು ೧೯ ಮತ್ತು ೨೦ನೇ ಶತಮಾನದ ಮುಂಚೂಣಿ ಕಾದಂಬರಿಕಾರರಲ್ಲಿ ಒಬ್ಬರನ್ನಾಗಿ ಮಾಡಿತು.  ೧೮೭೦ ರಲ್ಲಿ, ಈ ಯಶಸ್ವಿ ಪುಸ್ತಕದೊಂದಿಗೆ, ಆಲ್ಕಾಟ್ ತನ್ನ ಸಹೋದರಿ ಮೇ ಜೊತೆ ಯುರೋಪ್‌ಗೆ ತೆರಳಿದರು.

 ಕ್ಲಾಸಿಕ್ ಲಿಟಲ್ ಮೆನ್: ಲೈಫ್ ಅಟ್ ಪ್ಲಮ್‌ಫೀಲ್ಡ್ ವಿತ್ ಜೋಸ್ ಬಾಯ್ಸ್ (೧೮೭೧) ಮತ್ತು ಜೋಸ್ ಬಾಯ್ಸ್ ಆಂಡ್ ಹೌ ದೆ ಟರ್ನ್ಡ್ ಔಟ್ (೧೮೮೬) ಎನ್ನುವ ಎರಡು ಮುಂದುವರಿದ ಆವೃತ್ತಿಗಳನ್ನು ಪ್ರಕಟಿಸಿದರು.
          ಅದೇ ಸಮಯದಲ್ಲಿ ಅವರು ಮಹಿಳಾ ಮತದಾರರ ಚಳವಳಿಗೆ ಸೇರಿದರು.  ಅವರ ಜೀವನದುದ್ದಕ್ಕೂ, ಅವರು ಮಹಿಳಾ ಹಕ್ಕುಗಳನ್ನು ಉತ್ತೇಜಿಸುವ ಹಲವಾರು ಪ್ರಕಟಣೆಗಳನ್ನು ನೀಡಿದರು.  ಮ್ಯಾಸಚೂಸೆಟ್ಸ್‌ನ ಕಾನ್‌ಕಾರ್ಡ್‌ನಲ್ಲಿ ಶಾಲಾ ಮಂಡಳಿಯ ಚುನಾವಣೆಯಲ್ಲಿ ಮತ ಚಲಾಯಿಸಲು ನೋಂದಾಯಿಸಿದ ಮೊದಲ ಮಹಿಳೆ ಎನ್ನುವ ಶ್ರೇಯಸ್ಸು ಇವರಿಗಿದೆ.
         ಆಲ್ಕಾಟ್ ತನ್ನ ಆರಂಭಿಕ ಅನುಭವಗಳಿಂದ ಇತರ ದೇಶೀಯ ನಿರೂಪಣೆಗಳನ್ನು ಸಹ ಬರೆದಿದ್ದಾರೆ. ಆನ್ ಓಲ್ಡ್ ಫ್ಯಾಶನ್ಡ್ ಗರ್ಲ್ (೧೮೭೦);  ಆಂಟ್ ಜೋಸ್ ಸ್ಕ್ರ್ಯಾಪ್ ಬ್ಯಾಗ್‌ನ ಆರು ಸಂಪುಟಗಳು  (೧೮೭೨-೮೨); 
 ಏಟ್ ಕಸಿನ್ಸ್ (೧೮೭೫);  ಮತ್ತು ರೋಸ್ ಇನ್ ಬ್ಲೂಮ್ (೧೮೭೬) (ಏಟ್ ಕಸಿನ್ಸ್ ಎರಡನೆ ಸಂಪುಟ) ಪ್ರಮುಖವಾದವು.
 ೧೮೭೦ರಲ್ಲಿ ಮಾಡಿದ ಯುರೋಪಿಯನ್ ಪ್ರವಾಸ ಮತ್ತು ನ್ಯೂಯಾರ್ಕ್‌ಗೆ ಕೆಲವು ಚಿಕ್ಕ ಪ್ರವಾಸಗಳನ್ನು ಹೊರತುಪಡಿಸಿ, ಸುದೀರ್ಘ ಅನಾರೋಗ್ಯದ ನಂತರ ೧೮೭೭ ರಲ್ಲಿ ನಿಧನರಾದ ತನ್ನ ತಾಯಿ ಮತ್ತು ಅಸಹಾಯಕ ತಂದೆಯನ್ನು ನೋಡಿಕೊಳ್ಳುತ್ತ ಅವರು ತಮ್ಮ ಜೀವನದ ಕೊನೆಯ ಎರಡು ದಶಕಗಳನ್ನು ಬೋಸ್ಟನ್ ಮತ್ತು ಕಾನ್ಕಾರ್ಡ್‌ನಲ್ಲಿ ಕಳೆದರು, ಆಲ್ಕಾಟ್ ಎಂದಿಗೂ ಮದುವೆಯಾಗಲಿಲ್ಲ ಅಥವಾ ಮಕ್ಕಳನ್ನು ಹೊಂದಿರಲಿಲ್ಲ, ಆದಾಗ್ಯೂ, ಅವರ ಸಹೋದರಿ ಮೇ ಮರಣಹೊಂದಿದಾಗ ಅವರ ಮಗಳಾದ ಲೂಯಿಸಾ ಮೇ ನೀರಿಕರ್‌ರನ್ನು ದತ್ತು ತೆಗೆದುಕೊಂಡರು.  ಹಾಗೆ ನೋಡಿದರೆ ಅವರ ಆರೋಗ್ಯ, ಎಂದಿಗೂ ಸದೃಢವಾಗಿರಲಿಲ್ಲ, ತಮ್ಮ ಜೀವನದುದ್ದಕ್ಕೂ ಅನಾರೋಗ್ಯದಿಂದ ಬಳಲುತ್ತಿದ್ದರು.  ಅಂತರ್ಯುದ್ಧದ ಸಮಯದಲ್ಲಿ ನರ್ಸ್ ಆಗಿ ಕೆಲಸ ಮಾಡುವಾಗ ಟೈಫಾಯಿಡ್ ಸೋಂಕಿಗೆ ಒಳಗಾದಾಗ ಸೇವಿಸಿದ ಪಾದರಸ ಯುಕ್ತ ಔಷಧ ತಮ್ಮ ಕಳಪೆ ಆರೋಗ್ಯಕ್ಕೆ  ಕಾರಣವೆಂದು ಹೇಳುತ್ತಿದ್ದರು. ವಿಪರ್‍ಯಾಸವೆಂದರೆ ತನ್ನ ತಂದೆಯ ಮರಣದ ಎರಡು ದಿನಗಳ ನಂತರ ಅಂದರೆ ೬ ಮಾರ್ಚ್ ೧೮೮೮ ರಲ್ಲಿ ತಮ್ಮ ೫೬ ನೇ ವರ್ಷದಲ್ಲಿ ಅಲ್ಕಾಟ್  ಬೋಸ್ಟನ್‌ನಲ್ಲಿ ನಿಧನರಾದರು.
       ಯುವ ಓದುಗರ ವಲಯದಲ್ಲಿ ಆಲ್ಕಾಟ್ ಅವರ ಪುಸ್ತಕಗಳು ಹೆಚ್ಚು ಜನಪ್ರಿಯವಾಗಿವೆ. ೨೦ ನೇ ಶತಮಾನದ ಕೊನೆಯಲ್ಲಿ ಅವರ ಅಷ್ಟೇನೂ ಪ್ರಸಿದ್ಧಿ ಪಡೆಯದ ಕಾದಂಬರಿಗಳ ಮರುಪ್ರಕಟಣೆಯು ಹೊಸ ವಿಮರ್ಶಾತ್ಮಕ ಆಸಕ್ತಿಯನ್ನು ಹುಟ್ಟುಹಾಕಿತು. ೧೮೭೭ರಲ್ಲಿ ಗುಪ್ತನಾಮದಲ್ಲಿ ಪ್ರಕಟವಾದ ಎ ಮಾಡರ್ನ್ ಮೆಫಿಸ್ಟೋಫೆಲಿಸ್ ೧೯೮೭ರಲ್ಲಿ ಮರುಪ್ರಕಟಿಸಲ್ಪಟ್ಟಿತು, ಇದು ಗೋಥಿಕ್ ಕಾದಂಬರಿಯಾಗಿದ್ದು, ತನಗೆ ಪ್ರಲೋಭನೆಯೊಡ್ಡುವ ಅತಿಮಾನುಷ ಶಕ್ತಿಯೊಂದಿಗೆ ಚೌಕಾಶಿಮಾಡುವ ಕವಿಯ ಕುರಿತಾದ ಕಥಾವಸ್ತುವನ್ನು ಹೊಂದಿದೆ. ವರ್ಕ್:-   ಎ ಸ್ಟೋರಿ ಆಫ್ ಎಕ್ಸ್‌ಪೀರಿಯೆನ್ಸ್ (೧೮೭೩), ಆಲ್ಕಾಟ್‌ರ ನಿಜ ಜೀವನದ ಹೋರಾಟಗಳನ್ನು ಆಧರಿಸಿ ಕಥಾವಸ್ತು ಅಂದರೆ ಬಡ ಹುಡುಗಿಯೊಬ್ಬಳು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ತನ್ನನ್ನು ತಾನು ಬೆಂಬಲಿಸಲು ಪ್ರಯತ್ನಿಸುವ ಕಥೆಯನ್ನು ಹೇಳುತ್ತದೆ.  
ಆಲ್ಕಾಟ್ ೧೮೬೩ರಿಂದ ೧೮೬೯ರ ನಡುವೆ ಗುಪ್ತನಾಮದಲ್ಲಿ ಪ್ರಕಟಿಸಿದ ಗೋಥಿಕ್ ಕಥೆಗಳು ಮತ್ತು ಥ್ರಿಲ್ಲರ್ ಕಥೆಗಳನ್ನು ಸಂಗ್ರಹಿಸಿ ಬಿಹೈಂಡ್ ಎ ಮಾಸ್ಕ್ (೧೯೭೫) ಮತ್ತು ಪ್ಲಾಟ್ಸ್ ಆಂಡ್ ಕೌಂಟರ್‌ಪ್ಲಾಟ್ಸ್ (೧೯೭೬) ಎಂದು ಮರುಪ್ರಕಟಿಸಲಾಗಿದೆ. 
ಇದರ ಜೊತೆಗೆ ೧೮೬೬ ರಲ್ಲಿ ಬರೆದ ಅಪ್ರಕಟಿತ ಚೇಸ್ ಎ ಲಾಂಗ್ ಫೇಟಲ್ ಗೋಥಿಕ್ ಕಾದಂಬರಿಯನ್ನು ೧೯೯೫ ಪ್ರಕಟವಾಯಿತು.
                     
   ಇವರ ಎಲ್ಲ ಕಾದಂಬರಿಗಳು ಓದುಗರಿಗೆ ಬುದ್ಧಿವಂತ ಹಾಗೂ ಸ್ವಾವಲಂಭಿಯಾದ ಕಥಾನಾಯಕಿಯನ್ನು ಪರಿಚಯಿಸಿತು. ಹೀಗಾಗಿ ಅಮೇರಿಕಾದ ಕಾದಂಬರಿ ಕ್ಷೇತ್ರವು ಹೊಸದೊಂದು ದಾರಿಯಲ್ಲಿ ನಡೆಯಲು ಈ ಕಾದಂಬರಿಗಳು ಮುನ್ನುಡಿಯನ್ನು ಬರೆದವು.

lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220805_4_7